AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಆಸ್ತಿಯ ಹಕ್ಕು: ನಿಮ್ಮ ಮಾಲೀಕತ್ವ ಸಂಪೂರ್ಣವೇ? ವಿಧಿ 300A, ಭೂಸ್ವಾಧೀನ ನಿಯಮಗಳನ್ನು ತಿಳಿದಿರಿ

Santosh Nair's article in 'Your India' series: ಭಾರತದಲ್ಲಿ ಆಸ್ತಿಯ ಹಕ್ಕು ಸಂಪೂರ್ಣವಲ್ಲ. ಸಂವಿಧಾನದ ವಿಧಿ 300A ಅಡಿಯಲ್ಲಿ ರಕ್ಷಿತವಾಗಿದ್ದರೂ, ಸರ್ಕಾರವು ಸಾರ್ವಜನಿಕ ಉದ್ದೇಶಕ್ಕಾಗಿ 'ಎಮಿನೆಂಟ್ ಡೊಮೇನ್' ಬಳಸಿ ನ್ಯಾಯಯುತ ಪರಿಹಾರದೊಂದಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳಬಹುದು. ನದಿಗಳು, ಅರಣ್ಯಗಳಂತಹ ಸಂಪನ್ಮೂಲಗಳಿಗೆ 'ಪಬ್ಲಿಕ್ ಟ್ರಸ್ಟ್ ತತ್ವ' ಅನ್ವಯಿಸುತ್ತದೆ, ಅಲ್ಲಿ ಸರ್ಕಾರ ಕೇವಲ ಧರ್ಮದರ್ಶಿ. ನಿಜವಾದ ಮಾಲೀಕತ್ವವು ಬಹುಸ್ತರೀಯವಾಗಿದ್ದು, ಯಾರೊಬ್ಬರೂ ಸಂಪೂರ್ಣ ಮಾಲೀಕರಲ್ಲ, ಬದಲಿಗೆ ಸಂವಿಧಾನದ ಚೌಕಟ್ಟಿನೊಳಗೆ ಹಕ್ಕುಗಳು ಕಾರ್ಯನಿರ್ವಹಿಸುತ್ತವೆ.

ಭಾರತದಲ್ಲಿ ಆಸ್ತಿಯ ಹಕ್ಕು: ನಿಮ್ಮ ಮಾಲೀಕತ್ವ ಸಂಪೂರ್ಣವೇ? ವಿಧಿ 300A, ಭೂಸ್ವಾಧೀನ ನಿಯಮಗಳನ್ನು ತಿಳಿದಿರಿ
ಸಾಂದರ್ಭಿಕ ಚಿತ್ರImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 20, 2026 | 1:23 PM

Share

ಯಾರೋ ಒಬ್ಬರು ಸಣ್ಣ ಜಮೀನನ್ನು ಖರೀದಿಸುತ್ತಾರೆ. ನೋಂದಣಿ ಕಚೇರಿಯು ಪತ್ರಗಳಿಗೆ ಮೊಹರು ಹಾಕುತ್ತದೆ, ಕ್ರಯಪತ್ರವು ಕೈ ಬದಲಾಗುತ್ತದೆ ಮತ್ತು ತಮ್ಮ ಜೀವನದಲ್ಲೇ ಮೊದಲ ಬಾರಿಗೆ, ಅವರು ಭೂಮಿಯ ಆ ತುಂಡನ್ನು ತೋರಿಸಿ: “ಇದು ನನ್ನದು” ಎಂದು ಹೇಳಬಹುದು.

ಇದು ಪರಿಪೂರ್ಣ ಮತ್ತು ಸಂಪೂರ್ಣವಾದ ಹಕ್ಕು ಎಂದು ಭಾಸವಾಗುತ್ತದೆ. ಆದರೆ ಅದು ಹೌದು, ಮತ್ತು ಪೂರ್ತಿಯಾಗಿ ಅಲ್ಲ!

