AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುತುಬ್ ಮಿನಾರ್​ನಲ್ಲಿ ದೇವತೆಗಳ ಶಿಲ್ಪ ಇರುವುದು ನಿಜ, ಆದರೆ ಪೂಜೆಗೆ ಅವಕಾಶ ಸಾಧ್ಯವಿಲ್ಲ: ಪುರಾತತ್ವ ಇಲಾಖೆ

ಕುತುಬ್ ಮಿನಾರ್ ಪರಿಸರದಲ್ಲಿ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕು ಎನ್ನುವ ವಾದವನ್ನು ಪುರಾತತ್ವ ಇಲಾಖೆಯು ಒಪ್ಪಲಿಲ್ಲ.

ಕುತುಬ್ ಮಿನಾರ್​ನಲ್ಲಿ ದೇವತೆಗಳ ಶಿಲ್ಪ ಇರುವುದು ನಿಜ, ಆದರೆ ಪೂಜೆಗೆ ಅವಕಾಶ ಸಾಧ್ಯವಿಲ್ಲ: ಪುರಾತತ್ವ ಇಲಾಖೆ
ಕುತುಬ್ ಮಿನಾರ್
TV9 Web
| Edited By: |

Updated on:May 24, 2022 | 2:00 PM

Share

ದೆಹಲಿ: ಕುತಾಬ್ ಮಿನಾರ್ (Qutub Minar) ಪರಿಸರದಲ್ಲಿ ಹಿಂದೂ ಮತ್ತು ಜೈನ ದೇವತೆಗಳ ಶಿಲ್ಪಗಳಿರುವುದು ನಿಜ. ಹಾಗೆಂದು ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ (Archaeological Survey of India – ASI) ದೆಹಲಿ ಹೈಕೋರ್ಟ್​ಗೆ ತನ್ನ ನಿಲುವು ಸ್ಪಷ್ಟಪಡಿಸಿದೆ. ಕುತುಬ್ ಮಿನಾರ್ ಪರಿಸರವು ಮೂಲದಲ್ಲಿ ಹಿಂದೂ ದೇಗುಲಗಳು ಮತ್ತು ಜೈನ ಬಸದಿಗಳ ಸಮುಚ್ಚಗಳನ್ನು ಒಳಗೊಂಡಿತ್ತು. ಅಫ್ಘಾನ್ ಸುಲ್ತಾನ್ ಮೊಹಮದ್ ಘೋರಿಯ ದಂಡನಾಯಕ ಕುತುಬ್ಬುದ್ದೀನ್ ಐಬಕ್ ದೆಹಲಿಯ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದ ನಂತರ ದೇಗುಲ ಮತ್ತು ಬಸದಿಗಳನ್ನು ಧ್ವಂಸಗೊಳಿಸಿ ಕುತುಬ್ ಮಿನಾರ್ ನಿರ್ಮಿಸಿದ. ಹೀಗಾಗಿ ಕುತುಬ್ ಮಿನಾರ್ ಪರಿಸರದಲ್ಲಿ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕು ಎನ್ನುವ ವಾದವನ್ನು ಪುರಾತತ್ವ ಇಲಾಖೆಯು ಒಪ್ಪಲಿಲ್ಲ. ನ್ಯಾಯಾಲಯವು ಅಂತಿಮ ಆದೇಶದವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿತು.

ಕುತುಬ್ ಮಿನಾರ್ ಸ್ಮಾರಕವನ್ನು ಸಂರಕ್ಷಿಸಲು ಸರ್ಕಾರವು ಆದೇಶ ಹೊರಡಿಸಿದ ಸಂದರ್ಭದಲ್ಲಿ ಅಲ್ಲಿ ಯಾವುದೇ ಧಾರ್ಮಿಕ ಆಚರಣೆಗಳು ನಡೆಯುತ್ತಿರಲಿಲ್ಲ. ಯಾವುದೇ ಸಮುದಾಯ ಪೂಜೆ ನೆರವೇರಿಸುತ್ತಿರಲಿಲ್ಲ. ಹೀಗಾಗಿ ಅಲ್ಲಿ ಮತ್ತೆ ಪೂಜೆ ನಡೆಸಲು ಅವಕಾಶ ನೀಡಲು ಆಗುವುದಿಲ್ಲ ಎಂದು ಪುರಾತತ್ವ ಇಲಾಖೆಯು ಹೈಕೋರ್ಟ್​ಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಹೇಳಿದೆ. ವ್ಯಕ್ತಿಗತ ನಂಬಿಕೆಯಂತೆ ಪೂಜೆಸಲ್ಲಿಸಲು ಅವಕಾಶ ನೀಡುವ ಸಂವಿಧಾನದತ್ತ ಮೂಲಭೂತ ಹಕ್ಕನ್ನು ಈ ಪ್ರಕರಣದಲ್ಲಿ ಮಾನ್ಯ ಮಾಡಲು ಆಗುವುದಿಲ್ಲ. ಪುರಾತತ್ವ ಸ್ಮಾರಕ ಎಂದು ಘೋಷಿಸಿದ ಸ್ಥಳದಲ್ಲಿ ಹೊಸದಾಗಿ ಯಾವುದೇ ಕಟ್ಟಡ ಕಟ್ಟಲು ಅಥವಾ ಹೊಸ ಆಚರಣೆಗೆ ಅವಕಾಶ ನೀಡಲು ಆಗುವುದಿಲ್ಲ. ಹೀಗೆ ಮಾಡುವುದು ಸಂರಕ್ಷಣೆಯ ಆಶಯಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಇಲಾಖೆಯು ತಿಳಿಸಿದೆ.

