ಅತ್ಯಾಚಾರ ಪ್ರಕರಣದಲ್ಲಿನ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಿಂಗ್​​ಗೆ ಮತ್ತೆ 50 ದಿನಗಳ ಪೆರೋಲ್

|

Updated on: Jan 19, 2024 | 3:09 PM

Gurmeet Ram Rahim Singh: ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಅನುಯಾಯಿಗಳನ್ನು ಹೊಂದಿರುವ 56 ವರ್ಷದ ರಾಮ್ ರಹೀಮ್, ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ಭೇಟಿ ಮಾಡಲು ಮನವಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಹಲವಾರು ಬಾರಿ ಪೆರೋಲ್‌ನಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ

ಅತ್ಯಾಚಾರ ಪ್ರಕರಣದಲ್ಲಿನ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಿಂಗ್​​ಗೆ ಮತ್ತೆ 50 ದಿನಗಳ ಪೆರೋಲ್
ಗುರ್ಮೀತ್ ರಾಮ್ ರಹೀಮ್ ಸಿಂಗ್
Follow us on

ದೆಹಲಿ ಜನವರಿ 19: ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ದೋಷಿ (Rape convict ) ಗುರ್ಮೀತ್ ರಾಮ್ ರಹೀಮ್ ಸಿಂಗ್​​ಗೆ (Gurmeet Ram Rahim Singh) 50 ದಿನಗಳ ಪೆರೋಲ್ (parole)ನೀಡಲಾಗಿದೆ. ಈ ಹಿಂದೆ ನವೆಂಬರ್ 2023 ರಲ್ಲಿ 21 ದಿನಗಳ ಪೆರೋಲ್‌ನಲ್ಲಿ ರಹೀಮ್ ಸಿಂಗ್ ಜೈಲಿನಿಂದ ಹೊರಬಂದಿದ್ದರು. ಕಳೆದ ವರ್ಷ ಇವರಿಗೆ ಮೂರು ಬಾರಿ ಪೆರೋಲ್ ನೀಡಲಾಗಿತ್ತು.

ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಅನುಯಾಯಿಗಳನ್ನು ಹೊಂದಿರುವ 56 ವರ್ಷದ ರಾಮ್ ರಹೀಮ್, ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ಭೇಟಿ ಮಾಡಲು ಮನವಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಹಲವಾರು ಬಾರಿ ಪೆರೋಲ್‌ನಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ 2017 ರಲ್ಲಿ ಅವರಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ನಂತರ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಮತ್ತು 2002 ರಲ್ಲಿ ಡೇರಾ ಮ್ಯಾನೇಜರ್ ರಂಜಿತ್ ಸಿಂಗ್ ಅವರ ಹತ್ಯೆಗಳು ಸೇರಿದಂತೆ ಎರಡು ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

2021 ರಲ್ಲಿ ಡೇರಾ ಮ್ಯಾನೇಜರ್ ಆಗಿದ್ದ ರಂಜಿತ್ ಸಿಂಗ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಕ್ಕಾಗಿ ರಾಮ್ ರಹೀಮ್ ಅಪರಾಧಿಯಾಗಿದ್ದಾನೆ. 16 ವರ್ಷಗಳ ಹಿಂದೆ ಪತ್ರಕರ್ತನ ಹತ್ಯೆಗೆ 2019 ರಲ್ಲಿ ಡೇರಾ ಮುಖ್ಯಸ್ಥ ಮತ್ತು ಇತರ ಮೂವರಿಗೆ ಶಿಕ್ಷೆ ವಿಧಿಸಲಾಗಿತ್ತು.

ಹರ್ಯಾಣ ಉತ್ತಮ ನಡತೆ ಕೈದಿಗಳ (ತಾತ್ಕಾಲಿಕ ಬಿಡುಗಡೆ) ಕಾಯಿದೆ, 2022 ರ ಪ್ರಕಾರ, ಶಿಕ್ಷೆಗೊಳಗಾದ ಕೈದಿಗಳಿಗೆ ನಿಯಮಿತ ಪೆರೋಲ್ ನೀಡಬಹುದು. ಆದಾಗ್ಯೂ, ಒಂದಕ್ಕಿಂತ ಹೆಚ್ಚು  ಕೊಲೆಗಳಿಗೆ ಅಥವಾ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿಯಲ್ಲಿ ಶಿಕ್ಷೆಗೊಳಗಾದ ಕೈದಿಗಳು ಪೆರೋಲ್‌ಗೆ ಅರ್ಹರಾಗಿರುವುದಿಲ್ಲ.

ಕಳೆದ ವರ್ಷವಷ್ಟೇ ರಾಮ್ ರಹೀಮ್ ಸಿಂಗ್   ಹರ್ಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಲ್ಲಿದ್ದಾಗ ಮೂರು ಸಂದರ್ಭಗಳಲ್ಲಿ ಪೆರೋಲ್ ಅನ್ನು 91 ದಿನಗಳವರೆಗೆ ಸೇರಿಸಲಾಯಿತು. ನವೆಂಬರ್‌ನಲ್ಲಿ 21 ದಿನಗಳು, ಜುಲೈನಲ್ಲಿ 30 ದಿನಗಳು ಮತ್ತು ಜನವರಿಯಲ್ಲಿ 40 ದಿನಗಳ ಪೆರೋಲ್ ನೀಡಲಾಗಿತ್ತು. ಮಾಜಿ ಡೇರಾ ಮುಖ್ಯಸ್ಥ ಶಾ ಸತ್ನಾಮ್ ಅವರ ಜನ್ಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಇವರಿಗೆ ಪೆರೋಲ್ ನೀಡಲಾಗಿತ್ತು.

ಇದನ್ನೂ ಓದಿ: ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಸ್ವಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ದೋಷಿ

ಆ ಸಂದರ್ಭದಲ್ಲಿ ಕೇಕ್ ಅನ್ನು ಕತ್ತಿಯಿಂದ ಕತ್ತರಿಸುವ ಮೂಲಕ ಸಿಂಗ್ ಹುಟ್ಟುಹಬ್ಬ ಆಚರಿಸುತ್ತಿರುವ ವಿಡಿಯೊ ಹರಿದಾಡಿತ್ತು. ಈ ವಿಡಿಯೊದಲ್ಲಿ ರಹೀಮ್ ಸಿಂಗ್ ಕೇಕ್ ಕತ್ತರಿಸಿ, “ಐದು ವರ್ಷಗಳ ನಂತರ ಈ ರೀತಿ ಆಚರಿಸಲು ಅವಕಾಶ ಸಿಕ್ಕಿತು.ಹಾಗಾಗಿ ನಾನು ಕನಿಷ್ಠ ಐದು ಕೇಕ್‌ಗಳನ್ನು ಕತ್ತರಿಸಬೇಕು. ಇದು ಮೊದಲ ಕೇಕ್!” ಎಂದಿದ್ದರು.

ಆಯುಧಗಳ ಸಾರ್ವಜನಿಕ ಪ್ರದರ್ಶನವನ್ನು (ಕತ್ತಿಯಿಂದ ಕೇಕ್ ಕತ್ತರಿಸುವುದು ಆ ವರ್ಗಕ್ಕೆ ಸೇರುತ್ತದೆ) ಶಸ್ತ್ರಾಸ್ತ್ರ ಕಾಯಿದೆಯಡಿಯಲ್ಲಿ ನಿಷೇಧಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Fri, 19 January 24