Operation Polo: ನಿಜಾಮನ ಆಳ್ವಿಕೆಯಲ್ಲಿದ್ದ ಹೈದ್ರಾಬಾದ್ 13 ತಿಂಗಳು ತಡವಾಗಿ ಸ್ವಾತಂತ್ರ್ಯ ಪಡೆಯಿತು! ಯಾಕೆ ಗೊತ್ತಾ?

ಇನ್ನೂ ಹೈದ್ರಾಬಾದ್ ಸಂಸ್ಥಾನ ಸ್ವತಂತ್ರವಾಗಿ ಉಳಿದಿತ್ತು. ಹೀಗಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರು ಕೂಡಾ ಹೈದ್ರಾಬಾದ್ ನಿಜಾಮನ ಆಳ್ವಿಕೆಯಲ್ಲಿದ್ದ ಪ್ರದೇಶದ ಜನರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಆದರೆ ಹೈದ್ರಾಬಾದ ಸಂಸ್ಥಾನದ ಬಹುತೇಕರ ಆಸೆ, ಹೈದ್ರಾಬಾದ ಸಂಸ್ಥಾನ ಕೂಡಾ ಸ್ವತಂತ್ರ ಭಾರತದಲ್ಲಿ ವಿಲೀನವಾಗಬೇಕು, ಇಲ್ಲಿ ಕೂಡಾ ಪ್ರಜಾಪ್ರಭುತ್ವ ಜಾರಿಯಾಗಬೇಕು ಎನ್ನುವುದಾಗಿತ್ತು.

Operation Polo: ನಿಜಾಮನ ಆಳ್ವಿಕೆಯಲ್ಲಿದ್ದ ಹೈದ್ರಾಬಾದ್ 13 ತಿಂಗಳು ತಡವಾಗಿ ಸ್ವಾತಂತ್ರ್ಯ ಪಡೆಯಿತು! ಯಾಕೆ ಗೊತ್ತಾ?
ನಿಜಾಮನ ಆಳ್ವಿಕೆಯಲ್ಲಿದ್ದ ಹೈದ್ರಾಬಾದ್ 13 ತಿಂಗಳು ತಡವಾಗಿ ಸ್ವಾತಂತ್ರ್ಯ ಪಡೆಯಿತು! ಯಾಕೆ ಗೊತ್ತಾ?
Edited By: ಸಾಧು ಶ್ರೀನಾಥ್​

Updated on: Sep 15, 2022 | 6:06 AM

ಕಲಬುರಗಿ: ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು 1947ರ ಆಗಸ್ಟ್ 15ರಂದು. ಈ ವರ್ಷ ದೇಶಾದ್ಯಂತ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಆದರೆ ನಮ್ಮದೇ ದೇಶದ ಮೂರು ರಾಜ್ಯಗಳ ಕೆಲ ಭಾಗದ ಜನರಿಗೆ ಮಾತ್ರ ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದಿನ ಅಲ್ಲ. ಹೌದು ಇದು ಅಚ್ಚರಿಯಾದರು ಕೂಡಾ ಸತ್ಯ. ಹೌದು ಹೈದ್ರಾಬಾದ್ ನಿಜಾಮನ ಆಳ್ವಿಕೆಗೊಳಪಟ್ಟಿದ್ದ ರಾಜ್ಯದ ಕಲ್ಯಾಣ ಕರ್ನಾಟಕ, ಮಹರಾಷ್ಟ್ರದ ಕೆಲವು ಭಾಗ ಮತ್ತು ಈ ಹಿಂದಿನ ಆಂಧ್ರ ಪ್ರದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ದೇಶಕ್ಕೆ ಸ್ವಾತಂತ್ರ್ಯ ದೊರೆತ 13 ತಿಂಗಳ ನಂತರ. ಅಂದರೆ ಸೆಪ್ಟಂಬರ್ 17, 1948 ರಂದು!

