Kashmiri Pandits Exodus: ಕಾಶ್ಮೀರಿ ಪಂಡಿತರ ವಲಸೆಗೆ ಮಾಜಿ ಪ್ರಧಾನಿ ವಿಪಿ ಸಿಂಗ್, ಮುಫ್ತಿ ಸಯೀದ್ ಕಾರಣ ಎಂದ ಸುಬ್ರಮಣಿಯನ್ ಸ್ವಾಮಿ

ಕಾಶ್ಮೀರಿ ಪಂಡಿತರು ಕಣಿವೆ ರಾಜ್ಯದಿಂದ ಹೊರಬೀಳುವುದಕ್ಕೆ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಹಾಗೂ ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಮುಫ್ತಿ ಮೊಹಮದ್ ಸಯೀದ್ ಕಾರಣ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

Kashmiri Pandits Exodus: ಕಾಶ್ಮೀರಿ ಪಂಡಿತರ ವಲಸೆಗೆ ಮಾಜಿ ಪ್ರಧಾನಿ ವಿಪಿ ಸಿಂಗ್, ಮುಫ್ತಿ ಸಯೀದ್ ಕಾರಣ ಎಂದ ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ (ಸಂಗ್ರಹ ಚಿತ್ರ)
Follow us
| Updated By: Srinivas Mata

Updated on:Apr 02, 2022 | 9:28 PM

ಕಾಶ್ಮೀರಿ ಪಂಡಿತರು ಕಣಿವೆಯಿಂದ ಹೊರಬೀಳುವುದಕ್ಕೆ ಆಗಿನ ಪ್ರಧಾನಿ ವಿ.ಪಿ.ಸಿಂಗ್ ಮತ್ತು ಅವರ ಸಂಪುಟದ ಗೃಹ ಸಚಿವರಾದ ಮುಫ್ತಿ ಮೊಹಮದ್ ಸಯೀದ್​ ಕಾರಣರೇ ಹೊರತು, ಆಗ ಮುಖ್ಯಮಂತ್ರಿ ಆಗಿದ್ದ ಫಾರೂಕ್ ಅಬ್ದುಲ್ಲಾ ಅಲ್ಲ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ (Subramanian Swamy) ಶನಿವಾರ ಹೇಳಿದ್ದಾರೆ. “ದ ಕಾಶ್ಮೀರ್ ಫೈಲ್ಸ್” ಎಂಬ ಸಿನಿಮಾ ಸುತ್ತ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಸ್ವಾಮಿ ಅವರ ಹೇಳಿಕೆ ಬಂದಿದ್ದು, ಬಿಜೆಪಿ ಆಡಳಿತ ಇರುವ ಹಲವು ರಾಜ್ಯಗಳು ಸಿನಿಮಾಗೆ ತೆರಿಗೆ ತಿಯಾಯಿತಿ ನೀಡಿವೆ. “ಮುಸ್ಲಿಮರು ಮತ್ತು ಪಂಡಿತರು ಒಂದೇ ಥರ. ಅವರದು ಒಂದೇ ರಕ್ತ. ಒಂದು ವೇಳೆ ಇವರಿಬ್ಬರ ಡಿಎನ್​ಎ ಪರೀಕ್ಷಿಸಿದರೆ ಫಲಿತಾಂಶ ಒಂದೇ ಆಗಿರುತ್ತದೆ. ಅವರಿಗೆ (ಪಂಡಿತರಿಗೆ) ಅನ್ಯಾಯವಾಗಿದೆ, ಅದನ್ನು ನೀವೇ ಹೇಳುತ್ತಿದ್ದೀರಿ. ಸಂಪೂರ್ಣ ನಿಂದೆಯನ್ನು ಫಾರೂಕ್ ಅಬ್ದುಲ್ಲಾ ಅವರ ಮೇಲೆ ಹಾಕಲಾಗುತ್ತಿದೆ. ಆದರೆ ಇದನ್ನು ಮಾಡಿದ್ದು ವಿ.ಪಿ.ಸಿಂಗ್ ಮತ್ತು ಮುಫ್ತಿ (ಮೊಹಮದ್) ಸಯೀದ್,” ಎಂದು ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ್ ಶಾಂತಿ ಫೋರಂ ಆಯೋಜಿಸಿದ್ದ ಅಂತರಸಮುದಾಯ ಸಾಂಸ್ಕೃತಿಕ ಹಬ್ಬದಲ್ಲಿ ಅವರು ಮಾತನಾಡಿದ್ದಾರೆ. ಇನ್ನು ಇದೇ ವೇಳೆ ತಾವು ಕಾಶ್ಮೀರ್ ಫೈಲ್ಸ್ ನೋಡಿಲ್ಲ ಎಂದು ಹೇಳಿದ್ದಾರೆ. ಇನ್ನು ಸುಬ್ರಮಣಿಯನ್ ಸ್ವಾಮಿ ಅವರು ಸಯೀದ್​ರ ಮಗಳು ರುಬಿಯಾ ಸಯೀದ್ “ಅಪಹರಣ”ವನ್ನು ನೆನಪಿಸಿಕೊಂಡಿದ್ದಾರೆ. ಹೇಗೆ ರುಬಿಯಾ ಅಪಹರಣ ಆಯಿತು, ಬಂಧಿತ ಜೆಕೆಎಲ್​ಎಫ್​ ಉಗ್ರರ ಪೈಕಿ ಕೆಲವರನ್ನು ಬಿಡುಗಡೆ ಮಾಡುವುದಕ್ಕೆ ಒತ್ತಡ ಬಿದ್ದಿದ್ದು ಯಾವ ರೀತಿ ಎಂಬ ಸ್ಪಷ್ಟನೆ ಇವತ್ತಿನ ತನಕ ಸಿಕ್ಕಿಲ್ಲ ಎಂದಿದ್ದಾರೆ.

“ಅವರ (ಮುಫ್ತಿ ಮೊಹಮದ್ ಸಯೀದ್) ಮಗಳು ಅಹ ಅಪಹರಣವಾಗಿದ್ದು ಹೇಗೆ ಎಂಬುದು ಸಹ ನಮಗೆ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಏಕೆಂದರೆ ಚಂದ್ರಶೇಖರ್ ಸರ್ಕಾರದಲ್ಲಿ ನಾನು ಸಚಿವನಾದಾಗ, (ಆಗಿನ ನ್ಯಾಷನಲ್ ಕಾನ್ಫರೆನ್ಸ್ ಸಂಸದರು) ಸೈಫುದ್ದೀನ್ ಸೋಜ್ ಮಗಳನ್ನು ಸಹ ಜೆಕೆಎಲ್​ಎಫ್​ ಉಗ್ರರಿಂದ ಅಪಹರಿಸಲಾಯಿತು. ಮುಫ್ತಿ (ಸಯೀದ್) ಮತ್ತು ವಿ.ಪಿ.ಸಿಂಗ್ ಹದಿಮೂರು ಮಂದಿಯನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಆದರೆ ನಾವು ಒಬ್ಬ ವ್ಯಕ್ತಿಯನ್ನೂ ಬಿಡುಗಡೆ ಮಾಡಲಿಲ್ಲ,” ಎಂದಿದ್ದಾರೆ. ಕೊನೆಗೆ ಸೋಜ್​ರ ಮಗಳನ್ನು ಜೆಕೆಎಲ್​ಎಫ್​ನಿಂದ ಬಿಡುಗಡೆ ಮಾಡಿ, ಆಟೋರಿಕ್ಷಾದಲ್ಲಿ ಮನೆಗೆ ಬಿಡಲಾಯಿತು. ಅವರು ನಮ್ಮ ಎಚ್ಚರಿಕೆಗೆ ಹೆದರಿದರು. ನಾವು ರಾಜೀ ಮಾಡಿಕೊಳ್ಳುವ ಜಾಯಮಾನದವರಲ್ಲ ಎಂದು ಅವರು ಹೇಳಿದ್ದಾರೆ.

ಈ ಹಿಂದೆ, ನ್ಯಾಷನಲ್ ಕಾನ್ಫರೆನ್ಸ್ ಸ್ಥಾಪಕರಾದ ಫಾರೂಕ್ ಅಬ್ದುಲ್ಲಾ ಅವರಿಗೆ ಕೇಂದ್ರದ ಮಾಜಿ ಸಚಿವ ಮತ್ತು ಕೇರಳ ರಾಜ್ಯಪಾಲ ಅರೀಫ್ ಮೊಹಮ್ಮದ್ ಖಾನ್ ಬೆಂಬಲ ದೊರೆತಿತ್ತು. ಸಯೀದ್ ಮಗಳಿಗೆ ಬದಲಿಯಾಗಿ ಉಗ್ರರ ವಿನಿಮಿಯ ಮಾಡಿಕೊಳ್ಳುವುದಕ್ಕೆ ಅಬ್ದುಲ್ಲಾ ವಿರೋಧಿಸಿದ್ದರು ಎಂದು ಖಾನ್ ಹೇಳಿದ್ದರು. 2019ರಲ್ಲಿ ಕೇಂದ್ರ ಜಾರಿಗೆ ತಂದ ಪರಿಚ್ಛೇದ 370 ಅನ್ನು ಮರಳಿ ತರುವ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಜನ ಮರೆತುಬಿಡಬೇಕು. ವಿಶೇಷ ಸಾಂವಿಧಾನಿಕ ಸ್ಥಾನಮಾನ ಇನ್ಯಾವತ್ತೂ ವಾಪಸ್ ಆಗಲ್ಲ ಎಂದಿದ್ದಾರೆ.

ಪಾಕಿಸ್ತಾನ್ ಆಕ್ರಮಿತ ಕಾಶ್ಮೀರ್ ಮತ್ತು ಅಕ್ಸಾಯ್ ಚೀನ್ ಹಿಂಪಡೆಯುವುದರ ಕಡೆಗೆ ದೇಶವು ಹೆಚ್ಚು ಗಮನ ಹರಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲ; ಕೇಂದ್ರ ಸರ್ಕಾರಕ್ಕೆ ರಿಪೋರ್ಟ್ ಕಾರ್ಡ್ ಕೊಟ್ಟು ಟೀಕಿಸಿದ ಸುಬ್ರಹ್ಮಣಿಯನ್ ಸ್ವಾಮಿ

Published On - 9:26 pm, Sat, 2 April 22