ಠಾಣೆಗೆ ದೂರು ಕೊಡಲು ಬಂದ ವೃದ್ಧರೊಬ್ಬರ ಎದುರು ಮೇಜಿನ ಮೇಲೆ ಕಾಲು ಚಾಚಿ ಕುಳಿತ ಮಹಿಳಾ ಕಾನ್​ಸ್ಟೆಬಲ್

ರಾಜಸ್ಥಾನದ ಡುಂಗರಪುರದಲ್ಲಿ, ಪೊಲೀಸ್ ಠಾಣೆಗೆ ದೂರು ನೀಡಲು ಬಂದ ವೃದ್ಧರೊಬ್ಬರ ಎದುರು ಮೇಜಿನ ಮೇಲೆ ಕಾಲು ಚಾಚಿ ಕುಳಿತ ಮಹಿಳಾ ಕಾನ್‌ಸ್ಟೆಬಲ್‌ನ ಫೋಟೋ ವೈರಲ್ ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಈ ದುರ್ವರ್ತನೆಗಾಗಿ ಆಕೆಯನ್ನು ಕರ್ತವ್ಯ ಲೋಪದಡಿ ಅಮಾನತುಗೊಳಿಸಲಾಗಿದ್ದು, ಇಲಾಖಾ ತನಿಖೆಗೂ ಆದೇಶಿಸಲಾಗಿದೆ. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಪ್ರಾಮುಖ್ಯತೆಯನ್ನು ಈ ಘಟನೆ ಒತ್ತಿಹೇಳಿದೆ.

ಠಾಣೆಗೆ ದೂರು ಕೊಡಲು ಬಂದ ವೃದ್ಧರೊಬ್ಬರ ಎದುರು ಮೇಜಿನ ಮೇಲೆ ಕಾಲು ಚಾಚಿ ಕುಳಿತ ಮಹಿಳಾ ಕಾನ್​ಸ್ಟೆಬಲ್
ಕಾನ್​ಸ್ಟೆಬಲ್

Updated on: Jun 27, 2026 | 2:37 PM

ಡುಂಗರಪುರ,ಜೂನ್ 27: ಸಾರ್ವಜನಿಕರ ರಕ್ಷಣೆ ಮತ್ತು ಸೇವೆಗಾಗಿಯೇ ಮುಡಿಪಾಗಿರಬೇಕಾದ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರು ಸೌಜನ್ಯವನ್ನೇ ಮರೆತು ವರ್ತಿಸಿರುವ ಆಘಾತಕಾರಿ ಘಟನೆಯೊಂದು ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಪೊಲೀಸ್(Police) ಠಾಣೆಗೆ ದೂರು ನೀಡಲು ಬಂದಿದ್ದ ವೃದ್ಧ ನಾಗರಿಕರೊಬ್ಬರ ಎದುರೇ ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಮೇಜಿನ ಮೇಲೆ ಎರಡೂ ಕಾಲುಗಳನ್ನು ಚಾಚಿ ಉಡಾಫೆಯಿಂದ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಈ ಫೋಟೋ ದೊಡ್ಡ ಮಟ್ಟದ ಚರ್ಚೆ ಮತ್ತು ಆಕ್ರೋಶದ ಬಿರುಗಾಳಿ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತ ಡುಂಗರಪುರ ಜಿಲ್ಲಾ ಪೊಲೀಸ್ ಉನ್ನತಾಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. ಕರ್ತವ್ಯ ಲೋಪ, ಶಿಸ್ತು ಉಲ್ಲಂಘನೆ ಮತ್ತು ಸಾರ್ವಜನಿಕರೊಂದಿಗೆ ಅತ್ಯಂತ ಅಸಭ್ಯವಾಗಿ ನಡೆದುಕೊಂಡ ಆರೋಪದ ಮೇಲೆ ಸದರಿ ಮಹಿಳಾ ಕಾನ್‌ಸ್ಟೆಬಲ್ ಅನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಜೊತೆಗೆ ಆಕೆಯ ವಿರುದ್ಧ ಕಟ್ಟುನಿಟ್ಟಿನ ಇಲಾಖಾ ಶಿಸ್ತು ತನಿಖೆಗೆ ಆದೇಶಿಸಲಾಗಿದೆ.

