Varahi Deeksha by Pawan Kalyan: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕೈಗೊಂಡಿದ್ದಾರೆ ವಾರಾಹಿ ದೀಕ್ಷೆ -ಹಾಗೆಂದರೇನು, ಫಲಿತಾಂಶ ಏನಾಗಲಿದೆ?

Varahi Devi Deeksha by DCM Pawan Kalyan: ಪವನ್ ಕಲ್ಯಾಣ್ ತುಂಬಾ ಧಾರ್ಮಿಕರು ಎಂಬ ಮಾತು ಆಂಧ್ರದಲ್ಲಿ ಜನಜನಿತ. ಇವರು ಎಲ್ಲರಿಗಿಂತ ಭಿನ್ನವಾಗಿ ವರಾಹಿ ದೇವಿಯನ್ನು ಪೂಜಿಸುತ್ತಿದ್ದಾರೆ. ಚುನಾವಣೆಗೂ ಮುನ್ನವೇ ರಾಜ್ಯಾದ್ಯಂತ ಯಾತ್ರೆಗೆ ಸಿದ್ಧಪಡಿಸಿದ್ದ ವಾಹನಕ್ಕೂ ವಾರಾಹಿ ಎಂದು ಹೆಸರಿಡಲಾಗಿತ್ತು. ಎಪಿ ಚುನಾವಣೆಯಲ್ಲಿ ಗೆದ್ದ ನಂತರ ಈ ವರ್ಷ ಅತ್ಯಂತ ಕಠಿಣ ವಾರಾಹಿ ದೇವಿ ದೀಕ್ಷೆಯನ್ನು ಕೈಗೊಂಡಿದ್ದಾರೆ.

Varahi Deeksha by Pawan Kalyan: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕೈಗೊಂಡಿದ್ದಾರೆ ವಾರಾಹಿ ದೀಕ್ಷೆ -ಹಾಗೆಂದರೇನು, ಫಲಿತಾಂಶ ಏನಾಗಲಿದೆ?
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕೈಗೊಂಡಿದ್ದಾರೆ ವಾರಾಹಿ ದೀಕ್ಷೆ
Follow us
|

Updated on:Jun 26, 2024 | 1:35 PM

Varahi Devi Deeksha by DCM Pawan Kalyan: ಆಂಧ್ರ ಪ್ರದೇಶದಲ್ಲಿ ಎಲ್ಲೆಡೆ ಈಗ ವಾರಾಹಿ ಮಾತೆಯ ಮಾತೇ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಆ ಮಹಾತಾಯಿಯ ದೀಕ್ಷೆಯನ್ನು ನೂತನ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಕೈಗೊಳ್ಳುತ್ತಿರುವುದು. ಇಂದು ಜೂನ್ 26 ರಿಂದ 11 ದಿನಗಳ ಕಾಲ ಪವನ್ ವಾರಾಹಿ ಮಾತಾ ದೀಕ್ಷೆಯಲ್ಲಿ ಇರಲಿದ್ದಾರೆ ಎಂದು ಜನಸೇನಾ ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ. ಈ ದೀಕ್ಷೆಯ ಭಾಗವಾಗಿ, ಪವನ್ ಕಲ್ಯಾಣ್ 11 ದಿನಗಳವರೆಗೆ ಕೇವಲ ಹಾಲು, ಹಣ್ಣುಗಳು ಮತ್ತು ಇತರ ದ್ರವ ಆಹಾರವನ್ನು ಮಾತ್ರವೇ ಸೇವಿಸುತ್ತಾರೆ. ಗಮನಾರ್ಹವೆಂದರೆ ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಪವನ್ ಅವರು ವರಾಹಿ ವಿಜಯ ಯಾತ್ರೆ ಕೈಗೊಂಡಿದ್ದರು. ಯಾತ್ರೆಯಲ್ಲಿ ವಾರಾಹಿ ಅಮ್ಮನವರಿಗೆ ಪೂಜೆ ಸಲ್ಲಿಸಲಾಯಿತು. ಆಗಲೂ ವಾರಾಹಿ ಮಾತೆ ಸುದ್ದಿಯಲ್ಲಿದ್ದರು. ಈ ಬಾರಿ ಪವನ್ ಡೆಪ್ಯುಟಿ ಸಿಎಂ ಆಗಿ ದೀಕ್ಷೆ (DCM Pawan Kalyan) ತೆಗೆದುಕೊಳ್ಳುತ್ತಿರುವುದು ವಿಶೇಷವಾಗಿದೆ (Spiritual).

