ಘರ್ ಮೇ ಘುಸ್ ಕೆ ಮಾರೇಂಗೆ ಅಂತಿದ್ರು ಪ್ರಧಾನಿ, ಈಗ ಏನಾಯ್ತು?; ದೋಡಾ ಎನ್​​​ಕೌಂಟರ್ ಬಗ್ಗೆ ಓವೈಸಿ ವಾಗ್ದಾಳಿ

|

Updated on: Jul 16, 2024 | 7:04 PM

'ಪ್ರಧಾನಿ ಮೋದಿಯವರು 'ಘರ್ ಮೇ ಘುಸ್ ಕರ್ ಮರೇಂಗೆ' ಎಂದು ಹೇಳುತ್ತಿದ್ದರು. ಹಾಗಾದರೆ ಇದು ಏನು? ಇದು ಸರ್ಕಾರದ ವೈಫಲ್ಯ. ಅವರಿಗೆ ಭಯೋತ್ಪಾದನೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ದೋಡಾದಲ್ಲಿ ಏನಾಗಿದೆಯೋ ಅದು ತುಂಬಾ ಅಪಾಯಕಾರಿ,” ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಘರ್ ಮೇ ಘುಸ್ ಕೆ ಮಾರೇಂಗೆ ಅಂತಿದ್ರು ಪ್ರಧಾನಿ, ಈಗ ಏನಾಯ್ತು?; ದೋಡಾ ಎನ್​​​ಕೌಂಟರ್ ಬಗ್ಗೆ ಓವೈಸಿ ವಾಗ್ದಾಳಿ
ಅಸಾದುದ್ದೀನ್ ಓವೈಸಿ
Follow us on

ಶ್ರೀನಗರ ಜುಲೈ 16: ಜಮ್ಮು ಮತ್ತು ಕಾಶ್ಮೀರದ (Jammu and Kashmir) ದೋಡಾದಲ್ಲಿ (Doda) ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಮೇಜರ್ ಸೇರಿದಂತೆ ನಾಲ್ವರು ಸೇನಾ ಯೋಧರು ಹುತಾತ್ಮರಾದ ನಂತರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಮಂಗಳವಾರ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಪ್ರಧಾನಿ ಮೋದಿಯವರು ‘ಘರ್ ಮೇ ಘುಸ್ ಕರ್ ಮರೇಂಗೆ’ ಎಂದು ಹೇಳುತ್ತಿದ್ದರು. ಹಾಗಾದರೆ ಇದು ಏನು? ಇದು ಸರ್ಕಾರದ ವೈಫಲ್ಯ. ಅವರಿಗೆ ಭಯೋತ್ಪಾದನೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ದೋಡಾದಲ್ಲಿ ಏನಾಗಿದೆಯೋ ಅದು ತುಂಬಾ ಅಪಾಯಕಾರಿ,” ಎಂದು ಹೈದರಾಬಾದ್ ಸಂಸದ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಆಡಳಿತದ ಮೇಲೆ ಹಲವಾರು ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ.