ಹೈದ್ರಾಬಾದ್ ನಿಜಾಮನ ಆಳ್ವಿಕೆ, ಸ್ವಾತಂತ್ರ್ಯದ ಹೋರಾಟ

ರಾಜ್ಯದ ಕಲಬುರಗಿ, ಬೀದರ್, ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯ ಜನರಿಗೆ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 13 ತಿಂಗಳುಗಳ ನಂತರ ಸ್ವಾತಂತ್ರ್ಯ ಸಿಕ್ಕಿದೆ. ಇದಕ್ಕೆ ಕಾರಣ ಹೈದ್ರಾಬಾದ್ ನಿಜಾಮ ಮೀರ್ ಉಸ್ಮಾನ್ ಅಲಿ. ಹೌದು ಸ್ವಾತಂತ್ರ್ಯಾನಂತರ ಬಹುತೇಕ ಸಣ್ಣಪುಟ್ಟ ಸಂಸ್ಥಾನಗಳು ದೇಶದಲ್ಲಿ ವಿಲೀನವಾದವು. ಆದರೆ ಹೈದ್ರಾಬಾದ್, ಜುನಾಗಡ, ಕಾಶ್ಮೀರ ಸೇರಿದಂತೆ ಕೆಲ ರಾಜರು ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದ್ದರು. (ವರದಿ -ಸಂಜಯ್ ಚಿಕ್ಕಮಠ)

ಇದಕ್ಕೆ ಕಾರಣ, ದೇಶಕ್ಕೆ ಸ್ವತಂತ್ರ ನೀಡುವಾಗ ಮೌಂಟ್ ಬ್ಯಾಟನ್ ನೀಡಿದ ಅವಕಾಶ. ಹೌದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಸೀಯ ರಾಜರು ಸ್ವತಂತ್ರ ಭಾರತದಲ್ಲಿ ಸೇರಬಹುದು, ಇಲ್ಲವೇ ಸ್ವತಂತ್ರವಾಗಿ ಇರಬಹುದು ಅಂತ ಹೇಳಲಾಗಿತ್ತು. ಇದನ್ನೇ ದುರುಪಯೋಗ ಮಾಡಿಕೊಂಡಿದ್ದ ಹೈದ್ರಾಬಾದ್ ನಿಜಾಮ, ಹೈದ್ರಾಬಾದ್ ಸಂಸ್ಥಾನವನ್ನು ದೇಶದಲ್ಲಿ ವಿಲೀನಗೊಳಿಸದೇ ಸ್ವತಂತ್ರವಾಗಿ ಇರಲು ನಿರ್ಧಾರ ಮಾಡಿದ್ದ.

ಆದರೆ ನಿಜಾಮನ ಇಚ್ಚೆಗೆ ವಿರುದ್ದವಾಗಿದ್ದ ಜನರು

ಇನ್ನೂ ಹೈದ್ರಾಬಾದ್ ಸಂಸ್ಥಾನ ಸ್ವತಂತ್ರವಾಗಿ ಉಳಿದಿತ್ತು. ಹೀಗಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರು ಕೂಡಾ ಹೈದ್ರಾಬಾದ್ ನಿಜಾಮನ ಆಳ್ವಿಕೆಯಲ್ಲಿದ್ದ ಪ್ರದೇಶದ ಜನರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಆದರೆ ಹೈದ್ರಾಬಾದ ಸಂಸ್ಥಾನದ ಬಹುತೇಕರ ಆಸೆ, ಹೈದ್ರಾಬಾದ ಸಂಸ್ಥಾನ ಕೂಡಾ ಸ್ವತಂತ್ರ ಭಾರತದಲ್ಲಿ ವಿಲೀನವಾಗಬೇಕು, ಇಲ್ಲಿ ಕೂಡಾ ಪ್ರಜಾಪ್ರಭುತ್ವ ಜಾರಿಯಾಗಬೇಕು ಎನ್ನುವುದಾಗಿತ್ತು. ಆದರೆ ಹೈದ್ರಾಬಾದ ನಿಜಾಮ ಮಾತ್ರ ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿಬಿಟ್ಟಿದ್ದ. ಹೀಗಾಗಿ ಇಲ್ಲಿನ ಅನೇಕ ಜನ ಸ್ವಾತಂತ್ರ್ಯಕ್ಕಾಗಿ ಮತ್ತೊಮ್ಮೆ ಹೋರಾಟಕ್ಕಿಳಿದರು. ಕಲಬುರಗಿ, ಬೀದರ್, ರಾಯಚೂರು ಸೇರಿದಂತೆ ಈ ಭಾಗದ ಸಾವಿರಾರು ಜನರು ಹೋರಾಟ ಆರಂಭಿಸಿದರು. ಸ್ವಾಮಿ ರಮಾನಂದ ತೀರ್ಥರು ಸೇರಿದಂತೆ ಅನೇಕರು ಹೋರಾಟದ ಮುಂಚೂಣಿಯಲ್ಲಿ ನಿಂತು, ಹೈದ್ರಾಬಾದ್ ನಿಜಾಮನ ವಿರುದ್ದ ಸ್ವಾತಂತ್ರ್ಯ ಹೋರಾಟದ ಕಹಳೆಯನ್ನು ಮೊಳಗಿಸಿದ್ದರು.

