Alappuzha Murder ಕೇರಳದ ಆಲಪ್ಪುಳದಲ್ಲಿ ಎಸ್‌ಡಿಪಿಐ ಮುಖಂಡನ ಹತ್ಯೆ; ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರ ಬಂಧನ

ಬಂಧಿತರು ಎಸ್‌ಡಿಪಿಐ ಮುಖಂಡನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳಿಗೆ ವಾಹನ ವ್ಯವಸ್ಥೆ ಮಾಡಿದ್ದರು ಎಂದು ಎಸ್‌ಪಿ ತಿಳಿಸಿದ್ದಾರೆ. ಹತ್ಯೆ ಮಾಡಿದವರು ಸೇರಿದಂತೆ ಎಂಟು ಮಂದಿಯನ್ನು ಇನ್ನೂ ಬಂಧಿಸಬೇಕಾಗಿದೆ ಎಂದು ಅವರು ಹೇಳಿದರು

Alappuzha Murder ಕೇರಳದ ಆಲಪ್ಪುಳದಲ್ಲಿ ಎಸ್‌ಡಿಪಿಐ ಮುಖಂಡನ ಹತ್ಯೆ; ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರ ಬಂಧನ
ಪ್ರಾತಿನಿಧಿಕ ಚಿತ್ರ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Dec 20, 2021 | 6:34 PM

ಆಲಪ್ಪುಳ: ಶನಿವಾರ ರಾತ್ರಿ ಆಲಪ್ಪುಳದಲ್ಲಿ (Alappuzha) ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಜ್ಯ ಕಾರ್ಯದರ್ಶಿ ಕೆ ಎಸ್ ಶಾನ್ (K S Shan) ಅವರ ಹತ್ಯೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ಸೋಮವಾರ ಇಬ್ಬರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬಂಧಿತ ಆರ್‌ಎಸ್‌ಎಸ್ ಕಾರ್ಯಕರ್ತರಾದ ಪ್ರಸಾದ್ ಮತ್ತು ರತೀಶ್ ಮನ್ನಂಚೇರಿ ಗ್ರಾಮದವರಾಗಿದ್ದು, ಕೊಲೆಯ ಹಿಂದಿನ ಸಂಚಿನಲ್ಲಿ ಅವರ ಪಾತ್ರವಿದೆ ಎಂದು ಆಲಪ್ಪುಳ ಪೊಲೀಸ್ ವರಿಷ್ಠಾಧಿಕಾರಿ (SP) ಜಿ ಜೈದೇವ್ ಹೇಳಿದ್ದಾರೆ. ಬಂಧಿತರು ಎಸ್‌ಡಿಪಿಐ ಮುಖಂಡನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳಿಗೆ ವಾಹನ ವ್ಯವಸ್ಥೆ ಮಾಡಿದ್ದರು ಎಂದು ಎಸ್‌ಪಿ ತಿಳಿಸಿದ್ದಾರೆ. ಹತ್ಯೆ ಮಾಡಿದವರು ಸೇರಿದಂತೆ ಎಂಟು ಮಂದಿಯನ್ನು ಇನ್ನೂ ಬಂಧಿಸಬೇಕಾಗಿದೆ ಎಂದು ಅವರು ಹೇಳಿದರು. ಅಲ್ಲದೆ, ಶಾನ್ ಹತ್ಯೆಗೆ ಪ್ರತೀಕಾರವಾಗಿ ಭಾನುವಾರ ಬೆಳಿಗ್ಗೆ ಹತ್ಯೆಗೀಡಾದ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಆಲಪ್ಪುಳ ನಗರದ ರಂಜಿತ್ ಅವರ ಮನೆಯ ಬಳಿಯಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ 12 ಜನರು ಆರು ದ್ವಿಚಕ್ರ ವಾಹನಗಳಲ್ಲಿ ಅವರ ಲೇನ್‌ಗೆ ಪ್ರವೇಶಿಸುವುದನ್ನು ತೋರಿಸಿದೆ. ರಾಜಕೀಯ ಎದುರಾಳಿಗಳ ಹಿಟ್ ಲಿಸ್ಟ್‌ನಲ್ಲಿ ರಂಜಿತ್ ಎಂದಿಗೂ ಸ್ಥಾನ ಪಡೆಯದ ಕಾರಣ ರಂಜಿತ್ ಮೇಲಿನ ದಾಳಿ ಅನಿರೀಕ್ಷಿತವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆಲಪ್ಪುಳದಲ್ಲಿ ನಡೆದ ಎರಡು ಕೊಲೆಗಳ ಹಿನ್ನಲೆಯಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಅವರು ಮುಂದಿನ ಮೂರು ದಿನಗಳ ಕಾಲ ರಾಜ್ಯದಾದ್ಯಂತ ಕಟ್ಟೆಚ್ಚರವನ್ನು ಬಲಪಡಿಸುವಂತೆ ಸೂಚನೆ ನೀಡಿದರು. ವಾಹನಗಳನ್ನು ಪರಿಶೀಲಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಮುಂದಿನ ಮೂರು ದಿನಗಳವರೆಗೆ ಮೆರವಣಿಗೆಗಳು ಮತ್ತು ಧ್ವನಿವರ್ಧಕಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ.

ಈ ನಡುವೆ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿದ್ದ ರಂಜಿತ್ ಅವರ ಪಾರ್ಥಿವ ಶರೀರವನ್ನು ಆಲಪ್ಪುಳದ ಆರಾಟ್ಟುಪುಳದಲ್ಲಿರುವ ಅವರ ಹಿರಿಯರ ಮನೆಗೆ ಕೊಂಡೊಯ್ಯಲಾಯಿತು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ನೇತೃತ್ವದ ಬಿಜೆಪಿ ನಿಯೋಗ ಪಕ್ಷದ ನಾಯಕರಿಗೆ ನಮನ ಸಲ್ಲಿಸಿತು.

ಬಿಜೆಪಿ ಸಭೆ ಬಹಿಷ್ಕರಿಸಲು ನಿರ್ಧರಿಸಿದ್ದರಿಂದ ಜಿಲ್ಲಾಡಳಿತ ಸೋಮವಾರ ಸಂಜೆ ಕರೆದಿದ್ದ ಸರ್ವಪಕ್ಷ ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಹತ್ಯೆಯಾದ ನಾಯಕನ ಅಂತ್ಯಸಂಸ್ಕಾರದ ಸಮಯಕ್ಕೆ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಬಿಜೆಪಿ ಹೇಳಿದೆ. ಇದು ಅವರಿಗೆ ಮಾಡಿದ ಅವಮಾನವಾಗಿದೆ ಎಂದು ಪಕ್ಷವು ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದೆ ಎಂದು ಹೇಳಿದರು.

ಇದನ್ನೂ ಓದಿ: Alappuzha Murder: ಕೇರಳದಲ್ಲಿ 12 ಗಂಟೆಯಲ್ಲಿ ಇಬ್ಬರು ರಾಜಕೀಯ ನಾಯಕರ ಹತ್ಯೆ; ಅಲಪ್ಪುಳದಲ್ಲಿ ನಿಷೇಧಾಜ್ಞೆ ಜಾರಿ

ಇದನ್ನೂ ಓದಿ: ಪೋತ್ತನ್​​ಕೋಡ್ ಸುಧೀಶ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಒಟ್ಟಕಂ ರಾಜೇಶ್ ಬಂಧನ