AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರಪತಿ ಚುನಾವಣೆ ಬಗ್ಗೆ ಮಮತಾ ಬ್ಯಾನರ್ಜಿ ಕರೆದಿರುವ ಮೀಟಿಂಗ್​ಗೆ ಉದ್ಧವ್ ಠಾಕ್ರೆ ಗೈರು

Presidential Election: ದೇಶವನ್ನು ಒಡೆಯಲು ಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಎಲ್ಲ ವಿರೋಧ ಪಕ್ಷಗಳೂ ಒಂದಾಗಿ ನಿಲ್ಲಬೇಕಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ರಾಷ್ಟ್ರಪತಿ ಚುನಾವಣೆ ಬಗ್ಗೆ ಮಮತಾ ಬ್ಯಾನರ್ಜಿ ಕರೆದಿರುವ ಮೀಟಿಂಗ್​ಗೆ ಉದ್ಧವ್ ಠಾಕ್ರೆ ಗೈರು
ಉದ್ಧವ್ ಠಾಕ್ರೆ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jun 12, 2022 | 3:06 PM

Share

ಮುಂಬೈ: ರಾಷ್ಟ್ರಪತಿ ಚುನಾವಣೆ ಸಂಬಂಧ (Presidential Polls) ಚರ್ಚಿಸಲು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ (TMC Leader Mamata Banerjee) ಕರೆದಿರುವ ಸಭೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ (Uddhav Thackeray) ಪಾಲ್ಗೊಳ್ಳುವುದಿಲ್ಲ ಎಂದು ಶಿವಸೇನೆ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ. ಜೂನ್ 15ರಂದು ಉದ್ಧವ್ ಅಯೋಧ್ಯೆಯಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಅವರು ಮಮತಾ ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ ಎಂದು ಹೇಳಿದರು.

‘ಜೂನ್ 15ರಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಉದ್ಧವ್ ಠಾಕ್ರೆ ಅವರಿಗೆ ಆಹ್ವಾನವಿದೆ. ಆದರೆ ಅವರು ಆ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಇರುತ್ತಾರೆ. ಮಮತಾ ಅವರ ಆಹ್ವಾನ ನಮಗೆ ತಲುಪಿದೆ. ನಮ್ಮ ಪಕ್ಷದ ಪರವಾಗಿ ಹಿರಿಯ ನಾಯಕರೊಬ್ಬರು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಎಎನ್​ಐ ಸುದ್ದಿಸಂಸ್ಥೆಯು ತಿಳಿಸಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿಯ ಅಯೋಧ್ಯೆ ಭೇಟಿಯ ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ರಾಷ್ಟ್ರಪತಿ ಚುನಾವಣೆ ಬಗ್ಗೆ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಜೂನ್ 15ರಂದು ದೆಹಲಿಯಲ್ಲಿ ಟಿಎಂಸಿ ನಾಯಕಿ ಮತ್ತು ಮಮತಾ ಬ್ಯಾನರ್ಜಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಹಲವು ನಾಯಕರಿಗೆ ಈಗಾಗಲೇ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ 22 ಪ್ರತಿಪಕ್ಷಗಳ ನಾಯಕರಿಗೆ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದರು. ದೇಶವನ್ನು ವಿಭಜಕ ಶಕ್ತಿಗಳು ಆಳುತ್ತಿರುವ ಸಂದರ್ಭದಲ್ಲಿ ರಾಷ್ಟ್ರಪತಿ ಚುನಾವಣೆಯು ಎಲ್ಲ ಪ್ರಗತಿಪರ ವಿರೋಧ ಪಕ್ಷಗಳಿಗೂ ಅತ್ಯುತ್ತಮ ಅವಕಾಶ ಕೊಟ್ಟಿದೆ. ಮುಂದಿನ ರಾಜಕೀಯದ ರೂಪುರೇಷೆ ನಿರ್ಧರಿಸಲು ಈ ಅವಕಾಶವನ್ನು ನಾವು ಬಳಸಿಕೊಳ್ಳಬೇಕು ಎಂದು ಅವರು ಹೇಳಿದ್ದರು. ರಾಷ್ಟ್ರಪತಿ ಚುನಾವಣೆಯು ಜುಲೈ 18ರಂದು ನಡೆಯಲಿದೆ. ಸಂಸದರು, ಶಾಸಕರು ಸೇರಿದಂತೆ 4,809 ಮಂದಿಗೆ ಮತದಾನದ ಹಕ್ಕು ಇದೆ.