ರಜಾಕರ ದಬ್ಬಾಳಿಕೆ

ಇನ್ನು ಹೈದ್ರಾಬಾದ್ ಸಂಸ್ಥಾನವನ್ನು ಭಾರತ ದೇಶದಲ್ಲಿ ಸೇರಿಸಬೇಕು, ನಮಗೂ ಸ್ವಾತಂತ್ರ್ಯ ಬೇಕು ಅಂತ ಹೋರಾಟ ಆರಂಭವಾದಾಗ, ಹೈದ್ರಾಬಾದ್ ನಿಜಾಮ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕಲು ಮುಂದಾದ. ತನ್ನ ಪೊಲೀಸ್ ಬಲವನ್ನು ಉಪಯೋಗಿಸಿ, ಸ್ವಾತಂತ್ರ್ಯ ಹೋರಾಟಗಾರರ ಮೇಲೆ ದಬ್ಬಾಳಿಕೆ ಮಾಡಿದ. ಜೊತೆಗೆ ಹೋರಾಟವನ್ನು ಹತ್ತಿಕ್ಕಲು ಖಾಸಗಿ ಸೈನ್ಯವಾಗಿದ್ದ ಖಾಸಿಂ ರಜವಿಯ ರಜಾಕರನ್ನು ಛೂ ಬಿಟ್ಟ. ರಜಾಕರ ದೌರ್ಜನ್ಯಕ್ಕೆ ಅನೇಕರು ಪ್ರಾಣ ಬಿಟ್ಟರು. ರಜಾಕರ ದಬ್ಬಾಳಿಕೆಯ ನಡುವೆಯೂ ಕೂಡಾ ಹಲವು ಹೋರಾಟಗಾರರು ಪ್ರಾಣದ ಹಂಗು ತೊರದು ಹೋರಾಟವನ್ನು ಮಾಡಿದರು. ಇಷ್ಟಾದರೂ ಹೈದ್ರಾಬಾದ ನಿಜಾಮ ದೇಶದಲ್ಲಿ ವಿಲೀನವಾಗಲಿಕ್ಕೆ ಮುಂದಾಗದೆ ಇದ್ದಾಗ, ಬಲವಂತವಾಗಿ ಹೈದ್ರಾಬಾದ ಸಂಸ್ಥಾನವನ್ನು ಭಾರತ ದೇಶದೊಳಕ್ಕೆ ವಿಲೀನ ಮಾಡಲಿಕ್ಕೆ ಮುಂದಾಗುತ್ತಾರೆ ಅಂದಿನ ಗೃಹ ಸಚಿವ ಸರ್ದಾರ ವಲ್ಲಭ್‌ಭಾಯಿ ಪಟೇಲ್.