ಆ ಸಾಮಾನ್ಯ ವಹಿವಾಟಿನ ಅಡಿಯಲ್ಲಿ ಹೆಚ್ಚಿನ ಖರೀದಿದಾರರು ಎಂದಿಗೂ ಯೋಚಿಸದ/ಕೇಳದ ಒಂದು ಕಾನೂನು ಚೌಕಟ್ಟು ಅಡಗಿದೆ. ಅವರು ಹೊಂದಿರುವುದು ಸಂವಿಧಾನದ ‘ವಿಧಿ 300A’ ರ ಅಡಿಯಲ್ಲಿ ನೀಡಲಾದ ಆಸ್ತಿಯ ಹಕ್ಕನ್ನು ಮಾತ್ರ — ಮತ್ತು ಆ “ಸಂವಿಧಾನಾತ್ಮಕ ಹಕ್ಕು” ಎಂಬ ಪದವು ಬಹಳ ಜಾಗರೂಕತೆಯಿಂದ ಕೆಲಸ ಮಾಡುತ್ತಿದೆ. ಇದು ಹಿಂದೆ ಇನ್ನೂ ಹೆಚ್ಚು ಬಲವಾಗಿತ್ತು. 1978 ರವರೆಗೆ, ಆಸ್ತಿಯ ಹಕ್ಕು ಸಂವಿಧಾನದ ‘ಮೂಲಭೂತ ಹಕ್ಕುಗಳ’ ಭಾಗವಾಗಿತ್ತು, ಅಂದರೆ ವಾಕ್ ಸ್ವಾತಂತ್ರ್ಯ ಮತ್ತು ಸಮಾನತೆಯ ಹಕ್ಕಿನಂತೆ, ಒಬ್ಬ ಪ್ರಜೆಯು ಹೊಂದಬಹುದಾದ ಅತ್ಯಂತ ರಕ್ಷಿತ ಹಕ್ಕುಗಳಲ್ಲಿ ಒಂದಾಗಿತ್ತು. ಆ ವರ್ಷ, 44ನೇ ಸಂವಿಧಾನ ತಿದ್ದುಪಡಿ ಅದನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ನಿಶ್ಯಬ್ದವಾಗಿ ಹೊರಹಾಕಿತು. ಆಸ್ತಿಯನ್ನು ಇಂದಿಗೂ ಕಾನೂನಿನ ಮೂಲಕ ರಕ್ಷಿಸಲಾಗಿದೆ ಮತ್ತು ಸೂಕ್ತ ಪರಿಹಾರವನ್ನು ನೀಡದೆ ಕಾನೂನುಬದ್ಧ ಅಧಿಕಾರವಿಲ್ಲದೆ ಯಾರಿಂದಲೂ ಅದನ್ನು ಕಸಿದುಕೊಳ್ಳಲಾಗುವುದಿಲ್ಲ. ಆದರೆ ಅದು ಹಿಂದೆ ಇದ್ದಂತೆ ತಟ್ಟಲಾಗದ (ಅಸ್ಪೃಶ್ಯ) ಹಕ್ಕಾಗಿ ಉಳಿದಿಲ್ಲ. ಸರ್ಕಾರವು ಮಾನ್ಯವಾದ ಕಾನೂನಿನ ಮೂಲಕ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಅದನ್ನು ಮರಳಿ ಪಡೆಯಬಹುದು.

