ಕೊವಿಡ್ 19 ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲಿ ನಮಗೆಲ್ಲ ಮಾತನಾಡಲು ಅವಕಾಶ ಕೊಡಲಿಲ್ಲ. ಈ ಮೂಲಕ ಅವಮಾನ ಮಾಡಿದರು ಎಂದು ಹೇಳಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಬಿಜೆಪಿ ಶಾಸಕ, ಟಿಎಂಸಿ ಮಾಜಿ ನಾಯಕ, ಒಂದು ಕಾಲದಲ್ಲಿ ದೀದಿಯ ಆಪ್ತನೇ ಆಗಿದ್ದ ಸುವೇಂದು ಅಧಿಕಾರಿ ಕಟು ತಿರುಗೇಟು ನೀಡಿದ್ದಾರೆ. ಹಿಂದಿನ ಎಲ್ಲ ಸಭೆಗಳನ್ನೂ ತಪ್ಪಿಸಿಕೊಂಡಿರುವ ಮಮತಾ ಬ್ಯಾನರ್ಜಿ ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲೂ ರಾಜಕೀಯವನ್ನೇ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾತನಾಡಿದ ಮಮತಾ ಬ್ಯಾನರ್ಜಿ ವಿರುದ್ಧ ಟ್ವೀಟ್ ಮಾಡಿರುವ ಸುವೇಂದು ಅಧಿಕಾರಿ, ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಆಡಳಿತದಲ್ಲಿನ ತಮ್ಮ ನಿರಾಸಕ್ತಿಯನ್ನು ಮತ್ತೊಮ್ಮೆ ಪ್ರದರ್ಶನ ಮಾಡಿದ್ದಾರೆ. ಕೊವಿಡ್ 19 ವಿರುದ್ಧ ಹೋರಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ್ದ ಸಭೆಗೂ ರಾಜಕೀಯ ಲೇಪನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಲ್ಲ ರಾಜ್ಯಗಳಲ್ಲಿನ ಕೊರೊನಾ ವೈರಸ್ ಪರಿಸ್ಥಿತಿಯ ಅವಲೋಕನ ಮಾಡಲು ಕಳೆದ ಹಲವು ತಿಂಗಳುಗಳಿಂದಲೂ ಪ್ರಧಾನಿ ನರೇಂದ್ರ ಮೋದಿಯವರು ಕಾಲಕಾಲಕ್ಕೆ ಮುಖ್ಯಮಂತ್ರಿಗಳೊಟ್ಟಿಗೆ ಸಭೆ ನಡೆಸುತ್ತಿದ್ದಾರೆ. ಅದರಲ್ಲಿ ಎಷ್ಟು ಸಭೆಯಲ್ಲಿ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದಾರೆ? ಇಲ್ಲ, ಒಂದರಲ್ಲೂ ಪಾಲ್ಗೊಂಡಿರಲಿಲ್ಲ ಎಂದು ಸುವೇಂದು ಅಧಿಕಾರಿ ವ್ಯಂಗ್ಯವಾಡಿದ್ದಾರೆ.
ಇಂದು ಸಭೆಯ ಬಳಿಕ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ನಮಗೆ ಮಾತನಾಡಲು ಅವಕಾಶ ಕೊಡಲಿಲ್ಲ. ಬಿಜೆಪಿಯ ಕೆಲವು ಸಚಿವರುಗಳಿಗಷ್ಟೇ ಮೀಟಿಂಗ್ನಲ್ಲಿ ಮಾತನಾಡಲು ಸಾಧ್ಯವಾಯಿತು ಎಂದು ಆರೋಪಿಸಿದ್ದರು. ಅಲ್ಲದೆ, ನಾವೆಲ್ಲ ಅವರ ಕೈಗೊಂಬೆಗಳಂತೆ ಕುಳಿತಿರಬೇಕಾಯಿತು ಎಂದೂ ಕಿಡಿಕಾರಿದ್ದರು.
ಇದನ್ನೂ ಓದಿ: ‘ಸಭೆಯಲ್ಲಿ ನಾವೆಲ್ಲ ಅವರ ಕೈಗೊಂಬೆಗಳಂತೆ ಕುಳಿತಿರಬೇಕು..ಇದು ದೊಡ್ಡ ಅವಮಾನ’-ಪ್ರಧಾನಿ ಮೋದಿ ವಿರುದ್ಧ ದೀದಿ ಅಸಮಾಧಾನ
ಮದುವೆಗೆ ಹೋದವರಿಗೆ ಫುಲ್ ಶಾಕ್ ಕೊಟ್ಟ ಪೊಲೀಸರು; ಕಪ್ಪೆಯಂತೆ ಜಿಗಿಯುತ್ತ ವಾಪಸ್ ಬಂದ ಅತಿಥಿಗಳು