ಹೋರಾಟಗಳಿಂದ ನಿಜಾಮ ಬಗ್ಗದಿದ್ದಾಗ ಸರ್ದಾರ ವಲ್ಲಭ್‌ಭಾಯಿ ಪಟೇಲರು ಸೆಪ್ಟಂಬರ್ 13,1948 ಆಪರೇಷನ್ ಪೋಲೋ (Operation Polo) ಎನ್ನುವ ಹೆಸರಿನಲ್ಲಿ ಹೈದ್ರಾಬಾದ ಸಂಸ್ಥಾನವನ್ನು ಭಾರತ ದೇಶದಲ್ಲಿ ವಿಲೀನ ಮಾಡಲಿಕ್ಕೆ ಮುಂದಾದರು. ಹೀಗಾಗಿ ಭಾರತೀಯ ಸೈನ್ಯ ಕಾರ್ಯಚರಣೆಗೆ ಇಳಿಯಿತು. ಆದ್ರೆ ಕಾರ್ಯಚಾರಣೆ ಪ್ರಾರಂಭವಾದ ನಾಲ್ಕೇ ದಿನದಲ್ಲಿ ಯಾವುದೇ ಪ್ರತಿರೋಧವಿಲ್ಲದೆ ಹೈದ್ರಾಬಾದ ನಿಜಾಮ, ಭಾರತ ದೇಶದಲ್ಲಿ ಹೈದ್ರಾಬಾದ್ ಸಂಸ್ಥಾನವನ್ನು ವಿಲೀನ ಮಾಡಲಿಕ್ಕೆ ಒಪ್ಪಿಗೆ ನೀಡಿದ. ಹೀಗಾಗಿ ಸೆಪ್ಟಂಬರ್ 17,1948 ರಂದು ರಾಜ್ಯ ಕಲ್ಯಾಣ ಕರ್ನಾಟಕ, ಮಹರಾಷ್ಟ್ರದ ಕೆಲವು ಭಾಗ, ಮತ್ತು ಆಂಧ್ರ ಪ್ರದೇಶದ ಜನರು ಸ್ವತಂತ್ರವಾದರು. ತಮಗೆ ಸ್ವಾತಂತ್ರ್ಯ ಸಿಕ್ಕ ದಿನವನ್ನು ಜನ ವಿಮೋಚನಾ ದಿನಾಚಾರಣೆ ಅಂತ ಆಚರಿಸುತ್ತಾ ಬಂದಿದ್ದಾರೆ. 2019 ರಿಂದ ವಿಮೋಚನಾ ದಿನದ ಬದಲಾಗಿ, ಕಲ್ಯಾಣ ಕರ್ನಾಟಕ ಉತ್ಸವ ದಿನ ಅಂತ ಆಚರಿಸಲಾಗುತ್ತಿದೆ.

ಕಲ್ಯಾಣ ಕರ್ನಾಟಕ ಭಾಗಕ್ಕೆ 13 ತಿಂಗಳು ತಡವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಈ ಭಾಗದ ಸ್ವಾತಂತ್ರ್ಯಕ್ಕಾಗಿ ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಅನೇಕ ಹೋರಾಟಗಳು ನಡೆದಿದ್ದವು. ಸರ್ದಾರ ವಲ್ಲಭ್‌ಭಾಯಿ ಪಟೇಲ್ ಅವರ ಗಟ್ಟಿ ನಿರ್ಧಾರದ ಫಲವಾಗಿ, ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಹೈದ್ರಾಬಾದ್ ನಿಜಾಮನ ಆಳ್ವಿಕೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಯಾಗಿರಲಿಲ್ಲ. ಈಗಲು ಕೂಡಾ ಈ ಭಾಗದ ಸರ್ವಾಂಗೀಣ ಅಭಿವೃದ್ದಿಯಾಗಿಲ್ಲಾ. ಸರ್ಕಾರ ಈ ಭಾಗದ ಅಭಿವೃದ್ದಿಗಾಗಿ ಇನ್ನಷ್ಟು ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ಹೈದ್ರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ್ ದಸ್ತಿ.

Web contact

TV9 Kannada

Read More
Follow Us