ಸಿಕ್ಕಿಂ: ಜಲವಿದ್ಯುತ್ ಯೋಜನೆ ಸುರಂಗದಲ್ಲಿ ಭೂಕುಸಿತ, ಅನಿಲ ಸೋರಿಕೆ, 7 ಶವಗಳು ಪತ್ತೆ, ಹಲವರು ಸಿಲುಕಿರುವ ಶಂಕೆ

ದಕ್ಷಿಣ ಸಿಕ್ಕಿಂನ ಸಮರ್ದುಂಗ್ ಬಳಿ ತೀಸ್ತಾ ಹಂತ VI ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಇದರ ಪರಿಣಾಮವಾಗಿ ಮೀಥೇನ್ ಅನಿಲ ಸೋರಿಕೆಯಾಗಿ ಕನಿಷ್ಠ 7 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 20-27 ಜನರು ಸಿಲುಕಿರುವ ಶಂಕೆ ಇದ್ದು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ಆಮ್ಲಜನಕ ಮಾಸ್ಕ್‌ಗಳೊಂದಿಗೆ ಸಜ್ಜುಗೊಂಡ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಸಿಕ್ಕಿಂ: ಜಲವಿದ್ಯುತ್ ಯೋಜನೆ ಸುರಂಗದಲ್ಲಿ ಭೂಕುಸಿತ, ಅನಿಲ ಸೋರಿಕೆ, 7 ಶವಗಳು ಪತ್ತೆ, ಹಲವರು ಸಿಲುಕಿರುವ ಶಂಕೆ
ಸಿಕ್ಕಿಂ

Updated on: Jul 21, 2026 | 8:17 AM

ನಾಮ್ಚಿ, ಜುಲೈ 21: ದಕ್ಷಿಣ ಸಿಕ್ಕಿಂನ ಸಮರ್ದುಂಗ್ ಬಳಿ ಇರುವ ಜಲವಿದ್ಯುತ್ ಯೋಜನೆಯ ಸುರಂಗ ಮಾರ್ಗದಲ್ಲಿ ಭೀಕರ ಭೂಕುಸಿತ(Landslide) ಸಂಭವಿಸಿದೆ. ಇದರ ಬೆನ್ನಲ್ಲೇ ಸುರಂಗದೊಳಗೆ ಅಪಾಯಕಾರಿ ವಿಷಕಾರಿ ಅನಿಲ ಸೋರಿಕೆಯಾಗಿದ್ದು, ಕನಿಷ್ಠ 7 ಮಂದಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ದಕ್ಷಿಣ ಸಿಕ್ಕಿಂನ ಸಮರ್ದುಂಗ್‌ನಲ್ಲಿ ಸೋಮವಾರ ಮಧ್ಯಾಹ್ನ 3.09 ರ ಸುಮಾರಿಗೆ ‘ತೀಸ್ತಾ ಹಂತ VI ಜಲವಿದ್ಯುತ್ ಯೋಜನೆ’ಯ ಸುರಂಗ ಕಾಮಗಾರಿ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪಟೇಲ್ ಎಂಜಿನಿಯರಿಂಗ್ ಸಂಸ್ಥೆಯು ಈ ಯೋಜನೆಯ ನಿರ್ಮಾಣ ಹೊಣೆ ಹೊತ್ತುಕೊಂಡಿದೆ.

ಸುರಂಗದೊಳಗೆ ಸ್ಫೋಟದ ಶಬ್ದ: ಮೀಥೇನ್ ಅನಿಲ ಸೋರಿಕೆ
ಸುರಂಗದೊಳಗಿಂದ ತಕ್ಷಣವೇ ಓಡಿಬಂದು ಬಚಾವಾದ ಕಾರ್ಮಿಕರ ಪ್ರಕಾರ, ಕತ್ತಲೆಯಲ್ಲಿದ್ದ ಸುರಂಗದೊಳಗೆ ಇದ್ದಕ್ಕಿದ್ದಂತೆ ಭಾರಿ ಸ್ಫೋಟದಂತಹ ಸದ್ದು ಕೇಳಿಸಿತು. ತಕ್ಷಣವೇ ಬಂಡೆಗಳು ಕುಸಿದು ಬಿದ್ದು ಹೊರಹೋಗುವ ದಾರಿ ಬಂದ್ ಆಯಿತು.

ವಿಷಕಾರಿ ಮೀಥೇನ್ ಭೀತಿ: ಭೂಕುಸಿತದ ಬೆನ್ನಲ್ಲೇ ಸುರಂಗದೊಳಗೆ ಅತ್ಯಂತ ಅಪಾಯಕಾರಿ ‘ಮೀಥೇನ್ ಅನಿಲ’ ಭಾರಿ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ರಕ್ಷಣಾ ಸಾಧನಗಳಿಲ್ಲದೆ ಸುರಂಗದೊಳಗೆ ಹೋಗಲು ಎರಡು ಬಾರಿ ಯತ್ನಿಸಿದರೂ, ಅನಿಲದ ತೀವ್ರತೆಯಿಂದಾಗಿ ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆ ಅನುಭವಿಸಿ ಹಿಂತಿರುಗಬೇಕಾಯಿತು.

ಮತ್ತಷ್ಟು ಓದಿ: ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!

ಎನ್‌ಡಿಆರ್‌ಎಫ್, ಸುಸಜ್ಜಿತ ರಕ್ಷಣಾ ಕಾರ್ಯಾಚರಣೆ
ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ಪಡೆ (SDRF), ಸಿಕ್ಕಿಂ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಆಮ್ಲಜನಕ ಸಿಲಿಂಡರ್ ಹಾಗೂ ವಿಶೇಷ ಆಕ್ಸಿಜನ್ ಮಾಸ್ಕ್‌ಗಳನ್ನು ಧರಿಸಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಆರಂಭದಲ್ಲಿ ಸುಮಾರು 19 ಕಾರ್ಮಿಕರು ಒಳಗೆ ಸಿಲುಕಿದ್ದರು. ನಂತರ ರಕ್ಷಣೆಗೆ ಹೋದ ಪಟೇಲ್ ಎಂಜಿನಿಯರಿಂಗ್ ಹಾಗೂ ಎನ್​ಎಚ್​ಪಿಸಿ ಸಂಸ್ಥೆಯ ಸಿಬ್ಬಂದಿಯೂ ಸೇರಿದಂತೆ ಒಟ್ಟು 20 ರಿಂದ 27 ಜನರು ಒಳಗೆ ಸಿಲುಕಿರುವ ಶಂಕೆ ಇದೆ.

ವಿಡಿಯೋ

ಎನ್‌ಡಿಆರ್‌ಎಫ್ ಪಡೆಗಳು ಸುರಂಗದ ಕೊನೆಯ ಹಂತವನ್ನು ತಲುಪಿದ ನಂತರವೇ ನೈಜ ಪರಿಸ್ಥಿತಿ ಸ್ಪಷ್ಟವಾಗಲಿದೆ. ಸದ್ಯಕ್ಕೆ ಸುರಂಗದೊಳಗೆ ಸಿಲುಕಿರುವ ಪ್ರತಿಯೊಬ್ಬ ಅಮಾಯಕರನ್ನು ಸುರಕ್ಷಿತವಾಗಿ ಹೊರತರುವುದೇ ಜಿಲ್ಲಾಡಳಿತ ಹಾಗೂ ಎನ್‌ಡಿಆರ್‌ಎಫ್ ತಂಡದ ಮೊದಲ ಆದ್ಯತೆಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us