3 ತಿಂಗಳ ಮೇಲಿನ ಮಗುವನ್ನು ದತ್ತು ಪಡೆದ ತಾಯಂದಿರಿಗೂ ಹೆರಿಗೆ ರಜೆ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

3 ತಿಂಗಳೊಳಗಿನ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಮಾತ್ರ ಹೆರಿಗೆ ರಜೆಯನ್ನು ನೀಡುವ ಕಾನೂನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಹಾಗೇ, ದತ್ತು ಪ್ರಕರಣಗಳಲ್ಲಿ ಹೆರಿಗೆ ರಜೆಗಾಗಿ ಮಕ್ಕಳ ವಯಸ್ಸಿನ ಮಿತಿಯನ್ನು ಸುಪ್ರೀಂ ಕೋರ್ಟ್ ತೆಗೆದುಹಾಕಿದೆ. ಮಗುವನ್ನು ಹೆತ್ತ ತಾಯಂದಿರಂತೆ ಮಗುವನ್ನು ದತ್ತು ಪಡೆದ ತಾಯಂದಿರಿಗೂ ಹೆರಿಗೆ ರಜೆ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 3 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮಹಿಳೆಯರಿಗೆ ಹೆರಿಗೆ ರಜೆ ನಿರಾಕರಿಸುವುದು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

3 ತಿಂಗಳ ಮೇಲಿನ ಮಗುವನ್ನು ದತ್ತು ಪಡೆದ ತಾಯಂದಿರಿಗೂ ಹೆರಿಗೆ ರಜೆ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
Parenting
Image Credit source: iStock

Updated on: Mar 17, 2026 | 5:47 PM

ನವದೆಹಲಿ, ಮಾರ್ಚ್ 17: ದತ್ತು ಪಡೆಯುವ ತಾಯಂದಿರಿಗೆ ಹೆರಿಗೆ ರಜೆ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಐತಿಹಾಸಿಕ ತೀರ್ಪು ನೀಡಿದೆ. 3 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ಮಗುವನ್ನು ದತ್ತು ತೆಗೆದುಕೊಳ್ಳುವವರಿಗೂ ಪೂರ್ಣ ಹೆರಿಗೆ ರಜೆ ಸಿಗಲಿದೆ. ಇದನ್ನು ಮಾನವ ಹಕ್ಕು ಎಂದು ಕರೆದ ಸುಪ್ರೀಂ ಕೋರ್ಟ್ ದತ್ತು ಪಡೆದ ಮಗು ಆ ತಾಯಿ ಹೆತ್ತ ಮಗುವಿಗಿಂತ ಭಿನ್ನವಾಗಿಲ್ಲ. ದತ್ತು ಪಡೆದ ಮಗು ಕೂಡ ಆ ಮಹಿಳೆಯ ಮಗುವಿನಂತೆಯೇ ಎಂದು ಹೇಳಿದೆ.

ದತ್ತು ಪಡೆದ ಮಗುವಿನ ವಯಸ್ಸನ್ನು ಲೆಕ್ಕಿಸದೆ ದತ್ತು ಪಡೆದ ತಾಯಿಗೆ 12 ವಾರಗಳ ಹೆರಿಗೆ ರಜೆಗೆ ಅರ್ಹತೆ ಇರಬೇಕು ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಮಹಾದೇವನ್ ಅವರ ಪೀಠ ಸ್ಪಷ್ಟಪಡಿಸಿದೆ. ದತ್ತು ಪಡೆದ ತಾಯಂದಿರಿಗೆ ಮೂರು ತಿಂಗಳೊಳಗಿನ ಮಕ್ಕಳನ್ನು ದತ್ತು ತೆಗೆದುಕೊಳ್ಳುವವರಿಗೆ ಮಾತ್ರ ಹೆರಿಗೆ ರಜೆಯನ್ನು ಸೀಮಿತಗೊಳಿಸುವ ಕಾನೂನು ನಿಬಂಧನೆಯನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿದೆ. ಮಗುವಿನ ವಯಸ್ಸನ್ನು ಲೆಕ್ಕಿಸದೆ, ಎಲ್ಲಾ ದತ್ತು ಪಡೆದ ತಾಯಂದಿರು ದತ್ತು ಪಡೆದ ದಿನಾಂಕದಿಂದ 12 ವಾರಗಳ ರಜೆಗೆ ಅರ್ಹರಾಗಿರುತ್ತಾರೆ. ಈ ಸಂದರ್ಭದಲ್ಲಿ ಇಬ್ಬರಿಗೂ ಬಾಂಧವ್ಯ, ಆರೈಕೆ ಮತ್ತು ಹೊಂದಾಣಿಕೆಗೆ ಸಮಯ ಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: NCERT ಪುಸ್ತಕ ವಿವಾದ; ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ ಬರೆದ ಲೇಖಕರಿಗೆ ಸುಪ್ರೀಂ ಕೋರ್ಟ್ ನಿಷೇಧ

ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ಮೊದಲು ಮಗು ಮೂರು ತಿಂಗಳಿಗಿಂತ ದೊಡ್ಡದಾಗಿದ್ದರೆ ದತ್ತು ಪಡೆದ ತಾಯಿಗೆ ಹೆರಿಗೆ ರಜೆಯ ಸೌಲಭ್ಯ ದೊರೆಯುವುದಿಲ್ಲ ಎಂಬ ನಿಯಮವಿತ್ತು. ಈಗ ಮಗುವಿನ ವಯಸ್ಸಿನ ಮಿತಿಯನ್ನು ತೆರವುಗೊಳಿಸಿರುವ ಸುಪ್ರೀಂ ಕೋರ್ಟ್​ ಯಾವುದೇ ವಯೋಮಾನದ ಮಗುವನ್ನು ದತ್ತು ಪಡೆದ ಮಹಿಳೆಯರಿಗೆ ಹೆರಿಗೆ ರಜೆ ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಹಾಗೇ, ಸುಪ್ರೀಂ ಕೋರ್ಟ್ ಪಿತೃತ್ವ ರಜೆಯ ವಿಷಯವನ್ನು ಆಯಾ ಸರ್ಕಾರಕ್ಕೆ ಬಿಡಲಾಗಿದೆ. ತನ್ನ ತೀರ್ಪಿನಲ್ಲಿ ಪಿತೃತ್ವ ರಜೆಗಾಗಿ ಹೊಸ ನಿಯಮಗಳು ಮತ್ತು ಮಾಡಬೇಕಾದ ಯಾವುದೇ ಬದಲಾವಣೆಗಳನ್ನು ಸರ್ಕಾರ ನಿರ್ಧರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us