ಡಿವೈಡರ್‌ಗೆ ಡಿಕ್ಕಿಯಾಗಿ ಧಗಧಗ ಹೊತ್ತಿ ಉರಿದ ಕಾರು: ತೆಲಂಗಾಣದ ಖ್ಯಾತ ನ್ಯೂರೋಸರ್ಜನ್ ಜಗದೀಶ್ ಸಜೀವ ದಹನ

ತೆಲಂಗಾಣದ ಸೂರ್ಯಪೇಟೆಯಲ್ಲಿ ಖ್ಯಾತ ನರಶಸ್ತ್ರಚಿಕಿತ್ಸಕ ಡಾ. ಜಗದೀಶ್ ಅವರು ಕಾರು ಅಪಘಾತದಲ್ಲಿ ಸಜೀವ ದಹನವಾಗಿದ್ದಾರೆ. ವೇಗವಾಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ವೋಲ್ವೋ ಕಾರು ಬೆಂಕಿ ಹೊತ್ತಿಕೊಂಡ ಪರಿಣಾಮ ಅವರು ಹೊರಬರಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ. ಆಧುನಿಕ ಕಾರುಗಳಲ್ಲಿನ ಸೆಂಟ್ರಲ್ ಲಾಕಿಂಗ್ ವ್ಯವಸ್ಥೆ ಮತ್ತು ತುರ್ತು ಸುರಕ್ಷತಾ ಸಾಧನಗಳ ಕೊರತೆ ಇಂತಹ ದುರಂತಗಳಿಗೆ ಕಾರಣವಾಗಬಹುದು ಎಂದು ಈ ಘಟನೆ ಎಚ್ಚರಿಸುತ್ತದೆ.

ಡಿವೈಡರ್‌ಗೆ ಡಿಕ್ಕಿಯಾಗಿ ಧಗಧಗ ಹೊತ್ತಿ ಉರಿದ  ಕಾರು: ತೆಲಂಗಾಣದ ಖ್ಯಾತ ನ್ಯೂರೋಸರ್ಜನ್ ಜಗದೀಶ್ ಸಜೀವ ದಹನ
ಕಾರು ಬೆಂಕಿ
Image Credit source: Screen shot Taken from TV9 Telugu Video

Updated on: Sep 20, 2026 | 2:54 PM

ಸೂರ್ಯಪೇಟೆ, ಸೆಪ್ಟೆಂಬರ್ 20: ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಖಮ್ಮಂ-ಹೈದರಾಬಾದ್ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಐಷಾರಾಮಿ ವೋಲ್ವೋ ಕಾರು ರಸ್ತೆ ವಿಭಜಕಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ ಕಾರಿನೊಳಗೆ ಸಿಲುಕಿಕೊಂಡಿದ್ದ ಖ್ಯಾತ ನರಶಸ್ತ್ರಚಿಕಿತ್ಸಕ ಡಾ. ಕಸಕುರ್ತಿ ಜಗದೀಶ್ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.
ಸೂರ್ಯಪೇಟೆಯ ಪಿಲ್ಲಾಲಮರ್ರಿ ಸಮೀಪ ಬೆಳಗ್ಗೆ ಸುಮಾರು 7.15 ಕ್ಕೆ ಈ ದುರಂತ ಸಂಭವಿಸಿದೆ. ಅತಿವೇಗದಲ್ಲಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಇಂಧನ ಟ್ಯಾಂಕ್ ಅಥವಾ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ವೇಗವಾಗಿ ಇಡೀ ಕಾರನ್ನು ಆವರಿಸಿದೆ.

ಮೃತ ವೈದ್ಯರ ಗುರುತು: ವಾಹನದ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಮೃತರನ್ನು ಖಮ್ಮಂನ ಪ್ರಸಿದ್ಧ ‘ಮಮತಾ ಜನರಲ್ ಆಸ್ಪತ್ರೆ’ಯ ನರಶಸ್ತ್ರಚಿಕಿತ್ಸಕ ಡಾ. ಕಸಕುರ್ತಿ ಜಗದೀಶ್ ಎಂದು ಗುರುತಿಸಲಾಗಿದೆ. ಅವರು ಕರ್ತವ್ಯ ಮುಗಿಸಿ ಹೈದರಾಬಾದ್‌ನಲ್ಲಿರುವ ತಮ್ಮ ಕುಟುಂಬವನ್ನು ಭೇಟಿ ಮಾಡಲು ತೆರಳುತ್ತಿದ್ದರು.