ಆ ಅಧಿಕಾರಕ್ಕೊಂದು ಹೆಸರಿದೆ: ಎಮಿನೆಂಟ್ ಡೊಮೇನ್ (Eminent domain – ಸರ್ಕಾರದ ಭೂಸ್ವಾಧೀನ ಅಧಿಕಾರ). 2013 ರ ‘ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ವ್ಯವಸ್ಥಾಪನೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಕಾಯ್ದೆ’ಯನ್ನು ಅನುಸರಿಸಿ, ಕಾನೂನು ಪ್ರಕಾರ ನ್ಯಾಯಯುತ ಪರಿಹಾರವನ್ನು ಪಾವತಿಸುವ ಷರತ್ತಿಗೆ ಒಳಪಟ್ಟು, ಹೈವೇಗಾಗಿ ರೈತನ ಹೊಲವನ್ನು ಅಥವಾ ಮೆಟ್ರೋ ಮಾರ್ಗಕ್ಕಾಗಿ ಕುಟುಂಬದ ಮನೆಯನ್ನು ಸರ್ಕಾರ ವಶಪಡಿಸಿಕೊಳ್ಳಲು ಅವಕಾಶ ನೀಡುವುದು ಇದೇ ತತ್ವ. ಸುಪ್ರೀಂ ಕೋರ್ಟ್ ಆ ವಾಕ್ಯದ ದ್ವಿತೀಯಾರ್ಧವನ್ನು ಪದೇ ಪದೇ ಒತ್ತಿ ಹೇಳಿದೆ. ಸಾರ್ವಜನಿಕ ಉದ್ದೇಶ ಎಷ್ಟು ಪ್ರಶಂಸನೀಯವಾಗಿದ್ದರೂ ಸಹ, ಕಾರ್ಯಾಂಗವು ನಿರ್ದಿಷ್ಟ ಕಾನೂನು ಅಧಿಕಾರ ಮತ್ತು ನ್ಯಾಯಯುತ ಪರಿಹಾರ ಪಾವತಿಯಿಲ್ಲದೆ ಆಸ್ತಿಯನ್ನು ಸರಳವಾಗಿ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ, ಮತ್ತು ಅಗತ್ಯಬಿದ್ದರೆ ಅದನ್ನು ನ್ಯಾಯಾಲಯದಲ್ಲಿ ಸವಾಲು ಮಾಡಬಹುದು.

ಇದನ್ನೂ ಓದಿ: ಭಾರತೀಯ ಪೌರತ್ವ ಕಾನೂನು: ವಿಕಾಸ, ವಿಧಗಳು ಮತ್ತು CAA 2019 ವಿವರಣೆ

ಆದ್ದರಿಂದ ಈಗಾಗಲೇ, ಭಾರತದಲ್ಲಿ ‘ಮಾಲೀಕತ್ವ’ ಎಂಬುದು ಒಂದು ಷರತ್ತಿನೊಂದಿಗೆ ಬರುತ್ತದೆ. ನಿಮ್ಮ ಜಮೀನಿಗೆ ಸರ್ಕಾರವೇ ಮಾಲೀಕನಲ್ಲ. ಆದರೆ ನ್ಯಾಯಾಲಯಗಳು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುವ ಷರತ್ತುಗಳ ಅಡಿಯಲ್ಲಿ, ಮಾಲೀಕನಾಗುವ ಅಧಿಕಾರವನ್ನು ಅದು ಕಾಯ್ದುಕೊಂಡಿದೆ.

