ಉಪರಾಷ್ಟ್ರಪತಿ ಧನ್ಖರ್ ಅಣಕಿಸಿದ ಟಿಎಂಸಿ ಸಂಸದ; ರಾಷ್ಟ್ರಪತಿ ದ್ರೌಪದಿ ಮುರ್ಮು ಖಂಡನೆ

|

Updated on: Dec 20, 2023 | 1:35 PM

ನಮ್ಮ ಗೌರವಾನ್ವಿತ ಉಪರಾಷ್ಟ್ರಪತಿಯನ್ನು ಸಂಸತ್ತಿನ ಸಂಕೀರ್ಣದಲ್ಲಿ ಅವಮಾನಿಸಿದ ರೀತಿಯನ್ನು ನೋಡಿ ನಾನು ದಿಗ್ಭ್ರಮೆಗೊಂಡೆ. ಚುನಾಯಿತ ಪ್ರತಿನಿಧಿಗಳು ತಮ್ಮನ್ನು ತಾವು ವ್ಯಕ್ತಪಡಿಸಲು ಮುಕ್ತವಾಗಿರಬೇಕು, ಆದರೆ ಅವರ ಅಭಿವ್ಯಕ್ತಿ ಘನತೆ ಮತ್ತು ಸೌಜನ್ಯದ ಮಾನದಂಡಗಳೊಳಗೆ ಇರಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಖಂಡನೆ ವ್ಯಕ್ತಪಡಿಸಿದ್ದಾರೆ.

ಉಪರಾಷ್ಟ್ರಪತಿ ಧನ್ಖರ್ ಅಣಕಿಸಿದ ಟಿಎಂಸಿ ಸಂಸದ; ರಾಷ್ಟ್ರಪತಿ ದ್ರೌಪದಿ ಮುರ್ಮು ಖಂಡನೆ
ದ್ರೌಪದಿ ಮುರ್ಮು
Follow us on

ದೆಹಲಿ ಡಿಸೆಂಬರ್ 20: ಉಪರಾಷ್ಟ್ರಪತಿ ಜಗದೀಪ್ ಧನ್ಖರ್ (Jagdeep Dhankhar) ಅವರನ್ನು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ (Kalyan Banerjee) ಅಣಕಿಸಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಖಂಡಿಸಿದ್ದಾರೆ. ಸಂಸತ್ ಆವರಣದಲ್ಲೇ ಧನ್ಖರ್ ಅವರನ್ನು ಅವಮಾನ ಮಾಡಲಾಗಿದೆ. ಚುನಾಯಿತ ಪ್ರತಿನಿಧಿಗಳು ತಮ್ಮನ್ನು ತಾವು ವ್ಯಕ್ತಪಡಿಸಲು ಮುಕ್ತವಾಗಿರಬೇಕು, ಆದರೆ ಅವರ ಅಭಿವ್ಯಕ್ತಿ “ಗೌರವ ಮತ್ತು ಸೌಜನ್ಯದ ಮಾನದಂಡಗಳ” ಒಳಗಿರಬೇಕು ಎಂದು ಮುರ್ಮು ಒತ್ತಿ ಹೇಳಿದ್ದಾರೆ.

ಸಂಸತ್ತಿನ ಕೆಲವು ಸದಸ್ಯರ (ಸಂಸದರು) ಅಮಾನತು ವಿರುದ್ಧ ಸಂಸತ್ತಿನ ಮೆಟ್ಟಿಲುಗಳ ಮೇಲೆ ಪ್ರತಿಪಕ್ಷಗಳ ಪ್ರತಿಭಟನೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರು ರಾಜ್ಯಸಭೆಯ ಸಭಾಪತಿಯೂ ಆಗಿರುವ ಧನ್ಖರ್ ಅವರನ್ನು ಅನುಕರಿಸಿದ ಒಂದು ದಿನದ ನಂತರ ರಾಷ್ಟ್ರಪತಿಯವರ ಖಂಡನೆ ಬಂದಿದೆ.


