
ನವದೆಹಲಿ, ಜುಲೈ 02: ಭಾರತೀಯ ಯುವಕರನ್ನು ಮಾದಕದ್ರವ್ಯಗಳಿಂದ ಮುಕ್ತಗೊಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ರಾಷ್ಟ್ರವ್ಯಾಪಿ ‘ವಿಕಸಿತ ಭಾರತಕ್ಕಾಗಿ ಮಾದಕದ್ರವ್ಯ ಮುಕ್ತ ಯುವ ಸಂಕಲ್ಪ ಅಭಿಯಾನ’ಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ಭಾರತೀಯ ಯುವಜನತೆಯನ್ನು ಮಾದಕದ್ರವ್ಯಗಳ ಜಾಲದಿಂದ ದೂರವಿಟ್ಟು, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಪ್ರಧಾನಿ ಮೋದಿ ಈ ಅಭಿಯಾನ ಶುರು ಮಾಡಿದ್ದಾರೆ. ನಾವು ನೋಡುತ್ತಿರುವ ಅಭಿಯಾನವು ವ್ಯಕ್ತಿ, ಕುಟುಂಬ, ಸಮಾಜಕ್ಕಾಗಿ ಮತ್ತು ಮುಖ್ಯವಾಗಿ ರಾಷ್ಟ್ರಕ್ಕಾಗಿ ಎಂದು ಪ್ರಧಾನಿ ಮೋದಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕೆ ಮಾದಕ ದ್ರವ್ಯ ಮುಕ್ತ ಯುವಕರು ಅತ್ಯಗತ್ಯ ಎಂದರು.
ದೇಶದ ಪ್ರಗತಿಗೆ ಯುವಶಕ್ತಿಯೇ ಅಡಿಪಾಯ. ಭಾರತವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡಲು ದೇಶದ ಯುವಜನರು ಯಾವುದೇ ರೀತಿಯ ವ್ಯಸನಕ್ಕೆ ಬಲಿಯಾಗದಂತೆ ತಡೆಯುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದು ಕರೆ ನೀಡಿದರು. ದೇಶದ ಪ್ರತಿಯೊಂದು ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮಾದಕದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮಗಳು ಮತ್ತು ‘ಸಂಕಲ್ಪ ಪ್ರಮಾಣ ವಚನ’ ಸ್ವೀಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಯುವಜನರು ಮಾದಕದ್ರವ್ಯಗಳ ದುಷ್ಪರಿಣಾಮಗಳ ವಿರುದ್ಧ ಜಾಗೃತಿ ಮೂಡಿಸಲು ‘ಮೈ ಭಾರತ್’ ಪೋರ್ಟಲ್ ಮೂಲಕ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಲು ಉತ್ತೇಜಿಸಲಾಗುತ್ತಿದೆ. ಮಾದಕದ್ರವ್ಯ ಪೂರೈಕೆ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಹಾಗೂ ಡ್ರಗ್ಸ್ ಜಾಲದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಲು ಸ್ಥಳೀಯ ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಮತ್ತಷ್ಟು ಓದಿ: PM Modi Speech in Mysuru: ಮೈಸೂರಿನ ಪ್ರತಿ ಮೂಲೆಯಲ್ಲೂ ಭಾರತದ ಪರಂಪರೆ ಹಾಸುಹೊಕ್ಕಿದೆ; ಪ್ರಧಾನಿ ಮೋದಿ ಬಣ್ಣನೆ
ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದ ‘ಯುವ ಆಧ್ಯಾತ್ಮಿಕ ಶೃಂಗಸಭೆ’ಯಲ್ಲಿ 120 ಕ್ಕೂ ಹೆಚ್ಚು ಸಂಸ್ಥೆಗಳ 600 ಪ್ರಮುಖ ಯುವ ನಾಯಕರು ಭಾಗವಹಿಸಿ, ಮುಂದಿನ 5 ವರ್ಷಗಳಲ್ಲಿ ಭಾರತವನ್ನು ಸಂಪೂರ್ಣ ನಶೆಮುಕ್ತಗೊಳಿಸಲು ಬ್ಲೂಪ್ರಿಂಟ್ ಸಿದ್ಧಪಡಿಸಿದ್ದಾರೆ.
ಅಭಿವೃದ್ಧಿ ಹೊಂದಿದ ಭಾರತದ ಕನಸು
ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸು ಮಾಡಲು ಮಾದಕದ್ರವ್ಯ ಮುಕ್ತ ಯುವಶಕ್ತಿ ಅತ್ಯಗತ್ಯ. ಪ್ರತಿಯೊಬ್ಬ ಯುವ ನಾಗರಿಕನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಂತನಾಗಿರಬೇಕು. ವ್ಯಸನಗಳಿಂದ ದೂರವಿದ್ದು ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡುವುದು ನಮ್ಮ ಆಶಯ ಎಂದು ಪ್ರಧಾನಿ ಹೇಳಿದರು.
ಕ್ರೀಡಾಕೂಟಗಳು, ವಾಕಥಾನ್ಗಳು, ಧ್ಯಾನ ಶಿಬಿರಗಳು, ಸಾಂಸ್ಕೃತಿಕ ಪ್ರದರ್ಶನಗಳು, ಬೀದಿ ನಾಟಕಗಳು (ನುಕ್ಕಡ್ ನಾಟಕ), ಚರ್ಚಾ ಸ್ಪರ್ಧೆಗಳು, ಕಲಾ ಸ್ಪರ್ಧೆಗಳು ಮತ್ತು ಸಮುದಾಯ ಜಾಗೃತಿ ಅಭಿಯಾನಗಳು ನಡೆಯಲಿವೆ.
ಮಾದಕದ್ರವ್ಯ ವ್ಯಸನವು ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲ, ಇಡೀ ಕುಟುಂಬ ಮತ್ತು ದೇಶದ ಭವಿಷ್ಯವನ್ನೇ ನಾಶಪಡಿಸುತ್ತದೆ. ನಮ್ಮ ಯುವಜನರಲ್ಲಿ ದೇಶ ಕಟ್ಟುವ ಅಗಾಧ ಶಕ್ತಿಯಿದೆ. ಅವರನ್ನು ತಪ್ಪು ಹಾದಿಯಿಂದ ತಡೆದು ಸಾಹಸ, ಕ್ರೀಡೆ ಮತ್ತು ತಂತ್ರಜ್ಞಾನದತ್ತ ಕೊಂಡೊಯ್ಯುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ಈ ಬೃಹತ್ ಆಂದೋಲನವನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಗೃಹ ಸಚಿವಾಲಯದ ಸಹಯೋಗದೊಂದಿಗೆ ದೇಶಾದ್ಯಂತ ಜಾರಿಗೆ ತರುತ್ತಿದೆ. 2047 ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಯುವಜನತೆಯ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಸರ್ಕಾರ ತಿಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