AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Global Millets Conference: ಆಹಾರ ಭದ್ರತೆ ಸವಾಲು ಎದುರಿಸಲು ಸಿರಿಧಾನ್ಯ ನೆರವಾಗಬಹುದು; ಪ್ರಧಾನಿ ಮೋದಿ

ಆಹಾರ ಭದ್ರತೆಗೆ ಸಂಬಂಧಿಸಿದ ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವಲ್ಲಿ ಸಿರಿಧಾನ್ಯಗಳು ನೆರವಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

Global Millets Conference: ಆಹಾರ ಭದ್ರತೆ ಸವಾಲು ಎದುರಿಸಲು ಸಿರಿಧಾನ್ಯ ನೆರವಾಗಬಹುದು; ಪ್ರಧಾನಿ ಮೋದಿ
ನರೇಂದ್ರ ಮೋದಿImage Credit source: ANI
Ganapathi Sharma
|

Updated on: Mar 18, 2023 | 1:24 PM

Share

ನವದೆಹಲಿ: ಆಹಾರ ಭದ್ರತೆಗೆ ಸಂಬಂಧಿಸಿದ ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವಲ್ಲಿ ಸಿರಿಧಾನ್ಯಗಳು ನೆರವಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಹೇಳಿದರು. ದೆಹಲಿಯಲ್ಲಿ 2 ದಿನಗಳ ಕಾಲ ನಡೆಲಿರುವ ‘ಜಾಗತಿಕ ಸಿರಿಧಾನ್ಯ (ಶ್ರೀ ಅನ್ನ) ಸಮಾವೇಶ’ (Global Millets Conference) ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಆಹಾರಗಳ ಪಟ್ಟಿಯಲ್ಲಿ ಪೌಷ್ಟಿಕಾಂಶಯುಕ್ತ ಧಾನ್ಯಗಳ ಪಾಲನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಕೃಷಿ ವಿಜ್ಞಾನಿಗಳಿಗೆ ಮನವಿ ಮಾಡಿದರು. ಭಾರತದ ಪ್ರಸ್ತಾವನೆ ಮತ್ತು ಪ್ರಯತ್ನಗಳನ್ನು ಮನ್ನಿಸಿರುವ ವಿಶ್ವಸಂಸ್ಥೆಯು 2023ನೇ ವರ್ಷವನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದು ಘೋಷಣೆ ಮಾಡಿದೆ. ಇದು ದೇಶಕ್ಕೆ ಗೌರವದ ವಿಷಯವಾಗಿದೆ. ಭಾರತವು ಸಿರಿಧಾನ್ಯ ಅಥವಾ ಶ್ರೀ ಅನ್ನವನ್ನು ಜಾಗತಿಕ ಚಳವಳಿಯಾಗಿ ಮಾರ್ಪಡಿಸಿ ಉತ್ತೇಜನ ನೀಡಲು ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು.

ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ, ರಾಸಾಯನಿಕಗಳು ಮತ್ತು ರಸಗೊಬ್ಬರಗಳಿಲ್ಲದೆ ಸಿರಿಧಾನ್ಯಗಳನ್ನು ಸುಲಭವಾಗಿ ಬೆಳೆಯಬಹುದು. ಸಿರಿಧಾನ್ಯ ಮಿಷನ್​ನಿಂದ ದೇಶದ 2.5 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಯೋಜನವಾಗಲಿದೆ. ಇಂದು ದೇಶದ ಆಹಾರದ ಪಟ್ಟಿಯಲ್ಲಿ ಸಿರಿಧಾನ್ಯಗಳು ಶೇ 5-6ರಷ್ಟು ಸ್ಥಾನ ಪಡೆದಿವೆ. ಈ ಪಾಲನ್ನು ಹೆಚ್ಚಿಸಲು ತ್ವರಿತವಾಗಿ ಕೆಲಸ ಮಾಡಬೇಕೆಂದು ದೇಶದ ವಿಜ್ಞಾನಿಗಳು ಮತ್ತು ಕೃಷಿ ತಜ್ಞರನ್ನು ಒತ್ತಾಯಿಸುತ್ತೇನೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ: Adani-Hindenburg Row: ಅದಾನಿ ತಪ್ಪು ಮಾಡಿದ್ದೇ ಆದಲ್ಲಿ… ಹಿಂಡನ್​ಬರ್ಗ್ ವಿವಾದದ ಬಗ್ಗೆ ಅಮಿತ್ ಶಾ ಮಾತು ಇಲ್ಲಿದೆ

ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಸರ್ಕಾರವು ಉತ್ಪಾದನೆ ಆಧಾರಿತ ಭತ್ಯೆ (ಪಿಎಲ್​ಐ) ಯೋಜನೆ ಆರಂಭಿಸಿದೆ. ಕಂಪನಿಗಳು ಇದರ ಪ್ರಯೋಜನ ಪಡೆದುಕೊಂಡು ಸಿರಿಧಾನ್ಯ ಆಧಾರಿತ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಮೋದಿ ಮನವಿ ಮಾಡಿದರು.

ಸಿರಿಧಾನ್ಯ ಅಥವಾ ಪೌಷ್ಟಿಕಾಂಶಯುಕ್ತ ಧಾನ್ಯಗಳ ಪ್ರಾಮುಖ್ಯತೆಯನ್ನು ಗುರುತಿಸುವುದು, ಜನರಿಗೆ ಪೌಷ್ಟಿಕ ಆಹಾರವನ್ನು ಒದಗಿಸುವುದರೊಂದಿಗೆ ದೇಶೀಯ ಮತ್ತು ಜಾಗತಿಕ ಬೇಡಿಕೆಯನ್ನು ಸೃಷ್ಟಿಸುವ ದೃಷ್ಟಿಯಿಂದ 2023 ಅನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದು ಘೋಷಣೆ ಮಾಡುವಂತೆ ಭಾರತವು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಗೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ 72 ದೇಶಗಳಿಂದ ಬೆಂಬಲ ದೊರೆತಿತ್ತು.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