ರಾಹುಲ್ ಗಾಂಧಿ ಆಪ್ತನೆಂದು ಹೇಳಿಕೊಂಡು ರಾಜಕಾರಣಿಗಳಿಗೆ ಗಾಳ, ಲಕ್ಷ ಲಕ್ಷ ರೂ. ಲೂಟಿ ಮಾಡಿ ಸಿಕ್ಕಿಬಿದ್ದ

ರಾಹುಲ್ ಗಾಂಧಿ ಅವರ ಆಪ್ತ ಸಹಾಯಕನೆಂದು ಹೇಳಿಕೊಂಡು ರಾಜಕಾರಣಿಗಳು ಹಾಗೂ ಟಿಕೆಟ್ ಆಕಾಂಕ್ಷಿಗಳಿಗೆ ವಂಚಿಸುತ್ತಿದ್ದ ಬೃಹತ್ ಜಾಲವನ್ನು ಡೆಹ್ರಾಡೂನ್ ಪೊಲೀಸರು ಭೇದಿಸಿದ್ದಾರೆ. ಅಮೃತಸರದ ಗೌರವ್ ಕುಮಾರ್ ಎಂಬಾತ, ಉನ್ನತ ಹುದ್ದೆ ಹಾಗೂ ಟಿಕೆಟ್ ಕೊಡಿಸುವ ಭರವಸೆ ನೀಡಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದ. ಉತ್ತರಾಖಂಡ, ರಾಜಸ್ಥಾನ, ಬಿಹಾರದ ನಾಯಕರಿಗೆ ವಂಚಿಸಿ ಸಿಕ್ಕಿಬಿದ್ದ ಆರೋಪಿಯನ್ನು ಬಂಧಿಸಿ, ತನಿಖೆ ಮುಂದುವರಿಸಲಾಗಿದೆ.

ರಾಹುಲ್ ಗಾಂಧಿ ಆಪ್ತನೆಂದು ಹೇಳಿಕೊಂಡು ರಾಜಕಾರಣಿಗಳಿಗೆ ಗಾಳ, ಲಕ್ಷ ಲಕ್ಷ ರೂ. ಲೂಟಿ ಮಾಡಿ ಸಿಕ್ಕಿಬಿದ್ದ
ಆರೋಪಿ
Image Credit source: India Today

Updated on: May 06, 2026 | 9:21 AM

ಡೆಹ್ರಾಡೂನ್, ಮೇ 06: ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi)ಯ ಹೆಸರನ್ನು ಬಳಸಿಕೊಂಡು ಟಿಕೆಟ್ ಆಕಾಂಕ್ಷಿಗಳು ಹಾಗೂ ರಾಜಕೀಯ ನಾಯಕರಿಗೆ ವಂಚಿಸುತ್ತಿದ್ದ ಬೃಹತ್ ಅಂತಾರಾಜ್ಯ ಜಾಲವೊಂದನ್ನು ಡೆಹ್ರಾಡೂನ್ ಪೊಲೀಸರು ಪತ್ತೆಹಚ್ಚಿದ್ದಾರೆ. ಆಪರೇಷನ್ ಪ್ರಹಾರ್ ಅಡಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಪಂಜಾಬ್‌ನ ಅಮೃತಸರ ಮೂಲದ ಗೌರವ್ ಕುಮಾರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

ಉತ್ತರಾಖಂಡದ ಕಾಂಗ್ರೆಸ್ ನಾಯಕಿ ಭಾವನಾ ಪಾಂಡೆ ಅವರು ಮೇ 3 ರಂದು ನೀಡಿದ ದೂರು ಈ ಹಗರಣದ ಮೂಲವನ್ನು ಪತ್ತೆಹಚ್ಚಲು ನೆರವಾಯಿತು. ರಾಹುಲ್ ಗಾಂಧಿಯವರ ಸಹಾಯಕ ಕಾನೀಶ್ ಸಿಂಗ್ ಎಂದು ಹೇಳಿಕೊಂಡಿದ್ದ ಗೌರವ್ ಕುಮಾರ್, ಪಕ್ಷದೊಳಗೆ ಉನ್ನತ ಹುದ್ದೆ ಕೊಡಿಸುವುದಾಗಿ ನಂಬಿಸಿ ಭಾವನಾ ಅವರಿಂದ 25 ಲಕ್ಷ ರೂಪಾಯಿ ಪಡೆದು ಫೋನ್ ಸ್ವಿಚ್ ಆಫ್ ಮಾಡಿದ್ದ. ವಿಶ್ವಾಸಾರ್ಹತೆ ಹೆಚ್ಚಿಸಲು ಟ್ರೂಕಾಲರ್‌ನಲ್ಲಿ ಕನಿಷ್ಕ್ ಸಿಂಗ್ ಎಂಬ ನಕಲಿ ಪ್ರೊಫೈಲ್ ಬಳಸುತ್ತಿದ್ದ.