ಇನ್ನೂ ವಿಶಾಲವಾದ ದೃಷ್ಟಿಕೋನದಿಂದ ನೋಡಿದಾಗ ಮತ್ತೊಂದು ವಿಚಿತ್ರ ವಿಷಯ ಗೋಚರಿಸುತ್ತದೆ. ನದಿಗಳು, ಅರಣ್ಯಗಳು, ಕರಾವಳಿ, ಗಾಳಿ — ಸಾಮಾನ್ಯ ಅರ್ಥದಲ್ಲಿ “ಮಾಲೀಕತ್ವ” ಎಂಬ ಪದವನ್ನು ಬಳಸುವಂತೆ ಇವುಗಳನ್ನು ಯಾರೂ ಹೊಂದಿಲ್ಲ. ಭಾರತೀಯ ನ್ಯಾಯಾಲಯಗಳು ಈ ಖಾಲಿ ಜಾಗದ ಸುತ್ತಲೂ ‘ಪಬ್ಲಿಕ್ ಟ್ರಸ್ಟ್ ಡಾಕ್ಟ್ರಿನ್’ (Public Trust Doctrine – ಸಾರ್ವಜನಿಕ ಟ್ರಸ್ಟ್ ತತ್ವ) ಎಂಬ ಸಿದ್ಧಾಂತವನ್ನು ನಿರ್ಮಿಸಿವೆ. ಕೆಲವು ಸಂಪನ್ಮೂಲಗಳು ಸಾರ್ವಜನಿಕ ಜೀವನಕ್ಕೆ ಎಷ್ಟು ಮೂಲಭೂತವಾಗಿವೆ ಎಂದರೆ ಸರ್ಕಾರವೂ ಅವುಗಳ ಮಾಲೀಕನಲ್ಲ. ಸರ್ಕಾರವು ಪ್ರತಿಯೊಬ್ಬರ ಪರವಾಗಿ ಅವುಗಳನ್ನು ಕೇವಲ ಒಂದು ಟ್ರಸ್ಟ್ ಆಗಿ ಕಾಯ್ದುಕೊಂಡಿದೆ, ಮತ್ತು ಸಾಮಾನ್ಯ ಆಸ್ತಿಯಂತೆ ವಿಲೇವಾರಿ ಮಾಡುವ ಬದಲಿಗೆ ಅವುಗಳನ್ನು ರಕ್ಷಿಸುವ ಕರ್ತವ್ಯವನ್ನು ಹೊಂದಿದೆ. ಹಳೆಯ ಕಟ್ಟಡವನ್ನು ಹರಾಜು ಹಾಕುವಂತೆ ಸರ್ಕಾರವು ನದಿ ಪಾತ್ರವನ್ನು ಮಾರಾಟ ಮಾಡಲು ಅಥವಾ ಅರಣ್ಯವನ್ನು ಖಾಸಗೀಕರಣಗೊಳಿಸಲು ಸಾಧ್ಯವಿಲ್ಲ, ಏಕೆಂದರೆ ನ್ಯಾಯಾಲಯದ ಭಾಷೆಯಲ್ಲೇ ಹೇಳುವುದಾದರೆ, ಸರ್ಕಾರ ಎಂದಿಗೂ ಅದಕ್ಕೆ ಮಾಲೀಕನಾಗಿರಲಿಲ್ಲ, ಅದು ಕೇವಲ ಧರ್ಮದರ್ಶಿಯಷ್ಟೇ (Trustee).

ಈ ಸಿದ್ಧಾಂತದ ನೈಜ ಗಡಿಗಳನ್ನು ಇತ್ತೀಚೆಗೆ ಪರೀಕ್ಷಿಸಲಾಯಿತು. 2024 ರ ಪ್ರಮುಖ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, “ಸಾರ್ವಜನಿಕ ಒಳಿತಿಗಾಗಿ” ಬಹುತೇಕ ಯಾವುದೇ ಖಾಸಗಿ ಆಸ್ತಿಯನ್ನು ಮರುಹಂಚಿಕೆ ಮಾಡಬಹುದು ಎಂದು ವ್ಯಾಖ್ಯಾನಿಸುತ್ತಿದ್ದ ಹಳೆಯ, ವಿಶಾಲವಾದ ಅರ್ಥವನ್ನು ನ್ಯಾಯಾಲಯ ಹಿಂಪಡೆಯಿತು. ಹೆಚ್ಚಿನ ಖಾಸಗಿ ಆಸ್ತಿಯು ಕೇವಲ ಖಾಸಗಿ ಆಸ್ತಿಯಾಗಿದ್ದು, ವಿಧಿ 300A ಅಡಿಯಲ್ಲಿ ರಕ್ಷಿಸಲ್ಪಟ್ಟಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿತು. ‘ಪಬ್ಲಿಕ್ ಟ್ರಸ್ಟ್ ಸಿದ್ಧಾಂತ’ವು ಪ್ರಕೃತಿಯಲ್ಲಿ ಅಪರೂಪದ, ಹಂಚಿಕೆಯಾದ ಮತ್ತು ಅತ್ಯಗತ್ಯವಾದ ಸಂಪನ್ಮೂಲಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು, ಯಾರೋ ಹೊಂದಿರುವ ಪ್ರತಿಯೊಂದು ಆಸ್ತಿಗೂ ಅಲ್ಲ. ಅಂದರೆ, ಹಂಚಿಕೆಯ ರಾಷ್ಟ್ರೀಯ ಮಾಲೀಕತ್ವದ ಕಲ್ಪನೆಗೂ ಒಂದು ನಿರ್ದಿಷ್ಟ ಗಡಿಯಿದೆ.

