Amritpal Singh: ಖಲಿಸ್ತಾನ್ ನಾಯಕ ಅಮೃತಪಾಲ್ ಸಿಂಗ್ ಬಂಧನ; ನಾಳೆ ಮಧ್ಯಾಹ್ನವರೆಗೆ ಪಂಜಾಬ್​​ನಲ್ಲಿ ಇಂಟರ್ನೆಟ್ ಸ್ಥಗಿತ

Rashmi Kallakatta

|

Updated on:Mar 18, 2023 | 4:43 PM

ಇದಕ್ಕಿಂತ ಮುನ್ನ ಪಂಜಾಬ್ ಪೊಲೀಸರ ವಿಶೇಷ ತಂಡ ಆತನ ಆರು ಸಹಚರರನ್ನು ಬಂಧಿಸಿದೆ. ಇದಕ್ಕೆ ಸಂಬಂಧಪಟ್ಟಂಚೆ ಮೊಗಾ ಜಿಲ್ಲೆಯಲ್ಲಿ ಭಾರೀ ಪೊಲೀಸ್ ಪಡೆ ನಿಯೋಜಿಸಿದ್ದು, ನಾಳೆ ಮಧ್ಯಾಹ್ನ 12 ಗಂಟೆಯವರೆಗೆ ರಾಜ್ಯಾದ್ಯಂತ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ

Amritpal Singh: ಖಲಿಸ್ತಾನ್ ನಾಯಕ ಅಮೃತಪಾಲ್ ಸಿಂಗ್ ಬಂಧನ; ನಾಳೆ ಮಧ್ಯಾಹ್ನವರೆಗೆ ಪಂಜಾಬ್​​ನಲ್ಲಿ ಇಂಟರ್ನೆಟ್ ಸ್ಥಗಿತ
ಅಮೃತಪಾಲ್ ಸಿಂಗ್

ದೆಹಲಿ: ಸ್ವಯಂಘೋಷಿತ ಉಗ್ರಗಾಮಿ ಸಿಖ್ ಧರ್ಮ ಪ್ರಚಾರಕ ಮತ್ತು ಖಲಿಸ್ತಾನ್ (Khalistan) ಪರ ಸಹಾನುಭೂತಿ ಹೊಂದಿದ್ದ ಅಮೃತಪಾಲ್ ಸಿಂಗ್​​ನ್ನು (Amritpal Singh) ಪಂಜಾಬ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇದಕ್ಕಿಂತ ಮುನ್ನ ಪಂಜಾಬ್ ಪೊಲೀಸರ (Punjab police)ವಿಶೇಷ ತಂಡ ಆತನ ಆರು ಸಹಚರರನ್ನು ಬಂಧಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಮೊಗಾ ಜಿಲ್ಲೆಯಲ್ಲಿ ಭಾರೀ ಪೊಲೀಸ್ ಪಡೆ ನಿಯೋಜಿಸಿದ್ದು, ನಾಳೆ ಮಧ್ಯಾಹ್ನ 12 ಗಂಟೆಯವರೆಗೆ ರಾಜ್ಯಾದ್ಯಂತ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲು ಜಿ 20 ಕಾರ್ಯಕ್ರಮ ಮುಗಿಯಲಿ ಎಂದು ಸರ್ಕಾರ ಕಾಯುತ್ತಿತ್ತು ಎಂದು ಮೂಲಗಳು ಹೇಳಿವೆ.

ಕಳೆದ ವರ್ಷ ಫೆಬ್ರುವರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಟ ಮತ್ತು ಕಾರ್ಯಕರ್ತ ದೀಪ್ ಸಿಧು ಅವರು ಆರಂಭಿಸಿದ “ವಾರಿಸ್ ಪಂಜಾಬ್ ದೇ” ಎಂಬ ಮೂಲಭೂತ ಸಂಘಟನೆಯನ್ನು ಅಮೃತಪಾಲ್ ಮುನ್ನಡೆಸುತ್ತಿದ್ದಾರೆ. ಏಳು ಜಿಲ್ಲೆಗಳ ಪೊಲೀಸ್ ಸಿಬ್ಬಂದಿ ಅಮೃತಪಾಲ್ ಸಿಂಗ್ ಮತ್ತು ಅವರ ಸಹಚರರನ್ನು ಬೆನ್ನಟ್ಟಿದ್ದು, ಜಲಂಧರ್‌ನ ಶಾಕೋಟ್ ತೆಹಸಿಲ್‌ನ ಮೆಹತ್‌ಪುರ ಗ್ರಾಮದಲ್ಲಿ ಬಂಧಿಸಿದ್ದಾರೆ. ಅಮೃತಪಾಲ್ ಸಿಂಗ್ ಭೇಟಿಯ ಪೂರ್ವ ಮಾಹಿತಿ ಇದ್ದ ಕಾರಣ ಪೊಲೀಸರು ಎಲ್ಲಾ ರಸ್ತೆಗಳನ್ನು ಮುಚ್ಚಿ ಶಾಹಕೋಟ್‌ನಲ್ಲಿ ಬೃಹತ್ ಬ್ಯಾರಿಕೇಡ್‌ಗಳನ್ನು ಹಾಕಿದ್ದರು.

