ಮಮತಾ ಬ್ಯಾನರ್ಜಿ ಮುರ್ಷಿದಾಬಾದ್ಗೆ ಭೇಟಿ ನೀಡದಿದ್ದಕ್ಕೆ ಬಿಜೆಪಿ ಟೀಕೆ
ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಏಪ್ರಿಲ್ 11ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಯಾದ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಹಿಂಸಾಚಾರ ಭುಗಿಲೆದ್ದಿತು. ತಮಿಳುನಾಡು ರಾಜ್ಯಪಾಲರು ಮತ್ತು ವಕ್ಫ್ ಕಾನೂನನ್ನು ಒಳಗೊಂಡ ಸುಪ್ರೀಂ ಕೋರ್ಟ್ ಆದೇಶಗಳ ಹಿನ್ನೆಲೆಯಲ್ಲಿ ನ್ಯಾಯಾಂಗವು ಕಾರ್ಯಾಂಗ ಮತ್ತು ಸಂಸದೀಯ ಜಾಗವನ್ನು ಅತಿಕ್ರಮಿಸುತ್ತಿದೆ ಎಂಬ ಇತ್ತೀಚಿನ ಆರೋಪಗಳು ಇಂದು ಸುಪ್ರೀಂ ಕೋರ್ಟ್ನಲ್ಲಿ ಪ್ರತಿಧ್ವನಿಸಿದವು.

ಕೊಲ್ಕತ್ತಾ, ಏಪ್ರಿಲ್ 21: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (CM Mamata Banerjee) ಅವರ ಮೇಲೆ ಇಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ತೀವ್ರ ವಾಗ್ದಾಳಿ ನಡೆಸಿದ್ದು, ಹಿಂದೂಗಳ ಮೇಲಿನ ದ್ವೇಷದಿಂದಾಗಿ ಮುರ್ಷಿದಾಬಾದ್ ಹಿಂಸಾಚಾರದಲ್ಲಿ ಸಾವನ್ನಪ್ಪಿದವರು ಮತ್ತು ಗಾಯಗೊಂಡವರನ್ನು ಅವರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದೆ.
ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಸಂಸದ ಮತ್ತು ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ, “ಮಮತಾ ಬ್ಯಾನರ್ಜಿ ಹಿಂದೂಗಳನ್ನು ದ್ವೇಷಿಸುತ್ತಾರೆ” ಎಂದು ಟೀಕಿಸಿದ್ದಾರೆ. ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದ ಮುರ್ಷಿದಾಬಾದ್ಗೆ ಮಮತಾ ಬ್ಯಾನರ್ಜಿ ಭೇಟಿ ನೀಡದಿರುವ ಬಗ್ಗೆ ಬಿಜೆಪಿ ನಾಯಕರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಬಂಗಾಳದ ಮುರ್ಷಿದಾಬಾದ್ನಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
“ಮುಸ್ಲಿಮರ ವಿರುದ್ಧ ಇಂತಹ ದೌರ್ಜನ್ಯಗಳು ನಡೆದಿದ್ದರೆ ಮಮತಾ ಬ್ಯಾನರ್ಜಿ ಅಲ್ಲಿ ಆಂದೋಲನ ನಡೆಸಿ ಅಲ್ಲಿಯೇ ಬೀಡು ಬಿಡುತ್ತಿದ್ದರು. ಆದರೆ, ಹಿಂದೂಗಳನ್ನು ಅವರು ಬೇಕೆಂದೇ ನಿರ್ಲಕ್ಷ್ಯಿಸಿದ್ದಾರೆ” ಎಂದು ಸಂಬಿತ್ ಪಾತ್ರಾ ಆರೋಪಿಸಿದರು.
ಮುರ್ಷಿದಾಬಾದ್ ಹಿಂಸಾಚಾರದ ಇಬ್ಬರು ಮೃತರು ಹಿಂದೂಗಳಾಗಿರುವುದರಿಂದ ಟಿಎಂಸಿ ಅವರನ್ನು ನಿರ್ಲಕ್ಷ್ಯಿಸಿದೆ ಎಂದು ಆರೋಪಿಸಿದ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಏಪ್ರಿಲ್ 11ರಂದು ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಯಾದ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಹಿಂಸಾಚಾರ ಭುಗಿಲೆದ್ದಿತು. ಈ ಪ್ರತಿಭಟನೆ ಹಿಂಸಾತ್ಮಕವಾಯಿತು. ಇದರ ಪರಿಣಾಮವಾಗಿ ಇಬ್ಬರು ಸಾವನ್ನಪ್ಪಿದರು, ಹಲವಾರು ಜನರಿಗೆ ಗಾಯಗಳಾಯಿತು ಮತ್ತು ಆಸ್ತಿಪಾಸ್ತಿ ಹಾನಿಯಾಯಿತು. ಸುರಕ್ಷತೆಗಾಗಿ ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