DCM Pawan Kalyan and Varahi Deeksha: ಹಿಂದೆ ಪವನ್ ಚಾತುರ್ಮಾಸ ದೀಕ್ಷೆ ಕೈಗೊಂಡಿದ್ದರು

ನಟ ಪವನ್ ಈ ಹಿಂದೆಯೂ ಹಲವು ದೀಕ್ಷೆಗಳನ್ನು ತೆಗೆದುಕೊಂಡಿದ್ದಾರೆ. ಚಾತುರ್ಮಾಸ ಆಚರನೆಯನ್ನು ಕೈಗೊಂಡಿದ್ದರು. ಪವನ್ ಕಲ್ಯಾಣ್​​ ನಾಲ್ಕು ತಿಂಗಳ ಕಾಲ ಈ ದೀಕ್ಷೆಯನ್ನು ಅನೂಚವಾಗಿ ಮುಂದುವರೆಸಿದ್ದರು. ಆಷಾಢ, ಶ್ರಾವಣ, ಭಾದ್ರಪದ ಮತ್ತು ಆಶ್ವೀಜ ಮಾಸಗಳಲ್ಲಿ ಪವನ್ ದೀಕ್ಷೆ ಕೈಗೊಂಡಿದ್ದರು. ಆ ದೀಕ್ಷೆ ವೇಳೆಯೂ ಸಾತ್ವಿಕ ಆಹಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರು. ದೀಕ್ಷಾ ಸಮಯದಲ್ಲಿ ಹೋಮವನ್ನೂ ನೆರವೇರಿಸಲಾಯಿತು.

Also Read: ಅಲೋಪಿ ಶಂಕರಿ ಮಂದಿರ: ಈ ದೇವಸ್ಥಾನದಲ್ಲಿ ವಿಗ್ರಹವಿಲ್ಲ, ಭಕ್ತರು ತೊಟ್ಟಿಲನ್ನು ಪೂಜಿಸುತ್ತಾರೆ! ಯಾಕೆ ಗೊತ್ತಾ?

DCM Pawan Kalyan and Varahi Deeksha: ಮನೋಭಿಷ್ಟೆ, ಇಷ್ಟಾರ್ಥಗಳ ನೆರವೇರಿಸುವ ಮಾತೆ ವಾರಾಹಿ

ಹಾಗಾದರೆ ವಾರಾಹಿ ಮಾತಾ ದೀಕ್ಷೆ ಮಾಡುವುದರಿಂದ ಏನನ್ನು ನಿರೀಕ್ಷಿಸಬಹುದು? ಇದನ್ನು ಹೇಗೆ ಮಾಡುತ್ತಾರೆ/ ಆಚರಣೆ ಹೇಗೆ? ಯಾರು ಮಾಡುತ್ತಾರೆ? ಇವುಗಳ ಬಗ್ಗೆಯೂ ಇಲ್ಲಿ ತಿಳಿಯೋಣ.. ಮನಸಿನ ಇಷ್ಟಾರ್ಥಗಳನ್ನು ಪೂರೈಸುವ ವಾರಾಹಿ ಅಮ್ಮನವರು ಅತ್ಯಂತ ಶುಭ ಫಲವನ್ನು ನೀಡುತ್ತಾರೆ. ಅಮ್ಮನವರಿಗೆ ಜೂನ್ ಅಂತ್ಯದಿಂದ ಪ್ರಾರಂಭವಾಗಿ ಜುಲೈ 9 ರಂದು ಕೊನೆಗೊಳ್ಳುವಂತೆ ಗುಪ್ತ ನವರಾತ್ರಿಗಳನ್ನು ಕೈಗೊಳ್ಳಲಾಗುತ್ತದೆ. ಈ ಶುಭ ಸಮಯದ ಬಗ್ಗೆ ಹೆಚ್ಚು ಪ್ರಚಾರವಾಗಿಲ್ಲ. ಇದು ಕೆಲವೇ ಜನರಿಗೆ ತಿಳಿದಿದೆ. ನಮ್ಮ ಸಂಪ್ರದಾಯದ ನಾಲ್ಕು ನವರಾತ್ರಿಗಳಲ್ಲಿ ಈ ಮಾಸದ ಗುಪ್ತ ನವರಾತ್ರಿಗಳು ಅತ್ಯಂತ ವೈಭವಯುತ ಮತ್ತು ಶಕ್ತಿಯುತವಾಗಿವೆ. ಈ ನವರಾತ್ರಿಗಳಲ್ಲಿ ಯಾರು ಅತ್ಯಂತ ಶ್ರದ್ದಾ ಭಕ್ತಿಯಿಂದ ದೀಕ್ಷೆಯನ್ನು ಆಚರಿಸುತ್ತಾರೋ ಅವರ ಎಲ್ಲಾ ಸಮಸ್ಯೆಗಳು ದೇವಿಯ ಕೃಪೆಯಿಂದ ಪರಿಹಾರವಾಗುತ್ತವೆ ಎಂಬುದು ಹಿರಿಯರ ನಂಬಿಕೆ.