ಇದು ಪ್ರಶ್ನೆಯನ್ನು ಮತ್ತೆ ಆರಂಭಿಕ ಬಿಂದುವಿಗೆ ತರುತ್ತದೆ. ನಿರ್ದಿಷ್ಟ ಕಾನೂನು ಷರತ್ತುಗಳ ಅಡಿಯಲ್ಲಿ ಖಾಸಗಿ ಪ್ರಜೆಯ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಬಹುದಾದರೆ, ಮತ್ತು ನದಿಗಳು ಹಾಗೂ ಅರಣ್ಯಗಳು ಯಾರೊಬ್ಬರ ಖಾಸಗಿ ಆಸ್ತಿಯೂ ಅಲ್ಲದಿದ್ದರೆ, ಅಂತಿಮವಾಗಿ ಭಾರತದ ನಿಜವಾದ ಮಾಲೀಕರು ಯಾರು?

ಇದನ್ನೂ ಓದಿ: ಒಂದು ದೇಶ, ಬಹುವಾಸ್ತವಗಳು; ಭಾರತದೊಳಗೆ ಇವೆ ಹಲವು ಭಾರತಗಳು

ನೇರವಾದ ಕಾನೂನುಬದ್ಧ ಉತ್ತರವೆಂದರೆ: ಸಾಮಾನ್ಯ ಅರ್ಥದಲ್ಲಿ ‘ಯಾರೂ ಅಲ್ಲ’! ಸಂವಿಧಾನದ ತೀರಾ ಮೊದಲ ಸಾಲು ಭಾರತವನ್ನು ಯಾರೊಬ್ಬರ ಆಸ್ತಿ ಎಂದು ಕರೆಯುವುದಿಲ್ಲ. ಅದನ್ನು ‘ರಾಜ್ಯಗಳ ಒಕ್ಕೂಟ’ (Union of States) ಎಂದು ಕರೆಯುತ್ತದೆ — ಅಂದರೆ ಯಾರೋ ಒಬ್ಬರ ಕೈಯಲ್ಲಿ ಹಿಡಿದಿರುವ ವಸ್ತುವಲ್ಲ, ಬದಲಿಗೆ ಎಲ್ಲವನ್ನೂ ಒಂದಾಗಿ ಹಿಡಿದಿಟ್ಟುಕೊಂಡಿರುವ ರಚನೆ. ಪ್ರಜೆಗಳು ಆಸ್ತಿ, ಮನೆ ಮತ್ತು ಜಮೀನುಗಳನ್ನು ಪ್ರಾಮಾಣಿಕವಾಗಿ ಮತ್ತು ಕಾನೂನುಬದ್ಧವಾಗಿ ಹೊಂದಿದ್ದಾರೆ, ಆದರೆ ಅದು ಯಾವಾಗಲೂ ಪ್ರತಿಯೊಬ್ಬರ ಪರವಾಗಿ ಸರ್ಕಾರವು ನಿರ್ವಹಿಸುವ ಮತ್ತು ನ್ಯಾಯಾಲಯಗಳು ಮಧ್ಯಸ್ಥಿಕೆ ವಹಿಸುವ ದೊಡ್ಡ ಚೌಕಟ್ಟಿನ ಒಳಗಿರುತ್ತದೆ.

