ಕೇರಳ: ಬೀದಿ ನಾಯಿ ಕಾಟಕ್ಕೆ ಬೇಸತ್ತು ಏರ್​​ಗನ್​​ ಹಿಡಿದುಕೊಂಡು ಮಕ್ಕಳನ್ನು ಶಾಲೆಗೆ ಕರೆದೊಯ್ದ ವ್ಯಕ್ತಿ

ನಾನು ಯಾವುದೇ ನಾಯಿಯನ್ನು ಕೊಂದಿಲ್ಲ. ಹಾಗಾಗಿ ನಾನು ಕಾನೂನು ಕ್ರಮಕ್ಕೆ ಹೆದರುವುದಿಲ್ಲ. ಆದರೆ ಯಾವುದೇ ನಾಯಿ ದಾಳಿ ಮಾಡಿದರೆ, ಆತ್ಮರಕ್ಷಣೆಗಾಗಿ ನಾನು ಅದನ್ನು ಶೂಟ್ ಮಾಡಬೇಕಾಗುತ್ತದೆ

ಕೇರಳ: ಬೀದಿ ನಾಯಿ ಕಾಟಕ್ಕೆ ಬೇಸತ್ತು ಏರ್​​ಗನ್​​ ಹಿಡಿದುಕೊಂಡು ಮಕ್ಕಳನ್ನು ಶಾಲೆಗೆ ಕರೆದೊಯ್ದ ವ್ಯಕ್ತಿ
ಗನ್ ಹಿಡಿದು ಹೆಜ್ಜೆ ಹಾಕಿದ ವ್ಯಕ್ತಿ
Edited By: ರಶ್ಮಿ ಕಲ್ಲಕಟ್ಟ

Updated on: Sep 16, 2022 | 10:02 PM

ಕೇರಳದಲ್ಲಿ(Kerala) ಬೀದಿ ನಾಯಿ (Stray dogs) ಕಾಟ ವಿಪರೀತವಾಗಿದೆ. ಎಲ್ಲೆಂದರಲ್ಲಿ ಓಡಾಡುತ್ತಿರುವ ಬೀದಿ ನಾಯಿಗಳು ಈಗಾಗಲೇ ಹಲವರ ಮೇಲೆ ದಾಳಿ ನಡೆಸಿದೆ. ಬೀದಿ ನಾಯಿಗಳ ಈ ಹಾವಳಿಯಿಂದಾಗಿ ಮನೆಯಿಂದ ಹೊರಗೆ ಹೊರಡುವುದಕ್ಕೂ ಜನ ಭಯ ಪಡುವಂತಾಗಿದೆ. ಹೀಗಿರುವಾಗ ಕೇರಳದ ಕಾಸರಗೋಡು (Kasaragod) ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಶಾಲೆಗೆ ಹೋಗುವ ತನ್ನ ಮಕ್ಕಳು ಮತ್ತು ನೆರೆಹೊರೆಯ ಮಕ್ಕಳಿಗೆ ಭದ್ರತೆ ಒದಗಿಸಲು ಏರ್ ಗನ್ ಹಿಡಿದು ರಸ್ತೆಯಲ್ಲಿ ಹೋಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಶಾಲಾ ಮಕ್ಕಳ ಗುಂಪೊಂದು ಈ ವ್ಯಕ್ತಿಯ ಹಿಂದೆಯೇ ಹೆಜ್ಜೆ ಹಾಕುತ್ತಿದ್ದು ಠೀವಿಯಿಂದ ಏರ್ ಗನ್ ಹಿಡಿದುಕೊಂಡಿರುವ ವ್ಯಕ್ತಿ ಬೀದಿ ನಾಯಿ ದಾಳಿ ಮಾಡಿದರೆ ಗುಂಡಿಕ್ಕಿ ಕೊಲ್ಲುತ್ತೇನೆ ಎಂದು ಹೇಳುತ್ತಿರುವುದು ವಿಡಿಯೊದಲ್ಲಿದೆ. ವಿಡಿಯೊ ವೈರಲ್ ಆದ ಬೆನ್ನಲ್ಲೇ ಟಿವಿ ವಾಹಿನಿಯೊಂದರಲ್ಲಿ ಮಾತನಾಡಿದ ಸಮೀರ್ ಎಂಬ ಹೆಸರಿನ ಆ ವ್ಯಕ್ತಿ ನಾನೊಬ್ಬ ಅಪ್ಪ. ನನ್ನ ಮಕ್ಕಳಿಗೆ ರಕ್ಷಣೆ ನೀಡುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ. ಈ ಊರಲ್ಲಿ ಕೆಲವು ದಿನಗಳಿಂದ ಬೀದಿ ನಾಯಿ ಕಾಟ ಹೆಚ್ಚಾಗಿದ್ದು, ನನ್ನ ಮಕ್ಕಳು ಮತ್ತು ನೆರೆಯ ಮಕ್ಕಳು ನಾಯಿಯ ಭಯದಿಂದಾಗಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದರು. ಹಾಗಾಗಿ ನಾನು ಬಲವಂತವಾಗಿ ಗನ್ ಹಿಡಿದು ಅವರ ಜತೆ ಹೋಗಬೇಕಾಗಿ ಬಂತು ಎಂದು ಸಮೀರ್ ಹೇಳಿದ್ದಾರೆ.