ಜೈನ ತೀರ್ಥಂಕರ ವೃಷಭದೇವ ಮತ್ತು ಹಿಂದೂ ದೇವರು ವಿಷ್ಣು ಭಕ್ತರ ಪರವಾಗಿ ವಕೀಲರಾದ ಹರಿಶಂಕರ್ ಜೈನ್ ಮತ್ತು ರಂಜನಾ ಅಗ್ನಿಹೋತ್ರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಪುರಾತತ್ವ ಇಲಾಖೆಯೇ ಪ್ರಕಟಿಸಿರುವ ಮಾಹಿತಿಯನ್ನು ಈ ವಕೀಲರು ಉಲ್ಲೇಖಿಸಿದ್ದರು. ಈ ಸ್ಥಳದಲ್ಲಿದ್ದ 27 ದೇಗುಲಗಳನ್ನು ಕುತುಬ್ಬುದ್ದೀನ್ ಐಬಕ್ ನಾಶಪಡಿಸಿ, ಅದೇ ದೇಗುಲಗಳ ಅವಶೇಷಗಳಿಂದ ಖುವ್ವಾತ್-ಉಲ್-ಇಸ್ಲಾಮ್ ಮಸೀದಿ ಕಟ್ಟಿಸಿದ್ದ ಎಂದು ಹೇಳಿದ್ದಾರೆ. ನ್ಯಾಯಾಲಯವೇ ಟ್ರಸ್ಟ್ ಒಂದನ್ನು ರಚಿಸಿ ಕುತುಬ್ ಮಿನಾರ್ ನಿರ್ವಹಣೆಯನ್ನು ಹಸ್ತಾಂತರಿಸಬೇಕು ಎಂದು ಅವರು ಒತ್ತಾಯಿಸಿದ್ದರು. ಕುತುಬ್ ಮಿನಾರ್ ಪರಿಸರಲ್ಲಿ ಗಣೇಶ, ವಿಷ್ಣು, ಯಕ್ಷ, ಕಲಶ, ಕಮಲ, ಕಲ್ಯಾಣಿಗಳು ಇವೆ. ಈ ಪ್ರದೇಶದಲ್ಲಿ ದೇಗುಲವಿತ್ತು ಎಂಬುದನ್ನು ಈ ಅಂಶಗಳು ಸಾಬೀತುಪಡಿಸುತ್ತವೆ ಎಂದು ಹೇಳಿದ್ದರು. ಈ ಮನವಿಯನ್ನು ವಿರೋಧಿಸಿದ್ದ ಪುರಾತತ್ವ ಇಲಾಖೆಯು ಪ್ರಾಚೀನ ಸ್ಮಾರಕಗಳು ಮತ್ತು ಪುರಾತನ ಪ್ರದೇಶಗಳ ಸಂರಕ್ಷಣಾ ಕಾಯ್ದೆಯಲ್ಲಿ ಹೀಗೆ ಮಾಡಲು ಅವಕಾಶವಿಲ್ಲ ಎಂದು ವಾದಿಸಿತ್ತು.

ಕಳೆದ ಏಪ್ರಿಲ್ 18ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಕುತುಬ್ ಮಿನಾರ್ ಸಂಕೀರ್ಣದಿಂದ ಗಣೇಶನ ವಿಗ್ರಹಗಳನ್ನು ತೆರವುಗೊಳಿಸಬಾರದು ಎಂದು ಸೂಚಿಸಿತ್ತು. ಕುತುಬ್ ಮಿನಾರ್ ಸ್ಮಾರಕಕ್ಕೆ 1993ರಲ್ಲಿ ಯುನೆಸ್ಕೊ ಪರಂಪರೆಯ ತಾಣ ಎನ್ನುವ ಮಾನ್ಯತೆ ಸಿಕ್ಕಿದೆ. 12ನೇ ಶತಮಾನದಲ್ಲಿ ಕುತುಬ್ ಮಿನಾರ್ ನಿರ್ಮಿಸಲಾಗಿತ್ತು ಎಂದು ಇತಿಹಾಸಜ್ಞರು ಹೇಳುತ್ತಾರೆ.

ಕುತುಬ್ ಮಿನಾರ್ ಸಮುಚ್ಚಯದಲ್ಲಿರುವ ಯಾವುದೇ ವಿಗ್ರಹವನ್ನು ತೆರವುಗೊಳಿಸುವ ಉದ್ದೇಶ ತನಗಿಲ್ಲ ಎಂದು ಪುರಾತತ್ವ ಇಲಾಖೆಯು ಸ್ಪಷ್ಟಪಡಿಸಿದೆ. ಯಾವುದೇ ವಿಗ್ರಹ ತೆರವುಗೊಳಿಸಬೇಕೆಂದರೆ ಹಲವು ಇಲಾಖೆಗಳಿಗೆ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಇಂಥ ಯಾವುದೇ ಕ್ರಮವು ರಾಷ್ಟ್ರವ್ಯಾಪಿ ಪರಿಣಾಮ ಹೊಂದಿರುತ್ತದೆ. ಹೀಗಾಗಿ ಇಂಥ ಕ್ರಮಕ್ಕೆ ತಾನು ಮುಂದಾಗುವುದಿಲ್ಲ ಎಂದು ಪುರಾತತ್ವ ಇಲಾಖೆಯು ಸ್ಪಷ್ಟಪಡಿಸಿತು.

ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ನ್ಯಾಯಾಲಯವು ಸೂಚಿಸಿತು.

Published On - 1:59 pm, Tue, 24 May 22