Video: ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಮಾಡಿದ ಕಾರ್ಮಿಕರ ಮೇಲೆ ಹೂಮಳೆ ಸುರಿಸಿದ ಪ್ರಧಾನಿ ಮೋದಿ; ಅವರೊಂದಿಗೇ ಕುಳಿತು ಊಟ ಸೇವನೆ

ಕಾಶಿ ವಿಶ್ವನಾಥ ಕಾರಿಡಾಡ್​ ನಿರ್ಮಾಣ ಮಾಡಿದ ಕಾರ್ಮಿಕರೆಲ್ಲ ಕುರ್ಚಿಯ ಮೇಲೆ ಕುಳಿತಿದ್ದರೆ, ಪ್ರಧಾನಿ ಮೋದಿ ಅಲ್ಲಿಗೆ ಹೋಗಿ, ಬಟ್ಟಲಲ್ಲಿ ಹೂವು ಹಿಡಿದು ಅವರ ಮೇಲೆ ಚೆಲ್ಲಿದ್ದಾರೆ.

Video: ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಮಾಡಿದ ಕಾರ್ಮಿಕರ ಮೇಲೆ ಹೂಮಳೆ ಸುರಿಸಿದ ಪ್ರಧಾನಿ ಮೋದಿ; ಅವರೊಂದಿಗೇ ಕುಳಿತು ಊಟ ಸೇವನೆ
ಕಾರ್ಮಿಕರೊಂದಿಗೆ ಊಟಕ್ಕೆ ಕುಳಿತ ಪ್ರಧಾನಿ ಮೋದಿ
Updated By: Lakshmi Hegde

Updated on: Dec 13, 2021 | 3:45 PM

ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಶಿ ವಿಶ್ವನಾಥ ಕಾರಿಡಾರ್​ನ್ನು ಉದ್ಘಾಟನೆ ಮಾಡಿದ್ದಾರೆ. ಈ ಕಾರಿಡಾರ್ ಉದ್ಘಾಟನೆಗೂ ಮೊದಲು ಅವರು ವಾರಾಣಸಿಯ ಕಾಲ ಭೈರವ ಮಂದಿರದಲ್ಲಿ ಆರತಿ ಮತ್ತು ಪೂಜೆ ನೆರವೇರಿಸಿದ್ದಾರೆ. ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಪ್ರಧಾನಿ ಮೋದಿಯವರ ಕನಸಿನ ಯೋಜನೆಯಾಗಿದೆ. ಭೂಮಿಯ ಮೇಲಿನ ಅತ್ಯಂತ ಹಳೇ ನಗರಗಳಲ್ಲಿ ಒಂದಾದ ಐತಿಹಾಸಿಕ ಕಾಶಿ ವೈಭವನ್ನು ಮತ್ತೆ ಮರಳಿ ತರುವ ಅಭಿವೃದ್ಧಿ ಯೋಜನೆಗಳಲ್ಲಿ ಇದೂ ಒಂದು. ಇಂದು ಬೆಳಗ್ಗೆಯೇ ವಾರಾಣಸಿ ತಲುಪಿರುವ ಪ್ರಧಾನಿ ಮೋದಿ ಲಲಿತ್​ ಘಾಟ್​​ನಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ರುದ್ರಾಕ್ಷಿ ಮಾಲೆ ಧರಿಸಿ ಮಂತ್ರ ಪಠಿಸಿದ್ದಾರೆ.

ಇನ್ನು ಕಾಶಿ ವಿಶ್ವನಾಥ ಕಾರಿಡಾರ್ ಮೊದಲ ಹಂತವನ್ನು ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಮಾತನಾಡಿದ್ದಾರೆ. ನಂತರ ಈ ಅದ್ಧೂರಿ ಕಾರಿಡಾರ್ ನಿರ್ಮಾಣ ಮಾಡಿದ ಕೆಲಸಗಾರರ ಮೇಲೆ ಹೂವಿನ ಎಸಳುಗಳನ್ನು ಸುರಿಸುವ ಮೂಲಕ ಕಾರ್ಮಿಕರಿಗೆ ಗೌರವ ಸಲ್ಲಿಸಿದ್ದಾರೆ.  ಕಾರ್ಮಿಕರೆಲ್ಲ ಕುರ್ಚಿಯ ಮೇಲೆ ಕುಳಿತಿದ್ದರೆ, ಪ್ರಧಾನಿ ಮೋದಿ ಅಲ್ಲಿಗೆ ಹೋಗಿ, ಬಟ್ಟಲಲ್ಲಿ ಹೂವು ಹಿಡಿದು ಅವರ ಮೇಲೆ ಚೆಲ್ಲಿದ್ದಾರೆ. ಅಷ್ಟೇ ಅಲ್ಲ, ಬಳಿಕ ಕಾರ್ಮಿಕರೊಂದಿಗೇ ಕುಳಿತು ಊಟವನ್ನೂ ಮಾಡಿದ್ದಾರೆ. ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕೂಡ ಉಪಸ್ಥಿತರಿದ್ದರು. ಇದರ ಫೋಟೋ, ವಿಡಿಯೋಗಳು ವೈರಲ್ ಆಗಿವೆ.

ಅದಕ್ಕೂ ಮೊದಲು ಭಾಷಣ ಮಾಡಿದ ಪ್ರಧಾನಿ ಮೋದಿ, ಕಾರಿಡಾರ್​ ನಿರ್ಮಾಣದಲ್ಲಿ ಶ್ರಮಿಸಿದ ಕಾರ್ಮಿಕ ಸಹೋದರರು, ಸಹೋದರಿಯರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಕೊವಿಡ್​ 19 ನಂಥ ಕಷ್ಟದ ಸಂದರ್ಭದಲ್ಲೂ ಕೂಡ ಕಾರಿಡಾರ್​ ನಿರ್ಮಾಣ ಮಾಡಿದ್ದಾರೆ. ಅವರೆಲ್ಲರನ್ನೂ ಇಂದು ಭೇಟಿಯಾಗುವ ಮತ್ತು ಅವರಿಂದ ಆಶಿರ್ವಾದ ಪಡೆಯುವ ಅವಕಾಶ ನನಗೆ ಸಿಕ್ಕಿತು ಎಂದು ಹೇಳಿದ್ದಾರೆ. ಹಾಗೇ ಕಾರ್ಮಿಕರು ಅವಿರತವಾಗಿ ಶ್ರಮಿಸಿ ಕಾರಿಡಾರ್ ನಿರ್ಮಾಣ ಮಾಡಲು ಎಲ್ಲ ರೀತಿಯ ನೆರವು ಮಾಡಿಕೊಟ್ಟ ಉತ್ತರ ಪ್ರದೇಶ ಸರ್ಕಾರ ಮತ್ತು ಸಿಎಂ ಯೋಗಿ ಆದಿತ್ಯನಾಥ್​ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Kashi Vishwanath corridor ಕಾಶಿ ವಿಶ್ವನಾಥ ಕಾರಿಡಾರ್ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

Published On - 3:32 pm, Mon, 13 December 21