“ನಮ್ಮ ಗೌರವಾನ್ವಿತ ಉಪರಾಷ್ಟ್ರಪತಿಯನ್ನು ಸಂಸತ್ತಿನ ಸಂಕೀರ್ಣದಲ್ಲಿ ಅವಮಾನಿಸಿದ ರೀತಿಯನ್ನು ನೋಡಿ ನಾನು ದಿಗ್ಭ್ರಮೆಗೊಂಡೆ. ಚುನಾಯಿತ ಪ್ರತಿನಿಧಿಗಳು ತಮ್ಮನ್ನು ತಾವು ವ್ಯಕ್ತಪಡಿಸಲು ಮುಕ್ತವಾಗಿರಬೇಕು, ಆದರೆ ಅವರ ಅಭಿವ್ಯಕ್ತಿ ಘನತೆ ಮತ್ತು ಸೌಜನ್ಯದ ಮಾನದಂಡಗಳೊಳಗೆ ಇರಬೇಕು. ಅದು ನಾವು ಹೆಮ್ಮೆಪಡುವ ಸಂಸದೀಯ ಸಂಪ್ರದಾಯವಾಗಿದೆ. ಭಾರತದ ಜನರು ಅದನ್ನು ಎತ್ತಿಹಿಡಿಯುತ್ತಾರೆ ಎಂದು ನಿರೀಕ್ಷಿಸುತ್ತಾರೆ ”ಎಂದು ಮುರ್ಮು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಂತೈಸುವ ಮಾತುಗಳು ಮತ್ತು ಮೂಲಭೂತ ಸೌಜನ್ಯಗಳು ಯಾವಾಗಲೂ ಉಳಿಯಬೇಕು ಎಂಬ ಸಮಯೋಚಿತ ಜ್ಞಾಪನೆಗಾಗೆ ಧನ್ಖರ್ ಅವರು ರಾಷ್ಟ್ರಪತಿಗೆ ಕೃತಜ್ಞತೆ ಹೇಳಿದ್ದಾರೆ.  ನನ್ನ ಕೊನೆಯ ಉಸಿರು ಇರುವವರೆಗೂ ಸಂವಿಧಾನದ ತತ್ವಗಳನ್ನು ಎತ್ತಿಹಿಡಿಯಲು ನಾನು ಬದ್ಧನಾಗಿದ್ದೇನೆ. ಯಾವ ಅವಮಾನವೂ ನನ್ನನ್ನು ಹಾಗೆ ಮಾಡುವುದನ್ನು ತಡೆಯಲಾರದು ಎಂದು ಧನ್ಖರ್ ಹೇಳಿದ್ದಾರೆ.

ಕೆಲವು ವಿರೋಧ ಪಕ್ಷದ ಸಂಸದರ ವರ್ತನೆಯ ಬಗ್ಗೆ ತೀವ್ರ ಕಳವಳ ಮತ್ತು ಖಂಡನೆ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ನನಗೆ ಕರೆ ಮಾಡಿದ್ದರು ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ.

“ತಾನು ಇಪ್ಪತ್ತು ವರ್ಷಗಳಿಂದ ಇಂತಹ ಅವಮಾನಗಳನ್ನು ಸ್ವೀಕರಿಸುತ್ತಿದ್ದೇನೆ ಎಂದು ಅವರು ನನಗೆ ಹೇಳಿದರು. ಆದರೆ ಭಾರತದ ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಕಚೇರಿಗೆ ಇದು ಸಂಭವಿಸಬಹುದು ಮತ್ತು ಅದು ಸಂಸತ್ತಿನಲ್ಲಿ ನಡೆದಿದ್ದು ದುರದೃಷ್ಟಕರ ಎಂದು ಧನ್ಖರ್ ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಏತನ್ಮಧ್ಯೆ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಧನ್ಖರ್ ಅವರನ್ನು ಭೇಟಿ ಮಾಡಿದ್ದು, ಕೆಲವು ಸಂಸದರು ಉಪರಾಷ್ಟ್ರಪತಿಗಳ ಸಾಂವಿಧಾನಿಕ ಕಚೇರಿಯನ್ನು “ಅವಮಾನಕರ ಮತ್ತು ಅವಹೇಳನ ಮಾಡುವ ಗಂಭೀರ ಕೃತ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಇದು ಕೀಳು ಅಭಿರುಚಿ ಎಂದಿದ್ದಾರೆ.

ಇದನ್ನೂ ಓದಿ:20 ವರ್ಷದಿಂದ ಇಂಥ ಅವಮಾನ ಎದುರಿಸುತ್ತಾ ಬಂದಿದ್ದೇನೆ: ಉಪರಾಷ್ಟ್ರಪತಿಗೆ ಕರೆ ಮಾಡಿ ಸಮಾಧಾನ ಹೇಳಿದ ಪ್ರಧಾನಿ ಮೋದಿ 

ಅಮಾನತುಗೊಂಡಿರುವ ಟಿಎಂಸಿ ಶಾಸಕ ಕಲ್ಯಾಣ್ ಬ್ಯಾನರ್ಜಿ ಅವರು ಸದನದ ಅಣಕು ಸಿಟ್ಟಿಂಗ್ ನಡೆಸುತ್ತಿರುವಾಗ ಧನ್ಖರ್ ಅವರ ವರ್ತನೆಯನ್ನು ಅನುಕರಿಸಿದ್ದಾರೆ. ಈ ಕೃತ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ.

ಅಶಿಸ್ತಿನ ವರ್ತನೆಗಾಗಿ 49 ಪ್ರತಿಪಕ್ಷ ಶಾಸಕರನ್ನು ಮಂಗಳವಾರ ಲೋಕಸಭೆಯಿಂದ ಅಮಾನತುಗೊಳಿಸಲಾಗಿದ್ದು, ಸಂಸತ್ತಿನ ಉಭಯ ಸದನಗಳಲ್ಲಿ ಕ್ರಮ ಎದುರಿಸುತ್ತಿರುವ ಒಟ್ಟು ಸಂಸದರ ಸಂಖ್ಯೆ 141 ಕ್ಕೆ ಏರಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:34 pm, Wed, 20 December 23