
ನವದೆಹಲಿ, ಜುಲೈ 24: ಭಾರತದ ಪಾರಂಪರಿಕ ಕುಟುಂಬ ವ್ಯವಸ್ಥೆಯು ಕ್ರಮೇಣ ಕ್ಷೀಣಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ (Supreme Court) ತೀವ್ರ ಕಳವಳ ವ್ಯಕ್ತಪಡಿಸಿದೆ. ಅವಿಭಕ್ತ ಕುಟುಂಬಗಳ ಕಣ್ಮರೆ ಮತ್ತು ಮಕ್ಕಳ ಪಾಲನೆಗಾಗಿ ಪೋಷಕರು ಗ್ಯಾಜೆಟ್ಗಳ (ಮೊಬೈಲ್, ಟ್ಯಾಬ್ ಇತ್ಯಾದಿ) ಮೇಲೆ ಹೆಚ್ಚೆಚ್ಚು ಅವಲಂಬಿತರಾಗುತ್ತಿರುವುದು ಭವಿಷ್ಯದಲ್ಲಿ ತೀವ್ರ ಸಾಮಾಜಿಕ ಪರಿಣಾಮಗಳನ್ನು ಬೀರುತ್ತದೆ ಎಂದು ಕೋರ್ಟ್ ಎಚ್ಚರಿಸಿದೆ.
ತಮ್ಮ ಹನಿಮೂನ್ ಸಮಯದಲ್ಲಿ ಪತಿ ರಾಜಾ ರಘುವಂಶಿಯ ಹತ್ಯೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಸೋನಮ್ ರಘುವಂಶಿಯ ಪ್ರಕರಣದ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಅವಿಭಕ್ತ ಕುಟುಂಬ ವ್ಯವಸ್ಥೆ ನಶಿಸುತ್ತಿರುವುದು ಮತ್ತು ಪೋಷಕರು-ಮಕ್ಕಳ ನಡುವಿನ ಬಾಂಧವ್ಯ ಬದಲಾಗುತ್ತಿರುವ ಸ್ವರೂಪದ ಬಗ್ಗೆ ನ್ಯಾಯಪೀಠವು ಬೇಸರ ವ್ಯಕ್ತಪಡಿಸಿತು. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಳೆ ಅವರನ್ನೊಳಗೊಂಡ ಪೀಠವು, ಈ ಪ್ರಕರಣವು ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ಪ್ರತಿಬಿಂಬವಾಗಿದೆ ಎಂದು ಹೇಳಿತು.
ಯುವಕರು ವಾಟ್ಸಾಪ್ ಜ್ಞಾನಿಗಳಾಗುತ್ತಿದ್ದಾರೆ:
ಇಂದಿನ ಯುವಪೀಳಿಗೆಯು ಹೆಚ್ಚು ಬುದ್ಧಿವಂತ ಮತ್ತು ಅತಿಯಾದ ಮಾಹಿತಿ ಹೊಂದಿರುವ ಪೀಳಿಗೆಯಾಗಿದೆ. ಆದರೆ, ಮಾನಸಿಕ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದು ಅವರಿಗೆ ತಿಳಿದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಇತ್ತೀಚಿನ ದಿನಗಳಲ್ಲಿ ಜನರು ವಾಟ್ಸಾಪ್ನಲ್ಲಿ ಹರಿದಾಡುವ ಸಂದೇಶಗಳನ್ನೇ ಸಂಪೂರ್ಣ ಜ್ಞಾನವೆಂದು ಭಾವಿಸುತ್ತಿರುವುದು ದುರದೃಷ್ಟಕರ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ‘ಡಾಕ್ಟರ್ ಆಗಲು ನಾಲಾಯಕ್’; 4 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆಸ್ಪತ್ರೆಗೆ ಸುಪ್ರೀಂ ಕೋರ್ಟ್ ಛೀಮಾರಿ
ಸುಪ್ರೀಂ ಕೋರ್ಟ್ನ ಈ ಕಳವಳವನ್ನು ಒಪ್ಪಿಕೊಂಡ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇದು ಸಮಾಜದ ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ಮನುಷ್ಯನ ಸಂಬಂಧಗಳಲ್ಲಿನ ನಂಬಿಕೆ ಕ್ಷೀಣಿಸುತ್ತಿದ್ದು, ಸಹನೆ ಮತ್ತು ಸಹಿಷ್ಣುತೆಯ ಕೊರತೆ ಎದ್ದು ಕಾಣುತ್ತಿದೆ ಎಂದರು.