ಬಹುಶಃ ಅದು ನಿಯಮದ ಕೊರತೆಯಲ್ಲ (loophole), ಬದಲಿಗೆ ಆ ವಿಷಯದ ನೈಜ ಅರ್ಥವೇ ಆಗಿರಬಹುದು! ಯಾವುದೇ ಒಂದು ಪಕ್ಷ, ಸರ್ಕಾರ ಅಥವಾ ಇತರ ಯಾರೇ ಆಗಿರಲಿ, ಸಂಪೂರ್ಣವಾಗಿ ಜಮೀನಿನ “ಮಾಲೀಕತ್ವ” ಹೊಂದಿರುವ ದೇಶವು ಆ ಪಕ್ಷದ ಅನುಕೂಲಕ್ಕಾಗಿ ಆಳಲ್ಪಡುತ್ತದೆ. ಆದರೆ ಪ್ರತಿಯೊಂದು ಹಂತದಲ್ಲೂ ಮಾಲೀಕತ್ವವು ವಿಭಿನ್ನ ಸ್ತರಗಳನ್ನು ಹೊಂದಿ, ಚರ್ಚಿತವಾಗಿ ಮತ್ತು ಕಾನೂನಾತ್ಮಕವಾಗಿ ಜವಾಬ್ದಾರಿಯುತವಾಗಿರುವ ದೇಶದಲ್ಲಿ, ಯಾವುದು ಯಾರಿಗೆ ಸೇರಿದ್ದು ಮತ್ತು ಏಕೆ ಎಂಬ ಬಗ್ಗೆ ತನ್ನ ಪ್ರಜೆಗಳೊಂದಿಗೆ ಮತ್ತೆ ಮತ್ತೆ ಮಾತುಕತೆ ನಡೆಸಬೇಕಾಗುತ್ತದೆ.

ಮುಂದಿನ ಬಾರಿ ನೀವು ಹಕ್ಕುಪತ್ರಕ್ಕೆ ಸಹಿ ಮಾಡುವಾಗ ಅಥವಾ ನದಿಯನ್ನು ಹಾದುಹೋಗುವಾಗ ನೆನಪಿಟ್ಟುಕೊಳ್ಳುವುದು ಸೂಕ್ತ: ನೀವು ಹಿಡಿದಿರುವುದು ಎಂದಿಗೂ ಸಂಪೂರ್ಣ ಮಾಲೀಕತ್ವವಲ್ಲ. ಅದು ಜಾಗರೂಕತೆಯಿಂದ ರೂಪಿಸಲಾದ ಒಂದು ಅನುಮತಿ ಪತ್ರ, ಮತ್ತು ಅದರ ಹಿಂದೆ ಸ್ವತಃ ತಾನಾಗಲಿ ಅಥವಾ ಯಾರೇ ಆಗಲಿ, ಇಡೀ ಭಾರತವನ್ನು ಸಂಪೂರ್ಣವಾಗಿ ಸ್ವಂತ ಮಾಡಿಕೊಳ್ಳಲು ಬಿಡದ ಸಂವಿಧಾನವಿದೆ.

ಆಧಾರಗಳು: ಭಾರತದ ಸಂವಿಧಾನ, ವಿಧಿಗಳು 1 ಮತ್ತು 300A; ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ವ್ಯವಸ್ಥಾಪನೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಕಾಯ್ದೆ, 2013; ಭಾರತದ ಸುಪ್ರೀಂ ಕೋರ್ಟ್, ಪ್ರಾಪರ್ಟಿ ಓನರ್ಸ್ ಅಸೋಸಿಯೇಷನ್ ವಿರುದ್ಧ ಮಹಾರಾಷ್ಟ್ರ ರಾಜ್ಯ (2024); ಸುಪ್ರೀಂ ಕೋರ್ಟ್‌ನ ವಿಧಿ 300A ಮತ್ತು ಪಬ್ಲಿಕ್ ಟ್ರಸ್ಟ್ ಸಿದ್ಧಾಂತದ ಹಿಂದಿನ ತೀರ್ಪುಗಳು.

ಈ ಸರಣಿಯ ಇನ್ನಷ್ಟು ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ಬೆಂಗಳೂರಿನಲ್ಲಿ ಹೋಟೆಲ್​ ಬಳಿ ನಿಂತಿದ್ದ ಆಡಿ ಕಾರಿನಲ್ಲಿ ಮೃತದೇಹ ಪತ್ತೆ
ಬೆಂಗಳೂರಿನಲ್ಲಿ ಹೋಟೆಲ್​ ಬಳಿ ನಿಂತಿದ್ದ ಆಡಿ ಕಾರಿನಲ್ಲಿ ಮೃತದೇಹ ಪತ್ತೆ
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್