UP Diwas 2022: ಉತ್ತರ ಪ್ರದೇಶ ಜನರಿಗೆ ರಾಷ್ಟ್ರಪತಿ, ಗೃಹ ಸಚಿವರಿಂದ ಶುಭಾಶಯ; ಸಿಎಂ ಯೋಗಿ ವಿಡಿಯೋ ಶೇರ್​ ಮಾಡಿದ ಪ್ರಧಾನಿ ಮೋದಿ

Uttar Pradesh Foundation Day: ಈ ಬಾರಿಯ ಸಂಸ್ಥಾಪನಾ ದಿನ ಇನ್ನಷ್ಟು ವಿಶೇಷ ಎಂದೇ ಪರಿಗಣಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ.

UP Diwas 2022: ಉತ್ತರ ಪ್ರದೇಶ ಜನರಿಗೆ ರಾಷ್ಟ್ರಪತಿ, ಗೃಹ ಸಚಿವರಿಂದ ಶುಭಾಶಯ; ಸಿಎಂ ಯೋಗಿ ವಿಡಿಯೋ ಶೇರ್​ ಮಾಡಿದ ಪ್ರಧಾನಿ ಮೋದಿ
ಉತ್ತರ ಪ್ರದೇಶ
Follow us
| Updated By: Lakshmi Hegde

Updated on: Jan 24, 2022 | 1:24 PM

ಇಂದು ಜನವರಿ 24. ಉತ್ತರ ಪ್ರದೇಶ ರಾಜ್ಯದ ಸಂಸ್ಥಾಪನಾ ದಿನ (Uttar Pradesh Foundation Day). 1950ರ ಜನವರಿ 24ರಂದು ಉತ್ತರಪ್ರದೇಶ ರಾಜ್ಯವಾಗಿ ರೂಪುಗೊಂಡ ಹಿನ್ನೆಲೆಯಲ್ಲಿ ಆ ದಿನವನ್ನು ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುತ್ತಿದೆ. 1947ರಲ್ಲಿ ಭಾರತ ಬ್ರಿಟಿಷ್​ ಆಡಳಿತದಿಂದ ಮುಕ್ತವಾಯಿತು. ಅದಾದ ಬಳಿಕ ಇಡೀ ದೇಶದಲ್ಲಿ ಸಣ್ಣಸಣ್ಣ ಪ್ರಾಂತ್ಯಗಳು  ಇದ್ದವು. ಆ ಸಣ್ಣ ಪ್ರಾಂತ್ಯಗಳೆಲ್ಲ ಸೇರಿ ರಾಜ್ಯಗಳಾಗಿ ಬದಲಾವಣೆಯಾಗತೊಡಗಿದವು. ಹಾಗೇ 1950ರ ಜ.24ರಂದು ಉತ್ತರ ಪ್ರದೇಶ ರಾಜ್ಯ ರಚನೆಯಾಯಿತು.  ಸದ್ಯ ದೇಶದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ರಾಜ್ಯ ಈ ಉತ್ತರ ಪ್ರದೇಶವಾಗಿದೆ. ಹಾಗೇ, ರಾಜಕೀಯವಾಗಿ ಅತ್ಯಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯವೂ ಹೌದು. 2017ರವರೆಗೆ ಉತ್ತರ ಪ್ರದೇಶದಲ್ಲಿ ಸಂಸ್ಥಾಪನಾ ದಿನವನ್ನೆಲ್ಲ ಆಚರಣೆ ಮಾಡುತ್ತಿರಲಿಲ್ಲ. ಆದರೆ 2017ರಲ್ಲಿ ಅಂದಿನ ರಾಜ್ಯ ಪಾಲರಾಗಿದ್ದ ರಾಮ್​ ನಾಯ್ಕ್​ ಅವರು ಇದಕ್ಕೆ ಮುನ್ನುಡಿ ಬರೆದರು. ಜ.24 ಉತ್ತರ ಪ್ರದೇಶದ ಪಾಲಿಗೆ ವಿಶೇಷ ದಿನ. ಹೀಗಾಗಿ ಆಚರಣೆ ಮಾಡುವುದು ಸೂಕ್ತ ಎಂದು ಹೇಳಿದ ಮೇಲೆ, ಅಂದಿನಿಂದಲೂ ಪ್ರತಿವರ್ಷ ಯುಪಿ ದಿವಸ್ ಆಚರಣೆ ನಡೆಯುತ್ತಿದೆ. 