ಕುಟುಂಬದ ಮೌಲ್ಯವೇ ಕಣ್ಮರೆ:
ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳು ಅಜ್ಜ-ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮ ಮತ್ತು ಭಾವ-ಮೈದುನರ ನಡುವೆ ಬೆಳೆಯುತ್ತಿದ್ದರು. ಇದರಿಂದಾಗಿ ಅವರಿಗೆ ಕುಟುಂಬದ ಬಾಂಧವ್ಯ, ಪ್ರೀತಿ-ವಾತ್ಸಲ್ಯ ಹಾಗೂ ಜವಾಬ್ದಾರಿಗಳ ಅರಿವು ಸಹಜವಾಗಿಯೇ ಉಂಟಾಗುತ್ತಿತ್ತು. ಆದರೆ ಇಂದಿನ ಆಧುನಿಕ ವಿಭಕ್ತ ಕುಟುಂಬಗಳಲ್ಲಿ, ಉದ್ಯೋಗಸ್ಥ ಪೋಷಕರು ತಮ್ಮ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಕಷ್ಟಪಡುತ್ತಿದ್ದಾರೆ. ಮಕ್ಕಳು ತೊಂದರೆ ಕೊಡುತ್ತಾರೆಂದು ಪೋಷಕರು ಮೊಬೈಲ್ ಫೋನ್ಗಳು ಹಾಗೂ ಇತರ ಡಿಜಿಟಲ್ ಸಾಧನಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ ಎಂದು ಪೀಠವು ಬೇಸರ ವ್ಯಕ್ತಪಡಿಸಿತು.
ಇದನ್ನೂ ಓದಿ: ವಿಚ್ಛೇದನ ಪ್ರಕರಣದಲ್ಲಿ ಪತಿಯ ಕಂಪನಿ ಮಾಲೀಕರಿಗೆ ಹೆಂಡತಿ ಪತ್ರ ಬರೆಯುವುದೇಕೆ? ಸುಪ್ರೀಂ ಕೋರ್ಟ್ ತರಾಟೆ
ಪೋಷಕರ ಜಾಗಕ್ಕೆ ಮೊಬೈಲ್ ಬರುತ್ತಿದೆ:
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸುಂದರೇಶ್ ಮಾತನಾಡುತ್ತಾ, “ನಾನು ಇತ್ತೀಚೆಗೆ ಹೋಟೆಲ್ ಒಂದಕ್ಕೆ ಹೋಗಿದ್ದಾಗ, ಕುಟುಂಬವೊಂದು ತಾವೂ ಊಟ ಮಾಡುವಾಗ ಮಗು ಊಟ ಮಾಡಲು ಬಿಡುವುದಿಲ್ಲವೆಂದು ಅದರ ಕೈಗೆ ಮೊಬೈಲ್ ಕೊಟ್ಟಿರುವುದನ್ನು ನೋಡಿದೆ. ಪೋಷಕರ ಜಾಗವನ್ನು ಗ್ಯಾಜೆಟ್ಗಳು ಆಕ್ರಮಿಸಿಕೊಂಡರೆ, ಅದು ದೊಡ್ಡ ವಿನಾಶಕ್ಕೆ ಕಾರಣವಾಗುತ್ತದೆ. ಭವಿಷ್ಯದಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ. ಅವಿಭಕ್ತ ಕುಟುಂಬ ಎಂಬುದು ದೊಡ್ಡ ಆಸ್ತಿ. ಆದರೆ, ಜನರಿಗೆ ಅದರ ಅರಿವಿಲ್ಲ. ಸಂತೋಷ ಎಂಬುದು ಭೌತಿಕ ವಸ್ತುಗಳಿಂದ ಬರುವುದಿಲ್ಲ, ಅದು ಮಾನವೀಯ ಬಾಂಧವ್ಯ ಮತ್ತು ಸಂಬಂಧಗಳಿಂದ ಸಿಗುತ್ತದೆ. ನಾವು ಯಂತ್ರಗಳಂತೆ ಬದಲಾಗುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