ದೇಶವನ್ನು ಒಡೆಯಲು ಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಎಲ್ಲ ವಿರೋಧ ಪಕ್ಷಗಳೂ ಒಂದಾಗಿ ನಿಲ್ಲಬೇಕಿದೆ. ದೇಶಕ್ಕೆ ಪ್ರಬಲ ಪ್ರತಿಪಕ್ಷದ ಅವಶ್ಯಕತೆ ಇದೆ ಎಂದು ಮಮತಾ ಹೇಳಿದ್ದಾರೆ. ವಿರೋಧ ಪಕ್ಷಗಳ ನಾಯಕರನ್ನು ಕೇಂದ್ರ ಸರ್ಕಾರದ ವಿವಿಧ ಏಜೆನ್ಸಿಗಳು ಗುರಿಯಾಗಿಸಿ ಕಾರ್ಯಾಚರಣೆ ನಡೆಸುತ್ತಿವೆ. ವಿಶ್ವದಲ್ಲಿ ಭಾರತದ ಗೌರವಕ್ಕದ ಧಕ್ಕೆಯೊದಗಿದೆ. ದೇಶದ ಒಳಗೂ ವಿಭಜನೆಯ ಮನಸ್ಥಿತಿ ವಿಜೃಂಭಿಸುತ್ತಿದೆ. ನಮ್ಮ ಪ್ರತಿರೋಧವನ್ನು ತೋರಲು ಇದು ಅತ್ಯುತ್ತಮ ಅವಕಾಶ ಎಂದು ಮಮತಾ ಹೇಳಿದ್ದಾರೆ.

‘ಭಾರತೀಯ ಪ್ರಜಾಪ್ರಭುತ್ವದ ರಕ್ಷಕರಾಗಿರುವ ಸ್ಥಾನಕ್ಕೆ ಆಯ್ಕೆ ಮಾಡಲು ಈ ಚುನಾವಣೆ ಅತ್ಯುತ್ತಮ ಅವಕಾಶ ನೀಡಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯೊದಗಿರುವ ಸನ್ನಿವೇಶದಲ್ಲಿ ಪ್ರಬಲ ಪ್ರತಿಪಕ್ಷ ಈ ಕ್ಷಣದ ತುರ್ತಾಗಿದೆ. ನೊಂದ ಮತ್ತು ಶೋಷಿತ ಜನಸಮುದಾಯಗಳ ಪರವಾಗಿ ಧ್ವನಿ ಎತ್ತಬೇಕಿದೆ’ ಎಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿಎಂಕೆ, ಸಿಪಿಐ, ಸಿಪಿಐ (ಎಂ) ಮತ್ತು ಆಮ್ ಆದ್ಮಿ ಪಕ್ಷದ ನಾಯಕರೊಂದಿಗೆ ಮಮತಾ ಬ್ಯಾನರ್ಜಿಯನ್ನು ಇತ್ತೀಚೆಗೆ ಭೇಟಿಯಾಗಿದ್ದರು. ಮಮತಾ ಬ್ಯಾನರ್ಜಿ ಪ್ರಯತ್ನಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಬಿಜೆಪಿ ಟೀಕಿಸಿದೆ. ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಚುನಾಯಿತ ಪ್ರತಿನಿಧಿಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಇದನ್ನು ಜನಸಂಖ್ಯೆ ಆಧರಿಸಿದ ಲೆಕ್ಕಾಚಾರದ ಪ್ರಕಾರ ವಿಶ್ಲೇಷಿಸಿ, ಮತಗಳನ್ನು ಲೆಕ್ಕ ಹಾಕುತ್ತಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Sun, 12 June 22

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