ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ; ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಆಪ್ತ ಇವರು

Uttarakhand Chief Minister: ಉತ್ತರಾಖಂಡ​ ರಾಜ್ಯ ಕಳೆದ ನಾಲ್ಕು ತಿಂಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ನೋಡಿದಂತಾಗಿದೆ. ತೀರಥ್​ ಸಿಂಗ್​ ರಾವತ್​ ಮಾರ್ಚ್​​ನಲ್ಲಿ ಅಧಿಕಾರ ಸ್ವೀಕರಿಸಿದ್ದರು. ಅದಾದ ನಾಲ್ಕೇ ತಿಂಗಳಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆಯಾಗಿದೆ.

ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ; ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಆಪ್ತ ಇವರು
ಪುಷ್ಕರ್​ ಸಿಂಗ್ ಧಮಿ
Follow us
| Updated By: Lakshmi Hegde

Updated on:Jul 03, 2021 | 4:59 PM

ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ  ಪುಷ್ಕರ್​ ಸಿಂಗ್​ ದಾಮಿ ಆಯ್ಕೆಯಾಗಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿ ತೀರಥ್​ ಸಿಂಗ್​ ರಾವತ್​ ನಿನ್ನೆ ರಾತ್ರಿ ರಾಜೀನಾಮೆ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಇಂದು  ಹೊಸ ಮುಖ್ಯಮಂತ್ರಿ ಆಯ್ಕೆಗಾಗಿ ರಾಜ್ಯದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದಿತ್ತು. ಡೆಹ್ರಾಡೂನ್​​ನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ 57 ಬಿಜೆಪಿ ಶಾಸಕರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಚರ್ಚೆ ನಡೆದ ಬಳಿಕ ಪುಷ್ಕರ್ ಸಿಂಗ್​ ಧಮಿಯನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.

ತೀರಥ್ ಸಿಂಗ್ ರಾವತ್ ಅವರು ನಾಲ್ಕು ತಿಂಗಳ ಹಿಂದಷ್ಟೇ ಉತ್ತರಾಖಂಡ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದರು. ಆದರೆ ಸದ್ಯ ಸಂಸದರಾಗಿರುವ ಅವರು ಸೆ.10ರೊಳಗೆ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರವನ್ನು ಗೆಲ್ಲಬೇಕಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿಕೊಡುವುದು ಅನುಮಾನವೇ ಆಗಿದ್ದರಿಂದ ತೀರಥ್ ಸಿಂಗ್​ ರಾವತ್ ರಾಜೀನಾಮೆ ನೀಡಬೇಕಾಗಿ ಬಂತು. ನಿನ್ನೆ ಸಂಜೆಯೇ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರಿಗೆ ತೀರಥ್​ ಸಿಂಗ್​ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಯಾರು ಈ ಪುಷ್ಕರ್ ಸಿಂಗ್ ಧಮಿ? ಉತ್ತರಾಖಂಡದ 10ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಪುಷ್ಕರ್​ ಸಿಂಗ್​ ಧಮಿಯವರಿಗೆ 45 ವರ್ಷ. ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರ ಆಪ್ತರಾಗಿರುವ ಪುಷ್ಕರ್​ ಸಿಂಗ್​​ರನ್ನು ಮುಖ್ಯಮಂತ್ರಿಯನ್ನಾಗಿ ಇಂದು ಬಿಜೆಪಿಗರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ಖತಿಮಾ ಕ್ಷೇತ್ರದಿಂದ ಎರಡು ಬಾರಿ ಗೆದ್ದು ಶಾಸಕರಾಗಿದ್ದಾರೆ. ಹಾಗೇ, ಭಗತ್​ ಸಿಂಗ್ ಕೊಶಿಯಾರಿ ಮುಖ್ಯಮಂತ್ರಿ(2001-2002ರವರೆಗೆ)ಯಾಗಿದ್ದಾಗ ಇವರು ವಿಶೇಷ ಕರ್ತವ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

