ರೈಲು ವಿಳಂಬದಿಂದ ಪರೀಕ್ಷೆ ಮಿಸ್​​​: ವಿದ್ಯಾರ್ಥಿನಿಗೆ ರೈಲ್ವೆಯಿಂದ 9 ಲಕ್ಷ ರೂ. ಪರಿಹಾರ

ರೈಲು ವಿಳಂಬದಿಂದಾಗಿ ಪರೀಕ್ಷೆ ತಪ್ಪಿಸಿಕೊಂಡ ಉತ್ತರ ಪ್ರದೇಶದ ವಿದ್ಯಾರ್ಥಿನಿಗೆ ಭಾರತೀಯ ರೈಲ್ವೆಯು 9 ಲಕ್ಷ ರೂ. ಪರಿಹಾರ ನೀಡಿದೆ. 2018ರಲ್ಲಿ ನಡೆದ ಘಟನೆಗೆ ಗ್ರಾಹಕ ಆಯೋಗ 8 ವರ್ಷಗಳ ಹೋರಾಟದ ನಂತರ ಈ ಮಹತ್ವದ ತೀರ್ಪು ನೀಡಿದೆ. ರೈಲ್ವೆ ಇಲಾಖೆಯ ಸೇವಾ ಲೋಪದಿಂದಾದ ನಷ್ಟ ಹಾಗೂ ಮಾನಸಿಕ ಕಿರಿಕಿರಿಗೆ ಪರಿಹಾರವಾಗಿ ಈ ಹಣ ಪಾವತಿಸಲು ಆದೇಶಿಸಲಾಗಿದೆ. ಈ ತೀರ್ಪು ರೈಲ್ವೆ ಇಲಾಖೆಯು ಸಮಯ ಪಾಲನೆ ಮಾಡದಿದ್ದರೆ ಹೊಣೆಗಾರರಾಗಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

ರೈಲು ವಿಳಂಬದಿಂದ ಪರೀಕ್ಷೆ ಮಿಸ್​​​: ವಿದ್ಯಾರ್ಥಿನಿಗೆ ರೈಲ್ವೆಯಿಂದ 9 ಲಕ್ಷ ರೂ. ಪರಿಹಾರ
ಸಾಂದರ್ಭಿಕ ಚಿತ್ರ
Image Credit source: Google

Updated on: Feb 02, 2026 | 5:34 PM

ಉತ್ತರ ಪ್ರದೇಶ, ಫೆ.2: ರೈಲು ವಿಳಂಬದಿಂದಾಗಿ ಪರೀಕ್ಷೆ ತಪ್ಪಿಸಿಕೊಂಡ ಉತ್ತರ ಪ್ರದೇಶದ ವಿದ್ಯಾರ್ಥಿನಿಗೆ ಭಾರತೀಯ ರೈಲ್ವೆಯು (Indian Railways) 9 ಲಕ್ಷ ರೂ. ಪರಿಹಾರ ನೀಡಿರುವ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. 2018ರಿಂದ ಈ ವಿಚಾರವಾಗಿ ಗ್ರಾಹಕ ಆಯೋಗ ತನಿಖೆ ನಡೆಸಿತ್ತು. ಇದೀಗ ಈ ವಿಚಾರಗಾಗಿ ಗ್ರಾಹಕ ಆಯೋಗ​​ ಮಹತ್ವದ ಆದೇಶ ನೀಡಿದೆ. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಸಮೃದ್ಧಿ ಎಂಬ ವಿದ್ಯಾರ್ಥಿನಿ 2018ರಲ್ಲಿ ಲಕ್ನೋದಲ್ಲಿ ನಡೆಯಬೇಕಿದ್ದ ಬಿ.ಎಸ್ಸಿ ಬಯೋಟೆಕ್ನಾಲಜಿ ಪ್ರವೇಶ ಪರೀಕ್ಷೆಗೆ ಹಾಜರಾಗಬೇಕಿತ್ತು. ಇದಕ್ಕಾಗಿ ಅವರು ಬಸ್ತಿಯಿಂದ ಲಕ್ನೋಗೆ ಇಂಟರ್‌ಸಿಟಿ ಸೂಪರ್‌ಫಾಸ್ಟ್ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು.

