ರತನ್ ಟಾಟಾಗೆ ಅಂತಿಮ ವಿದಾಯ; ಪೂರ್ಣ ಸರ್ಕಾರಿ ಗೌರವ ಸಲ್ಲಿಕೆ; ಒಂದು ದಿನ ಶೋಕಾಚರಣೆ ಘೋಷಿಸಿದ ಮಹಾ ಸರ್ಕಾರ

|

Updated on: Oct 10, 2024 | 6:36 PM

Ratan Tata laid to rest: ಮುಂಬೈನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ರತನ್ ಟಾಟಾ ಅವರ ಅಂತ್ಯಸಂಸ್ಕಾರ ನಡೆಸಲಾಯಿತು. ಮುಂಬೈನ ವೋರ್ಲಿ ಶವಾಗಾರದಲ್ಲಿ ಅವರ ಪಾರ್ಥಿವ ಶರೀರವನ್ನು ದಹಿಸಲಾಗಿದೆ. ಕೇಂದ್ರ ಸಚಿವರಾದ ಅಮಿತ್ ಶಾ, ಪಿಯೂಶ್ ಗೋಯಲ್, ಮಹಾರಾಷ್ಟ್ರ ಸಿಎಂ ಮತ್ತು ಡಿಸಿಎಂ ಏಕನಾಥ್ ಶಿಂದೆ ಮತ್ತು ದೇವೇಂದ್ರ ಫಡ್ನವಿಸ್ ಮೊದಲಾದವರು ಈ ಸಂದರ್ಭದಲ್ಲಿದ್ದರು.

ರತನ್ ಟಾಟಾಗೆ ಅಂತಿಮ ವಿದಾಯ; ಪೂರ್ಣ ಸರ್ಕಾರಿ ಗೌರವ ಸಲ್ಲಿಕೆ; ಒಂದು ದಿನ ಶೋಕಾಚರಣೆ ಘೋಷಿಸಿದ ಮಹಾ ಸರ್ಕಾರ
ರತನ್ ಟಾಟಾ
Follow us on

ಮುಂಬೈ, ಅಕ್ಟೋಬರ್ 10: ನಿನ್ನೆ ಬುಧವಾರ ಸಂಜೆ ಇಹಲೋಕ ತ್ಯಜಿಸಿದ ರತನ್ ಟಾಟಾ ಅವರಿಗೆ ಇಂದು ಅಂತ್ಯಸಂಸ್ಕಾರ ನಡೆಸಲಾಯಿತು. ಮುಂಬೈನ ವೋರ್ಲಿಯಲ್ಲಿರುವ ಶವಾಗಾರದಲ್ಲಿ ಪಾರ್ಥಿವ ಶರೀರವನ್ನು ದಹನ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳು ನಡೆದವು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ವಾಣಿಜ್ಯ ಸಚಿವ ಪೀಯುಶ್ ಗೋಯಲ್, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಮೊದಲಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಹಾರಾಷ್ಟ್ರ ಸರ್ಕಾರ ರತನ್ ಟಾಟಾಗೆ ಗೌರವಾರ್ಥ ಒಂದು ದಿನ ಶೋಕಾಚರಣೆ ಘೋಷಿಸಿತು. ದಕ್ಷಿಣ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (ಎನ್​ಸಿಪಿಎ) ಕೇಂದ್ರದಲ್ಲಿ ರತನ್ ಟಾಟಾ ಅವರ ಪಾರ್ಥೀವ ಶರೀರದ ದರ್ಶನ ಪಡೆಯಲು ಸಾಗರದಂತೆ ಜನರು ನೆರವಿದ್ದರು.

ಇದನ್ನೂ ಓದಿ: ರತನ್ ಟಾಟಾ ಅಂತ್ಯಕ್ರಿಯೆ: ಮುಂಬೈನಲ್ಲಿ ಅಂತಿಮ ದರ್ಶನ ಪಡೆದ ಆಮಿರ್ ಖಾನ್, ಕಿರಣ್ ರಾವ್

86 ವರ್ಷದ ರತನ್ ಟಾಟಾ ನಿನ್ನೆ ಬುಧವಾರ (ಅ. 9) ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅದಕ್ಕೂ ಕೆಲ ದಿನಗಳ ಮೊದಲು ಅವರು ಆಸ್ಪತ್ರೆಗೆ ಚೆಕಪ್​ಗೆ ಹೋಗಿದ್ದರು. ಆ ಸಂದರ್ಭದಲ್ಲಿ ಅವರ ಆರೋಗ್ಯ ಪರಿಸ್ಥಿತಿ ಗಂಭಿರವಾಗಿದೆ ಎಂಬ ಸುದ್ದಿಗಳಿದ್ದವು. ರತನ್ ಟಾಟಾ ಅವರ ಇನ್ಸ್​​ಟಾಗ್ರಾಮ್ ಖಾತೆಯಿಂದ ಈ ಸುದ್ದಿಗಳು ಸುಳ್ಳು ಎಂದು ತಿಳಿಸಲಾಯಿತು. ನಿನ್ನೆ ಸಂಜೆ ಉಸಿರಾಟದ ತೊಂದರೆಯಿಂದ ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರು ಆಸ್ಪತ್ರೆಯಲ್ಲೇ ಅಸುನೀಗಿದರು ಎಂದು ಹೇಳಲಾಗುತ್ತಿದೆ.

ರತನ್ ಟಾಟಾ ಎರಡು ದಶಕಗಳ ಕಾಲ ಟಾಟಾ ಗ್ರೂಪ್ ವ್ಯವಹಾರಗಳ ಚುಕ್ಕಾಣಿ ಹಿಡಿದಿದ್ದರು. ನೂರು ಕಂಪನಿಗಳನ್ನು ಸಮರ್ಪಕವಾಗಿ ಮುನ್ನಡೆಸಿ, ಟಾಟಾ ಬಿಸಿನೆಸ್ ಸಾಮ್ರಾಜ್ಯ ಉಜ್ವಲವಾಗಲು ಕಾರಣಕರ್ತರಾಗಿದ್ದಾರೆ.

ಇದನ್ನೂ ಓದಿ: Ratan Tata Funeral: ಪಾರ್ಸಿಯಲ್ಲ ಹಿಂದೂ ಸಂಪ್ರದಾಯದಂತೆ ರತನ್ ಟಾಟಾ ಅಂತ್ಯಸಂಸ್ಕಾರ ಏಕೆ?

ಅವಿವಾಹಿತರಾಗಿರುವ ರತನ್ ಟಾಟಾಗೆ ಮಕ್ಕಳಿಲ್ಲ. ಅವರ ತಂದೆಯ ಎರಡನೇ ಪತ್ನಿಯ ಮಗನ ಮೂವರು ಮಕ್ಕಳಲ್ಲಿ ಒಬ್ಬರಿಗೆ ಟಾಟಾ ಗ್ರೂಪ್ ಚುಕ್ಕಾಣಿ ಸಿಗಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