ಓ ಮೈ ಗಾಡ್! ಭಾರತದ ಈ ಪ್ರದೇಶಗಳನ್ನು ಛಿದ್ರ ಛಿದ್ರ ಮಾಡಲು ನಡೆದಿತ್ತು ದೊಡ್ಡ ಪ್ಲಾನ್: ಪಾಕ್ ಹ್ಯಾಂಡ್ಲರ್ ಸಂಚು ಹೇಗಿತ್ತು?

ಉತ್ತರ ಪ್ರದೇಶ ಎಟಿಎಸ್ (ATS) ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಹೊಂಚು ಹಾಕಿದ್ದ ಪಾಕಿಸ್ತಾನ ಮೂಲದ ಭಯೋತ್ಪಾದನಾ ಜಾಲವನ್ನು ಯಶಸ್ವಿಯಾಗಿ ಭೇದಿಸಿದೆ. ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಲಖನೌದಲ್ಲಿ ದೊಡ್ಡ ವಿಧ್ವಂಸಕ ಕೃತ್ಯ ಎಸಗುವ ಸಂಚು ವಿಫಲವಾಗಿದೆ. ಸಾಮಾಜಿಕ ಜಾಲತಾಣ, ಎನ್‌ಕ್ರಿಪ್ಟೆಡ್ ಆಪ್‌ಗಳ ಮೂಲಕ ಹಣದ ಆಮಿಷವೊಡ್ಡಿ ಯುವಕರನ್ನು ಸೇರಿಸಿಕೊಳ್ಳಲಾಗುತ್ತಿತ್ತು. ಸ್ಫೋಟಕ ವಸ್ತುಗಳು, ಕರಪತ್ರಗಳು ವಶಪಡಿಸಿಕೊಳ್ಳಲಾಗಿದೆ.

ಓ ಮೈ ಗಾಡ್! ಭಾರತದ ಈ ಪ್ರದೇಶಗಳನ್ನು ಛಿದ್ರ ಛಿದ್ರ ಮಾಡಲು ನಡೆದಿತ್ತು ದೊಡ್ಡ ಪ್ಲಾನ್: ಪಾಕ್ ಹ್ಯಾಂಡ್ಲರ್ ಸಂಚು ಹೇಗಿತ್ತು?
ಭಯೋತ್ಪಾದನಾ ಜಾಲ

Updated on: Apr 04, 2026 | 3:02 PM

ಲಖನೌ, ಏ.4: ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಮತ್ತು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಲು ಹೊಂಚು ಹಾಕಿದ್ದ ಭಯೋತ್ಪಾದನಾ ಜಾಲವೊಂದನ್ನು ಉತ್ತರ ಪ್ರದೇಶದ ಎಟಿಎಸ್ (ATS) ಯಶಸ್ವಿಯಾಗಿ ಭೇದಿಸಿದೆ. ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳ ನಿರ್ದೇಶನದಂತೆ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಗ್ಯಾಂಗ್‌ನ ಮುಖ್ಯಸ್ಥ ಮೀರತ್ ನಿವಾಸಿ ಸಾಕಿಬ್ ಅಲಿಯಾಸ್ ಡೆವಿಲ್ ಸೇರಿದಂತೆ ಗೌತಮ್ ಬುದ್ಧ ನಗರದ ವಿಕಾಸ್ ಗಹ್ಲಾವತ್ ಅಲಿಯಾಸ್ ರೌನಕ್, ಲೋಕೇಶ್ ಅಲಿಯಾಸ್ ಪಪ್ಲಾ ಮತ್ತು ಮೀರತ್‌ನ ಅರ್ಬಾಬ್ ಎಂಬುವವರನ್ನು ಎಟಿಎಸ್ ತಂಡ ಬಂಧಿಸಿದೆ. ಈ ಗುಂಪು ಪ್ರತಿಷ್ಠಿತ ಸಂಸ್ಥೆಗಳು, ವಾಹನಗಳು ಮತ್ತು ರೈಲ್ವೇ ಸಿಗ್ನಲ್ ಬಾಕ್ಸ್‌ಗಳಿಗೆ ಬೆಂಕಿ ಹಚ್ಚುವ ಮೂಲಕ ಭಯದ ವಾತಾವರಣ ಸೃಷ್ಟಿಸಲು ಯೋಜಿಸಿತ್ತು. ಈಗಾಗಲೇ ಕೆಲವು ಕಡೆ ಸಣ್ಣ ಪುಟ್ಟ ಅಗ್ನಿ ಅವಘಡಗಳನ್ನು ಎಸಗಿದ್ದರು.

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್​​:

ಸಾಕಿಬ್ ಟೆಲಿಗ್ರಾಮ್, ಸಿಗ್ನಲ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಎನ್‌ಕ್ರಿಪ್ಟೆಡ್ ಆಪ್‌ಗಳ ಮೂಲಕ ಪಾಕಿಸ್ತಾನದ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು. ಇವರ ಸಂಪರ್ಕ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಹಲವು ಸಂಖ್ಯೆಗಳು ಸಹ ಪತ್ತೆಯಾಗಿವೆ. ಕೃತ್ಯ ಎಸಗಿದ ನಂತರ ಅದರ ವಿಡಿಯೋಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿ, ಪ್ರತಿಯಾಗಿ QR ಕೋಡ್‌ಗಳ ಮೂಲಕ ಹಣವನ್ನು ಪಡೆಯುತ್ತಿದ್ದರು.

ಇದನ್ನೂ ಓದಿ: ಗಂಡು ಮಗು ಬೇಕೆಂಬ ಹಠಕ್ಕೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನೇ ಕೊಂದು ಈಜುಕೊಳಕ್ಕೆ ಎಸೆದ ಕಟುಕ ತಂದೆ

ಸಾಮಾಜಿಕ ಜಾಲತಾಣಗಳ ಮೂಲಕ ವಿಕಾಸ್ ಮತ್ತು ಲೋಕೇಶ್‌ನನ್ನು ಹಣದ ಆಮಿಷವೊಡ್ಡಿ ಈ ಜಾಲಕ್ಕೆ ಸೇರಿಸಿಕೊಳ್ಳಲಾಗಿತ್ತು. ಇವರಿಗೆ ಅಲ್-ಖೈದಾ ಮತ್ತು ಗಜ್ವಾ-ಎ-ಹಿಂದ್‌ನಂತಹ ಉಗ್ರಗಾಮಿ ವಿಚಾರಧಾರೆಗಳಿಂದ ಪ್ರೇರೇಪಿಸಲಾಗುತ್ತಿತ್ತು. ಆರೋಪಿಗಳಿಂದ ಸ್ಫೋಟಕ ಪದಾರ್ಥಗಳು, ಉರಿಯುವ ದ್ರವಗಳು, 7 ಮೊಬೈಲ್ ಫೋನ್‌ಗಳು, 24 ಕರಪತ್ರಗಳು ಮತ್ತು ನಕಲಿ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್ 2 ರಂದು ಲಖನೌ ರೈಲ್ವೇ ನಿಲ್ದಾಣದ ಬಳಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಇವರು ಸಂಚು ರೂಪಿಸಿದ್ದರು, ಆದರೆ ಎಟಿಎಸ್ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:55 pm, Sat, 4 April 26

Follow Us