ಪಶ್ಚಿಮ ಬಂಗಾಳ: 4,800 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು, ಗಡಿ ಭದ್ರತೆ ನಮ್ಮ ಆದ್ಯತೆ ಎಂದ ಸಿಎಂ ಸುವೇಂದು

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ 4,800 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು ಘೋಷಿಸಿದರು. ಗಡಿ ಭದ್ರತೆ, ಅಕ್ರಮ ವಲಸೆ ತಡೆಗಟ್ಟುವುದು ಸರ್ಕಾರದ ಆದ್ಯತೆ ಎಂದರು. ಗಡಿ ರಕ್ಷಣೆಗೆ 100 ಕಿ.ಮೀ ಭೂಮಿ ಹಸ್ತಾಂತರ, ಜನಗಣತಿ ಯೋಜನೆ, ಅನ್ನಪೂರ್ಣ ಯೋಜನೆ ಲೋಪದೋಷಗಳ ಸರಿಪಡಿಸುವಿಕೆ, ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ಕುರಿತು ಬೆಳಕು ಚೆಲ್ಲಿದರು. ಜೂನ್ 22 ರಂದು ರಾಜ್ಯ ಬಜೆಟ್ ಮಂಡನೆ.

ಪಶ್ಚಿಮ ಬಂಗಾಳ: 4,800 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು, ಗಡಿ ಭದ್ರತೆ ನಮ್ಮ ಆದ್ಯತೆ ಎಂದ ಸಿಎಂ ಸುವೇಂದು
ಸುವೇಂದು ಅಧಿಕಾರಿ
Image Credit source: PTI

Updated on: Jun 08, 2026 | 9:39 AM

ಕೋಲ್ಕತ್ತಾ, ಜೂನ್ 08: ಬಾಂಗ್ಲಾದೇಶದ 4,800 ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ(Suvendu Adhikari) ಹೇಳಿದ್ದಾರೆ. ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಸುರಕ್ಷಿತಗೊಳಿಸುವುದು ಮತ್ತು ಅಕ್ರಮ ವಲಸೆಯನ್ನು ತಡೆಗಟ್ಟುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆ ಎಂದು ಹೇಳಿದ್ದಾರೆ. ಬಿಜೆಪಿಯ ವಿಶೇಷ ತರಬೇತಿ ಶಿಬಿರದ ಪೂರ್ವಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಗಡಿ ಜಿಲ್ಲೆಗಳ ವಸತಿ ಕೇಂದ್ರಗಳಿಂದ ಈಗಾಗಲೇ ಸುಮಾರು 4,800 ಅಕ್ರಮ ವಲಸಿಗರನ್ನು ಬಾಂಗ್ಲಾದೇಶಕ್ಕೆ ಯಶಸ್ವಿಯಾಗಿ ಗಡೀಪಾರು ಮಾಡಲಾಗಿದ್ದು, ಇನ್ನುಳಿದ 836 ಜನರ ಸ್ವದೇಶಿ ವಾಪಸಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಗಡಿ ಭದ್ರತೆ ಮತ್ತು ಜನಗಣತಿ ಯೋಜನೆಗಳು
ಗಡಿ ರಕ್ಷಣೆಯನ್ನು ಬಲಪಡಿಸುವುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರವು ಇನ್ನೂ ತಡೆಗೋಡೆ ನಿರ್ಮಾಣ ಬಾಕಿ ಇರುವ 556 ಕಿ.ಮೀ ವ್ಯಾಪ್ತಿಯ ಪೈಕಿ 100 ಕಿ.ಮೀ ಭೂಮಿಯನ್ನು ಈಗಾಗಲೇ ಭದ್ರತಾ ಪಡೆಗೆ ಹಸ್ತಾಂತರಿಸಿದೆ. ಈ ಪೈಕಿ ಉತ್ತರ ಬಂಗಾಳದ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಚಿಕನ್ಸ್​ ನೆಕ್ ವಲಯಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಪಾರದರ್ಶಕ ಆಡಳಿತವನ್ನು ತರಲು ಜನಗಣತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಆಗಸ್ಟ್ 1 ರಿಂದ ಆಗಸ್ಟ್ 15 ರವರೆಗೆ ಮನೆ-ಮನೆ ಸಮೀಕ್ಷೆ ನಡೆಯಲಿದೆ. ಮುಂದಿನ ವರ್ಷದ ಫೆಬ್ರವರಿ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಂಡು, ಗಡಿ ವಿಂಗಡಣೆ ಕಾರ್ಯಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.