ರಾಜಸ್ಥಾನದ ಡುಂಗರಪುರ ಜಿಲ್ಲೆಯ ಬಿಚ್ಚಿವಾರ ಪೊಲೀಸ್ ಠಾಣೆಯಲ್ಲಿ ಈ ಅತಿರೇಕದ ಘಟನೆ ನಡೆದಿದೆ. ವೃದ್ಧರೊಬ್ಬರು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ದೂರು ದಾಖಲಿಸಲು ಠಾಣೆಗೆ ಬಂದಾಗ, ಅಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್ ವೃದ್ಧರ ದೂರನ್ನು ಕೇಳುವ ಅಥವಾ ಅವರಿಗೆ ಗೌರವ ಕೊಡುವ ಕನಿಷ್ಠ ಸೌಜನ್ಯವನ್ನೂ ತೋರಿಸಿಲ್ಲ. ಬದಲಿಗೆ, ಆಕೆ ತನ್ನ ಕಚೇರಿಯ ಮೇಜಿನ ಮೇಲೆ ಕಾಲುಗಳನ್ನು ಚಾಚಿ ಆರಾಮವಾಗಿ ಕುಳಿತಿದ್ದಾರೆ.

ಮತ್ತಷ್ಟು ಓದಿ: ಮದುವೆ ಇಷ್ಟವಿಲ್ಲ ಎಂದು ಕುಟುಂಬವನ್ನು ಒಪ್ಪಿಸುವುದಕ್ಕಿಂತ ಕೇತನ್​ನನ್ನು ಕೊಲ್ಲೋದೇ ಸುಲಭವಾಗಿತ್ತು; ಸಿಯಾ ಹೇಳಿಕೆ

ಠಾಣೆಯಲ್ಲಿದ್ದ ಯಾರೋ ಒಬ್ಬರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೇ ನೆಟ್ಟಿಗರು ಇಲಾಖೆಯ ವಿರುದ್ಧ ಮುಗಿಬಿದ್ದಿದ್ದಾರೆ. ಪೊಲೀಸ್ ಅಧಿಕಾರಿಗಳು ಈ ಕುರಿತು ಕಠಿಣ ಸಂದೇಶ ರವಾನಿಸಿದ್ದು, ಉನ್ನತ ಅಧಿಕಾರಿಗಳು ಇಡೀ ಘಟನೆಯ ಸಂಪೂರ್ಣ ವರದಿಯನ್ನು ಕೋರಿದ್ದಾರೆ. ಪೊಲೀಸ್ ಠಾಣೆಗೆ ಬರುವ ಪ್ರತಿಯೊಬ್ಬ ನಾಗರಿಕರೊಂದಿಗೆ, ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರೊಂದಿಗೆ ಅತ್ಯಂತ ಸೌಜನ್ಯ, ಗೌರವ ಮತ್ತು ಜವಾಬ್ದಾರಿಯಿಂದ ವರ್ತಿಸುವುದು ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯ ಆದ್ಯ ಕರ್ತವ್ಯವಾಗಿದೆ.

ಸಾರ್ವಜನಿಕರ ನಂಬಿಕೆಗೆ ಧಕ್ಕೆ ತರುವ ಹಾಗೂ ಇಲಾಖೆಯ ಕೀರ್ತಿಯನ್ನು ಮಣ್ಣುಪಾಲು ಮಾಡುವ ಇಂತಹ ಬೇಜವಾಬ್ದಾರಿ ವರ್ತನೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಮತ್ತು ಅಂತಹ ನೌಕರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಘಟನೆಯು ಸರ್ಕಾರಿ ನೌಕರರು ಕರ್ತವ್ಯದ ಅವಧಿಯಲ್ಲಿ ಸಾರ್ವಜನಿಕರೊಂದಿಗೆ ಹೇಗೆ ನಡೆದುಕೊಳ್ಳಬೇಕು ಮತ್ತು ಆಡಳಿತದಲ್ಲಿ ಶಿಸ್ತಿನ ಮಹತ್ವ ಎಷ್ಟಿದೆ ಎಂಬುದರ ಕುರಿತು ಸಾರ್ವಜನಿಕ ವಲಯದಲ್ಲಿ ಮತ್ತೊಮ್ಮೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us