ಬಿಎಸ್ಪಿಯಲ್ಲಿ ಮಾಯಾವತಿ ಕುಟುಂಬ ರಾಜಕೀಯಕ್ಕೆ ಬಿಗ್ ಟ್ವಿಸ್ಟ್: ಆಕಾಶ್ಗೆ ಗೇಟ್ಪಾಸ್, ಕಿರಿಯ ಸಹೋದರನ ಪುತ್ರ ಇಶಾನ್ ಆನಂದ್ಗೆ ಪ್ರಮುಖ ಹೊಣೆ
ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕುಟುಂಬ ರಾಜಕೀಯದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಆಕಾಶ್ ಆನಂದ್ರನ್ನು ಪಕ್ಷದ ಜವಾಬ್ದಾರಿಗಳಿಂದ ದೂರವಿಟ್ಟು, ಕಿರಿಯ ಸಹೋದರನ ಪುತ್ರ ಇಶಾನ್ ಆನಂದ್ಗೆ ಪ್ರಮುಖ ಸ್ಥಾನ ನೀಡಿದ್ದಾರೆ. ಪಕ್ಷದ ಹಿತಾಸಕ್ತಿ ಮತ್ತು ಕಾನ್ಶಿರಾಮ್, ಅಂಬೇಡ್ಕರ್ ತತ್ವಗಳಿಗೆ ಒತ್ತು ನೀಡಿರುವ ಮಾಯಾವತಿ, ಸ್ವಜನಪಕ್ಷಪಾತಕ್ಕೆ ಅವಕಾಶವಿಲ್ಲ ಎಂದಿದ್ದಾರೆ. ಸೆಪ್ಟೆಂಬರ್ 23 ರಂದು ಪಕ್ಷದ ರಾಷ್ಟ್ರೀಯ ಸಭೆ ನಿಗದಿಯಾಗಿದ್ದು, ಬಿಎಸ್ಪಿಯ ಭವಿಷ್ಯದ ಬಗ್ಗೆ ಚರ್ಚಿಸಲಿದೆ.

ಲಕ್ನೋ, ಸೆಪ್ಟೆಂಬರ್ 20: ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಅವರು ಪಕ್ಷದ ಸಂಘಟನಾ ನಾಯಕತ್ವದಲ್ಲಿ ಮಹತ್ವದ ಹಾಗೂ ಅಚ್ಚರಿಯ ಬದಲಾವಣೆ ಘೋಷಿಸಿದ್ದಾರೆ. ಈ ಹಿಂದೆ ತಮ್ಮ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಆಕಾಶ್ ಆನಂದ್ ಮತ್ತು ಅವರ ಸಹೋದರಿಯನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಸಂಪೂರ್ಣವಾಗಿ ದೂರವಿಡಲು ನಿರ್ಧರಿಸಿದ್ದು, ಅವರ ಸಹೋದರ ಇಶಾನ್ ಆನಂದ್ ಅವರಿಗೆ ಪಕ್ಷದಲ್ಲಿ ಗೌರವಾನ್ವಿತ ಸ್ಥಾನಮಾನ ನೀಡುವುದಾಗಿ ತಿಳಿಸಿದ್ದಾರೆ. ಕುಟುಂಬ ವ್ಯಾಮೋಹಕ್ಕಿಂತ ಪಕ್ಷ ಮತ್ತು ಬಹುಜನ ಚಳವಳಿಯ ಹಿತಾಸಕ್ತಿಯೇ ತಮಗೆ ಮುಖ್ಯ ಎಂದು ಹೇಳಿರುವ ಮಾಯಾವತಿ, ಇದಕ್ಕಾಗಿ ತಾನು ಎಂತಹ ಕಠಿಣ ಹೆಜ್ಜೆಯನ್ನಾದರೂ ಇಡಲು ಸಿದ್ಧ ಎಂದಿದ್ದಾರೆ.
