ಬಂಗಾಳದ ಸಿಎಂ ಸುವೇಂದು ಅಧಿಕಾರಿ ಪಿಎ ಹತ್ಯೆ; ಕೊನೆಗೂ ಸೆರೆಸಿಕ್ಕ ಪ್ರಮುಖ ಶೂಟರ್
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕನ ಕೊಲೆ ಪ್ರಕರಣದ ಆರೋಪಿ ರಾಜ್ಕುಮಾರ್ ಸಿಂಗ್ನನ್ನು ಮುಜಫರ್ನಗರ ಪೊಲೀಸರ ಸಹಯೋಗದೊಂದಿಗೆ ಸಿಬಿಐ ಬಂಧಿಸಿದೆ. ಮುಖ್ಯ ಆರೋಪಿಯನ್ನು ಮುಜಫರ್ನಗರದಲ್ಲಿ ಬಂಧಿಸಲಾಗಿದ್ದು ಆತ ಪ್ರಮುಖ ಶೂಟರ್ ಆಗಿದ್ದಾನೆ. ಸಿಬಿಐ ಆರೋಪಿಯನ್ನು ಟ್ರಾನ್ಸಿಟ್ ರಿಮಾಂಡ್ನಲ್ಲಿ ಇರಿಸಿದೆ. ಈ ಮೂಲಕ ಕೊಲೆ ನಡೆದ 12 ದಿನಗಳೊಳಗೆ ಎಲ್ಲ ಆರೋಪಿಗಳನ್ನೂ ಬಂಧಿಸಲಾಗಿದೆ.

ಕೊಲ್ಕತ್ತಾ, ಮೇ 18: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ (Chandranath Rath) ಅವರ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಕೊನೆಗೂ ಯಶಸ್ಸು ಸಿಕ್ಕಿದೆ. ಈ ಹೈಪ್ರೊಫೈಲ್ ಸುಪಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮತ್ತು ಬಿಹಾರದ ಗಡಿ ಭಾಗಗಳಲ್ಲಿ ಮೂವರು ಶಾರ್ಪ್ಶೂಟರ್ಗಳನ್ನು ಪಶ್ಚಿಮ ಬಂಗಾಳದ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಇವರಲ್ಲಿ ಪ್ರಮುಖ ಶೂಟರ್ ರಾಜ್ಕುಮಾರ್ ಅಲಿಯಾಸ್ ರಾಜ್ ಸಿಂಗ್ ಕೂಡ ಸೇರಿದ್ದಾರೆ. ಕೊಲೆ ನಡೆದ 12 ದಿನಗಳ ಬಳಿಕ ಕೊನೆಗೂ ಪ್ರಮುಖ ಆರೋಪಿ ಸೆರೆಸಿಕ್ಕಿದ್ದಾನೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಎರಡು ದಿನಗಳ ನಂತರ ಮೇ 6ರ ರಾತ್ರಿ ಸಿಎಂ ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಚಂದ್ರನಾಥ್ ಕೊಲ್ಕತ್ತಾಗೆ ತೆರಳುತ್ತಿದ್ದಾಗ, ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದ ದೋಲತಲಾ ಪ್ರದೇಶದಲ್ಲಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಪ್ರಸ್ತುತ ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ದೇಶಸೇವೆಯಿಂದ ರಾಜಕೀಯ ವ್ಯೂಹದತ್ತ, ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಸುವೇಂದು ಆಪ್ತ ಚಂದ್ರನಾಥ್ ರಥ್ ಯಾರು?
ಏನಿದು ಪ್ರಕರಣ?:
ಮೇ 6ರಂದು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ್ನ ದೋಹಾರಿಯಾ ಎಂಬಲ್ಲಿ ಚಂದ್ರನಾಥ್ ರಥ್ ತಮ್ಮ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಹೋಗುತ್ತಿದ್ದಾಗ, ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಅತಿ ಹತ್ತಿರದಿಂದ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಚಂದ್ರನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರ ಕಾರು ಚಾಲಕ ತೀವ್ರವಾಗಿ ಗಾಯಗೊಂಡಿದ್ದರು. ಈ ಘಟನೆಯ ತನಿಖೆಗೆ ಎಸ್ಐಟಿ ರಚಿಸಲಾಗಿತ್ತು. ಬಳಿಕ ಸಿಬಿಐಗೆ ತನಿಖೆ ವಹಿಸಲಾಗಿತ್ತು.
ಇದನ್ನೂ ಓದಿ: ಸುವೇಂದು ಅಧಿಕಾರಿ ಪಿಎ ಚಂದ್ರನಾಥ್ ಹತ್ಯೆ ಪ್ರಕರಣ; ಎಸ್ಐಟಿ ತನಿಖೆಗೆ ಆದೇಶ
ಇದುವರೆಗೂ ಮಯಾಂಕ್ ರಾಜ್ ಮಿಶ್ರಾ, ವಿಕ್ಕಿ ಮೌರ್ಯ, ಮತ್ತು ರಾಜ್ಕುಮಾರ್ ಸಿಂಗ್ (ರಾಜ್ ಸಿಂಗ್) ಎಂಬುವವರನ್ನು ಬಂಧಿಸಲಾಗಿದೆ. ಇವರು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಕುಖ್ಯಾತ ಶಾರ್ಪ್ಶೂಟರ್ಗಳಾಗಿದ್ದಾರೆ. ನ್ಯಾಯಾಲಯವು ಅವರನ್ನು 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

