ತಮಿಳುನಾಡು ಸಚಿವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ: ಮದ್ರಾಸ್ ಹೈಕೋರ್ಟ್​ ಜಡ್ಜ್​ಗೆ ಸಿಜೆಐ ಶ್ಲಾಘನೆ

ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಕ್ಕಾಗಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಆನಂದ್ ವೆಂಕಟೇಶ್ ಅವರನ್ನು ಶ್ಲಾಘಿಸಿದ ಡಿವೈ ಚಂದ್ರಚೂಡ್ ಶ್ಲಾಘಿಸಿದ್ದಾರೆ. ಆನಂದ್ ವೆಂಕಟೇಶ್ ಅವರಂತಹ ನ್ಯಾಯಾಧೀಶರು ನಮ್ಮಲ್ಲಿ ಇದ್ದಾರೆ, ದೇವರಿಗೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.

ತಮಿಳುನಾಡು ಸಚಿವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ: ಮದ್ರಾಸ್ ಹೈಕೋರ್ಟ್​ ಜಡ್ಜ್​ಗೆ ಸಿಜೆಐ ಶ್ಲಾಘನೆ
ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಆನಂದ್ ವೆಂಕಟೇಶ್

Updated on: Nov 06, 2023 | 5:43 PM

ನವದೆಹಲಿ, ನವೆಂಬರ್ 6: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಉನ್ನತ ಶಿಕ್ಷಣ ಸಚಿವ ಪೊನ್ಮುಡಿ (K Ponmudy) ಮತ್ತು ಅವರ ಪತ್ನಿಯನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ (Madras High Court) ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂ ಕೋರ್ಟ್ (Supreme Court) ಸೋಮವಾರ ನಿರಾಕರಿಸಿದೆ. ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (CJI DY Chandrachud) ಅವರಿದ್ದ ಪೀಠ ವಿಚಾರಣೆಗೆ ನಿರಾಕರಿಸಿದೆ. ಮಾತ್ರವಲ್ಲದೆ, ರಾಜಕೀಯ ಸೂಕ್ಷ್ಮ ವಿಚಾರದಲ್ಲಿ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರನ್ನು ಅಭಿನಂದಿಸಿದೆ.

ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಕ್ಕಾಗಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಆನಂದ್ ವೆಂಕಟೇಶ್ ಅವರನ್ನು ಶ್ಲಾಘಿಸಿದ ಡಿವೈ ಚಂದ್ರಚೂಡ್ ಶ್ಲಾಘಿಸಿದ್ದಾರೆ. ಆನಂದ್ ವೆಂಕಟೇಶ್ ಅವರಂತಹ ನ್ಯಾಯಾಧೀಶರು ನಮ್ಮಲ್ಲಿ ಇದ್ದಾರೆ, ದೇವರಿಗೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.

ನಮ್ಮ ವ್ಯವಸ್ಥೆಯಲ್ಲಿ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರಂತಹ ನ್ಯಾಯಾಧೀಶರಿದ್ದಾರೆ ಎಂಬುದು ಸಂತಸದ ವಿಚಾರ. ಈ ಪ್ರಕರಣದ ವಿಚಾರಣೆಯನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವರ್ಗಾಯಿಸಲಾಗಿತ್ತು ಮತ್ತು ಇದು ಹಾಲಿ ಸಚಿವರನ್ನು ಒಳಗೊಂಡಿತ್ತು ಎಂಬುದನ್ನು ಗಮನಿಸಿ. ಅವರಂತಹ ನ್ಯಾಯಾಧೀಶರು ನಮ್ಮಲ್ಲಿದ್ದಾರೆ, ಇದಕ್ಕಾಗಿ ದೇವರಿಗೆ ಧನ್ಯವಾದಗಳು ಎಂದು ಡಿವೈ ಚಂದ್ರಚೂಡ್ ಅವರು ಹೇಳಿದ್ದಾರೆ. ಪೊನ್ಮುಡಿ ಅವರ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಚಂದ್ರಚೂಡ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಒಬ್ಬ ಜಿಲ್ಲಾ ನ್ಯಾಯಾಧೀಶರಿಂದ ಮತ್ತೊಬ್ಬರಿಗೆ ವರ್ಗಾಯಿಸಲು ಮುಖ್ಯ ನ್ಯಾಯಾಧೀಶರಿಗೆ ಅಧಿಕಾರ ಎಲ್ಲಿದೆ? ಇದು ನ್ಯಾಯಾಂಗ ಆದೇಶವಾಗಿರಬೇಕು. ಹೈಕೋರ್ಟ್ ಏಕ ನ್ಯಾಯಾಧೀಶರು ಇದನ್ನು ಪರಿಶೀಲಿಸುವುದು ಸರಿಯಾಗಿದೆ ಎಂದು ಚಂದ್ರಚೂಡ್ ಹೇಳಿದ್ದಾರೆ.

