ಅಗ್ನಿಪಥ್ ಯೋಜನೆ ಕುರಿತು ವಿವರಿಸಲು ನಾಳೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದ್ದಾರೆ ಸೇನಾ ಮುಖ್ಯಸ್ಥರು
ಸೋಮವಾರ ಬೆಂಗಳೂರಿಗೆ ಭೇಟಿ ನೀಡಿ ಮಾತನಾಡಿದ ಮೋದಿ, ಕೆಲವು ನಿರ್ಧಾರಗಳು ಮೊದಲಿಗೆ "ಅನ್ಯಾಯವಾಗಿ ಕಾಣಿಸಬಹುದು" ಆದರೆ ನಂತರ ರಾಷ್ಟ್ರ ನಿರ್ಮಾಣಕ್ಕೆ ಸಹಾಯ ಮಾಡುತ್ತವೆ ಎಂದು ಹೇಳಿದರು.

ದೆಹಲಿ: ‘ಅಗ್ನಿಪಥ್’ ನೇಮಕಾತಿ (Agnipath) ಯೋಜನೆ ಕುರಿತು ವಿವರಿಸಲು ಮೂವರು ಸೇವಾ ಮುಖ್ಯಸ್ಥರು ನಾಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಲಿದ್ದಾರೆ. ಜೂನ್ 14 ರಂದು ಈ ಯೋಜನೆ ಘೋಷಣೆಯಾದಾಗಿನಿಂದ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಅಗ್ನಿಪಥ್ ಯೋಜನೆಯಡಿ ಸೈನಿಕರ ಸೇರ್ಪಡೆ ಮುಂದಿನ ತಿಂಗಳು ಆರಂಭವಾಗಲಿದೆ ಎಂದು ಸೇನೆ ಸೋಮವಾರ ತಿಳಿಸಿದೆ. ಹೊಸ ಯೋಜನೆಯಡಿ ನೇಮಕಗೊಳ್ಳುವ ಸಿಬ್ಬಂದಿಯನ್ನು ಅಗ್ನಿವೀರರು (Agniveers) ಎಂದು ಕರೆಯಲಾಗುತ್ತದೆ. ‘ಸದುದ್ದೇಶದಿಂದ ತಂದ ಅನೇಕ ಒಳ್ಳೆಯ ಸಂಗತಿಗಳು ರಾಜಕೀಯ ಬಣ್ಣಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರುವುದು ನಮ್ಮ ದೇಶದ ದೌರ್ಭಾಗ್ಯ, ಟಿಆರ್ಪಿ ಬಲವಂತದಿಂದ ಮಾಧ್ಯಮಗಳೂ ಅದರೊಳಗೆ ಸಿಲುಕಿಕೊಳ್ಳುತ್ತವೆ’ ಎಂದು ಪ್ರಧಾನಿ ಭಾನುವಾರ ಹೇಳಿದ್ದಾರೆ. ಹೀಗೆ ಹೇಳುವಾಗ ಅವರೆಲ್ಲಿಯೂ ಯೋಜನೆ ಬಗ್ಗೆ ಆಗಲೀ ಪ್ರತಿಭಟನೆ ಬಗ್ಗೆ ಆಗಲೀ ನೇರ ಉಲ್ಲೇಖ ಮಾಡಿಲ್ಲ. ಸೋಮವಾರ ಬೆಂಗಳೂರಿಗೆ ಭೇಟಿ ನೀಡಿ ಮಾತನಾಡಿದ ಮೋದಿ, ಕೆಲವು ನಿರ್ಧಾರಗಳು ಮೊದಲಿಗೆ “ಅನ್ಯಾಯವಾಗಿ ಕಾಣಿಸಬಹುದು” ಆದರೆ ನಂತರ ರಾಷ್ಟ್ರ ನಿರ್ಮಾಣಕ್ಕೆ ಸಹಾಯ ಮಾಡುತ್ತವೆ ಎಂದು ಹೇಳಿದರು. ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳು “ಅಗ್ನಿಪಥ್” ಅನ್ನು ಸರ್ಕಾರದ ಇತ್ತೀಚಿನ ಪ್ರಮಾದ ಎಂದು ಕರೆದಿವೆ. ಇದು ನೋಟು ಅಮಾನ್ಯೀಕರಣ ಮತ್ತು ಕೃಷಿ ಕಾನೂನುಗಳಂತೆಯೇ ಇದೆ ಎಂದು ಹಲವಾರು ನಾಯಕರು ಟೀಕಿಸಿದ್ದಾರೆ.
17 ಮತ್ತು 21 ವರ್ಷ ವಯಸ್ಸಿನ ಯುವಕರನ್ನು ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿಗಿ ನಾಲ್ಕು ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಕೇಂದ್ರವು ಕಳೆದ ಮಂಗಳವಾರ ಅಗ್ನಿಪಥ್ ಯೋಜನೆಯನ್ನು ಅನಾವರಣಗೊಳಿಸಿದ ನಂತರ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. .ನಂತರ ಸರ್ಕಾರವು ಈ ವರ್ಷದ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 23 ಕ್ಕೆ ಸಡಿಲಗೊಳಿಸಿತು.
ದೇಶದ ಹಲವು ಭಾಗಗಳಲ್ಲಿ ಯುವಕರು ವಿವಾದಿತ ಯೋಜನೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ, ಪ್ರತಿಭಟನಾಕಾರರು ರೈಲು ನಿಲ್ದಾಣಗಳನ್ನು ಧ್ವಂಸಗೊಳಿಸುವುದು, ರೈಲುಗಳಿಗೆ ಬೆಂಕಿ ಹಚ್ಚುವುದು ಮತ್ತು ರಸ್ತೆಗಳು ಮತ್ತು ರೈಲು ಹಳಿಗಳನ್ನು ನಿರ್ಬಂಧಿಸುವ ಘಟನೆಗಳು ವಿವಿಧ ನಗರಗಳು ಮತ್ತು ಪಟ್ಟಣಗಳಿಂದ ವರದಿಯಾಗಿವೆ.
ಮಿತ್ರಪಕ್ಷ ಜೆಡಿಯು ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಯೋಜನೆಯ ಮರುಚಿಂತನೆಯನ್ನು ಬೆಂಬಲಿಸಿವೆ. ಈ ಯೋಜನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರ ನಿಯೋಗ ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿ ಮಾಡಿತ್ತು. ಈ ವಿಷಯವನ್ನು ಸಂಸತ್ತಿನಲ್ಲಿ ಅಥವಾ ಇತರ ಯಾವುದೇ ಸಮಿತಿಯಲ್ಲಿ ಚರ್ಚಿಸಲಾಗಿಲ್ಲ ಎಂದು ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ








