ಸುಳ್ಳು ಆರೋಪ ಮಾಡುವುದೇ ಕಾಂಗ್ರೆಸ್‌ ಕೆಲಸ; ಪ್ರಿಯಾಂಕ್ ಖರ್ಗೆ ಪತ್ರಕ್ಕೆ ವಿಎಚ್‌ಪಿ ಅಧ್ಯಕ್ಷ ಅಲೋಕ್ ಕುಮಾರ್ ತಿರುಗೇಟು

ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೆಪಿಸಿಸಿ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಗಳಿಗೆ ವಿಶ್ವ ಹಿಂದೂ ಪರಿಷತ್ (VHP) ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ತಿರುಗೇಟು ನೀಡಿದ್ದಾರೆ. "ಸಂಘಟನೆಗಳು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಹೇಳುವ ಕಾನೂನು ಯಾವುದು ಎಂದು ಪ್ರಿಯಾಂಕ್ ಖರ್ಗೆ ಉಲ್ಲೇಖಿಸಲಿ. ಆರ್‌ಎಸ್‌ಎಸ್ ತನ್ನ ಆದಾಯವನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುತ್ತದೆಯೇ ಎಂಬ ಪ್ರಶ್ನೆಯನ್ನು ಸಹ ಆಗಾಗ ಎತ್ತಲಾಗುತ್ತದೆ. ಆರ್‌ಎಸ್‌ಎಸ್‌ನಲ್ಲಿ ವರ್ಷಕ್ಕೊಮ್ಮೆ ಗುರು ದಕ್ಷಿಣೆ ಕಾರ್ಯಕ್ರಮ ನಡೆಯುತ್ತದೆ. ಇದು ತನ್ನ ಕೆಲಸಕ್ಕಾಗಿ ಹೊರಗಿನಿಂದ ಯಾವುದೇ ಹಣವನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ.

ಸುಳ್ಳು ಆರೋಪ ಮಾಡುವುದೇ ಕಾಂಗ್ರೆಸ್‌ ಕೆಲಸ; ಪ್ರಿಯಾಂಕ್ ಖರ್ಗೆ ಪತ್ರಕ್ಕೆ ವಿಎಚ್‌ಪಿ ಅಧ್ಯಕ್ಷ ಅಲೋಕ್ ಕುಮಾರ್ ತಿರುಗೇಟು
Alok Kumar
Image Credit source: x

Updated on: Jun 16, 2026 | 5:35 PM

ನವದೆಹಲಿ, ಜೂನ್ 16: ಕರ್ನಾಟಕ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಬರೆದಿದ್ದ ಬಹಿರಂಗ ಪತ್ರಕ್ಕೆ ವಿಶ್ವ ಹಿಂದೂ ಪರಿಷತ್ (VHP) ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಅವರು ನವದೆಹಲಿಯಲ್ಲಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಆರ್‌ಎಸ್‌ಎಸ್‌ನ ನೋಂದಣಿ ಮತ್ತು ಆದಾಯದ ಮೂಲಗಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಎತ್ತಿದ್ದ ಪ್ರಶ್ನೆಗಳಿಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕ ಅಲೋಕ್ ಕುಮಾರ್ ಉತ್ತರಿಸಿದ್ದಾರೆ. “ದೇಶದ ಎಲ್ಲಾ ಸಂಸ್ಥೆಗಳೂ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಹೇಳುವ ಕಾನೂನು ಎಲ್ಲಿದೆ ಎಂಬುದನ್ನು ಮೊದಲು ಖರ್ಗೆ ಉಲ್ಲೇಖಿಸಲಿ” ಎಂದು ಸವಾಲು ಹಾಕಿರುವ ಅವರು, ಸಂಘದ ‘ಗುರುದಕ್ಷಿಣೆ’ ನಿಧಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಇದೆ ಎಂದು ಹೈಕೋರ್ಟ್ ನೀಡಿರುವ ಹಳೆಯ ತೀರ್ಪುಗಳನ್ನು ನೆನಪಿಸಿದ್ದಾರೆ. ಅಲ್ಲದೆ, ಇಂತಹ ಟೀಕೆಗಳ ಮೂಲಕ ಆರ್‌ಎಸ್‌ಎಸ್ ವರ್ಚಸ್ಸಿಗೆ ಮಸಿ ಬಳಿಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್‌ಎಸ್‌ಎಸ್ ಸಂಸ್ಥೆಯ ಆರ್ಥಿಕ ಪಾರದರ್ಶಕತೆ ಮತ್ತು ನಿಧಿ ಸಂಗ್ರಹಣೆಯ ಬಗ್ಗೆ ಮಾತನಾಡಿರುವ ಅಲೋಕ್ ಕುಮಾರ್, ಸಂಘದ ಕಾರ್ಯವೈಖರಿಯನ್ನು ಸ್ಪಷ್ಟಪಡಿಸಿದ್ದಾರೆ. ಆರ್‌ಎಸ್‌ಎಸ್ ವಿಶ್ವಾದ್ಯಂತ ಯಾವುದೇ ಬಾಹ್ಯ ಸಂಸ್ಥೆಗಳಿಂದ, ವಿದೇಶಗಳಿಂದ ಅಥವಾ ಸಾರ್ವಜನಿಕರಿಂದ ದೇಣಿಗೆಯ ರೂಪದಲ್ಲಿ ಹಣವನ್ನು ಸ್ವೀಕರಿಸುವುದಿಲ್ಲ. ಸಂಘದ ಒಳಗೆ ವರ್ಷಕ್ಕೊಮ್ಮೆ ‘ಗುರುದಕ್ಷಿಣೆ’ ಕಾರ್ಯಕ್ರಮ ನಡೆಯುತ್ತದೆ. ಸಂಘದ ಸ್ವಯಂಸೇವಕರು ಮಾತ್ರ ತಮ್ಮ ಶಕ್ತ್ಯಾನುಸಾರ ನೀಡುವ ಕಾಣಿಕೆಯಿಂದಲೇ ಸಂಘದ ಎಲ್ಲಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ ಎಂದಿದ್ದಾರೆ.