ಆಕಾಶ್ ಆನಂದ್ ವಿರುದ್ಧ ಗಂಭೀರ ಅಸಮಾಧಾನ: ಮದುವೆಯ ನಂತರ ಆಕಾಶ್ ಅವರ ವರ್ತನೆ ಸಂಪೂರ್ಣ ಬದಲಾಗಿದೆ. ಅವರು ತಮ್ಮ ಮಾವ (ಹೆಂಡತಿಯ ತಂದೆ) ಅಶೋಕ್ ಸಿದ್ಧಾರ್ಥ್ ಅವರ ಪ್ರಭಾವಕ್ಕೆ ಪೂರ್ಣವಾಗಿ ಒಳಗಾಗಿದ್ದಾರೆ ಎಂದು ಮಾಯಾವತಿ ದೂರಿದ್ದಾರೆ. ಅಂತಹ ವ್ಯಕ್ತಿಯನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದು ಚಳವಳಿಗೆ ದ್ರೋಹ ಬಗೆದಂತೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಿರಿಯ ಸಹೋದರ ಆನಂದ್ ಕುಮಾರ್ ಅವರ ಮತ್ತೊಬ್ಬ ಪುತ್ರ ಇಶಾನ್ ಆನಂದ್ ಅವರನ್ನು ಸಂಘಟನಾ ಜವಾಬ್ದಾರಿಗೆ ತರಲಾಗುತ್ತಿದೆ. ಆದರೆ, ಇಶಾನ್ ಅವರ ಭವಿಷ್ಯ ಅವರ ನಡವಳಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಅವರೇನಾದರೂ ಪಕ್ಷವಿರೋಧಿ ಚಟುವಟಿಕೆ ನಡೆಸಿದರೆ ಅವರನ್ನೂ ವಜಾಗೊಳಿಸಿ, ಕುಟುಂಬದ ಸದಸ್ಯರ ಬದಲು ಸಮರ್ಪಿತ ದಲಿತ ಕಾರ್ಯಕರ್ತನಿಗೆ ಆ ಸ್ಥಾನ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಪೋಸ್ಟ್
1. आज मेरा पुनः पार्टी के लोगों से यही कहना है कि मेरे ख़ुद के अनुभव को मद्देनज़र रखते हुये यदि इनको राजनीति में कामयाब होना है और समाज के लिए कुछ करना है तो उन्हें मेरी तरह अपने भाई-बहिनों व नज़दीकी रिश्ते-नातों आदि के मोह से ऊपर उठकर अपनी पूरी ईमानदारी व निष्ठा से कार्य करना…
— Mayawati (@Mayawati) September 20, 2026
ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಮ್ ಅವರು ಸಂಬಂಧಿಕರನ್ನು ರಾಜಕೀಯ ಲಾಭಗಳಿಂದ ದೂರವಿಟ್ಟ ಮಾದರಿಯನ್ನು ಮಾಯಾವತಿ ನೆನಪಿಸಿಕೊಂಡಿದ್ದಾರೆ. ಅಲ್ಲದೆ, 1956 ರಲ್ಲಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ‘ಬುದ್ಧ ಭೂಷಣ್ ಪ್ರೆಸ್’ ಲೆಕ್ಕಪತ್ರ ವಿಚಾರದಲ್ಲಿ ತಮ್ಮ ಸ್ವಂತ ಮಗ ಯಶವಂತ್ ಅಂಬೇಡ್ಕರ್ ಅವರಿಗೆ ಕಟುವಾಗಿ ಬರೆದ ಪತ್ರವನ್ನು ಉಲ್ಲೇಖಿಸಿ, ಸಾರ್ವಜನಿಕ ಆಸ್ತಿ ಮತ್ತು ಪಕ್ಷದ ವಿಚಾರದಲ್ಲಿ ಸ್ವಜನಪಕ್ಷಪಾತಕ್ಕೆ ಜಾಗವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಸೆಪ್ಟೆಂಬರ್ 23 ರಂದು ಮಹತ್ವದ ರಾಷ್ಟ್ರೀಯ ಸಭೆ: ಪಕ್ಷದ ಪುನಶ್ಚೇತನ, ಪ್ರಸ್ತುತ ಸಾಂಸ್ಥಿಕ ಸವಾಲುಗಳು ಮತ್ತು ರಾಷ್ಟ್ರೀಯ ವಿದ್ಯಮಾನಗಳ ಕುರಿತು ಚರ್ಚಿಸಲು ಸೆಪ್ಟೆಂಬರ್ 23 ರಂದು ಬಿಎಸ್ಪಿಯ ಅಖಿಲ ಭಾರತ ಮಟ್ಟದ ಸಭೆಯನ್ನು ಕರೆಯಲಾಗಿದೆ.