ಪಂಜಾಬ್ ಪೊಲೀಸರು ಟ್ವೀಟ್ ಮೂಲಕ, ಎಲ್ಲಾ ನಾಗರಿಕರಿಗೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ವಿನಂತಿಸಿದ್ದು ಭಯಪಡಬೇಡಿ. ನಕಲಿ ಸುದ್ದಿ ಅಥವಾ ದ್ವೇಷದ ಭಾಷಣವನ್ನು ಹರಡಬೇಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಈರುಳ್ಳಿ ಬೆಲೆಗಾಗಿ ಮುಂಬೈಯತ್ತ ಬೃಹತ್ ಮೆರವಣಿಗೆ ಹೊರಟಿದ್ದ ಮಹಾರಾಷ್ಟ್ರ ರೈತರ ಪ್ರತಿಭಟನೆ ರದ್ದು

ಕೆಲವು ವರ್ಷಗಳಿಂದ ಪಂಜಾಬ್‌ನಲ್ಲಿ ಸಕ್ರಿಯವಾಗಿರುವ ತೀವ್ರಗಾಮಿ ಪ್ರತ್ಯೇಕತಾವಾದಿ ನಾಯಕ ಸಿಂಗ್ ಆಗಾಗ್ಗೆ ಶಸ್ತ್ರಸಜ್ಜಿತ ಬೆಂಬಲಿಗರ ಬೆಂಗಾವಲಿನೊಂದಿಗೆ ಕಾಣಿಸುತ್ತಿರುತ್ತಿದ್ದ. ಅಮೃತಪಾಲ್ ಸಿಂಗ್​​ನ ಪ್ರಮುಖ ಸಹಾಯಕ, ಅಪಹರಣ ಆರೋಪಿ ಲವ್‌ಪ್ರೀತ್ ಸಿಂಗ್ ಬಂಧನದ ವಿರುದ್ಧ ಫೆಬ್ರವರಿ 23 ರಂದು ನಡೆದ ಬೃಹತ್ ಪ್ರತಿಭಟನೆಯಲ್ಲಿ ಈತ ಕಾಣಿಸಿದ್ದ. ಈತನ ಬೆಂಬಲಿಗರಲ್ಲಿ ಕೆಲವರು ಕತ್ತಿ ಮತ್ತು ಬಂದೂಕುಗಳನ್ನು ಝಳಪಿಸುತ್ತಾ, ಬ್ಯಾರಿಕೇಡ್‌ಗಳನ್ನು ಭೇದಿಸಿ ಅಮೃತಸರ ನಗರದ ಹೊರವಲಯದಲ್ಲಿರುವ ಅಜ್ನಾಲಾದಲ್ಲಿನ ಪೊಲೀಸ್ ಠಾಣೆಗೆ ನುಗ್ಗಿ, ಲವ್‌ಪ್ರೀತ್ ಸಿಂಗ್ ನ್ನು ಬಿಡುಗಡೆ ಮಾಡಲಾಗುವುದು ಎಂಬ ಭರವಸೆಯನ್ನು ಪೊಲೀಸರಿಂದ ಪಡೆದಿದ್ದರು. ಅಲ್ಲಿ ನಡೆದ ಹಿಂಸಾಚಾರಕ್ಕೆ ಅವರು ಪಂಜಾಬ್ ಪೊಲೀಸರನ್ನು ದೂಷಿಸಿದ್ದರು.

ಘರ್ಷಣೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿ ಸೇರಿದಂತೆ ಆರು ಪೊಲೀಸ್ ಸಿಬ್ಬಂದಿ ಈ ಹಿಂಸಾಚಾರದಲ್ಲಿ ಗಾಯಗೊಂಡಿದ್ದರು. ಹಿಂಸಾಚಾರಕ್ಕಾಗಿ ಅಮೃತಪಾಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆಯೇ ಎಂಬುದನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.

ಅಜ್ನಾಲಾ ಘಟನೆಯ ನಂತರ, ಬಿಜೆಪಿ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆಗೆ ಒತ್ತಾಯಿಸಿತು.ತ್ತು ಪಂಜಾಬ್ ಕಾಂಗ್ರೆಸ್ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಅಮೃತಪಾಲ್ ಸಿಂಗ್ ಮತ್ತು ಅವರ ಬೆಂಬಲಿಗರನ್ನು ಬಂಧಿಸಲು ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಒತ್ತಾಯ ಹೇರಿತ್ತು. ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಲ್ಲಿ ಪಂಜಾಬ್ ಪೊಲೀಸರು ವಿಳಂಬ ಮಾಡಿದ್ದಕ್ಕೆ ತೀವ್ರ ಟೀಕೆ ಕೇಳಿ ಬಂದಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada