ಹರ್ಯಾಣ ಚುನಾವಣೆ: ಕಾಂಗ್ರೆಸ್ ಕೈಯಿಂದ ಜಾರಿದ ಜಾಟ್, ಜಿಲೇಬಿ

ಗೋಹಾನಾದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮಾಥು ರಾಮ್ ಹಲ್ವಾಯಿಯಿಂದ ಜಿಲೇಬಿಯ ಪೆಟ್ಟಿಗೆಯನ್ನು ಹಿಡಿದುಕೊಂಡು, ಇವುಗಳನ್ನು ದೇಶಾದ್ಯಂತ ಮಾರಾಟ ಮಾಡಬೇಕು ಮತ್ತು ರಫ್ತು ಮಾಡಬೇಕು. ಇದರಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದಿದ್ದರು.

ಹರ್ಯಾಣ ಚುನಾವಣೆ: ಕಾಂಗ್ರೆಸ್ ಕೈಯಿಂದ ಜಾರಿದ ಜಾಟ್, ಜಿಲೇಬಿ
ರಾಹುಲ್ ಗಾಂಧಿ
ರಶ್ಮಿ ಕಲ್ಲಕಟ್ಟ

Updated on: Oct 08, 2024 | 6:55 PM

ದೆಹಲಿ ಅಕ್ಟೋಬರ್ 08: ಈ ಬಾರಿಯ ಹರ್ಯಾಣ ಚುನಾವಣೆಯಲ್ಲಿ (Haryana Election) ಟ್ರೆಂಡ್ ಆದ ಎರಡು ಪ್ರಮುಖ ಪದಗಳೆಂದರೆ ಜಾಟ್‌ಗಳು ಮತ್ತು ಜಿಲೇಬಿಗಳು(jalebis). ಕಾಂಗ್ರೆಸ್ ಎರಡರ ಮೇಲೆಯೂ ಹೆಚ್ಚು ಪಣತೊಟ್ಟಿದೆ, ಆದರೆ ಇದು ಫಲ ನೀಡಿಲ್ಲ ಎಂದು ಪ್ರವೃತ್ತಿಗಳು ತೋರಿಸುತ್ತವೆ. ಹರ್ಯಾಣದ ಗೋಹಾನಾದಲ್ಲಿ ಹೆಸರಾಂತ ಜಿಲೇಬಿಗಳು ಅಸೆಂಬ್ಲಿ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾಷಣದಲ್ಲಿ ಕಾಣಿಸಿಕೊಂಡಿವೆ. ಈ ಸಿಹಿ ಖಾದ್ಯವನ್ನು ಸಾಮೂಹಿಕವಾಗಿ ತಯಾರಿಸಿ ರಫ್ತು ಮಾಡುವಂತೆ ಕರೆ ನೀಡಿದ ಅವರ ಹೇಳಿಕೆಯನ್ನು ಬಿಜೆಪಿ ಕೂಡ ಲೇವಡಿ ಮಾಡಿದೆ.

ಇಂದು ಬೆಳಿಗ್ಗೆ, ಆರಂಭಿಕ ಟ್ರೆಂಡ್  ಕಾಂಗ್ರೆಸ್ ಮುನ್ನಡೆಯನ್ನು ತೋರಿಸಿದ ನಂತರ, ಪಕ್ಷದ ಕಾರ್ಯಕರ್ತರು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಜಿಲೇಬಿ ವಿತರಿಸಿ ಸಂಭ್ರಮಾಚರಿಸಿದ್ದರು. ಆದಾಗ್ಯೂ, ನಂತರದ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿದಾಗ ಕಾರ್ಯಕರ್ತರು ಮಂಕಾದರು. ಈಗ ಆಡಳಿತ ಪಕ್ಷದವರು ಸಂಭ್ರಮಿಸುವ ಸರದಿ. ಹಾಗಾಗಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅದ್ಧೂರಿ ಆಚರಣೆಗೆ ಜಿಲೇಬಿ ಆರ್ಡರ್ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಜಿಲೇಬಿಯೇ ಬೇಕೆಂಬ ಆಯ್ಕೆಯು ಬಿಜೆಪಿಯಿಂದ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಗೆ ಸ್ಪಷ್ಟ ರಾಜಕೀಯ ಸಂದೇಶವಾಗಿದೆ.

ಗೋಹಾನಾದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮಾಥು ರಾಮ್ ಹಲ್ವಾಯಿಯಿಂದ ಜಿಲೇಬಿಯ ಪೆಟ್ಟಿಗೆಯನ್ನು ಹಿಡಿದುಕೊಂಡು, ಇವುಗಳನ್ನು ದೇಶಾದ್ಯಂತ ಮಾರಾಟ ಮಾಡಬೇಕು ಮತ್ತು ರಫ್ತು ಮಾಡಬೇಕು. ಇದರಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದಿದ್ದರು

“ಅವರ (ಮಾಥು ರಾಮ್) ಜಿಲೇಬಿಯನ್ನು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡಿ ಮತ್ತು ರಫ್ತು ಮಾಡಿದರೆ, ಒಂದು ದಿನ 20,000-50,000 ಜನರು ತಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡಬಹುದು”. ಮಾಥುರಾಮ್ ಅವರಂತಹ ವ್ಯಾಪಾರಿಗಳು ಕೇಂದ್ರದ ನೋಟು ಅಮಾನ್ಯೀಕರಣ ಮತ್ತು GSTಯಿಂದ ಕಂಗೆಟ್ಟಿದ್ದಾರೆ ಎಂದು ಹೇಳಿದ್ದಾರೆ.

ರಾಹುಲ್ ಹೇಳಿಕೆಗಳನ್ನು ಗೇಲಿ ಮಾಡಿದ ಬಿಜೆಪಿ, ಅವರಿಗೆ ಸಿಹಿ ಖಾದ್ಯವನ್ನು ಹೇಗೆ ತಯಾರಿಸುತ್ತಾರೆ ಎಂಬುದರ ಬಗ್ಗೆ ಸುಳಿವು ಇಲ್ಲ ಎಂದಿದೆ. ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್, “ನನಗೂ ಗೋಹಾನಾ ಜಿಲೇಬಿ ಇಷ್ಟ. ಈಗ ರಾಹುಲ್ ಗಾಂಧಿ ಅಮೇರಿಕಾದಲ್ಲಿ ಫ್ಯಾಕ್ಟರಿ ಸ್ಥಾಪಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಜಿಲೇಬಿಯನ್ನು ಹೇಗೆ ತಯಾರಿಸುತ್ತಾರೆ ಮತ್ತು ಹೇಗೆ ಮಾರಾಟ ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅವರಿಗೆ ಭಾಷಣ ಬರೆದುಕೊಟ್ಟವರು ಅದರ ಬಗ್ಗೆ ಚೆನ್ನಾಗಿ ನಿರೂಪಿಸಿದ್ದರೆ ಚೆನ್ನಾಗಿತ್ತು. ರಾಹುಲ್ ಗಾಂಧಿ ಹೋಮ್ ವರ್ಕ್ ಚೆನ್ನಾಗಿ ಮಾಡಲ್ಲ ಎಂದು ಬಿಜೆಪಿ ಹಿರಿಯ ಹೇಳಿದ್ದಾರೆ.

ಕುತೂಹಲಕಾರಿಯಾಗಿ, ತಿಂಗಳ ಹಿಂದೆ ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ಗೋಹಾನಾ ಜಿಲೇಬಿ ಕಾಣಿಸಿಕೊಂಡಿತ್ತು.

ಇಂಡಿಯಾ ಬಣದ ಮೇಲೆ ದಾಳಿ ಮಾಡಿದ ಪ್ರಧಾನಿ, ತಾವು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐವರು ಪ್ರಧಾನ ಮಂತ್ರಿಗಳನ್ನು ಹೊಂದುವ ಸೂತ್ರವನ್ನು ವಿರೋಧ ಬಣ ಹೊಂದಿದೆ ಎಂದು ಹೇಳಿದರು. ಪ್ರಧಾನಿ ಹುದ್ದೆ ಬೇಕೇ ಅಥವಾ ಮಾತು ರಾಮ್ ಕೀ ಜಲೇಬಿ ಬೇಕೆ ಎಂದು ಅವರಲ್ಲಿ ಕೇಳಿ ಎಂದಿದ್ದಾರೆ.

ಪಿಟಿಐ ವರದಿಯ ಪ್ರಕಾರ ಪ್ರಸಿದ್ಧ ಗೋಹಾನಾ ಜಲೇಬಿಯು 1958 ರಲ್ಲಿ ದಿವಂಗತ ಮಾತು ರಾಮ್ ಅದನ್ನು ಮಾರಾಟ ಮಾಡಲು ಪ್ರಾರಂಭಿಸಿದಾಗ ಅಸ್ತಿತ್ವಕ್ಕೆ ಬಂದಿತು. ಈಗ ಅವರ ಮೊಮ್ಮಕ್ಕಳಾದ ರಮಣ್ ಗುಪ್ತಾ ಮತ್ತು ನೀರಜ್ ಗುಪ್ತಾ ಅವರು ವ್ಯವಹಾರವನ್ನು ನಡೆಸುತ್ತಿದ್ದಾರೆ.

“ಜಿಲೇಬಿಯನ್ನು ಶುದ್ಧ ದೇಸಿ ತುಪ್ಪದಿಂದ ತಯಾರಿಸಲಾಗುತ್ತದೆ. ಇದು ಗರಿಗರಿಯಾಗಿದ್ದರೂ ಮೃದುವಾಗಿರುತ್ತದೆ. ಪ್ರತಿಯೊಂದೂ ಸುಮಾರು 250 ಗ್ರಾಂ ತೂಗುತ್ತದೆ. ಒಂದು ಕೆಜಿ ತೂಕದ ನಾಲ್ಕು ತುಂಡುಗಳ ಬಾಕ್ಸ್‌ನ ಬೆಲೆ ₹ 320. ಈ ಜಿಲೇಬಿಯ ಶೆಲ್ಫ್ ಲೈಫ್ ಒಂದು ವಾರಕ್ಕಿಂತ ಹೆಚ್ಚು” ಎಂದು ರಾಮನ್ ಗುಪ್ತಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: ಹರ್ಯಾಣದಲ್ಲಿ ಕೈ ಹಿಡಿಯಲಿಲ್ಲ ಗ್ಯಾರಂಟಿ; ಕಾಂಗ್ರೆಸ್ ಹಿನ್ನಡೆಗೆ ಕಾರಣಗಳಿವು

ಗೋಹಾನಾ ಜಿಲೇಬಿಯ ಪಯಣವನ್ನು ವಿವರಿಸಿದ ಗುಪ್ತಾ ಅವರು, “ಗೋಹನವು ದೊಡ್ಡ ಧಾನ್ಯ ಮಾರುಕಟ್ಟೆಯನ್ನು ಹೊಂದಿದೆ, ರೈತರು ಹೊಲಗಳಲ್ಲಿ ಮತ್ತು ಪ್ರತಿಕೂಲ ಹವಾಮಾನದಲ್ಲಿಯೂ ಸಹ ಕಷ್ಟಪಟ್ಟು ದುಡಿಯುತ್ತಿದ್ದರು. ಶುದ್ಧ ದೇಸಿ ತುಪ್ಪದಿಂದ ಮಾಡಿದ ದೊಡ್ಡ ಜಿಲೇಬಿಯು ಅವರಿಗೆ ಅಗತ್ಯವಿರುವ ಕ್ಯಾಲೋರಿಗಳನ್ನು ನೀಡಿತುಯ. ಇದು ಒಂದು ವಾರಕ್ಕಿಂತಲೂ ಹೆಚ್ಚು ಕಾಲ ಹಾಳಾಗದೇ ಇರುವುದರಿಂದ ಅವರು ಯಾವಾಗ ಬೇಕಾದರೂ ಸವಿಯಬಹುದಾಗಿತ್ತು.

“ಆರಂಭದಲ್ಲಿ, ಇದು ಒಂದು ಸಣ್ಣ ಅಂಗಡಿಯಾಗಿತ್ತು. ಇದು ಪ್ರಸಿದ್ಧವಾದ ವರ್ಷಗಳಲ್ಲಿ, ಗೋಹಾನಾ ಮೂಲಕ ಹಾದುಹೋಗುವ ಪ್ರಮುಖ ರಾಜಕಾರಣಿಗಳು ಸಹ ಇದನ್ನು ಸವಿಯಲು ಇಲ್ಲಿ ಬರುತ್ತಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us