ಅಮಿತ್ ಶಾ, ಮೋದಿಯನ್ನು ಮಹಾಭಾರತದ ದುಶ್ಯಾಸನ, ದುರ್ಯೋಧನನಿಗೆ ಹೋಲಿಸಿದ ಸಿಎಂ ಮಮತಾ ಬ್ಯಾನರ್ಜಿ

ನಿನ್ನೆ ಕೊಲ್ಕತ್ತಾಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಬಂಗಾಳ ಭಯೋತ್ಪಾದಕರ ಕೇಂದ್ರವಾಗಿದೆ ಎಂದು ಅಮಿತ್ ಶಾ ಆರೋಪಿಸಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿರುವ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಭಯೋತ್ಪಾದಕರು ಇದ್ದರೆ ನೀವೇ ಪಹಲ್ಗಾಮ್ ದಾಳಿ ನಡೆಸಿದ್ದೀರಾ? ಎಂದು ಅಮಿತ್ ಶಾ ಅವರನ್ನು ಪ್ರಶ್ನಿಸಿದ್ದಾರೆ.

ಅಮಿತ್ ಶಾ, ಮೋದಿಯನ್ನು ಮಹಾಭಾರತದ ದುಶ್ಯಾಸನ, ದುರ್ಯೋಧನನಿಗೆ ಹೋಲಿಸಿದ ಸಿಎಂ ಮಮತಾ ಬ್ಯಾನರ್ಜಿ
Mamata Banerjee

Updated on: Dec 30, 2025 | 5:09 PM

ಕೊಲ್ಕತ್ತಾ, ಡಿಸೆಂಬರ್ 30: ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಭಯೋತ್ಪಾದಕ ಜಾಲಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸೋಮವಾರ ತಮ್ಮ ಕೊಲ್ಕತ್ತಾ ಭೇಟಿಯ ವೇಳೆ ಆರೋಪಿಸಿದ್ದರು. ಇದಕ್ಕೆ ಇಂದು ತಿರುಗೇಟು ನೀಡಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾಭಾರತದ ಇಬ್ಬರು ಖಳ ನಾಯಕರಾದ ದುಶ್ಯಾಸನ ಮತ್ತು ದುರ್ಯೋಧನನಿಗೆ ಹೋಲಿಸಿದ್ದಾರೆ.

ಬಂಗಾಳದ ಬಂಕುರಾದ ಬಿರ್ಸಿಂಗ್‌ಪುರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, “ಶಕುನಿಯ ಶಿಷ್ಯ ದುಶ್ಶಾಸನ ಮಾಹಿತಿಯನ್ನು ಸಂಗ್ರಹಿಸಲು ಬಂಗಾಳಕ್ಕೆ ಬಂದಿದ್ದಾನೆ. ಚುನಾವಣೆ ಹತ್ತಿರ ಬಂದ ತಕ್ಷಣ ದುಶ್ಶಾಸನ ಮತ್ತು ದುರ್ಯೋಧನ ಇಬ್ಬರೂ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತಾರೆ” ಎಂದು ಟೀಕಿಸಿದ್ದಾರೆ. ಡಿಸೆಂಬರ್ 20ರಂದು ಪ್ರಧಾನಿ ಮೋದಿ ಬಂಗಾಳಕ್ಕೆ ಭೇಟಿ ನೀಡಿದ್ದರು. 2026ರ ಬಂಗಾಳ ಚುನಾವಣೆಗೂ ಮುಂಚಿತವಾಗಿ ಅಮಿತ್ ಶಾ ಪ್ರಸ್ತುತ ಪಶ್ಚಿಮ ಬಂಗಾಳ ರಾಜ್ಯಕ್ಕೆ 3 ದಿನಗಳ ಭೇಟಿಯಲ್ಲಿದ್ದಾರೆ.


ಇದನ್ನೂ ಓದಿ: ಇನ್ನೊಮ್ಮೆ ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಹೊರಹಾಕುತ್ತೇವೆ; ಅಮಿತ್ ಶಾ

“ಪಶ್ಚಿಮ ಬಂಗಾಳ ಭಯೋತ್ಪಾದಕರ ನೆಲೆಯಾಗಿದೆ ಎಂದಾದರೆ ಪಹಲ್ಗಾಮ್ ದಾಳಿಯನ್ನು ನಮ್ಮ ಕೇಂದ್ರ ಸರ್ಕಾರವೇ ಕಾರ್ಯಗತಗೊಳಿಸಿದೆಯೇ? ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರೇ ಇಲ್ಲದಿದ್ದರೆ, ಪಹಲ್ಗಾಮ್‌ನಲ್ಲಿ ದಾಳಿ ಹೇಗೆ ನಡೆಯಿತು? ನೀವು ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದೀರಾ? ದೆಹಲಿಯಲ್ಲಿ ನಡೆದ ಘಟನೆಯ ಹಿಂದೆ ಯಾರ ಕೈವಾಡವಿದೆ?” ಎಂದು ಅಮಿತ್ ಶಾ ಅವರನ್ನು ಸಿಎಂ ಮಮತಾ ಬ್ಯಾನರ್ಜಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Tue, 30 December 25