ಬೆಳಿಗ್ಗೆ 11 ಗಂಟೆಗೆ ಲಕ್ನೋ ತಲುಪಬೇಕಿದ್ದ ರೈಲು ಸುಮಾರು 2.5 ಗಂಟೆ ತಡವಾಗಿ ತಲುಪಿತು. ಪರೀಕ್ಷಾ ಕೇಂದ್ರಕ್ಕೆ ಮಧ್ಯಾಹ್ನ 12:30ರೊಳಗೆ ಹೋಗಬೇಕಿದ್ದ ರೈಲು ವಿಳಂಬವಾದ ಕಾರಣ ಸಮೃದ್ಧಿ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಅವರ ಒಂದು ವರ್ಷದ ಎಲ್ಲ ಪರಿಶ್ರಮ ಕೂಡ ವ್ಯರ್ಥವಾಗಿದೆ. ಈ ಅನ್ಯಾಯದ ವಿರುದ್ಧ ಸಮೃದ್ಧಿ ಜಿಲ್ಲಾ ಗ್ರಾಹಕ ಆಯೋಗದ ಮೊರೆ ಹೋದರು. ಸುಮಾರು 8 ವರ್ಷಗಳ ಕಾಲ ಈ ವಿಚಾರವಾಗಿ ಸುದೀರ್ಘ ಕಾನೂನು ಹೋರಾಟ ನಡೆಯಿತು. ಜಿಲ್ಲಾ ಗ್ರಾಹಕ ಆಯೋಗವು ರೈಲ್ವೆ ಇಲಾಖೆಯ ಸೇವೆಯಲ್ಲಿ ಲೋಪವಿದೆ ಎಂದು ಹೇಳಿದೆ. ವಿದ್ಯಾರ್ಥಿನಿಯ ಶೈಕ್ಷಣಿಕ ನಷ್ಟ ಮತ್ತು ಮಾನಸಿಕ ಕಿರಿಕಿರಿಗಾಗಿ 9.10 ಲಕ್ಷ ರೂ. ಪರಿಹಾರ ನೀಡುವಂತೆ ರೈಲ್ವೆಗೆ ಆದೇಶ ನೀಡಿದೆ.

ಈ ಹಣವನ್ನು 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ, ವಾರ್ಷಿಕ 12% ಬಡ್ಡಿಯನ್ನು ಸೇರಿಸಿ ನೀಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸಾಮಾನ್ಯವಾಗಿ ರೈಲು ವಿಳಂಬವಾದರೆ ನಾವು ಸುಮ್ಮನಿರುತ್ತೇವೆ. ಆದರೆ ಈ ತೀರ್ಪು ರೈಲ್ವೆ ಇಲಾಖೆಯು ಸಮಯ ಪಾಲನೆ ಮಾಡದಿದ್ದರೆ ಮತ್ತು ಅದರಿಂದ ಪ್ರಯಾಣಿಕರಿಗೆ ಗಂಭೀರ ನಷ್ಟವಾದರೆ ಅವರು ಹೊಣೆಗಾರರಾಗುತ್ತಾರೆ ಎಂಬುದನ್ನು ತಿಳಿಸಿಕೊಟ್ಟಿದೆ.

ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್​​​ ನ್ಯೂಸ್​: ಇನ್ಮುಂದೆ ಈ ರೈಲಿನಲ್ಲಿ ಊಟ ಉಚಿತ

8 ವರ್ಷಗಳ ಹೋರಾಟ:

ಈ ಬಗ್ಗೆ ನೊಂದ ಸಮೃದ್ಧಿ ತನ್ನ ವಕೀಲರ ಮೂಲಕ 20 ಲಕ್ಷ ರೂ. ಪರಿಹಾರ ಅರ್ಜಿ ಸಲ್ಲಿಸಿದರು. ರೈಲ್ವೆ ಸಚಿವಾಲಯ, ಜನರಲ್ ಮ್ಯಾನೇಜರ್ ಮತ್ತು ನಿಲ್ದಾಣದ ಸೂಪರಿಂಟೆಂಡೆಂಟ್‌ಗೆ ನೋಟಿಸ್‌ಗಳನ್ನು ನೀಡಲಾಯಿತು, ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ಜಿಲ್ಲಾ ಗ್ರಾಹಕ ಆಯೋಗವು ರೈಲ್ವೆ ಇಲಾಖೆಯು ಸಕಾಲಿಕ ಸೇವೆಯನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಹೇಳಿತ್ತು. ಇದಕ್ಕಾಗಿ ಸಮೃದ್ಧಿ 8 ವರ್ಷಗಳ ಕಾಲ ಹೋರಾಟ ಮಾಡಿದ್ದಾರೆ. ರೈಲ್ವೆ ಇಲಾಖೆಯು ವಿಳಂಬ ಬಗ್ಗೆ ಒಪ್ಪಿಕೊಂಡಿದೆ. ಅದರೂ ಅದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 5:12 pm, Mon, 2 February 26

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us