ರಜೌರಿಯಲ್ಲಿ ಸಾವಿಗೀಡಾದ ನಾಗರಿಕರ ಕುಟುಂಬವನ್ನು ಭೇಟಿ ಮಾಡಿದ ರಾಜನಾಥ್ ಸಿಂಗ್; ನ್ಯಾಯದ ಭರವಸೆ

ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಒಂದು ದಿನದ ಭೇಟಿಗಾಗಿ ರಜೌರಿ-ಪೂಂಚ್ ಸೆಕ್ಟರ್‌ಗೆ ಆಗಮಿಸಿದ ಸಿಂಗ್, ಪೂಂಚ್ ಜಿಲ್ಲೆಯ ಬುಫ್ಲಿಯಾಜ್ ಗ್ರಾಮದ ಟೋಪಾ ಪೀರ್​​ನಲ್ಲಿ ಮೃತ ವ್ಯಕ್ತಿಗಳ ಕುಟುಂಬಗಳನ್ನು ಭೇಟಿ ಮಾಡಿದ್ದು ಘಟನೆಯ ಬಗ್ಗೆ ತ್ವರಿತ ತನಿಖೆಯಿಂದ ನ್ಯಾಯ ಒದಗಿಸುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ರಜೌರಿಯಲ್ಲಿ ಸಾವಿಗೀಡಾದ ನಾಗರಿಕರ ಕುಟುಂಬವನ್ನು ಭೇಟಿ ಮಾಡಿದ ರಾಜನಾಥ್ ಸಿಂಗ್; ನ್ಯಾಯದ ಭರವಸೆ
ರಾಜನಾಥ್ ಸಿಂಗ್
ರಶ್ಮಿ ಕಲ್ಲಕಟ್ಟ

Updated on: Dec 27, 2023 | 7:36 PM

ಜಮ್ಮು ಡಿಸೆಂಬರ್ 27: ಜಮ್ಮುವಿನ ಪೂಂಚ್-ರಜೌರಿಗೆ (Poonch-Rajouri) ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಬುಧವಾರ ನಾಲ್ವರು ಭಾರತೀಯ ಸೇನೆಯ ಯೋಧರು ಹುತಾತ್ಮರಾದ ಡಿಸೆಂಬರ್ 21 ರ ಹೊಂಚುದಾಳಿ ನಂತರ ವಿಚಾರಣೆಗಾಗಿ ಕರೆದೊಯ್ದ ನಂತರ ಸಾವಿಗೀಡಾದ ಮೂವರು ನಾಗರಿಕರ ಕುಟುಂಬಗಳನ್ನು ಭೇಟಿ ಮಾಡಿದ್ದು, ನ್ಯಾಯದ ಭರವಸೆ ನೀಡಿದ್ದಾರೆ. ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಒಂದು ದಿನದ ಭೇಟಿಗಾಗಿ ರಜೌರಿ-ಪೂಂಚ್ ಸೆಕ್ಟರ್‌ಗೆ ಆಗಮಿಸಿದ ಸಿಂಗ್, ಪೂಂಚ್ ಜಿಲ್ಲೆಯ ಬುಫ್ಲಿಯಾಜ್ ಗ್ರಾಮದ ಟೋಪಾ ಪೀರ್​​ನಲ್ಲಿ ಮೃತ ವ್ಯಕ್ತಿಗಳ ಕುಟುಂಬಗಳನ್ನು ಭೇಟಿ ಮಾಡಿದ್ದು ಘಟನೆಯ ಬಗ್ಗೆ ತ್ವರಿತ ತನಿಖೆಯಿಂದ ನ್ಯಾಯ ಒದಗಿಸುವುದಾಗಿ ಹೇಳಿದ್ದಾರೆ.

ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಏನೇ ಆಗಲಿ, ನ್ಯಾಯ ಸಿಗುತ್ತದೆ ಎಂದಿದ್ದಾರೆ. ಭದ್ರತಾ ಪಡೆಗಳು ನೀಡಿದ ಚಿತ್ರಹಿಂಸೆಯಿಂದ ಗಾಯಗೊಂಡು ನಾಲ್ವರು ವ್ಯಕ್ತಿಗಳು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಬೆಳಿಗ್ಗೆ ನಮ್ಮನ್ನು ರಜೌರಿಗೆ ಕರೆದೊಯ್ಯಲಾಯಿತು, ಅಲ್ಲಿ ನಾವು ರಕ್ಷಣಾ ಸಚಿವರನ್ನು ಭೇಟಿಯಾದೆವು. ಮೂರು ಕುಟುಂಬಗಳ ಆರು ಜನ ಸದಸ್ಯರಿದ್ದರು. ನಮ್ಮ ಬೇಡಿಕೆಗಳನ್ನು ಆಡಳಿತವು ಪರಿಹರಿಸುತ್ತದೆ ಎಂದು ರಕ್ಷಣಾ ಸಚಿವರು ಹೇಳಿದರು. ನಮಗೆ ನ್ಯಾಯ ಸಿಗಲಿದೆ ಎಂದು ಭರವಸೆ ನೀಡಿದರು. ಒಂದು ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು ”ಎಂದು ಟೋಪಾ ಪೀರ್ ಗ್ರಾಮದವರಾದ ಮೃತ ಮೂವರಲ್ಲಿ ಒಬ್ಬರಾದ 22 ವರ್ಷದ ಶೋಕತ್ ಅಲಿ ಅವರ ಚಿಕ್ಕಪ್ಪ ಮೊಹಮ್ಮದ್ ಸಾದೀಕ್ ಹೇಳಿದ್ದಾರೆ.

ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಂಗ್, ಸೈನಿಕರ ತ್ಯಾಗಕ್ಕಾಗಿ ದೇಶವು ಋಣಿಯಾಗಿರಲಿದೆ ಎಂದು ಹೇಳಿದರು. ರಾಷ್ಟ್ರದ ಹಿತಾಸಕ್ತಿಗಳನ್ನು ಕಾಪಾಡುವುದು ಮಾತ್ರವಲ್ಲದೆ ಜನರ ಹೃದಯವನ್ನು ಗೆಲ್ಲುವುದು ಅವರ ಕರ್ತವ್ಯ ಎಂದು ಸಚಿವರು ಒತ್ತಿ ಹೇಳಿದರು.

ಡಿಸೆಂಬರ್ 21 ರಂದು, ಪೂಂಚ್‌ನ ಸುರನ್‌ಕೋಟೆಯ ಧಾತ್ಯಾರ್ ಮೋರ್‌ನಲ್ಲಿ ಹೊಂಚುದಾಳಿಯಲ್ಲಿ ನಾಲ್ವರು ಸೈನಿಕರು ಹುತಾತ್ಮರಾಗಿದ್ದು ಮತ್ತು ಮೂವರು ಗಾಯಗೊಂಡರು. ಮರುದಿನ ಬೆಳಿಗ್ಗೆ ಒಂಬತ್ತು ಮಂದಿಯನ್ನು ವಿಚಾರಣೆಗೆ ಕರೆದೊಯ್ಯಲಾಯಿತು ಮತ್ತು ಅವರಲ್ಲಿ ಮೂವರು – ಸಫೀರ್ ಹುಸೇನ್ (44), ಶೋಕೆಟ್ ಅಲಿ (22) ಮತ್ತು ಶಬೀರ್ ಹುಸೇನ್ (32) ನಂತರದ ದಿನದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರ ಕುಟುಂಬಗಳು ಬಾಫ್ಲಿಯಾಜ್‌ನಲ್ಲಿರುವ 48 ಆರ್‌ಆರ್ ಕ್ಯಾಂಪ್‌ನಲ್ಲಿ ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ ಎಂದು ಆರೋಪಿಸಿವೆ.

ಇದನ್ನೂ ಓದಿ:ಯುದ್ಧ ಗೆಲ್ಲಬೇಕು, ಭಯೋತ್ಪಾದಕರನ್ನು ತೊಡೆದುಹಾಕಬೇಕು, ಜತೆಗೆ ಜನರ ಹೃದಯ ಗೆಲ್ಲಬೇಕು: ರಾಜನಾಥ್​​ ಸಿಂಗ್ 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯು ಬ್ರಿಗೇಡಿಯರ್ ಸೇರಿದಂತೆ ಮೂವರು ಅಧಿಕಾರಿಗಳನ್ನು ಸ್ಥಳಾಂತರಿಸಿದೆ ಮತ್ತು ವಿಚಾರಣೆಯ ನ್ಯಾಯಾಲಯವನ್ನು ಸ್ಥಾಪಿಸಿದೆ. ರಕ್ಷಣಾ ಸಚಿವರ ಬುಧವಾರ ಭೇಟಿಗೆ ಮುಂಚಿತವಾಗಿ, ಹಿರಿಯ ಸೇನಾಧಿಕಾರಿಯೊಬ್ಬರು ಮಂಗಳವಾರ ಮೂವರ ಕುಟುಂಬಗಳನ್ನು ಭೇಟಿ ಮಾಡಿದ್ದು ಸೇನೆಯ ಪರವಾಗಿ ಮೂವರ ಮುಂದಿನ ಸಂಬಂಧಿಕರಿಗೆ ₹ 10 ಲಕ್ಷ ಪರಿಹಾರವನ್ನು ಹಸ್ತಾಂತರಿಸಿದರು. ಶನಿವಾರ ರಾಜ್ಯ ಆಡಳಿತವು ಮೃತ ಮೂವರ ಕುಟುಂಬಗಳಿಗೆ ತಲಾ ₹ 20 ಲಕ್ಷ ಚೆಕ್‌ಗಳನ್ನು ಹಸ್ತಾಂತರಿಸಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us