ಪೊನ್ಮುಡಿ ಅವರು ಹಿರಿಯ ವಕೀಲ ಕಪಿಲ್ ಸಿಬಲ್ ಮೂಲಕ ಮನವಿ ಸಲ್ಲಿಸಿದ್ದರು. ವಾದವನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಖುಲಾಸೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಮತ್ತು ಸಾರ್ವಜನಿಕ ಅಭಿಯೋಜಕರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಧೀಶರ ಮುಂದೆ ವಾದವನ್ನು ಮಂಡಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಸರ್ಕಾರದ ಪರ ಮುಕುಲ್ ರೋಹಟಗಿ ಅವರ ವಾದವನ್ನು ಸ್ವೀಕರಿಸಲೂ ಸುಪ್ರೀಂ ಕೋರ್ಟ್ ನಿರಾಕರಿಸಿತು. ಖುಲಾಸೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಮತ್ತು ಸಾರ್ವಜನಿಕ ಅಭಿಯೋಜಕರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಧೀಶರ ಮುಂದೆ ಎಲ್ಲಾ ವಾದಗಳನ್ನು ಮುಂದಿಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನೂ ಓದಿ: ತಮಿಳುನಾಡು: ಊಟಿ ಪ್ರವಾಸಕ್ಕೆ ಪ್ಲಾನ್ ಮಾಡಿದ್ದೀರಾ? ಆದರೆ ತಕ್ಷಣ ರದ್ದು ಮಾಡಿ, ಏಕೆಂದರೆ..

ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯ (ಡಿವಿಎಸಿ) ಸಲ್ಲಿಸಿದ ಅಕ್ರಮ ಆಸ್ತಿ ಪ್ರಕರಣದಿಂದ ತಮಿಳುನಾಡು ಸಚಿವ ಪೊನ್ಮುಡಿ ಮತ್ತು ಅವರ ಪತ್ನಿಯನ್ನು ಖುಲಾಸೆಗೊಳಿಸಿದ್ದರಲ್ಲಿ ಗಂಭೀರ ಅಕ್ರಮಗಳನ್ನು ಗುರುತಿಸಿದ್ದ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರು ಈ ವರ್ಷದ ಆಗಸ್ಟ್‌ನಲ್ಲಿ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿದ್ದರು. ಅಲ್ಲದೆ, ತಮ್ಮ ತೀರ್ಪಿನಲ್ಲಿ ‘ಇದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಕುಶಲತೆಯಿಂದ ಮತ್ತು ಬುಡಮೇಲು ಮಾಡುವ ಆಘಾತಕಾರಿ ಮತ್ತು ಲೆಕ್ಕಾಚಾರದ ಪ್ರಯತ್ನ’ ಎಂದು ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರು ಉಲ್ಲೇಖಿಸಿದ್ದರು.

ಸಚಿವರ ವಿರುದ್ಧದ ಪ್ರಕರಣವನ್ನು ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ಅವರು ವಿಚಾರಣೆ ನಡೆಸಬಾರದು ಎಂದು ಡಿವಿಎಸಿ ಮತ್ತು ಸಚಿವ ಪೊನ್ಮುಡಿ ಆಕ್ಷೇಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us