ಈ ನಿರಂತರ ಭಯೋತ್ಪಾದಕ ದಾಳಿಗಳು ಜಮ್ಮು ಮತ್ತು ಕಾಶ್ಮೀರದ ಹದಗೆಟ್ಟ ಸ್ಥಿತಿಯನ್ನು ಪ್ರತಿಬಿಂಬಿಸುತ್ತಿವೆ, ನಮ್ಮ ಸೈನಿಕರು ಮತ್ತು ಅವರ ಕುಟುಂಬಗಳು ಬಿಜೆಪಿಯ ತಪ್ಪು ನೀತಿಗಳ ಭಾರವನ್ನು ಹೊತ್ತಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು “ಭದ್ರತಾ ಕಾರ್ಯತಂತ್ರದಲ್ಲಿ ಎಚ್ಚರಿಕೆಯಿಂದ ಮರುಪರಿಶೀಲನೆ” ಎಂದು ಕರೆ ನೀಡಿದರು.
“ಕಳೆದ 36 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಹಿಡಿದಿಟ್ಟುಕೊಂಡಿರುವ ಭಯೋತ್ಪಾದಕ ದಾಳಿಗಳ ಸರಣಿಯು ನಮ್ಮ ಭದ್ರತಾ ಕಾರ್ಯತಂತ್ರದಲ್ಲಿ ಎಚ್ಚರಿಕೆಯಿಂದ ಮರುಪರಿಶೀಲಿಸುವ ಅಗತ್ಯವಿದೆ. ಎಲ್ಲವೂ ‘ಎಂದಿನಂತೆ ವ್ಯವಹಾರ’ ಎಂಬಂತೆ ಮೋದಿ ಸರಕಾರ ವರ್ತಿಸುತ್ತಿದ್ದು, ಏನೂ ಬದಲಾಗಿಲ್ಲ. ಜಮ್ಮು ಪ್ರದೇಶವು ಈ ದಾಳಿಗಳ ಭಾರವನ್ನು ಹೊತ್ತುಕೊಳ್ಳುತ್ತಿದೆ ಎಂದು ಅವರು ತಿಳಿದಿರಬೇಕು ಎಂದು ಖರ್ಗೆ ಹೇಳಿದ್ದಾರೆ.

“ದುರದೃಷ್ಟವಶಾತ್, ಯಾವುದೇ ಹೊಣೆಗಾರಿಕೆ ಇಲ್ಲ. ಇಷ್ಟೊತ್ತಿಗೆ ತಲೆ ಉರುಳಬೇಕಿತ್ತು… ಡಿಜಿಪಿ (ಆರ್ ಆರ್ ಸ್ವೈನ್) ಅವರನ್ನು ಈಗಲೇ ವಜಾ ಮಾಡಬೇಕಿತ್ತು,” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷ ಮೆಹಬೂಬಾ ಮುಫ್ತಿ ಹೇಳಿರುವುದಾಗಿ ಪಿಟಿಐ ಉಲ್ಲೇಖಿಸಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಉಗ್ರರು ಹಾಗೂ ಸೈನಿಕರ ನಡುವೆ ಗುಂಡಿನ ಚಕಮಕಿ, ಓರ್ವ ಸೇನಾಧಿಕಾರಿ, ಮೂವರು ಸೈನಿಕರು ಹುತಾತ್ಮ

ಎಎಪಿ ನಾಯಕ ಸೌರಭ್ ಭಾರದ್ವಾಜ್, “ಇಂದೂ ಕೂಡ ಭಯೋತ್ಪಾದಕ ದಾಳಿ ನಡೆದಿದೆ. ಕೇಂದ್ರ ಸರ್ಕಾರದ ಕಾಶ್ಮೀರ ನೀತಿ ಸಂಪೂರ್ಣವಾಗಿ ವಿಫಲವಾಗಿದೆ. ಬಿಜೆಪಿ ಚುನಾಯಿತ ಸರ್ಕಾರದ ಭಾಗವಾಗಿತ್ತು, (ಅದು) ಸರ್ಕಾರವನ್ನು ತೆಗೆದುಹಾಕಿ ರಾಷ್ಟ್ರಪತಿ ಆಳ್ವಿಕೆ ಹೇರಿತು, ಆದರೆ ಪರಿಸ್ಥಿತಿ ಸುಧಾರಿಸಲಿಲ್ಲ.” ಎಂದಿದ್ದಾರೆ.

ಸೋಮವಾರ ಸಂಜೆ ದೇಸಾ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್‌ಕೌಂಟರ್ ನಡೆಯಿತು. ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಸೈನಿಕರನ್ನು ಕ್ಯಾಪ್ಟನ್ ಬ್ರಿಜೇಶ್ ಥಾಪಾ, ನಾಯಕ್ ಡಿ ರಾಜೇಶ್, ಸಿಪಾಯಿ ಬಿಜೇಂದ್ರ ಮತ್ತು ಸಿಪಾಯಿ ಅಜಯ್ ಎಂದು ಗುರುತಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