ಮೊನ್ನೆ ಬೀದಿ ನಾಯಿಯೊಂದು ಮದರಸಾ ವಿದ್ಯಾರ್ಥಿಗೆ ಕಚ್ಚಿದೆ. ಹಾಗಾಗಿ ಇಲ್ಲಿನ ವಿದ್ಯಾರ್ಥಿಗಳು ಮದರಸಾಗೆ ಹೋಗಲು, ಮನೆಯಿಂದ ಹೊರಗೆ ಕಾಲಿಡಲು ಹೆದರುತ್ತಿದ್ದರು. ಹಾಗಾಗಿ ನಾನು ಅವರಿಗೆ ಭದ್ರತೆ ನೀಡಲು ಬಯಸಿದೆ. ನನ್ನ ಮಗ ಈ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ್ದ ಎಂದಿದ್ದಾರೆ ಸಮೀರ್. ಇಲ್ಲಿನ ಬೇಕಲ್ ನಿವಾಸಿ ಆಗಿರುವ ಸಮೀರ್, ಏರ್ ಗನ್​​ಗೆ ಪರವಾನಗಿ ಅಗತ್ಯವಿಲ್ಲ ಎಂದಿದ್ದಾರೆ.

ನಾನು ಯಾವುದೇ ನಾಯಿಯನ್ನು ಕೊಂದಿಲ್ಲ. ಹಾಗಾಗಿ ನಾನು ಕಾನೂನು ಕ್ರಮಕ್ಕೆ ಹೆದರುವುದಿಲ್ಲ. ಆದರೆ ಯಾವುದೇ ನಾಯಿ ದಾಳಿ ಮಾಡಿದರೆ, ಆತ್ಮರಕ್ಷಣೆಗಾಗಿ ನಾನು ಅದನ್ನು ಶೂಟ್ ಮಾಡಬೇಕಾಗುತ್ತದೆ ಎಂದು ವ್ಯಕ್ತಿ ಹೇಳಿದ್ದಾರೆ.ಆದಾಗ್ಯೂ ಈ ಬಗ್ಗೆ ಪೊಲೀಸರಲ್ಲಿ ಕೇಳಿದಾಗ ಘಟನೆಯ ಬಗ್ಗೆ ನಮಗೆ ತಿಳಿದಿದೆ. ಆದರೆ ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚಿಗೆ ರಾಜ್ಯದಲ್ಲಿ ಬೀದಿ ನಾಯಿ ಕಾಟ ಜಾಸ್ತಿಯಾಗಿದ್ದು ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಕ್ರಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ಮತ್ತು ನಾಯಿಗಳಿಗೆ ಲಸಿಕೆ ಹಾಕಲು ಕೇರಳ ಹೈಕೋರ್ಟ್ ನಂತರ ಹಲವಾರು ನಿರ್ದೇಶನಗಳನ್ನು ನೀಡಲು ಮಧ್ಯಪ್ರವೇಶಿಸಿತ್ತು.

ಅದರ ಹೊರತಾಗಿಯೂ, ನಾಗರಿಕರನ್ನು ರಕ್ಷಿಸುವ ತನ್ನ ಬಾಧ್ಯತೆಯನ್ನು ರಾಜ್ಯಕ್ಕೆ ನೆನಪಿಸಲು ಮತ್ತು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಈ ಬಾರಿಯೂ ಮಧ್ಯಪ್ರವೇಶಿಸಬೇಕಾಯಿತು.

ನಾಯಿಗಳ ಜನಸಂಖ್ಯೆಯನ್ನು ನಿಯಂತ್ರಿಸಲು ಅಥವಾ ಆಂಟಿ ರೇಬಿಸ್ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ವಿಶ್ವಾಸ ಮೂಡಿಸಲು ಸರ್ಕಾರದ ಅಸಮರ್ಥತೆಯ ಬಗ್ಗೆ ಹೆಚ್ಚುತ್ತಿರುವ ಟೀಕೆಗಳ ನಡುವೆ, ರಾಜ್ಯ ಸರ್ಕಾರ ಮತ್ತು ಅದರ ವಿವಿಧ ಅಧಿಕಾರಿಗಳು ಯುದ್ಧದ ಆಧಾರದ ಮೇಲೆ ಬೆದರಿಕೆಯನ್ನು ಪರಿಹರಿಸಲು ಕ್ರಮಗಳನ್ನು ಪ್ರಾರಂಭಿಸಿದ್ದಾರೆ.
ಸಾರ್ವಜನಿಕ ಭಯವನ್ನು ಹೋಗಲಾಡಿಸುವ ಪ್ರಯತ್ನದಲ್ಲಿ, ಬೀದಿ ಮತ್ತು ಸಾಕು ನಾಯಿಗಳಿಗೆ ಲಸಿಕೆ ಹಾಕಲು ಮತ್ತು ಹೆಚ್ಚಿನ ಪ್ರಾಣಿ ಜನನ ನಿಯಂತ್ರಣ ಕೇಂದ್ರಗಳನ್ನು ತೆರೆಯಲು ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 20 ರವರೆಗೆ ರಾಜ್ಯಾದ್ಯಂತ ಸಾಮೂಹಿಕ ಲಸಿಕೆ ಅಭಿಯಾನವನ್ನು ಸರ್ಕಾರ ಘೋಷಿಸಿದೆ.

Web contact

TV9 Kannada

Read More
Follow Us