ರಾಷ್ಟ್ರಪತಿ ರಾಮನಾಥ್ ಕೋವಿಂದರಿಂದ ಹಾರೈಕೆ ಉತ್ತರಪ್ರದೇಶ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಅಲ್ಲಿನ ಜನರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಭಾಶಯ ಕೋರಿದ್ದಾರೆ. ಇಂದು ಉತ್ತರ ಪ್ರದೇಶದ ಸಂಸ್ಥಾಪನಾ ದಿನ. ಇಲ್ಲಿನ ಜನರು ಕಠಿಣ ಪರಿಶ್ರಮ ಜೀವಿಗಳು ಮತ್ತು ಪ್ರತಿಭಾಶಾಲಿಗಳು. ಭಾರತದ ಇತಿಹಾಸ, ಕಲೆ-ಸಂಸ್ಕೃತಿ, ಸಾಹಿತ್ಯ ಮತ್ತು ರಾಜಕೀಯಕ್ಕೆ ಹಲವು ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಉತ್ತರಪ್ರದೇಶವು ಅಭಿವೃದ್ಧಿ ಮತ್ತು ಸಮೃದ್ಧಿಯ ಹಾದಿಯಲ್ಲಿ ಮುಂದುವರಿಯಲಿ ಎಂದು ಹಾರೈಸಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್​ ವಿಡಿಯೋ ಸಂದೇಶ ರೀಟ್ವೀಟ್ ಮಾಡಿದ ಪ್ರಧಾನಿ ಮೋದಿ ಇಂದು ಉತ್ತರಪ್ರದೇಶದ 73ನೇ ಸಂಸ್ಥಾಪನಾ ದಿನದ ನಿಮಿತ್ತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನತೆಗೆ ವಿಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ.  ಉತ್ತರಪ್ರದೇಶವು ದೇಶದ ನಂಬಿಕೆಯಾಗಿದೆ. ಅಪಾರ ಸಂಪನ್ಮೂಲಗಳು, ಯುವಶಕ್ತಿಯನ್ನು ಹೊಂದಿರುವ ನಮ್ಮ ರಾಜ್ಯ ಇದೀಗ ಅಭಿವೃದ್ಧಿಯೆಡೆಗೆ ಹೊಸ ಪ್ರಯಾಣ ಶುರು ಮಾಡಿದೆ. ಉದ್ಯಮ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿರುವ ಉತ್ತರ ಪ್ರದೇಶ, ಕೇಂದ್ರ ಸರ್ಕಾರದ 50ಕ್ಕೂ ಹೆಚ್ಚು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ರಾಜ್ಯ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನೇಕ ಬದಲಾವಣೆಗಳು ಆಗಿವೆ. ಮೊದಲಿಗಿಂತಲೂ ಎಷ್ಟೇ ಪಾಲು ಸುರಕ್ಷಿತವಾಗಿದೆ. ಉತ್ತರ ಪ್ರದೇಶ ರೂಪುಗೊಂಡು 73 ವರ್ಷಗಳಾದವು. ಇಷ್ಟು ವರ್ಷಗಳ ಪ್ರಯಾಣದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಲ್ಲಿನ ಅನೇಕ ಕ್ಷೇತ್ರಗಳಲ್ಲಿ ಸುಸ್ಥಿರ ಅಭಿವೃದ್ಧಿ, ಪ್ರಗತಿಯಾಗಿದೆ. ಉತ್ತರಪ್ರದೇಶವೆಂಬುದು ಭಾರತದ ನಂಬಿಕೆಯಾಗಿ ಪರಿವರ್ತನೆಗೊಂಡಿದೆ.  ಇದೆಲ್ಲ ಸಾಧ್ಯವಾಗಿದ್ದು ಇಲ್ಲಿನ ಜನರಿಂದ. ಯುವಶಕ್ತಿಯಿಂದ ಎಂದು ಹೇಳಿದ ಯೋಗಿ ಆದಿತ್ಯನಾಥ್​, ರಾಜ್ಯದ ಜನರಿಗೆ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸಿದ್ದಾರೆ.

