YS Sharmila: ರಾಜಕೀಯ ವಿಶ್ಲೇಷಣೆ | ತೆಲಂಗಾಣದಲ್ಲಿ ಹೊಸ ಪಕ್ಷ ಕಟ್ಟುವ ನಿರ್ಧಾರ ಘೋಷಿಸಿದ ವೈ.ಎಸ್.ಶರ್ಮಿಳಾ; ಟಿಆರ್​ಎಸ್ ನಾಯಕರಲ್ಲಿ ಆತಂಕ

|

Updated on: Feb 10, 2021 | 2:41 PM

ಈ ಮಹತ್ವದ ತೀರ್ಮಾನದ ಹಿಂದಿನ ಕಾಣದ ಕೈ ಯಾವುದು ಎಂಬ ಪ್ರಶ್ನೆ ಹೈದರಾಬಾದ್​ನಲ್ಲಿ ಚರ್ಚೆಯಾಗುತ್ತಿದೆ. ತೆಲಂಗಾಣದಲ್ಲಿ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್) ಪಕ್ಷದ ನಾಯಕರ ಎದೆ ಡವಗುಟ್ಟುತ್ತಿದೆ.

YS Sharmila: ರಾಜಕೀಯ ವಿಶ್ಲೇಷಣೆ | ತೆಲಂಗಾಣದಲ್ಲಿ ಹೊಸ ಪಕ್ಷ ಕಟ್ಟುವ ನಿರ್ಧಾರ ಘೋಷಿಸಿದ ವೈ.ಎಸ್.ಶರ್ಮಿಳಾ; ಟಿಆರ್​ಎಸ್ ನಾಯಕರಲ್ಲಿ ಆತಂಕ
ಹೈದರಾಬಾದ್​ನಲ್ಲಿ ಮಂಗಳವಾರ ವೈ.ಎಸ್.ಶರ್ಮಿಳಾ ರೆಡ್ಡಿ ಅಭಿಮಾನಿಗಳತ್ತ ಕೈಬೀಸಿದರು (ಎಡಚಿತ್ರ). ತಂದೆಯ ಪುತ್ಥಳಿಗೆ ನಮಿಸಿದರು.
Follow us on

ಹೈದರಾಬಾದ್​: ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದ ವೈ.ಎಸ್.ರಾಜಶೇಖರ್ ರೆಡ್ಡಿ ಪುತ್ರಿ ವೈ.ಎಸ್ ಶರ್ಮಿಳಾ ತೆಲಂಗಾಣ ಸೇರಿದಂತೆ ದೇಶದಾದ್ಯಂತ ಸಂಚಲನ ಮೂಡಿಸುವಂತಹ ಮಹತ್ವದ ನಿರ್ಧಾರವನ್ನು ಮಂಗಳವಾರ (ಫೆ.9) ಘೋಷಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ವೈಎಸ್​ಆರ್ ಕಾಂಗ್ರೆಸ್​ ಪಕ್ಷ ಕಟ್ಟಲು 3 ಸಾವಿರ ಕಿಲೋಮೀಟರ್​ಗೂ ಅಧಿಕ ಪಾದಯಾತ್ರೆ ನಡೆಸಿದ್ದ ಶರ್ಮಿಳಾ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಇಂದು ಹೊರಬಿದ್ದಿರುವ ಅವರ ಹೊಸ ಪಕ್ಷದ ಘೋಷಣೆ ಎಲ್ಲರ ಗಮನ ಸೆಳೆದಿದೆ.

ಶರ್ಮಿಳಾ ನಿರ್ಧಾರವನ್ನು ಅಭಿಮಾನಿಗಳು ಮನದುಂಬಿ ಸ್ವಾಗತಿಸಿದ್ದಾರೆ. ಹೈದರಾಬಾದ್​ನ ಲೋಟಸ್​ ಪಾಂಡ ಪ್ರದೇಶದಲ್ಲಿರುವ ಅವರ ಮನೆಯ ಬಳಿ ಮಂಗಳವಾರ ಭಾರಿ ಜನಸ್ತೋಮ ಕಂಡುಬಂತು. ಜೈ ತೆಲಂಗಾಣ, ಜೈ ವೈ.ಎಸ್.ರಾಜಶೇಖರ್ ರೆಡ್ಡಿ, ಜೈ ಶರ್ಮಿಲಮ್ಮ ಘೋಷಣೆಗಳು ಮೊಳಗಿದವು. ಬಡವರ ಕಣ್ಣೀರು ತಿಳಿದ ವೈಎಸ್​ಆರ್ ಕುಟುಂಬಕ್ಕೆ ಬಡವರ ಬದುಕು ಬದಲಿಸೋದು ಹೇಗೆ ಅಂತ ಗೊತ್ತು ಎಂಬ ಫ್ಲೆಕ್ಸ್​ಗಳು ರಾರಾಜಿಸಿದವು.

ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್​ ಪಕ್ಷವನ್ನು ಕಟ್ಟಿದ ನಂತರ ಆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ವೈ.ಎಸ್. ಶರ್ಮಿಳಾ ಮಹತ್ವದ ಪಾತ್ರ ವಹಿಸಿದ್ದರು. ರಾಜಶೇಖರ್ ರೆಡ್ಡಿ ಪುತ್ರ ಜಗನ್ ಮೋಹನ್ ರೆಡ್ಡಿ ಜೈಲಿಗೆ ಹೋದ ನಂತರ ತಾಯಿ ವಿಜಯಮ್ಮ ಜೊತೆಗೆ ಶರ್ಮಿಳಾ ಪಕ್ಷದ ಪ್ರಚಾರದ ಹೊಣೆ ಹೊತ್ತುಕೊಂಡಿದ್ದರು.

ಆಂಧ್ರ ವಿಧಾನಸಭೆ ಚುನಾವಣೆ ಸಂದರ್ಭ ಹೀಗಿತ್ತು ಶರ್ಮಿಳಾ ಪ್ರಚಾರ ವೈಖರಿ

2012ರಲ್ಲಿ ಸುಮಾರು 3,000 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದ ಶರ್ಮಿಳಾ ಆಂಧ್ರಪ್ರದೇಶದಲ್ಲಿ ಸಂಚಲನಕ್ಕೆ ಕಾರಣವಾಗಿದ್ದರು. ವೈಸಿಪಿ ಪಕ್ಷ ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬರುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಇದೀಗ ತೆಲಂಗಾಣಕ್ಕಾಗಿ ನೂತನ ಪಕ್ಷ ಸ್ಥಾಪಿಸಲು ಮುಂದಾಗಿದ್ದಾರೆ. ಹೈದರಾಬಾದ್​ನಲ್ಲಿ ಮಂಗಳವಾರ ಈ ಬಗ್ಗೆ ಹೇಳಿಕೆ ಹೊರಬಿದ್ದಿದೆ. ತೆಲಂಗಾಣದಾದ್ಯಂತ ಇರುವ ರಾಜಶೇಖರ ರೆಡ್ಡಿ ಅವರ ಅಭಿಮಾನಿ ಒಕ್ಕೂಟಗಳ ನಾಯಕರೊಂದಿಗೆ ಚರ್ಚಿಸಿದ ನಂತರ ನೂತನ ಪಕ್ಷ ಅಸ್ಥಿತ್ವಕ್ಕೆ ಬರಲಿದೆ ಎನ್ನಲಾಗಿದೆ.

ಹೈದರಾಬಾದ್, ನಲಗೊಂಡ ಪ್ರದೇಶದ ನಾಯಕರೊಂದಿಗೆ ಮಂಗಳವಾರ ಸಭೆ ನಡೆಯಿತು. ಮುಂದಿನ ದಿನಗಳಲ್ಲಿ ಇತರೆ ಜಿಲ್ಲೆಗಳ ನಾಯಕರೊಂದಿಗೂ ಶರ್ಮಿಳಾ ಸಭೆ ನಡೆಸಲಿದ್ದಾರೆ.

ಹೈದರಾಬಾದ್​ನಲ್ಲಿ ಮಂಗಳವಾರ ಹೊರಬಿದ್ದ ಈ ದಿಢೀರ್ ನಿರ್ಧಾರವು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಇದು ಶರ್ಮಿಳಾರ ಸ್ವಯಂ ತೀರ್ಮಾನವೋ? ಅಥವಾ ಈ ನಿರ್ಧಾರದ ಹಿಂದೆ ಬೇರೆ ಯಾರಾದರೂ ಇದ್ದಾರೆಯೋ? ಈ ಮಹತ್ವದ ತೀರ್ಮಾನದ ಹಿಂದಿನ ಕಾಣದ ಕೈ ಯಾವುದು ಎಂಬ ಪ್ರಶ್ನೆಗಳೂ ಮುತ್ತಿನನಗರಿಯಲ್ಲಿ ಚರ್ಚೆಯಾಗುತ್ತಿವೆ. ತೆಲಂಗಾಣದಲ್ಲಿ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್) ಪಕ್ಷದ ನಾಯಕರ ಎದೆ ಡವಗುಟ್ಟುತ್ತಿದೆ.

Sasikala ವ್ಯಕ್ತಿ-ವ್ಯಕ್ತಿತ್ವ | ಮುಖ್ಯಮಂತ್ರಿ ಗಾದಿ ಸನಿಹದಲ್ಲಿದ್ದಾಗ ಸೆರೆಮನೆಗೆ ಬಂದ ಶಶಿಕಲಾ ಸವೆಸಿದ ಹಾದಿ ಕಲ್ಲುಮುಳ್ಳಿನದು

Published On - 10:13 pm, Tue, 9 February 21