ಆರ್​ಎಸ್​ಎಸ್​ ನಿಷೇಧದ ಪ್ರಯತ್ನ 3 ಬಾರಿ ವಿಫಲವಾಗಿದೆ; ಮಲ್ಲಿಕಾರ್ಜುನ ಖರ್ಗೆಗೆ ದತ್ತಾತ್ರೇಯ ಹೊಸಬಾಳೆ ತಿರುಗೇಟು

"ಆರ್​ಎಸ್​ಎಸ್​ ನಿಷೇಧದ ಬಗ್ಗೆ ಸಮಾಜ ಮತ್ತು ನ್ಯಾಯಾಲಯ ಇದರ ಬಗ್ಗೆ ಏನು ಹೇಳಿದೆ? ನಿಷೇಧಕ್ಕೆ ಒಂದು ಕಾರಣವಿರಬೇಕು. ಅದು ಸ್ವಂತ ಇಚ್ಛೆಯಿಂದ ಆಗುವುದಿಲ್ಲ. ದಯವಿಟ್ಟು ಕಾರಣವನ್ನು ವಿವರಿಸಿ" ಎಂದು ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರ್​ಎಸ್​ಎಸ್​ ನಿಷೇಧದ ಬಗ್ಗೆ ಒತ್ತಾಯಿಸಿದ ಬೆನ್ನಲ್ಲೇ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಆರ್​ಎಸ್​ಎಸ್​ ನಿಷೇಧದ ಪ್ರಯತ್ನ 3 ಬಾರಿ ವಿಫಲವಾಗಿದೆ; ಮಲ್ಲಿಕಾರ್ಜುನ ಖರ್ಗೆಗೆ ದತ್ತಾತ್ರೇಯ ಹೊಸಬಾಳೆ ತಿರುಗೇಟು
Dattatreya Hosabale

Updated on: Nov 01, 2025 | 4:36 PM

ನವದೆಹಲಿ, ನವೆಂಬರ್ 1: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ವನ್ನು ನಿಷೇಧಿಸುವ ವಿಪಕ್ಷಗಳ ಒತ್ತಾಯ ಹೆಚ್ಚಾಗುತ್ತಿದೆ. ಇದು ರಾಜಕೀಯ ಸ್ವರೂಪವನ್ನೂ ಪಡೆದಿದೆ. ಇದರ ಮಧ್ಯೆ ಆರ್​ಎಸ್​ಎಸ್​ (RSS) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಇಂದು ಈ ಬಗ್ಗೆ ಮೊದಲ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಆರ್​ಎಸ್​ಎಸ್​ ಅನ್ನು ಕಾನೂನುಬಾಹಿರಗೊಳಿಸುವ ಪ್ರಯತ್ನಗಳು ಹೊಸದಲ್ಲ, ಈ ಹಿಂದೆ ಪದೇ ಪದೇ ಈ ಪ್ರಯತ್ನ ವಿಫಲವಾಗಿದೆ ಎಂದಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಕೂಡ ಆರ್​ಎಸ್​ಎಸ್​ ಮೇಲೆ ನಿಷೇಧ ಹೇರಬೇಕೆಂದು ಪತ್ರವೊಂದನ್ನು ಬರೆದಿದ್ದರು ಎಂದಿದ್ದರು. ಆರ್​ಎಸ್​ಎಸ್​ ನಿಷೇಧದ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿರುವ ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, “ಆರ್‌ಎಸ್‌ಎಸ್ ಈ ಹಿಂದೆ ಒಮ್ಮೆ ಅಲ್ಲ, ಮೂರು ಬಾರಿ ಕಾಂಗ್ರೆಸ್ ಸರ್ಕಾರಗಳ ಅಡಿಯಲ್ಲಿ ನಿಷೇಧದ ಪ್ರಯತ್ನಗಳನ್ನು ಎದುರಿಸಿದೆ. ಆದರೆ ಪ್ರತಿ ಬಾರಿಯೂ ಸಾರ್ವಜನಿಕ ಬೆಂಬಲ ಮತ್ತು ನ್ಯಾಯಾಂಗ ಪರಿಶೀಲನೆಯ ಬಳಿಕ ಆ ಪ್ರಯತ್ನ ವಿಫಲವಾಗಿದೆ” ಎಂದಿದ್ದಾರೆ.


