ವಕ್ಫ್ ಮಸೂದೆ:ಸಂಸದೀಯ ಸಮಿತಿಯ ಸಭೆಯಿಂದ ಹೊರನಡೆದ ವಿಪಕ್ಷ ಸಂಸದರು

|

Updated on: Oct 15, 2024 | 3:11 PM

ಸೋಮವಾರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಕ್ಫ್ ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದ ನಂತರ, ಸಮಿತಿಯು ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಹಲವು ವಿರೋಧ ಪಕ್ಷದ ಸಂಸದರು ಸಭೆಯನ್ನು ಬಹಿಷ್ಕರಿಸಿದರು.

ವಕ್ಫ್ ಮಸೂದೆ:ಸಂಸದೀಯ ಸಮಿತಿಯ ಸಭೆಯಿಂದ ಹೊರನಡೆದ ವಿಪಕ್ಷ ಸಂಸದರು
ವಕ್ಫ್ ಸಭೆ
Follow us on

ದೆಹಲಿ ಅಕ್ಟೋಬರ್ 15: ವಕ್ಫ್ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿಗಳು ಮಂಡಿಸಿದ ಮಂಡನೆಯನ್ನು ಆಲಿಸುತ್ತಿದ್ದ ಸಂಸದೀಯ ಸಮಿತಿಯ ಸಭೆಯಿಂದ ವಿರೋಧ ಪಕ್ಷದ ಸದಸ್ಯರು ಹೊರನಡೆದಿದ್ದಾರೆ. ಬಿಜೆಪಿ ಸದಸ್ಯರು ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಂಜಯ್ ಸಿಂಗ್, ಕಲ್ಯಾಣ್ ಬ್ಯಾನರ್ಜಿ, ಗೌರವ್ ಗೊಗೊಯ್, ಎ ರಾಜಾ, ಮೊಹಮದ್ ಅಬ್ದುಲ್ಲಾ ಮತ್ತು ಅರವಿಂದ್ ಸಾವಂತ್ ಸೇರಿದಂತೆ ಹಲವು ವಿರೋಧ ಪಕ್ಷದ ಸಂಸದರು ಮಂಗಳವಾರ ವಕ್ಫ್ (ತಿದ್ದುಪಡಿ) ಮಸೂದೆಯ ಜಂಟಿ ಸಮಿತಿಯ ಸಭೆಯಿಂದ ಹೊರನಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಸುಮಾರು ಒಂದು ಗಂಟೆಗಳ ಕಾಲ ಕಲಾಪದಿಂದ ದೂರ ಉಳಿದ ವಿಪಕ್ಷ ಸದಸ್ಯರು ಮತ್ತೆ ಸಭೆ ಸೇರಿದರು. ಆದರೆ, ವಿಪಕ್ಷ ಸದಸ್ಯರು ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರನ್ನು ನಿಂದಿಸುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಕಿಡಿಕಾರಿದರು. ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ವಿಪಕ್ಷ ಸದಸ್ಯರು ಸಭೆಯಿಂದ ಹೊರನಡೆದಿರುವುದು ಇದು ಸತತ ಎರಡನೇ ದಿನವಾಗಿದೆ.

ಸೋಮವಾರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಕ್ಫ್ ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದ ನಂತರ, ಸಮಿತಿಯು ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಹಲವು ವಿರೋಧ ಪಕ್ಷದ ಸಂಸದರು ಸಭೆಯನ್ನು ಬಹಿಷ್ಕರಿಸಿದರು.

ಸಂಸತ್ತಿನ ಜಂಟಿ ಸಮಿತಿಯ ಸುದೀರ್ಘ ಸಭೆಗಳು ಅದರ ಬಿಜೆಪಿ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ವಾಕ್ ತರ್ಕವುಂಟಾಗಿದೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರ ಅಹವಾಲು ಸಲ್ಲಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದರು.ಅನ್ವರ್ ಮಾಣಿಪ್ಪಾಡಿ ಕರ್ನಾಟಕ ಬಿಜೆಪಿಯ ಮಾಜಿ ಉಪಾಧ್ಯಕ್ಷರೂ ಆಗಿದ್ದಾರೆ.

ಖರ್ಗೆ ಮತ್ತು ರೆಹಮಾನ್ ಖಾನ್ ಸೇರಿದಂತೆ ಕರ್ನಾಟಕದ ಹಲವಾರು ಕಾಂಗ್ರೆಸ್ ನಾಯಕರು ವಕ್ಫ್ ಆಸ್ತಿಯನ್ನು ಕಬಳಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಾಣಿಪ್ಪಾಡಿ ಆರೋಪಿಸಿದರು. ಈ ಸಮಿತಿಗಳ ಸಭೆಗಳಲ್ಲಿ “ಉನ್ನತ ಗಣ್ಯರ” ವಿರುದ್ಧ “ಸಾಬೀತುಪಡಿಸದ ಆರೋಪಗಳನ್ನು” ಮಾಡಲಾಗುವುದಿಲ್ಲ ಎಂದು ಪ್ರತಿಪಕ್ಷದ ಸಂಸದರು ಸಂಸದೀಯ ಸಮಿತಿಗಳ ನಡಾವಳಿಗಳನ್ನು ನಿಯಂತ್ರಿಸುವ ನಿಯಮಗಳನ್ನು ಉಲ್ಲೇಖಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಮಾಣಿಪ್ಪಾಡಿ ಅವರು, ಮಸೂದೆಯನ್ನು ವಿರೋಧಿಸಬೇಡಿ ಎಂದು ಮುಸ್ಲಿಮರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: SCO summit: ಇಂದು ಎಸ್‌ಸಿಒ ಶೃಂಗಸಭೆ; ಪಾಕಿಸ್ತಾನ ತಲುಪಲಿದ್ದಾರೆ ಜೈಶಂಕರ್

ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಇಲ್ಲದವರ ವಿರುದ್ಧ ಆರೋಪ ಮಾಡುವಂತಿಲ್ಲ ಎಂದು ವಿರೋಧ ಪಕ್ಷದ ಸಂಸದರೊಬ್ಬರು ಹೇಳಿದ್ದಾರೆ.

ಸಮಿತಿಯ ಅಧ್ಯಕ್ಷ ಬಿಜೆಪಿ ನಾಯಕ ಜಗದಾಂಬಿಕಾ ಪಾಲ್, ಆಕ್ಷೇಪಣೆಗಳನ್ನು ತಳ್ಳಿಹಾಕಿದ್ದಾರೆ. ಜಮೀಯತ್ ಉಲೇಮಾ-ಎ-ಹಿಂದ್‌ನ ಮೆಹಮೂದ್ ಮದನಿ ಕೂಡ ಸಮಿತಿಯ ಮುಂದೆ ಹಾಜರಾಗಿದ್ದರು. ವಕ್ಫ್ ಮಸೂದೆಯಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಗಳನ್ನು ಅವರ ಸಂಘಟನೆಯು ವಿರೋಧಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