
ನವದೆಹಲಿ, ಮೇ 18: ಕಳೆದ ಕೆಲವು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಸರಣಿ ಬಿಕ್ಕಟ್ಟುಗಳಿಂದ ಜಾಗತಿಕ ಸಮುದಾಯ ಪಾಠ ಕಲಿಯದಿದ್ದರೆ, ಪ್ರಪಂಚದಾದ್ಯಂತ ಮತ್ತೊಮ್ಮೆ ಭೀಕರ ಬಡತನ ತಲೆದೂಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕಠಿಣ ಎಚ್ಚರಿಕೆ ನೀಡಿದ್ದಾರೆ. ಕಳೆದ ಕೆಲವು ವರ್ಷಗಳ ಅವಧಿಯನ್ನು ಡಿಸಾಸ್ಟರ್ ಡಿಕೇಡ್ ಎಂದು ಬಣ್ಣಿಸಿರುವ ಅವರು, ಜಾಗತಿಕ ಸ್ಥಿರತೆಗೆ ಎದುರಾಗಿರುವ ಸವಾಲುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಆರ್ಥಿಕ ತಜ್ಞರ ಜತೆ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋಡಿ, ಜಾಗತಿಕ ಆರ್ಥಿಕತೆಯ ಸಧ್ಯದ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.
ಕೋವಿಡ್ ಮಹಾಮಾರಿ: ಜಾಗತಿಕವಾಗಿ ಕೋಟ್ಯಂತರ ಜನರ ಜೀವನ ಮತ್ತು ದೇಶಗಳ ಆರ್ಥಿಕತೆಯನ್ನು ಇದು ಧ್ವಂಸಗೊಳಿಸಿತ್ತು.
ಭೂರಾಜಕೀಯ ಯುದ್ಧಗಳು: ಜಗತ್ತಿನ ವಿವಿಧೆಡೆ ನಡೆಯುತ್ತಿರುವ ನಿರಂತರ ಸಂಘರ್ಷಗಳು ಹೊಸ ಅನಿಶ್ಚಿತತೆಯನ್ನು ದೃಷ್ಟಿಸಿವೆ.
ಮತ್ತಷ್ಟು ಓದಿ: ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಚಿನ್ನ, ಇಂಧನ ಮಾರಾಟ ಶೇ.50ರಷ್ಟು ಕುಸಿತ
ಇಂಧನ ಮತ್ತು ಆಹಾರ ಬಿಕ್ಕಟ್ಟು: ಯುದ್ಧ ಮತ್ತು ರಾಜತಾಂತ್ರಿಕ ಬಿಕ್ಕಟ್ಟುಗಳಿಂದಾಗಿ ತೈಲ ಹಾಗೂ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದ್ದು, ಹಣದುಬ್ಬರ ಅಪಾಯಕಾರಿ ಮಟ್ಟವನ್ನು ತಲುಪಿದೆ.
ಕಳೆದ ಒಂದು ದಶಕ ನಿಜಕ್ಕೂ ದುರಂತದ ದಶಕವಾಗಿದೆ. ಸೂಕ್ತ ನೀತಿಗಳು, ಬಲಿಷ್ಠ ಆಡಳಿತ ಮತ್ತು ನಿರಂತರ ಆರ್ಥಿಕ ಸುಧಾರಣೆಗಳು ಇಲ್ಲದಿದ್ದರೆ , ಕಳೆದ ಹತ್ತು ವರ್ಷಗಳಲ್ಲಿ ಬಡತನ ನಿರ್ಮೂಲನೆಯಲ್ಲಿ ಸಾಧಿಸಿದ ಪ್ರಗತಿಯು ಉಲ್ಟಾ ಆಗುವುದು ಗ್ಯಾರಂಟಿ. ಜಗತ್ತು ಮತ್ತೆ ಬಡತನದ ಕೂಪಕ್ಕೆ ತಳ್ಳಲ್ಪಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತ ಹೇಗೆ ಚೇತರಿಸಿಕೊಂಡಿತು ಎಂಬುದನ್ನು ವಿವರಿಸಿದ ಪಿಎಂ ಮೋದಿ, ಸಮಯೋಚಿತ ನೀತಿಗಳು ಮತ್ತು ಆರ್ಥಿಕ ಸುಧಾರಣೆಗಳ ಕಾರಣದಿಂದಾಗಿ ಭಾರತವು ಕೋವಿಡ್ ಆಘಾತದಿಂದ ಹೊರಬಂದಿದ್ದಲ್ಲದೆ, ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಿದೆ” ಎಂದರು. ಭವಿಷ್ಯದ ಆಘಾತಗಳನ್ನು ತಡೆಯಲು ಜಾಗತಿಕ ನಾಯಕರು ಸ್ವಾವಲಂಬನೆ (ಆತ್ಮನಿರ್ಭರತೆ), ನಾವೀನ್ಯತೆ , ಕೌಶಲ್ಯಾಭಿವೃದ್ಧಿ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯತ್ತ ಗಮನ ಹರಿಸಬೇಕು ಎಂದು ಅವರು ಕರೆ ನೀಡಿದರು.
ಅಂತಾರಾಷ್ಟ್ರೀಯ ಒಗ್ಗಟ್ಟಿಗೆ ಕರೆ
ದುರ್ಬಲ ಜನಸಂಖ್ಯೆಯನ್ನು ಬಡತನದಿಂದ ರಕ್ಷಿಸಲು ಜಾಗತಿಕ ಪೂರೈಕೆ ಸರಪಳಿ , ಇಂಧನ ಭದ್ರತೆ ಮತ್ತು ಆಹಾರ ಭದ್ರತೆಯ ವಿಷಯದಲ್ಲಿ ಎಲ್ಲಾ ದೇಶಗಳು ಪರಸ್ಪರ ಸಹಕರಿಸಬೇಕು ಎಂದು ಮೋದಿ ಒತ್ತಾಯಿಸಿದರು. ಜಾಗತಿಕ ಮಟ್ಟದಲ್ಲಿ ತೈಲ ಬೆಲೆಗಳ ಏರಿಳಿತ ಮತ್ತು ಪ್ರಮುಖ ಆರ್ಥಿಕತೆಗಳ ಮಂದಗತಿಯ ಬೆಳವಣಿಗೆಯ ನಡುವೆ ಪ್ರಧಾನಿ ಮೋದಿ ನೀಡಿರುವ ಈ ಎಚ್ಚರಿಕೆ, ಜಾಗತಿಕ ಆರ್ಥಿಕ ನಾಯಕರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