“ಆರ್​ಎಸ್​ಎಸ್​ ಮೇಲೆ ನಿಷೇಧ ಏಕೆ? ಎಂಬ ಕಾರಣವನ್ನು ನೀಡಿ. ಅದು ಕೇವಲ ಒಬ್ಬರ ಆಶಯವಾಗಿರಬಹುದಲ್ಲವೇ? ನಿಜವಾದ ಕಾರಣವೇನು? ಆರ್​ಎಸ್​ಎಸ್​ ರಾಷ್ಟ್ರ ನಿರ್ಮಾಣ ಮತ್ತು ಸಮಾಜವನ್ನು ಬಲಪಡಿಸುವ ಪ್ರಯತ್ನಗಳ ಮೂಲಕ ನಿರಂತರವಾಗಿ ಕೊಡುಗೆ ನೀಡಿದೆ” ಎಂದು ಹೊಸಬಾಳೆ ಹೇಳಿದ್ದಾರೆ.

ಇದನ್ನೂ ಓದಿ: ಆರ್​ಎಸ್​ಎಸ್​ ನಿಷೇಧಕ್ಕೆ ಸರ್ದಾರ್ ಪಟೇಲ್ ಪತ್ರ ಬರೆದಿದ್ದರು; ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲೆ ನಿಷೇಧ ಹೇರಬೇಕೆಂದು ಒತ್ತಾಯಿಸಿದ ಒಂದು ದಿನದ ನಂತರ ದತ್ತಾತ್ರೇಯ ಹೊಸಬಾಳೆ ಅವರ ಈ ಹೇಳಿಕೆಗಳು ಬಂದಿವೆ. ಭಾರತದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಚೌಕಟ್ಟನ್ನು ರಕ್ಷಿಸಲು ಸರ್ದಾರ್ ವಲ್ಲಭಭಾಯಿ ಪಟೇಲ್ ಒಮ್ಮೆ ಇದೇ ರೀತಿಯ ನಿರ್ಬಂಧಗಳನ್ನು ವಿಧಿಸಿದ್ದರು ಎಂದು ಖರ್ಗೆ ಹೇಳಿದ್ದರು.

ಧಾರ್ಮಿಕ ಮತಾಂತರದ ಕುರಿತು ಪ್ರತಿಕ್ರಿಯಿಸಿದ ದತ್ತಾತ್ರೇಯ ಹೊಸಬಾಳೆ, “ಸಂತರು ಮತ್ತು ಋಷಿಗಳು ಸೇರಿದಂತೆ ಸಮಾಜದ ಅನೇಕ ಸದಸ್ಯರು ಮತ್ತು ವಿಶ್ವ ಹಿಂದೂ ಪರಿಷತ್ ದೇಶದಲ್ಲಿ ಧಾರ್ಮಿಕ ಮತಾಂತರವನ್ನು ತಡೆಯಲು ಅವಿಶ್ರಾಂತವಾಗಿ ಶ್ರಮಿಸುತ್ತಿದ್ದಾರೆ. ನಾವು ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಬಲ್ಪುರದಲ್ಲಿ 3 ದಿನಗಳ ಆರ್‌ಎಸ್‌ಎಸ್ ಕಾರ್ಯಕಾರಿ ಮಂಡಳಿ ಸಭೆ ಆರಂಭ

“ಸಿಖ್ ಸಮುದಾಯದೊಳಗೆ ಧಾರ್ಮಿಕ ಮತಾಂತರದ ಪ್ರವೃತ್ತಿ ಹೆಚ್ಚಾಗಿದೆ. ಪಂಜಾಬ್‌ನಲ್ಲಿ ಈ ವಿಷಯದ ಬಗ್ಗೆ ಜಾಗೃತಿ ಇದೆ, ಆದರೆ ಅದನ್ನು ಬಲಪಡಿಸುವ ಅಗತ್ಯವಿದೆ. ಮತಾಂತರಗೊಂಡವರನ್ನು ಮರಳಿ ಕರೆತರಲು ಪ್ರಯತ್ನಗಳನ್ನು ಮಾಡಬೇಕು ಎಂಬ ಚರ್ಚೆ ಅಲ್ಲಿನ ಜನರಲ್ಲಿ ನಡೆಯುತ್ತಿದೆ” ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:34 pm, Sat, 1 November 25