UP Rasgulla Crime: ಆರತಕ್ಷತೆ ಕಾರ್ಯಕ್ರಮದಲ್ಲಿ ರಸಗುಲ್ಲಕ್ಕಾಗಿ ಹೊಡೆದಾಟ, ವಧುವಿನ ಸಂಬಂಧಿ ಕೊಲೆ

| Updated By: ಆಯೇಷಾ ಬಾನು

Updated on: Feb 19, 2023 | 7:53 AM

ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಬಿಕಾಪುರ ಗ್ರಾಮದಲ್ಲಿ ಗುರುವಾರ ನಡೆದ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ರಸಗುಲ್ಲ ವಿಚಾರವಾಗಿ ಗಲಾಟೆ ನಡೆದಿದ್ದು ಅದು ಕೊಲೆಯಲ್ಲಿ ಅಂತ್ಯವಾಗಿದೆ.

UP Rasgulla Crime: ಆರತಕ್ಷತೆ ಕಾರ್ಯಕ್ರಮದಲ್ಲಿ ರಸಗುಲ್ಲಕ್ಕಾಗಿ ಹೊಡೆದಾಟ, ವಧುವಿನ ಸಂಬಂಧಿ ಕೊಲೆ
ರಸಗುಲ್ಲ
Follow us on

ಮೈನ್‌ಪುರಿ: ರಸಗುಲ್ಲದ ವಿಚಾರವಾಗಿ ನಡೆದ ಗಲಾಟೆಯಲ್ಲಿ 50 ವರ್ಷದ ವ್ಯಕ್ತಿಯೊಬ್ಬನನ್ನು ನಾಲ್ಕು ಜನರು ಹೊಡೆದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಬಿಕಾಪುರ ಗ್ರಾಮದಲ್ಲಿ ಗುರುವಾರ ನಡೆದ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ರಸಗುಲ್ಲ ವಿಚಾರವಾಗಿ ಗಲಾಟೆ ನಡೆದಿದ್ದು ಅದು ಕೊಲೆಯಲ್ಲಿ ಅಂತ್ಯವಾಗಿದೆ. ರಸಗುಲ್ಲ ವಿಚಾರದಲ್ಲಿ ಸಂಭವಿಸಿದ ಗಲಾಟೆ ವಧುವಿನ ಸಂಬಂಧಿಯ ಕೊಲೆಗೆ ಕಾರಣವಾಗಿದೆ. ಮೃತರನ್ನು ರಣವೀರ್ ಸಿಂಗ್ ಎಂದು ಗುರುತಿಸಲಾಗಿದೆ.

ಮೊದಲಿಗೆ ಸಿಹಿ ತಿನಿಸು ರಸಗುಲ್ಲದ ವಿಚಾರವಾಗಿ ವಧು ಹಾಗೂ ವರನ ಕಡೆಯವರ ನಡುವೆ ಜಗಳ ಶುರುವಾಗಿದ್ದು ಬಳಿಕ ಅದು ವಿಕೋಪಕ್ಕೆ ತಿರುಗಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ವಧುವಿನ ಕಡೆಯ 50 ವರ್ಷದ ಸಂಬಂಧಿಯೊಬ್ಬರು ಮೃತಪಟ್ಟಿದ್ದಾರೆ. ಹಾಗೂ ವಧುವಿನ ತಾಯಿಯ ಸಂಬಂಧಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಮತ್ತೊಂದೆಡೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಇದನ್ನೂ ಓದಿ: ಮೊಬೈಲ್ ಕಿತ್ತುಕೊಳ್ಳಲು ಬಂದವನನ್ನ ಕಲ್ಲಿನಿಂದ ಜಜ್ಜಿ ಕೊಂದ: ಕೊಲೆ ಆರೋಪಿ ಈಗ ಪೊಲೀಸರ ಅತಿಥಿ

ಘಟನೆ ಹಿನ್ನೆಲೆ

ಒಂದು ಬಕೆಟ್‌ ಪೂರ್ತಿ ರಸಗುಲ್ಲವನ್ನು ಕದ್ದುಕೊಂಡು ಹೋಗುತ್ತಿದ್ದಾಗ, ಅದನ್ನು ಕಂಡ ವರನ ಕಡೆಯವರು ವಧುವಿನ ಸಂಬಂಧಿಗೆ ಪ್ರಶ್ನಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಗುಂಪುಗಳಾಗಿ ಗಲಾಟೆ ಬೇರೆಯ ಸ್ಥಿತಿಗೆ ತಲುಪಿದ್ದು ಹೊಡೆದಾಡಿಕೊಂಡಿದ್ದಾರೆ. ವಧುವಿನ ಸಂಬಂಧಿ ಹರಿಯಾಣದ ಮೂಲದ 50 ವರ್ಷದ ರಣವೀರ್‌ ಸಿಂಗ್‌ ಮೃತ ವ್ಯಕ್ತಿ. ಈತನ ಮೇಲೆ ದೊಣ್ಣೆ ಹಾಗೂ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ಮಾಡಲಾಗಿದೆ. ಇನ್ನೊಂದೆಡೆ ಈತನ ಸಹೋದರ ಸಂಬಂಧಿ ರಾಮ್‌ ಕಿಶೋರ್‌ ಮೇಲೆಯೂ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದ ವ್ಯಕ್ತಿಗಳನ್ನು ರಜತ್‌, ಅಜಯ್‌, ಸತ್ಯಭಾನ್‌ ಹಾಗೂ ಭರತ್‌ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬಿಕಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ರಾಮ್‌ ಕಿಶೋರ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಷಯ ತಿಳಿದ ಬಳಿಕ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೈನ್‌ಪುರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಈಗಾಗಲೇ ಕೇಸ್‌ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