ರಷ್ಯಾದ ತೈಲ ಖರೀದಿಸಿದ ಭಾರತದ ವಿರುದ್ಧ ಕ್ರಮಕ್ಕಾಗಿ ಯುರೋಪಿಯನ್ ಒಕ್ಕೂಟದ ಕರೆಗೆ ಖಡಕ್ ಉತ್ತರ ನೀಡಿದ ಎಸ್ ಜೈಶಂಕರ್ 

ಭಾರತವು ರಷ್ಯಾದ ತೈಲವನ್ನು ಖರೀದಿಸುತ್ತದೆ, ಇದು ಸಾಮಾನ್ಯವಾಗಿದೆ ಎಂದು ಇಯುನ ವಿದೇಶಾಂಗ ನೀತಿ ಮುಖ್ಯಸ್ಥ ಬೊರೆಲ್ ಹೇಳಿದರು ಆದರೆ ಫೈನಾನ್ಷಿಯಲ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಭಾರತ ಖರೀದಿಸುತ್ತಿರುವ ರಷ್ಯಾದ ಕಚ್ಚಾ ತೈಲದಿಂದ ಬರುವ ಸಂಸ್ಕರಿಸಿದ ಉತ್ಪನ್ನಗಳ ಮೇಲೆ ಒಕ್ಕೂಟ ಕಾರ್ಯನಿರ್ವಹಿಸಲು ಬಯಸುತ್ತದೆ ಎಂದು ಹೇಳಿದ್ದರು.

ರಷ್ಯಾದ ತೈಲ ಖರೀದಿಸಿದ ಭಾರತದ ವಿರುದ್ಧ ಕ್ರಮಕ್ಕಾಗಿ ಯುರೋಪಿಯನ್ ಒಕ್ಕೂಟದ ಕರೆಗೆ ಖಡಕ್ ಉತ್ತರ ನೀಡಿದ ಎಸ್ ಜೈಶಂಕರ್ 
ಎಸ್ ಜೈಶಂಕರ್
Updated By: ರಶ್ಮಿ ಕಲ್ಲಕಟ್ಟ

Updated on: May 17, 2023 | 8:44 PM

ಬ್ರಸೆಲ್ಸ್: ರಷ್ಯಾದ (Russia)ಕಚ್ಚಾ ತೈಲದಿಂದ ಭಾರತೀಯ ಸಂಸ್ಕರಿಸಿದ ಉತ್ಪನ್ನಗಳ ವಿರುದ್ಧ ಕ್ರಮಕ್ಕೆ ಕರೆ ನೀಡುವ ಯುರೋಪಿಯನ್ ಒಕ್ಕೂಟದ (EU)ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಪ್ ಬೊರೆಲ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ,ಇಯು ಕೌನ್ಸಿಲ್ ನಿಯಮಾವಳಿಗಳನ್ನು ನೋಡುವಂತೆ ಅವರಿಗೆ ಸಲಹೆ ನೀಡಿದ್ದಾರೆ. ಇಯು ಕೌನ್ಸಿಲ್ ನಿಯಮಾವಳಿಗಳನ್ನು ನೋಡಿ, ರಷ್ಯಾದ ಕಚ್ಚಾ ತೈಲವು ಮೂರನೇ ದೇಶದಲ್ಲಿ ಗಣನೀಯವಾಗಿ ರೂಪಾಂತರಗೊಂಡಿದೆ ಮತ್ತು ಇನ್ನು ಮುಂದೆ ರಷ್ಯನ್ ಎಂದು ಪರಿಗಣಿಸಲಾಗುವುದಿಲ್ಲ. ಕೌನ್ಸಿಲ್​​ನ ನಿಯಮಾವಳಿ 833/2014 ಅನ್ನು ನೋಡಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ ಎಂದು ಜೈಶಂಕರ್ ಹೇಳಿದ್ದಾರೆ.

