ಜಬಲ್ಪುರದಲ್ಲಿ 3 ದಿನಗಳ ಆರ್‌ಎಸ್‌ಎಸ್ ಕಾರ್ಯಕಾರಿ ಮಂಡಳಿ ಸಭೆ ಆರಂಭ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್) ವಾರ್ಷಿಕ ರಾಷ್ಟ್ರೀಯ ಕಾರ್ಯಕಾರಿ ಸಭೆ ಜಬಲ್ಪುರದಲ್ಲಿ ಇಂದು ಆರಂಭವಾಗಿದೆ. ಈ ಸಭೆಯು 3 ದಿನಗಳ ಕಾಲ ನಡೆಯಲಿದೆ. ಆರ್​ಎಸ್​ಎಸ್​ ಶತಮಾನೋತ್ಸವ ವರ್ಷದ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಹಿಂದೂ ಸಮ್ಮೇಳನಗಳನ್ನು ಆಯೋಜಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. 407 ಪ್ರತಿನಿಧಿಗಳು ಭಾಗವಹಿಸುವ 3 ದಿನಗಳ ಕಾರ್ಯಕ್ರಮದಲ್ಲಿ ಮುಂಬರುವ ಶತಮಾನೋತ್ಸವ ಆಚರಣೆಗಳ ಬಗ್ಗೆಯೂ ಚರ್ಚಿಸಲಾಗುವುದು.

ಜಬಲ್ಪುರದಲ್ಲಿ 3 ದಿನಗಳ ಆರ್‌ಎಸ್‌ಎಸ್ ಕಾರ್ಯಕಾರಿ ಮಂಡಳಿ ಸಭೆ ಆರಂಭ
Rss Meeting In Jabalpur

Updated on: Oct 30, 2025 | 4:58 PM

ಜಬಲ್ಪುರ, ಅಕ್ಟೋಬರ್ 30: ಆರ್​ಎಸ್​ಎಸ್​ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಅಖಿಲ ಭಾರತ ಕಾರ್ಯಕಾರಿ ಮಂಡಳಿ ಸಭೆಯು ಇಂದು ಜಬಲ್ಪುರದಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥರಾದ ಡಾ. ಮೋಹನ್ ಭಾಗವತ್ (Mohan Bhagwat) ಮತ್ತು ದತ್ತಾತ್ರೇಯ ಹೊಸಬಾಳೆ ಅವರ ಸಮ್ಮುಖದಲ್ಲಿ ಪ್ರಾರಂಭವಾಯಿತು. 3 ದಿನಗಳ ಈ ಸಭೆಯಲ್ಲಿ ಇತ್ತೀಚೆಗೆ ಅಗಲಿದ ವ್ಯಕ್ತಿಗಳು ಮತ್ತು ಪ್ರಕೃತಿ ವಿಕೋಪಗಳಿಗೆ ಬಲಿಯಾದವರಿಗೆ ಇಂದು ಗೌರವ ಸಲ್ಲಿಸಲಾಯಿತು. ಈ ಸಭೆಯಲ್ಲಿ ಶ್ರೀ ಗುರು ತೇಜ್ ಬಹದ್ದೂರ್ ಮತ್ತು ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವಗಳಂತಹ ಪ್ರಮುಖ ವಿಷಯಗಳನ್ನು ಚರ್ಚಿಸಲಾಗುತ್ತದೆ.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಅಖಿಲ ಭಾರತೀಯ ಕಾರ್ಯಕಾರಿ ಮಂಡಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದಾದ ನಂತರ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಮತ್ತು ಬಾಲಿವುಡ್ ನಟ ಅಸ್ರಾನಿ ಅವರಂತಹ ಇತ್ತೀಚೆಗೆ ಅಗಲಿದ ವ್ಯಕ್ತಿಗಳಿಗೆ ಗೌರವ ಸಲ್ಲಿಸಿದರು.

ಇದನ್ನೂ ಓದಿ: 3 ಮಕ್ಕಳನ್ನು ಮಾಡಿಕೊಳ್ಳಿ; ಭಾರತೀಯರಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಲಹೆ

ಆರ್​ಎಸ್​ಎಸ್​ 101ನೇ ವರ್ಷಕ್ಕೆ ಕಾಲಿಟ್ಟಿದ್ದು, ಮುಂಬರುವ ಶತಮಾನೋತ್ಸವ ಆಚರಣೆಗಳಾದ ‘ಪಂಚ ಪರಿವರ್ತನ’ (ಐದು ರೂಪಾಂತರಗಳು) ಉಪಕ್ರಮದ ವಿಮರ್ಶೆಯನ್ನು ಚರ್ಚೆಗಳಲ್ಲಿ ಸೇರಿಸಲಾಗುವುದು ಎಂದು ಆರ್‌ಎಸ್‌ಎಸ್ ತಿಳಿಸಿದೆ. ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷದ ಉಪಕ್ರಮದಡಿ ಆರ್​​ಎಸ್​ಎಸ್​ ಸಂಘಟನೆಯು ದೇಶಾದ್ಯಂತ 1 ಲಕ್ಷಕ್ಕೂ ಹೆಚ್ಚು ಹಿಂದೂ ಸಮ್ಮೇಳನಗಳನ್ನು ನಡೆಸುವ ಗುರಿಯನ್ನು ಹೊಂದಿದೆ.


ಜಬಲ್ಪುರದ ವಿಜಯ ನಗರದ ಕಚ್ನಾರ್ ನಗರದಲ್ಲಿ ನಡೆಯುವ ಸಭೆ ನವೆಂಬರ್ 1ರವರೆಗೆ ಮುಂದುವರಿಯಲಿದೆ. ‘ಸಂಘಚಾಲಕರು’, ‘ಕಾರ್ಯವಾಹರು’, ‘ಪ್ರಚಾರಕರು’ ಮತ್ತು ಸಮಾನ ಮನಸ್ಕ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ದೇಶಾದ್ಯಂತ ಒಟ್ಟು 407 ಪ್ರತಿನಿಧಿಗಳು ಆರ್​ಎಸ್​ಎಸ್​ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘ ಪರಿವಾರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಆರ್​ಎಸ್​ಎಸ್ ಚಟುವಟಿಕೆ ನಿರ್ಬಂಧ: ನಿಜಕ್ಕೂ ಸರ್ಕಾರದ ಆದೇಶದಲ್ಲಿ ಏನಿತ್ತು? ಇಲ್ಲಿದೆ ನೋಡಿ

ಆರ್​ಎಸ್​ಎಸ್​ ಸಭೆಯ ಕಾರ್ಯಸೂಚಿಯಲ್ಲಿ ನವೆಂಬರ್ 24ರಿಂದ ಪ್ರಾರಂಭವಾಗುವ ವರ್ಷಪೂರ್ತಿ ಕಾರ್ಯಕ್ರಮಗಳೊಂದಿಗೆ ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮರ ವಾರ್ಷಿಕೋತ್ಸವ ಮತ್ತು ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆಯೂ ಸೇರಿದೆ. ಕೇಂದ್ರ ಸರ್ಕಾರವು 2021ರಲ್ಲಿ ನವೆಂಬರ್ 15ರಂದು ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಜಂಜಾಟಿಯ ಗೌರವ್ ದಿವಸ್ ಎಂದು ಘೋಷಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