ಮತ್ತಷ್ಟು ಓದಿ: ಬಂಗಾಳದಲ್ಲಿ ಕೇಸರಿ ಯುಗಾರಂಭ: ಮೇ 9 ರಂದು ಬಿಜೆಪಿ ಸರ್ಕಾರದ ಪಟ್ಟಾಭಿಷೇಕ, ಸಿಎಂ ರೇಸ್‌ನಲ್ಲಿ ಸುವೇಂದು ಅಧಿಕಾರಿ ಮುಂಚೂಣಿ

ಅನ್ನಪೂರ್ಣ ಯೋಜನೆ ಮತ್ತು ಫಲಾನುಭವಿಗಳ ಪರಿಶೀಲನೆ
ಹಿಂದಿನ ಸರ್ಕಾರದ ‘ಲಕ್ಷ್ಮಿರ್ ಭಂಡಾರ್’ ಯೋಜನೆಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿ, ಅರ್ಹ ಮಹಿಳೆಯರ ಸಬಲೀಕರಣಕ್ಕಾಗಿ ತರಲಾದ ‘ಅನ್ನಪೂರ್ಣ ಯೋಜನೆ’ಯಡಿಯಲ್ಲಿ ಪ್ರಸ್ತುತ 50 ಲಕ್ಷ ಮಹಿಳೆಯರು ತಲಾ 3,000 ರೂ.ಗಳ ಆರ್ಥಿಕ ನೆರವನ್ನು ಪಡೆದಿದ್ದಾರೆ. ಯೋಜನೆ ಜಾರಿಯಾದ ಮೊದಲ ದಿನವೇ 28 ಲಕ್ಷಕ್ಕೂ ಹೆಚ್ಚು ಮಹಿಳೆಯರ ಖಾತೆಗೆ ಹಣ ತಲುಪಿದೆ.

ಹಳೆಯ ಯೋಜನೆಯಲ್ಲಿದ್ದ ಅಪಾಯಕಾರಿ ಆರ್ಥಿಕ ಅಕ್ರಮಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಫಲಾನುಭವಿಗಳ ಪಟ್ಟಿಯಲ್ಲಿದ್ದ ಸುಮಾರು 27 ಲಕ್ಷ ಹೆಸರುಗಳು ಮತದಾರರ ಪಟ್ಟಿಯಲ್ಲೇ ಇರಲಿಲ್ಲ ಮತ್ತು ಮಹಿಳೆಯರಿಗಾಗಿ ಮೀಸಲಾದ ಯೋಜನೆಯಲ್ಲಿ ಸುಮಾರು ಮೂರು ಲಕ್ಷ ಪುರುಷರು ಅಕ್ರಮವಾಗಿ ಸೌಲಭ್ಯ ಪಡೆದಿದ್ದರು ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಜಾರಿಗೆ ತರಲಾದ ಕಟ್ಟುನಿಟ್ಟಾದ ಪರಿಶೀಲನಾ ಪ್ರಕ್ರಿಯೆಯು ಕಲ್ಯಾಣ ವಿತರಣಾ ವ್ಯವಸ್ಥೆಯನ್ನು ದೀರ್ಘಾವಧಿಯಲ್ಲಿ ಬಲಪಡಿಸಲಿದೆ ಎಂದು ಅವರು ಸಮರ್ಥಿಸಿಕೊಂಡರು.

ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಬಜೆಟ್ ಮುನ್ನೋಟ
ಹಿಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿವಿಧ ವಲಯಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ತನಿಖೆಗಳ ಮೂಲಕ ಅಕ್ರಮಗಳು ಬಯಲಾಗುತ್ತಿವೆ. ಸರ್ಕಾರ ಬದಲಾವಣೆಯಾದ ನಂತರ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಭ್ರಷ್ಟಾಚಾರದಲ್ಲಿ ಭಾಗಿಯಾದ ಹಲವು ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳನ್ನು ಬಂಧಿಸಲಾಗಿದೆ ಎಂದು ಸಿಎಂ ತಿಳಿಸಿದರು.

ಮುಂದಿನ ಜೂನ್ 22 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಆರೋಗ್ಯ, ಸಾರ್ವಜನಿಕ ಕಲ್ಯಾಣ ಮತ್ತು ಸರ್ಕಾರಿ ನೌಕರರ ತುಟ್ಟಿ ಭತ್ಯೆ (DA) ಕುರಿತಾಗಿ ಹಲವು ಪ್ರಮುಖ ಪ್ರಕಟಣೆಗಳನ್ನು ಹೊರಡಿಸಲಾಗುವುದು ಎಂದು ಸುವೇಂದು ಅಧಿಕಾರಿ ಭರವಸೆ ನೀಡಿದರು. ಇದರ ಜೊತೆಗೆ, ಮುಂಬರುವ ವಾರದಿಂದ ರಾಜ್ಯದ ಜನರಿಗಾಗಿ ಕೇವಲ 5 ರೂಪಾಯಿ ಸಬ್ಸಿಡಿ ದರದಲ್ಲಿ ಮೀನು ಊಟದ ಸೌಲಭ್ಯವನ್ನು ಪರಿಚಯಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us