4 ತಿಂಗಳಲ್ಲಿ ಎರಡು ಬಾರಿ ಸಿಎಂ ಬದಲಾವಣೆ ಉತ್ತರಾಖಂಡ್​​ನಲ್ಲಿ ಇನ್ನೇನು ವರ್ಷದೊಳಗೇ ವಿಧಾನಸಭೆ ಚುನಾವಣೆ ಬರಲಿದೆ. ಆದರೆ ಬಿಜೆಪಿ ಕೇವಲ ನಾಲ್ಕೇ ತಿಂಗಳಲ್ಲಿ ಇದು ಎರಡನೇ ಬಾರಿಗೆ ಮುಖ್ಯಮಂತ್ರಿಯನ್ನು ಬದಲಿಸುತ್ತಿದೆ. 2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದ ತ್ರಿವೇಂದ್ರ ಸಿಂಗ್​ ರಾವತ್​ ಮಾರ್ಚ್​ನಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಇವರ ಆಡಳಿತದ ಬಗ್ಗೆ ಸ್ವಪಕ್ಷೀಯರಿಂದಲೇ ಅಸಮಾಧಾನ ವ್ಯಕ್ತವಾಗಿತ್ತು. ಕೆಲವರು ಹೈಕಮಾಂಡ್​ಗೂ ದೂರು ನೀಡಿದ್ದರು. ರಾಜಕೀಯ ಬಿಕ್ಕಟ್ಟು ಹೆಚ್ಚಾದ ಬೆನ್ನಲ್ಲೇ, ಮುಂಬರುವ ವಿಧಾನಸಭಾ ಚುನಾವಣೆಗೆ ಯಾವುದೇ ತೊಂದರೆಯಾಗಬಾರದು, ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ತ್ರಿವೇಂದ್ರ ಸಿಂಗ್​ ರಾವತ್​ ರಾಜೀನಾಮೆ ಕೊಟ್ಟಿದ್ದರು. ಬಳಿಕ ತೀರಥ್​ ಸಿಂಗ್​ ರಾವತ್ ಆ ಹುದ್ದೆಗೆ ಏರಿದ್ದರು.

ಮುಖ್ಯಮಂತ್ರಿಯಾದ ಬಳಿಕ ತೀರಥ್ ಸಿಂಗ್​ ಒಂದೆರಡು ವಿಚಾರಗಳಲ್ಲಿ ತೀವ್ರವಾದ ವಿವಾದ ಸೃಷ್ಟಿಸಿದ್ದರು. ಮೊದಲು ಕುಂಭಮೇಳಕ್ಕೆ ಕೊವಿಡ್​ 19 ಟೆಸ್ಟ್ ರಿಪೋರ್ಟ್ ಅಗತ್ಯವಿಲ್ಲ ಎಂದು ಘೋಷಿಸಿ ಟೀಕೆಗೆ ಗುರಿಯಾದರು. ಎರಡನೇದಾಗಿ ಮಹಿಳೆಯರು ಹರಿದ ಜೀನ್ಸ್​ ಧರಿಸುವ ಬಗ್ಗೆ ಮಾತನಾಡಿ, ವಿವಾದ ಸೃಷ್ಟಿಸಿ ಕಟು ವಿರೋಧಕ್ಕೆ ಗುರಿಯಾದರು. ಹಾಗೇ, ಭಾರತವನ್ನು ಆಳಿದ್ದವರು ಬ್ರಿಟಿಷರಲ್ಲ, ಅಮೆರಿಕನ್ನರು ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದರು.  ನಾಲ್ಕೇ ತಿಂಗಳ ಮಟ್ಟಿಗೆ ಮುಖ್ಯಮಂತ್ರಿಯಾಗಿದ್ದವರು ಇದೀಗ ರಾಜೀನಾಮೆ ನೀಡುವಂತಾಗಿದೆ.

ಕಾಂಗ್ರೆಸ್​ನಿಂದ ತೀವ್ರ ಟೀಕೆ ಇನ್ನು ಉತ್ತರಾಖಂಡ್​ನಲ್ಲಿ ಪದೇಪದೆ ಮುಖ್ಯಮಂತ್ರಿ ಬದಲಾವಣೆಯಾಗುತ್ತಿರುವ ಬಗ್ಗೆ ಕಾಂಗ್ರೆಸ್ ಬಿಜೆಪಿಯನ್ನು ಇಂದು ಬೆಳಗ್ಗೆ ತೀವ್ರವಾಗಿ ಟೀಕಿಸಿತ್ತು. ಉತ್ತರಾಖಂಡ್​ನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದನ್ನು ಬಿಟ್ಟು, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಹುಟ್ಟುಹಾಕಿದೆ. ಪದೇಪದೆ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಮೂಲಕ ಜನರಿಗೆ ದ್ರೋಹ ಎಸಗುತ್ತಿದೆ. ಉತ್ತರಾಖಂಡ್​ ದೇವಭೂಮಿಯಾಗಿದ್ದು, ಈ ನೆಲಕ್ಕೆ ಬಿಜೆಪಿ ಅವಮಾನ ಮಾಡುತ್ತಿದೆ ಎಂದು ಸ್ಥಳೀಯ ಕಾಂಗ್ರೆಸ್​ ನಾಯಕರು ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ:  ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ರಾಜೀನಾಮೆ; ಇಂದು ಮಧ್ಯಾಹ್ನ 3ಕ್ಕೆ ಬಿಜೆಪಿ ಶಾಸಕಾಂಗ ಸಭೆ

(Pushkar Singh Dhami chosen by the BJP legislative party to be the Chief Minister Of Uttarakhand)

Published On - 4:19 pm, Sat, 3 July 21