ಶ್ರೀರಾಮನ ಹೆಸರಿನಲ್ಲಿ ಕೋಮುವಾದದ ಬೆಂಕಿ ಹಚ್ಚುವುದು ರಾಮನ ಕಲ್ಪನೆಗೆ ಮಾಡಿದ ಅವಮಾನ: ಸಂಜಯ್ ರಾವತ್

| Updated By: ರಶ್ಮಿ ಕಲ್ಲಕಟ್ಟ

Updated on: Apr 17, 2022 | 8:08 PM

  ಏಪ್ರಿಲ್ 10 ರಂದು ರಾಮ ನವಮಿಯಂದು ದೇಶದ ವಿವಿಧ ಭಾಗಗಳಲ್ಲಿ ಕೋಮು ಘರ್ಷಣೆಗಳನ್ನು ಉಲ್ಲೇಖಿಸಿದ ರಾವುತ್, ಇದು ಒಳ್ಳೆಯ ಲಕ್ಷಣವಲ್ಲ ಎಂದು ಹೇಳಿದರು. ಹಿಂದೆ ರಾಮನವಮಿ ಮೆರವಣಿಗೆಗಳು ಸಂಸ್ಕೃತಿ ಮತ್ತು ಧರ್ಮಕ್ಕೆ ಸಂಬಂಧಿಸಿದವುಗಳಾಗಿತ್ತು. ಆದರೆ ಈಗ ಕತ್ತಿಗಳನ್ನು ಝಳಪಿಸಲಾಯಿತು

ಶ್ರೀರಾಮನ ಹೆಸರಿನಲ್ಲಿ ಕೋಮುವಾದದ ಬೆಂಕಿ ಹಚ್ಚುವುದು ರಾಮನ ಕಲ್ಪನೆಗೆ ಮಾಡಿದ ಅವಮಾನ: ಸಂಜಯ್ ರಾವತ್
ಸಂಜಯ್ ರಾವತ್
Follow us on

ಮುಂಬೈ: ಶ್ರೀರಾಮನ ಹೆಸರಿನಲ್ಲಿ ಕೋಮು ಬೆಂಕಿ ಹಚ್ಚುವುದು ರಾಮನ ಕಲ್ಪನೆಗೆ ಮಾಡಿದ ಅವಮಾನ ಎಂದು ಹೇಳಿರುವ ಶಿವಸೇನೆ ನಾಯಕ ಸಂಜಯ್ ರಾವತ್ (Sanjay Raut), ಮಧ್ಯಪ್ರದೇಶದ ಖರಗೋನ್​​ನಲ್ಲಿ(Khargone) ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಭಗವಾನ್ ರಾಮನೂ ಚಡಪಡಿಸುತ್ತಾನೆ ಎಂದು ಭಾನುವಾರ ಹೇಳಿದ್ದಾರೆ. ಖರಗೋನ್​​ನಲ್ಲಿ ರಾಮ ನವಮಿಯ (Ram Navami) ವೇಳೆ ಸಂಘರ್ಷವುಂಟಾಗಿದ್ದು ಅಲ್ಲಿ ಕರ್ಫ್ಯೂ ಹೇರಲಾಗಿತ್ತು. ಚುನಾವಣೆ ಗೆಲ್ಲಲು ಧರ್ಮ ಕಲಹವನ್ನು ಬಿತ್ತುವ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದ್ದು, ಇದು ದೇಶ ಒಡೆಯಲು ಕಾರಣವಾಗುತ್ತದೆ ಎಂದು ರಾವತ್ ಆರೋಪಿಸಿದ್ದಾರೆ. ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ರಾವತ್  ತಮ್ಮ ಸಾಪ್ತಾಹಿಕ ಅಂಕಣ “ರೋಖ್‌ಥೋಕ್” ನಲ್ಲಿ ಯಾರಾದರೂ ಮೂಲಭೂತವಾದದ ಬೆಂಕಿಯನ್ನು ಹೊತ್ತಿಸಲು ಮತ್ತು ಚುನಾವಣೆಯಲ್ಲಿ ಗೆಲ್ಲಲು ಶಾಂತಿಯನ್ನು ಕದಡಲು ಬಯಸಿದರೆ, ಅವರು ಎರಡನೆಯ ವಿಭಜನೆಯ ಬೀಜಗಳನ್ನು ಬಿತ್ತುತ್ತಿದ್ದಾರೆ” ಎಂದು ಬರೆದಿದ್ದಾರೆ. ಶಿವಸೇನೆ ನಾಯಕ ಸಂಜಯ್ ರಾವತ್ ಸಾಮ್ನಾ ಪತ್ರಿಕೆಯ ಕಾರ್ಯಕಾರಿ ಸಂಪಾದಕರಾಗಿದ್ದಾರೆ.  ಏಪ್ರಿಲ್ 10 ರಂದು ರಾಮ ನವಮಿಯಂದು ದೇಶದ ವಿವಿಧ ಭಾಗಗಳಲ್ಲಿ ಕೋಮು ಘರ್ಷಣೆಗಳನ್ನು ಉಲ್ಲೇಖಿಸಿದ ರಾವುತ್, ಇದು ಒಳ್ಳೆಯ ಲಕ್ಷಣವಲ್ಲ ಎಂದು ಹೇಳಿದರು. ಹಿಂದೆ ರಾಮನವಮಿ ಮೆರವಣಿಗೆಗಳು ಸಂಸ್ಕೃತಿ ಮತ್ತು ಧರ್ಮಕ್ಕೆ ಸಂಬಂಧಿಸಿದವುಗಳಾಗಿತ್ತು. ಆದರೆ ಈಗ ಕತ್ತಿಗಳನ್ನು ಝಳಪಿಸಲಾಯಿತು ಮತ್ತು ಕೋಮು ವೈಷಮ್ಯವನ್ನು ಸೃಷ್ಟಿಸಲಾಗಿದೆ. ಮಸೀದಿಗಳ ಹೊರಗೆ ಹಿಂಸಾಚಾರಕ್ಕೆ ಕಾರಣವಾಯಿತು ಅವರು ಆರೋಪಿಸಿದರು.