ಇದನ್ನೂ ಓದಿ: ಆರ್​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್ ಇದ್ದ ರೈಲಿನ ಮೇಲೆ ಕಲ್ಲು ತೂರಾಟ

ಆದಾಯ ತೆರಿಗೆ ಇಲಾಖೆಯು 1967-68 ಮತ್ತು 1975-76ರಲ್ಲಿ ಆರ್‌ಎಸ್‌ಎಸ್ ತನ್ನ ಆದಾಯದ ಮೇಲೆ ತೆರಿಗೆ ಪಾವತಿಸಬೇಕು ಎಂದು ಮೌಲ್ಯಮಾಪನ ಅಧಿಕಾರಿಯ ಮೂಲಕ ಆದೇಶಗಳನ್ನು ಹೊರಡಿಸಿತ್ತು. ಆದರೆ, ಈ ಎರಡೂ ಪ್ರಕರಣಗಳಲ್ಲಿ ಪರಸ್ಪರ ನಂಬಿಕೆಯ ಕಾನೂನುಗಳ ಅಡಿಯಲ್ಲಿ ಗುರು ದಕ್ಷಿಣೆಯಿಂದ ಬರುವ ಆದಾಯಕ್ಕೆ ಆದಾಯ ತೆರಿಗೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ ಎಂದು ಹೇಳಿದ್ದಾರೆ.


ಪ್ರತಿಯೊಂದು ಸಂಸ್ಥೆಯೂ ಕಡ್ಡಾಯವಾಗಿ ಸರ್ಕಾರದ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎನ್ನುವ ಯಾವುದೇ ಕಡ್ಡಾಯ ಕಾನೂನು ಭಾರತದಲ್ಲಿ ಇಲ್ಲ. ಪ್ರಿಯಾಂಕ್ ಖರ್ಗೆಗೆ ಅಂತಹ ಕಾನೂನು ಗೊತ್ತಿದ್ದರೆ ಅದನ್ನು ಬಹಿರಂಗಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ. ಆರ್‌ಎಸ್‌ಎಸ್ ಆದಾಯ ತೆರಿಗೆ ಪಾವತಿಸುತ್ತಿಲ್ಲ ಎಂಬ ಕಾಂಗ್ರೆಸ್ ನಾಯಕರ ನಿರಂತರ ಆರೋಪಗಳಿಗೆ ವಿಎಚ್​ಪಿ ನಾಯಕ ಅಲೋಕ್ ಕುಮಾರ್ ಐತಿಹಾಸಿಕ ಮತ್ತು ಕಾನೂನಾತ್ಮಕ ದಾಖಲೆಗಳನ್ನು ನೆನಪಿಸಿದ್ದಾರೆ.

ಈ ಹಿಂದೆ 1967-68 ಮತ್ತು 1975-76ರ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆಯ ಮೌಲ್ಯಮಾಪನ ಅಧಿಕಾರಿಗಳು ಆರ್‌ಎಸ್‌ಎಸ್ ತನ್ನ ಆದಾಯಕ್ಕೆ ತೆರಿಗೆ ಪಾವತಿಸಬೇಕು ಎಂದು ಆದೇಶ ಹೊರಡಿಸಿದ್ದರು. ಆದರೆ, ಈ ಎರಡೂ ಪ್ರಕರಣಗಳ ವಿರುದ್ಧ ಕಾನೂನು ಹೋರಾಟ ನಡೆದಾಗ ಮಾನ್ಯ ಉಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಿತ್ತು. “ಪರಸ್ಪರ ನಂಬಿಕೆಯ ಕಾನೂನುಗಳ” ಅಡಿಯಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ನೀಡುವ ‘ಗುರು ದಕ್ಷಿಣೆ’ ಹಣಕ್ಕೆ ಯಾವುದೇ ಆದಾಯ ತೆರಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೀಗಾಗಿ, ಸಂಘದ ಆದಾಯ ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಆರ್‌ಎಸ್‌ಎಸ್​ನವರು ಹಿಂದುಗಳಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ನೆನಪಿಸುತ್ತಾ ತೀವ್ರ ವಾಗ್ದಾಳಿ ನಡೆಸಿದ ಅಲೋಕ್ ಕುಮಾರ್, “1948ರಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹತ್ಯೆಯಾದಾಗಿನಿಂದಲೂ ಕಾಂಗ್ರೆಸ್ ಪಕ್ಷವು ಆರ್‌ಎಸ್‌ಎಸ್ ವಿರುದ್ಧ ಇಂತಹದ್ದೇ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಾ ಬಂದಿದೆ. ಪ್ರಿಯಾಂಕ್ ಖರ್ಗೆ ಅವರು ಕೇವಲ ರಾಜಕೀಯ ಲಾಭಕ್ಕಾಗಿ ಹಾಗೂ ಸದ್ದು ಮಾಡುವುದಕ್ಕಾಗಿಯೇ ಇಂತಹ ಹಗುರವಾದ ವಾಗ್ದಾಳಿಗಳ ಮೂಲಕ ಸಂಘದ ಗೌರವಕ್ಕೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಆದರೆ, ಇಂತಹ ಸುಳ್ಳುಗಳು ಸಂಘದ ಸತ್ಕಾರ್ಯಗಳ ಮುಂದೆ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us