DCM Pawan Kalyan and Varahi Deeksha: ವರಾಹಿ ಧಾನ್ಯಗಳ ಮಾತೃ ದೇವತೆ

ವಾರಾಹಿ ಮಾತೆ ಸಪ್ತಮಾತೃಕೆಯರಲ್ಲಿ ಒಬ್ಬರು. ಈಕೆ ಲಲಿತಾ ಪರಮೇಶ್ವರೀ – ಸರ್ವ ಸೈನ್ಯಾಧಕ್ಷೆ. ಮಹಾಲಕ್ಷ್ಮಿ ಪ್ರತಿರೂಪ, ಸರ್ವ ಮಂಗಳ ಸ್ವರೂಪ. ದೇವಿಯು ದುಷ್ಟ ಶಿಕ್ಷಣ ಮತ್ತು ಶಿಷ್ಟ ರಕ್ಷಣೆಗಾಗಿ ಮತ್ತು ಸದ್ಗುಣ ರಕ್ಷಣೆಗಾಗಿ ಸದಾ ಶಸ್ತ್ರಸಜ್ಜಿತಳಾಗಿರುತ್ತಾಳೆ. ದೇವಿಯು ಉಗ್ರವಾಗಿ ಕಂಡರೂ, ತುಂಬಾ ಕರುಣಾಮಯಿ. ಆದರೆ ವಾರಾಹಿ ದೀಕ್ಷೆ/ಪೂಜೆಯನ್ನು ಎಲ್ಲರೂ ಮಾಡುವಂತಿಲ್ಲ ಎಂಬ ತಪ್ಪು ಕಲ್ಪನೆಯಿದೆ. ಇದರರ್ಥ, ಅನೇಕರಿಗೆ ವಾರಾಹಿ ಮಾತೆಯ ಬಗ್ಗೆ ಹೆಚ್ಚು ತಿಳಿದಿಲ್ಲ. ಇದು ಸತ್ಯಕ್ಕೆ ದೂರವಾಗಿದೆ. ಯಾರು ಬೇಕಾದರೂ ವಾರಾಹಿ ಮಾತೆಯನ್ನು ಪೂಜಿಸಬಹುದು. ಅರಿಷಡ್ವರ್ಗಗಳು ಅಮ್ಮನ ಅಧೀನದಲ್ಲಿರುತ್ತವೆ. ದೇವಿಯು ನಮ್ಮನ್ನು ಕಾಮ, ಕ್ರೋಧ, ಮದ, ಮೋಹ, ಲೋಭಗಳಿಂದ ರಕ್ಷಿಸುತ್ತಾಳೆ ಎಂದು ಅನುಭವಿಗಳು ಹೇಳುತ್ತಾರೆ. ದೀಕ್ಷೆ ಮಾಡುವುದರಿಂದ ನಮ್ಮ ಮನಸ್ಸನ್ನು ನಿಯಂತ್ರಿಸುತ್ತದೆ. ವಾರಾಹಿ ಮಾತಾ ಭೂದೇವಿಯು ನೇಗಿಲು ಧರಿಸಿರುವ ಧಾನ್ಯ ದೇವತೆಯೂ ಹೌದು. ಉತ್ತಮ ಫಸಲು ಮತ್ತು ಉತ್ತಮ ಕೃಷಿಗಾಗಿ ಎಲ್ಲ ರೈತರು ವಾರಾಹಿ ಮಾತೆಯನ್ನು ಪೂಜಿಸುತ್ತಾರೆ.