ರಾಮಮಂದಿರ ಚಳವಳಿಯನ್ನು ಮಧ್ಯದಲ್ಲಿಯೇ ಕೈಬಿಟ್ಟವರು ಈಗ ಭಗವಾನ್ ರಾಮನ ಹೆಸರಿನಲ್ಲಿ ಕತ್ತಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಇದನ್ನು ಹಿಂದುತ್ವ ಎನ್ನಲಾಗದು. ರಾಮನ ಹೆಸರಿನಲ್ಲಿ ಕೋಮುವಾದ ಬೆಂಕಿ ಹಚ್ಚುವುದು ರಾಮನ ಕಲ್ಪನೆಗೆ ಮಾಡಿದ ಅವಮಾನ ಎಂದು ರಾವುತ್ ಹೇಳಿದ್ದಾರೆ. “ಮಧ್ಯಪ್ರದೇಶದ ಖರಗೋನ್ ಬೆಳವಣಿಗೆಗಳ ಬಗ್ಗೆ ಭಗವಾನ್ ರಾಮನು ಸಹ ಚಡಪಡಿಸುತ್ತಾನೆ” ಎಂದು ಶಿವಸೇನೆ ನಾಯಕ ಹೇಳಿದ್ದಾರೆ.

ಹಿಂದೂ ಮತ್ತು ಮರಾಠಿ ಹೊಸ ವರ್ಷವನ್ನು ಗುರುತಿಸುವ ಏಪ್ರಿಲ್ 2 ರಂದು ಗುಧಿ ಪಾಡ್ವಾದಲ್ಲಿ ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಸಾಂಸ್ಕೃತಿಕ ಮೆರವಣಿಗೆಗಳನ್ನು ನಡೆಸಲಾಯಿತು, ಆದರೆ ಈ ಮೆರವಣಿಗೆಗಳು ಮುಸ್ಲಿಂ ಪ್ರದೇಶಗಳಲ್ಲಿ ಹಾದುಹೋದ ನಂತರವೂ ಯಾವುದೇ ಹಿಂಸಾಚಾರ ನಡೆದಿಲ್ಲ ಎಂದು ರಾವುತ್ ಹೇಳಿದರು.

“ಯಾವುದೇ ಹಿಂಸಾಚಾರ ನಡೆದಿಲ್ಲ. ರಾಮನವಮಿಯಂದು ಎಲ್ಲಾ ಹಿಂಸಾಚಾರಗಳು ಏಕೆ ನಡೆಯಬೇಕು? ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ರಾಮನವಮಿ ಮೆರವಣಿಗೆಯ ಮೇಲೆ ಮುಸ್ಲಿಮರು ಕಲ್ಲು ತೂರುತ್ತಾರೆ ಎಂದು ಯಾರಾದರೂ ನಂಬಬಹುದೇ?” ಅವರು ಸಬರಕಾಂತದಲ್ಲಿನ ಹಿಂಸಾಚಾರವನ್ನು ಉಲ್ಲೇಖಿಸಿ ಕೇಳಿದರು.

ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರು ಬಿಜೆಪಿಯ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ರಾವತ್ ಆರೋಪಿಸಿದರು. ಈ ಕಾರ್ಯಸೂಚಿಯು ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲು ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸಲಿರುವುದಕ್ಕಾಗಿದೆ ಎಂದು ಅವರು ಬರೆದಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಮೇ 3 ರೊಳಗೆ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆದುಹಾಕಲು ವಿಫಲವಾದರೆ  ಮಸೀದಿಗಳ ಹೊರಗೆ ‘ಹನುಮಾನ್ ಚಾಲೀಸಾ’ ಅನ್ನು ಏರು ಧ್ವನಿಯಲ್ಲಿ ನುಡಿಸಲಾಗುವುದು ಎಂದು ಎಂಎನ್​​ಎಸ್ ಮುಖ್ಯಸ್ಥರು ಹೇಳಿದ್ದಾರೆ.

ಇದನ್ನೂ ಓದಿ: ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆದುಹಾಕಲು ಮೇ3ರ ವರೆಗೆ ಗಡುವು; ದೇಶಭಕ್ತ ಹಿಂದೂಗಳು ಬೆಂಬಲಿಸುವಂತೆ ಕರೆ ನೀಡಿದ ಎಂಎನ್ಎಸ್