ಮತ್ತಷ್ಟು ಓದಿ: ಬಿಎಸ್ಪಿಯಿಂದ ಆಕಾಶ್ ಆನಂದ್ರನ್ನು ಮಾಯಾವತಿ ಮತ್ತೆ ಹೊರಹಾಕಿದ್ದೇಕೆ?
ಆಕಾಶ್ ಆನಂದ್ ಹಿಂದಿನ ವಿವಾದ: 2024 ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಆಕಾಶ್ ಆನಂದ್ ಆಡಳಿತಾರೂಢ ಬಿಜೆಪಿ ವಿರುದ್ಧ ನೀಡಿದ್ದ ಆಕ್ರಮಣಕಾರಿ ಭಾಷಣಗಳ ಹಿನ್ನೆಲೆಯಲ್ಲಿ ಅವರ ಮೇಲೆ ಕೇಸ್ ದಾಖಲಾಗಿತ್ತು. ಆ ಬೆನ್ನಲ್ಲೇ ಮಾಯಾವತಿ ಅವರು ಆಕಾಶ್ ಅವರನ್ನು ಅಪಕ್ವ ನಾಯಕನೆಂದು ಕರೆದು ರಾಷ್ಟ್ರೀಯ ಸಂಯೋಜಕ ಹುದ್ದೆ ಮತ್ತು ಉತ್ತರಾಧಿಕಾರಿ ಸ್ಥಾನದಿಂದ ವಜಾಗೊಳಿಸಿದ್ದರು.
ಬಿಎಸ್ಪಿ ಎದುರಿಸುತ್ತಿರುವ ಅಸ್ತಿತ್ವದ ಸವಾಲು: ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತ ಸತತ ಚುನಾವಣೆಗಳಲ್ಲಿ ಬಿಎಸ್ಪಿಯ ಮತಬ್ಯಾಂಕ್ ಕುಸಿಯುತ್ತಿದ್ದು, ಪಕ್ಷದ ದಲಿತ ಯುವ ಮತದಾರರು ಆಜಾದ್ ಸಮಾಜ್ ಪಕ್ಷದ (ಚಂದ್ರಶೇಖರ್ ಆಜಾದ್) ಕಡೆಗೆ ವಾಲುತ್ತಿರುವ ಸಂದರ್ಭದಲ್ಲಿ ಯುವ ನಾಯಕತ್ವದ ಹುಡುಕಾಟ ಮಾಯಾವತಿಯವರಿಗೆ ಅನಿವಾರ್ಯವಾಗಿದೆ.
ಉತ್ತರಾಧಿಕಾರಿ ಗೊಂದಲ: ಈ ಹಿಂದೆ ಆಕಾಶ್ ಆನಂದ್ ಅವರನ್ನು ಬೆಳೆಸಿ ನಂತರ ಕೆಳಗಿಳಿಸಿದಂತೆಯೇ, ಈಗ ಇಶಾನ್ ಆನಂದ್ ಅವರನ್ನು ಮುಂಚೂಣಿಗೆ ತರುತ್ತಿರುವುದು ಬಿಎಸ್ಪಿ ಕಾರ್ಯಕರ್ತರಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದು, ಸೆಪ್ಟೆಂಬರ್ 23 ರ ಸಭೆಯಲ್ಲಿ ಇಶಾನ್ ಅವರಿಗೆ ಯಾವ ನಿರ್ದಿಷ್ಟ ಹುದ್ದೆ ಸಿಗಲಿದೆ ಎಂಬುದು ನಿರ್ಧಾರವಾಗಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