ಭಾರತವು ರಷ್ಯಾದ ತೈಲವನ್ನು ಖರೀದಿಸುತ್ತದೆ, ಇದು ಸಾಮಾನ್ಯವಾಗಿದೆ ಎಂದು ಇಯುನ ವಿದೇಶಾಂಗ ನೀತಿ ಮುಖ್ಯಸ್ಥ ಬೊರೆಲ್ ಹೇಳಿದರು ಆದರೆ ಫೈನಾನ್ಷಿಯಲ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಭಾರತ ಖರೀದಿಸುತ್ತಿರುವ ರಷ್ಯಾದ ಕಚ್ಚಾ ತೈಲದಿಂದ ಬರುವ ಸಂಸ್ಕರಿಸಿದ ಉತ್ಪನ್ನಗಳ ಮೇಲೆ ಒಕ್ಕೂಟ ಕಾರ್ಯನಿರ್ವಹಿಸಲು ಬಯಸುತ್ತದೆ ಎಂದು ಹೇಳಿದ್ದರು. ಬ್ರಸೆಲ್ಸ್‌ನಲ್ಲಿ ನಡೆದ ವ್ಯಾಪಾರ ತಂತ್ರಜ್ಞಾನ ಮಾತುಕತೆಯಲ್ಲಿ ಬೋರೆಲ್ ಜೈಶಂಕರ್ ಅವರನ್ನು ಭೇಟಿಯಾಗಿದ್ದರೂ ನಂತರದ ಪತ್ರಿಕಾಗೋಷ್ಠಿಯಲ್ಲಿ ಅವರು ಉಪಸ್ಥಿತರಿರಲಿಲ್ಲ.

ಅವರ ಬದಲು ಇಯು ಕಾರ್ಯಕಾರಿ ಉಪಾಧ್ಯಕ್ಷ ಮಾರ್ಗರೆಥ್ ವೆಸ್ಟೇಜರ್ ಭಾಗಿಯಾಗಿದ್ದು ನಿರ್ಬಂಧಗಳ ಕಾನೂನು ಆಧಾರದ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು. ಯುರೋಪಿಯನ್ ಯೂನಿಯನ್ ಮತ್ತು ಭಾರತ ಸ್ನೇಹಿತರಾಗಿದ್ದು ಚಾಚಿದ ಕೈಯಿಂದ ಚರ್ಚೆ ನಡೆಸುತ್ತದೆಯೇ ವಿನಾ ಬೆರಳು ತೋರಿಸಿ ಅಲ್ಲ ಎಂದಿದ್ದಾರೆ.

ಇದನ್ನೂ ಓದಿ: ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಲು ಭ್ರಷ್ಟಾಚಾರ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಿದರೆ ಸಾಕು: ಸುಪ್ರೀಂ ಕೋರ್ಟ್

ಜೈಶಂಕರ್ ಅವರೊಂದಿಗೆ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಕೇಂದ್ರ ವಾಣಿಜ್ಯೋದ್ಯಮ, ಕೌಶಲ್ಯಾಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಸಭೆಯಲ್ಲಿದ್ದರು. ಬಾಂಗ್ಲಾದೇಶ, ಸ್ವೀಡನ್ ಮತ್ತು ಬೆಲ್ಜಿಯಂ ಒಳಗೊಂಡ ಮೂರು ರಾಷ್ಟ್ರಗಳ ಭೇಟಿಯ ಕೊನೆಯ ಹಂತಕ್ಕಾಗಿ ಜೈಶಂಕರ್ ಸೋಮವಾರ ಬ್ರಸೆಲ್ಸ್‌ಗೆ ಆಗಮಿಸಿದರು.

ಈ ಹಿಂದೆಯೂ ಸಹ ಶ್ರೀ ಜೈಶಂಕರ್ ಅವರು ರಷ್ಯಾದಿಂದ ಭಾರತದ ಆಮದುಗಳನ್ನು ಸಮರ್ಥಿಸಿಕೊಂಡಿದ್ದರು, ಆದರೆ ಉಕ್ರೇನ್‌ನಲ್ಲಿನ ಮಿಲಿಟರಿ ಕ್ರಮವನ್ನು ಗಮನದಲ್ಲಿಟ್ಟುಕೊಂಡು ರಷ್ಯಾದೊಂದಿಗಿನ ತನ್ನ ವ್ಯಾಪಾರವನ್ನು ಕಡಿಮೆ ಮಾಡಲು ಭಾರತದ ಮೇಲೆ ಒತ್ತಡ ಹೇರಿದ್ದಕ್ಕಾಗಿ ಪಾಶ್ಚಿಮಾತ್ಯ ರಾಜ್ಯಗಳನ್ನು ಪರೋಕ್ಷವಾಗಿ ಟೀಕಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