ರಾಜಕೀಯ ವೆಬ್‌ಸೈಟ್‌ಗಳಿಂದ ಉತ್ತರಾಖಂಡ, ರಾಜಸ್ಥಾನ ಮತ್ತು ಬಿಹಾರದ ಪ್ರಭಾವಿ ನಾಯಕರ ಮಾಹಿತಿಯನ್ನು ಕಲೆಹಾಕುತ್ತಿದ್ದ. ಹೈಕಮಾಂಡ್‌ನೊಂದಿಗೆ ನೇರ ಸಂಪರ್ಕವಿದೆ ಎಂದು ಬಿಂಬಿಸಿಕೊಂಡು, ಚುನಾವಣಾ ಟಿಕೆಟ್ ಅಥವಾ ಉನ್ನತ ಹುದ್ದೆಗಳ ಆಸೆ ತೋರಿಸಿ ಹಣ ಪಡೆಯುತ್ತಿದ್ದ.

ಪೊಲೀಸ್ ವಿಚಾರಣೆಯ ವೇಳೆ ಆರೋಪಿಯು ತನ್ನ ವಂಚನೆಯನ್ನು ಒಪ್ಪಿಕೊಂಡಿದ್ದಾನೆ. ಜೈಪುರದಲ್ಲಿ ಇಬ್ಬರು ರಾಜಕಾರಣಿಗಳಿಗೆ ಕ್ರಮವಾಗಿ 1.90 ಕೋಟಿ ರೂ. ಮತ್ತು 12 ಲಕ್ಷ ರೂ. ವಂಚನೆ ಮಾಡಿದ್ದಾನೆ. ಪಾಟ್ನಾ ಮೂಲದ ನಾಯಕನಿಂದ 3 ಲಕ್ಷ ರೂ. ಲೂಟಿ, ಡೆಹ್ರಾಡೂನ್​ನ ಭಾವನಾ ಪಾಂಡೆ ಅವರಿಗೆ 25 ಲಕ್ಷ ರೂ. ವಂಚನೆ ಮಾಡಿದ್ದಾನೆ.

ಮತ್ತಷ್ಟು ಓದಿ: ಟಿವಿಕೆ ಮುಖ್ಯಸ್ಥ ವಿಜಯ್‌ಗೆ ರಾಹುಲ್​​ ಗಾಂಧಿ ಕರೆ: ಟಿವಿಕೆ ಜೊತೆ ಕಾಂಗ್ರೆಸ್​​​​ ಮೈತ್ರಿ?

ಡೆಹ್ರಾಡೂನ್‌ನ ಮಾಲ್‌ ಒಂದರಲ್ಲಿ ಮತ್ತೊಬ್ಬ ನಾಯಕನಿಂದ ಹಣ ಸಂಗ್ರಹಿಸಲು ಸಿದ್ಧತೆ ನಡೆಸುತ್ತಿದ್ದಾಗ ಪೊಲೀಸರು ಸಿಸಿಟಿವಿ ಮತ್ತು ಮೊಬೈಲ್ ಸಿಗ್ನಲ್ ಆಧಾರದ ಮೇಲೆ ಈತನನ್ನು ಸೆರೆಹಿಡಿದಿದ್ದಾರೆ. ಈತನೊಂದಿಗೆ ಚಜ್ಜು, ರಜತ್ ಮಾದ ಮತ್ತು ಮಣಿಂದರ್ ಸಿಂಗ್ ಎಂಬ ಸಹಚರರು ಕೂಡ ಕೆಲಸ ಮಾಡುತ್ತಿದ್ದು, ಸದ್ಯ ಅವರು ತಲೆಮರೆಸಿಕೊಂಡಿದ್ದಾರೆ.

ಪ್ರತಿಷ್ಠೆಗೆ ಹೆದರಿ ಅನೇಕರು ಈತನ ವಿರುದ್ಧ ದೂರು ನೀಡಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಆರೋಪಿಯಿಂದ ಎರಡು ಫೋನ್ ಮತ್ತು ಡೇಟಾ ಡಾಂಗಲ್ ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ. ರಾಜಕೀಯ ಆಕಾಂಕ್ಷಿಗಳು ಇಂತಹ ವಂಚಕರ ಬಗ್ಗೆ ಜಾಗರೂಕರಾಗಿರಬೇಕೆಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us