ಹಾಗೇ, ಯೋಗಿ ಆದಿತ್ಯನಾಥ್​ ಅವರ ವಿಡಿಯೋ ಸಂದೇಶವನ್ನೇ ರೀ ಶೇರ್ ಮಾಡಿಕೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಕಳೆದ 5ವರ್ಷಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಕಂಡಿದೆ. ಅದರ ಮಾನದಂಡ ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಜ್ಯದ ಜನರ ಬದುಕು ಸುಗಮವಾಗುವ ಜತೆ, ಹೊಸ ಅವಕಾಶಗಳು ಅಲ್ಲಿ ಸೃಷ್ಟಿಯಾಗಿದೆ.  ಈ ಅಭಿವೃದ್ಧಿ ಮುಂದುವರಿಯುವ ಬಗ್ಗೆ ನನಗೆ ಖಾತ್ರಿಯಿದೆ ಎಂದಿದ್ದಾರೆ.  ಹಾಗೇ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರೂ ಕೂಡ ಟ್ವೀಟ್ ಮಾಡಿ ಉತ್ತರ ಪ್ರದೇಶದ ಜನರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯ ಧರ್ಮ, ಜ್ಞಾನದ ನಾಡು. ಇಲ್ಲಿನ ಜನರಲ್ಲಿ ಶೌರ್ಯವಿದೆ. ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ, ಯೋಗಿ ಆದಿತ್ಯನಾಥ್​ ಸರ್ಕಾರ ಈ ರಾಜ್ಯವನ್ನು ನಿರಂತರವಾಗಿ ಅಭಿವೃದ್ಧಿಯೆಡೆಗೆ ಕರೆದೊಯ್ಯುತ್ತಿದೆ.  ಅಲ್ಲಿನ ವೈಭವ ಮತ್ತೆ ಮರಳಿದೆ. ಉತ್ತರ ಪ್ರದೇಶದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕೆ ಬಿಜೆಪಿ ಸದಾ ಬದ್ಧವಾಗಿದೆ ಎಂದು ಹೇಳಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೂ ಕೂಡ ಜನತೆಗೆ ಶುಭ ಕೋರಿದ್ದಾರೆ.

ಹಾಗೇ, ಈ ಬಾರಿಯ ಸಂಸ್ಥಾಪನಾ ದಿನ ಇನ್ನಷ್ಟು ವಿಶೇಷ ಎಂದೇ ಪರಿಗಣಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ. ಇನ್ನೊಂದೆಡೆ, ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಸಾಲುಸಾಲು ಅಭಿವೃದ್ಧಿ ಯೋಜನೆಗಳಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೋಗಿ ಚಾಲನೆ ನೀಡಿದ್ದಾರೆ. ಅದರಲ್ಲೂ ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಯೋಜನೆ ಗಮನಸೆಳೆದಿದ್ದು, ಹೊಸ ವರ್ಷದ ದಿನ ದಾಖಲೆಯ ಸಂಖ್ಯೆಯಲ್ಲಿ ಭಕ್ತರು ಅಲ್ಲಿಗೆ ಭೇಟಿ ಕೊಟ್ಟಿದ್ದರು.

ಇದನ್ನೂ ಓದಿ: Video: ಎಲ್ಲೆಲ್ಲೂ ಹಿಮ, ಕೊರೆವ ಚಳಿ; ಕೇವಲ 40 ಸೆಕೆಂಡ್​ಗಳಲ್ಲಿ 47 ಪುಶ್​ ಅಪ್ಸ್​ ತೆಗೆದ ಬಿಎಸ್​ಎಫ್ ಯೋಧ-ಸೆಲ್ಯೂಟ್​ ಹೊಡೆದ ನೆಟ್ಟಿಗರು