ಕಾಂಗ್ರೆಸ್ ಚಾಣಾಕ್ಷನಿಗೆ ಶಾಕ್, ಸೈಬರ್ ಕ್ರೈಂ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಆದೇಶ

| Updated By: ರಮೇಶ್ ಬಿ. ಜವಳಗೇರಾ

Updated on: Jan 03, 2023 | 9:03 PM

ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಅವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಚುನಾವಣಾ ಚಾಣಾಕ್ಷ ಸುನಿಲ್ ಕನುಗೋಳು ಅವರಿಗೆ ಸಂಕಷ್ಟ ಎದುರಾಗಿದೆ.

ಕಾಂಗ್ರೆಸ್ ಚಾಣಾಕ್ಷನಿಗೆ ಶಾಕ್, ಸೈಬರ್ ಕ್ರೈಂ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಆದೇಶ
ರಾಜಕೀಯ ತಂತ್ರಜ್ಞ ಸುನೀಲ್‌ ಕನುಗೋಳು
Image Credit source: Sunil Kanugulu
Follow us on

ಹೈದರಾಬಾದ್: ಸಿಎಂ ಕೆ ಚಂದ್ರಶೇಖರ್ ರಾವ್ (K. Chandrashekar Rao) ಹಾಗೂ ಅವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ರಾಜಕೀಯ ತಂತ್ರಜ್ಞ ಸುನೀಲ್‌ ಕನುಗೋಳು (Sunil Kanugolu) ಅವರಿಗೆ ತೆಲಂಗಾಣ ಹೈಕೋರ್ಟ್ (Telangana High Court) ಸೂಚಿಸಿದೆ.

ಇದನ್ನೂ ಓದಿ: ಚುನಾವಣಾ ತಜ್ಞ ನೀಡಿದ್ದ ವರದಿ ಬಗ್ಗೆ ಡಿಕೆಶಿ-ಸಿದ್ದು ಚರ್ಚೆ,150ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ಕೈ ಸಿದ್ಧತೆ

ಸಿಎಂ ಕೆ ಚಂದ್ರಶೇಖರ್ ರಾವ್ ಹಾಗೂ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪ ಹಿನ್ನಲೆಯಲ್ಲಿ ಜನವರಿ 08ರಂದು ವಿಚಾರಣೆಗೆ ಹಾಜರಾಗುವಂತೆ ಡಿಸೆಂಬರ್ 27 ರಂದು ಸೈಬರ್ ಕ್ರೈಂ ಪೊಲೀಸ್ 41 ಸಿಆರ್‌ಪಿಸಿ ಅಡಿಯಲ್ಲಿ ಸುನೀಲ್‌ ಕನುಗೋಳು ಅವರಿಗೆ ನೋಟಿಸ್ ನೀಡಿತ್ತು. ಆದ್ರೆ, ವಿಚಾರಣೆ ನೋಟಿಸ್​ಗೆ ತಡೆಯಾಜ್ಞೆ ನೀಡುವಂತೆ ಕನುಗೋಳು ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯ ಕನುಗೋಳು ಅರ್ಜಿಯನ್ನು ವಜಾ ಮಾಡಿದ್ದು, ಸೈಬರ್ ಕ್ರೈಮ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ಇಂದು(ಜನವರಿ 03) ಆದೇಶಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು ಡಿಸೆಂಬರ್ 14 ಕನುಗೋಳು ಕಚೇರಿ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಲ್ಯಾಪ್ ಟಾಪ್, ಮೊಬೈಲ್ ಹಾಗೂ ಇತರೆ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು. ಆದ್ರೆ, ಇದೀಗ ತೆಲಂಗಾಣ ಹೈಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ಜನವರಿ 08ರಂದು ಸುನಿಲ್‌ ಕನುಗೋಳು ವಿಚಾರಣೆಗೆ ಹಾಜರಾಗುವುದು ಅನಿವಾರ್ಯವಾಗಿದೆ.

ಸುನೀಲ್ ಕಣಗೋಲು ಯಾರು?

ಮೂಲತಃ ಬಳ್ಳಾರಿಯವರಾದ ಸುನಿಲ್‌ ಕನುಗೋಳು  2014ರಲ್ಲಿ ಖ್ಯಾತ ರಾಜಕೀಯ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ತಂಡದಲ್ಲಿದ್ದರು. ಅನಂತರ ಅವರ ತಂಡದಿಂದ ಹೊರಬಂದಿದ್ದ ಸುನಿಲ್‌ ತಮ್ಮದೇ ಆದ ಸಂಸ್ಥೆ ಸ್ಥಾಪಿಸಿ ರಾಜಕೀಯ ಪಕ್ಷಗಳಿಗೆ ಚುನಾವಣಾ ತಂತ್ರಗಾರಿಕೆ ರೂಪಿಸುವ ಕಾರ್ಯ ಆರಂಭಿಸಿದ್ದರು. ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿ ಬಿಜೆಪಿ ಪರ ತಂತ್ರಗಾರಿಕೆ ನಡೆಸಿದ್ದ ಅವರು ಇತ್ತೀಚೆಗೆ ನಡೆದ ಪಂಜಾಬ್‌ ಚುನಾವಣೆಯಲ್ಲಿ ಅಕಾಲಿದಳದ ಪರ ಚುನಾವಣಾ ತಂತ್ರಗಾರಿಕೆ ಮಾಡಿದ್ದರು.

ಈ ಹಿಂದೆ ಡಿಎಂಕೆ, ಎಐಎಡಿಎಂಕೆ ಮತ್ತು ಬಿಜೆಪಿ ಜೊತೆ ಕೆಲಸ ಮಾಡಿದ್ದ ಸುನಿಲ್‌ ಕನುಗೋಳು ಈಗ ಮುಂಬರುವ ರಾಜ್ಯ ಚುನಾವಣೆಗೆ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಜೊತೆ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗಾಗಿ ಪ್ರತಿ ರಾಜ್ಯ ಚುನಾವಣೆಯನ್ನು ನಿಭಾಯಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಅವರು ಈ ಹಿಂದೆ 2017 ರ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಬಿಜೆಪಿ, ಲೋಕಸಭೆ 2019 ರ ಚುನಾವಣೆಯಲ್ಲಿ ಡಿಎಂಕೆ, ತಮಿಳುನಾಡು 2021 ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಪರವಾಗಿ ಚುನಾವಣಾ ಕಾರ್ಯತಂತ್ರವನ್ನು ನಿಭಾಯಿಸಿದ್ದರು.

ಇತ್ತೀಚೆಗಷ್ಟೇ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪೇ ಸಿಎಂ ಕಾಂಗ್ರೆಸ್​ ಅಭಿಯಾನದ ರೂವಾರಿ ಇದೇ ಸುನಿಲ್‌ ಕನುಗೋಳು. ಅಲ್ಲದೇ ಮುಂದಿನ ವಿಧಾನಸಭೆ ಚುನಾವಣೆಯ ತಂತ್ರಗಾರಿಕೆಗಳನ್ನು ಮಾಡುತ್ತಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:50 pm, Tue, 3 January 23