Also Read: 2024 July Festivals – ಜುಲೈ 2024 – ಭಾರತದ ಪ್ರಸಿದ್ಧ ಹಬ್ಬಗಳ ಸಂಕ್ಷಿಪ್ತ ವಿವರ ಇಲ್ಲಿದೆ

DCM Pawan Kalyan and Varahi Deeksha: ಭೂ ವ್ಯಾಜ್ಯಗಳು ಬಗೆಹರಿಯಲಿವೆ

ವರಾಹಿ ಮಾತಾ ದೀಕ್ಷೆಯನ್ನು ಶ್ರದ್ಧೆಯಿಂದ ಮಾಡುವವರು ಬಯಸಿದ್ದನ್ನು ಪಡೆಯುತ್ತಾರೆ. ಭೂ ವ್ಯಾಜ್ಯಗಳು /ಭೂ ಸಮಸ್ಯೆಗಳು ಬಗೆಹರಿಯಲಿವೆ. ಭೂ ವಿವಾದಗಳು, ನ್ಯಾಯಾಲಯದ ಪ್ರಕರಣಗಳು, ಶತ್ರುಗಳ ಸಮಸ್ಯೆಗಳು, ಗಂಭೀರ ಆರೋಗ್ಯ ಸಮಸ್ಯೆಗಳು ನಿವಾರಣೆಗೊಳ್ಳುತ್ತವೆ. ಜೀವನದಲ್ಲಿ ಸ್ಥಿರತೆಯ ಕೊರತೆ ಎದುರಾಗಿದ್ದರೆ, ರಕ್ಷಣೆ ಬೇಕಿದ್ದರೆ, ಮನೆಯಲ್ಲಿ ಪದೇ ಪದೇ ಅಶುಭ ಘಟನೆಗಳು ನಡೆದರೆ, ಆರ್ಥಿಕ ಸ್ಥಿರತೆ ಇಲ್ಲದೇ ಇದ್ದರೆ, ಸಾಲ ಬಾಧೆ ದೂರವಾಗಬೇಕೆಂದರೆ, ವಾರಾಹಿ ಮಾತೆಯ ದೀಕ್ಷೆಯನ್ನು ಮಾಡಿದರೆ ಎಂತಹ ಸಮಸ್ಯೆಯಾದರೂ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.