ರಸ್ತೆಯಲ್ಲಿ ಕಾರು ಬೆಂಕಿಗೆ ಆಹುತಿಯಾಗುತ್ತಿರುವುದನ್ನು ಕಂಡ ದಾರಿಹೋಕರು ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಆದರೆ ಅಗ್ನಿಶಾಮಕ ವಾಹನ ಸ್ಥಳಕ್ಕೆ ತಲುಪುವಷ್ಟರಲ್ಲೇ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು. ನೈಟ್ ಡ್ಯೂಟಿ ಮುಗಿಸಿ ಮುಂಜಾನೆ ಪ್ರಯಾಣಿಸುತ್ತಿದ್ದ ವೇಳೆ ವೈದ್ಯರಿಗೆ ನಿದ್ರೆ ಮಂಪರು ಆವರಿಸಿದ್ದೇ ನಿಯಂತ್ರಣ ತಪ್ಪಲು ಕಾರಣವಾಗಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಮತ್ತಷ್ಟು ಓದಿ: ಡಿವೈಡರ್‌ಗೆ ಡಿಕ್ಕಿಯಾಗಿ ಸೇತುವೆ ಮೇಲಿಂದ ಹಾರಿದ ಕಾರು: ಮುಂಜಾನೆಯ ಮೋಜು ತಂದ ದುರಂತ, ಮೂವರು ಸಾವು, ಓರ್ವ ಗಂಭೀರ

ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಅಪಾಯ: ಆಧುನಿಕ ಐಷಾರಾಮಿ ವಾಹನಗಳು ಅಪಘಾತಕ್ಕೀಡಾದಾಗ ಅಥವಾ ಶಾರ್ಟ್ ಸರ್ಕ್ಯೂಟ್ ಸಂಭವಿಸಿದಾಗ ಎಲೆಕ್ಟ್ರಿಕಲ್ ವೈರಿಂಗ್ ಸುಟ್ಟು ಹೋಗಿ ‘ಸೆಂಟ್ರಲ್ ಲಾಕಿಂಗ್ ಸಿಸ್ಟಮ್’ ಜಾಮ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದಾಗಿ ಚಾಲಕರಿಗೆ ಬಾಗಿಲು ಅಥವಾ ಕಿಟಕಿಗಳನ್ನು ತೆರೆದು ಹೊರಬರಲು ಸಾಧ್ಯವಾಗದೆ ಇಂತಹ ದುರಂತಗಳು ಸಂಭವಿಸುತ್ತವೆ.

ವಿಡಿಯೋ

ತುರ್ತು ಸುರಕ್ಷತಾ ಸಾಧನಗಳ ಬಳಕೆ: ಹೆದ್ದಾರಿಗಳಲ್ಲಿ ದೂರ ಪ್ರಯಾಣ ಮಾಡುವ ವಾಹನ ಸವಾರರು ಕಾರಿನೊಳಗೆ ಸಣ್ಣ ಗಾತ್ರದ ವಿಂಡೋ ಗ್ಲಾಸ್ ಬ್ರೇಕರ್ ಮತ್ತು ಸೀಟ್‌ಬೆಲ್ಟ್ ಕಟರ್ ಇಟ್ಟುಕೊಳ್ಳುವುದು ಇಂತಹ ಸಂದರ್ಭಗಳಲ್ಲಿ ಜೀವ ರಕ್ಷಣೆಗೆ ಅತ್ಯಗತ್ಯ.

ವಿಧಿವಿಜ್ಞಾನ ತಪಾಸಣೆ: ಸೂರ್ಯಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಕಾರಿನ ಅವಶೇಷಗಳು ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಿ ಡಿಎನ್‌ಎ (DNA) ದೃಢೀಕರಣಕ್ಕಾಗಿ ರವಾನಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us