DCM Pawan Kalyan and Varahi Deeksha: ದೀಕ್ಷೆ ತೊಟ್ಟವರು ಮದ್ಯ, ಮಾಂಸದಿಂದ ದೂರವಿರಬೇಕು

ವಾರಾಹಿ ಮಾತೆಯ ದೀಕ್ಷೆ ಪಡೆದವರು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿದ ನಂತರ ದೀಕ್ಷಾ ವಸ್ತ್ರಗಳನ್ನು ಧರಿಸಬೇಕು. ಹಾಗೆ ಮಾಡಲು ಸಾಧ್ಯವಾಗದವರು ಒಂಬತ್ತು ದಿನಗಳ ಕಾಲ ಕುತ್ತಿಗೆಯಲ್ಲಿ ಶಲ್ಯ ಧರಿಸಬೇಕು. ಅಷ್ಟೋತ್ತರ ನಾಮಗಳನ್ನು ಪಠಿಸುವ ಮೂಲಕ ತಾಯಿ ವಾರಾಹಿ ಮಾತೆಗೆ ಕುಂಕುಮಾರ್ಚನೆ ಮಾಡಬೇಕು, ಆದರೆ ಸಹಸ್ರ ನಾಮಗಳನ್ನು ಹೇಳಬಾರದು. ಕೆಂಪು ಹೂವುಗಳಿಂದ ಪೂಜಿಸಬೇಕು. ದಾಳಿಂಬೆ ಬೀಜಗಳನ್ನು ಅರ್ಪಿಸಬೇಕು. ದೀಕ್ಷೆಯ ಸಮಯದಲ್ಲಿ ಚಪ್ಪಲಿಯನ್ನು ಧರಿಸಬಾರದು. ಮದ್ಯ, ಮಾಂಸಾಹಾರ ತ್ಯಜಿಸಿ ಬ್ರಹ್ಮಚರ್ಯವನ್ನು ಆಚರಿಸಿ ನೆಲದ ಮೇಲೆ ಚಾಪೆ ಹಾಸಿ ಮಲಗಬೇಕು ಎಂದು ವಿದ್ವಾಂಸರು ಪೂಜಾ ವಿಧಿಯನ್ನು ವಿವರಿಸಿದ್ದಾರೆ. ಇದನ್ನು ಪಾಲಿಸುವುದು ತುಸು ಕಷ್ಟಸಾಧ್ಯ ಎಂಬ ಮಾತಿದೆ. ಆದರೆ ತಾಯಿಯ ಕೃಪೆ ಪಡೆಯಲು ಹೀಗೆ ಮಾಡಲೇಬೇಕು. ಆಂದ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಈಗ ಇಂತಹ ಕಠಿಣ ದೀಕ್ಷೆ ಮಾಡುತ್ತಿದ್ದಾರೆ.

ವರಾಹಿ ದೇವಿ ಯಾವುದೇ ಸಮಸ್ಯೆಯನ್ನು ಪರಿಹರಿಸುತ್ತಾಳೆ

ವರಾಹಿ ಮಾತೆಯನ್ನು ನೇಪಾಳದಲ್ಲಿ ಬರಾಹಿ ಎಂದು ಕರೆಯಲಾಗುತ್ತದೆ ಮತ್ತು ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಆಕೆಯನ್ನು ದಂಡಿ ಎಂದು ಕರೆಯಲಾಗುತ್ತದೆ. ಹಿಂದೂ ದೇವತೆ ವರಾಹಿ ಮಾತೆಯ ಮೂಲವು ಬೌದ್ಧ ದೇವತೆಗಳಾದ ವಜ್ರವರಾಹಿ ಮತ್ತು ಮರೀಚಿಯಲ್ಲಿದೆ. ವರಾಹಂ ಹಿಂದೂ ಪುರಾಣಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಸೆಲ್ಟಿಕ್, ಜಪಾನೀಸ್, ಚೈನೀಸ್, ಗ್ರೀಕ್, ಅಮೇರಿಕನ್, ಮತ್ತು ಈಜಿಪ್ಟಿನ ಸಂಸ್ಕೃತಿಗಳಲ್ಲಿಯೂ ಕಂಡುಬರುತ್ತದೆ. ಚೀನಾದಲ್ಲಿರುವ ವರಾಹಂ ಅರಣ್ಯ ಸಂಪತ್ತನ್ನು ಪ್ರತಿನಿಧಿಸುತ್ತದೆ. ಜಪಾನ್​​ನಲ್ಲಿ ಧೈರ್ಯದ ಸಂಕೇತವಾಗಿದೆ. ವಾರಾಹಿ ಮಾತೆಯನ್ನು ನಮ್ಮ ಪುರಾಣಗಳ ಸಪ್ತಮಾತೃಗಳಲ್ಲಿ ಧೈರ್ಯ ಮತ್ತು ನಿರ್ಭಯತೆಯ ಸಂಕೇತವಾಗಿ ನೋಡಲಾಗುತ್ತದೆ. ವರಾಹಿ ಮಾತೆಯನ್ನು ಧ್ಯಾನಿಸುವುದು ಅಥವಾ ಪೂಜಿಸುವುದು ನಮ್ಮೊಳಗಿನ ಮೂಲಭೂತ ಸ್ವಭಾವವನ್ನು ನೆನಪಿಸುತ್ತದೆ ಎಂದು ಸಾಧಕರು ಹೇಳುತ್ತಾರೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:29 pm, Wed, 26 June 24

ತಾಜಾ ಸುದ್ದಿ
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