ಬರ್ತ್ ಸರ್ಟಿಫಿಕೆಟ್ ಇಲ್ಲದ ಕಾರಣ 6 ವರ್ಷದ ಬಾಲಕಿಗೆ ಶಿಕ್ಷಣದ ಅವಕಾಶವೇ ಸಿಗಲಿಲ್ಲ!
ತನ್ನ ಮಗಳು ಹುಟ್ಟಿದ್ದು ಆಷಾಡ ಮಾಸದ 2ನೇ ತಾರೀಖು. ಇದಿಷ್ಟೇ ಆ ತಾಯಿಗೆ ಗೊತ್ತಿರುವ ವಿಚಾರ. ಅಕ್ಷರ ಜ್ಞಾನವಿಲ್ಲದ ತಾಯಿಗೆ ತನ್ನ ಮಗಳಿಗೆ ವಿದ್ಯೆ ಕಲಿಸಬೇಕೆಂಬ ಆಸೆ. ಆದರೆ, ಆ ಬಾಲಕಿಗೆ ಬರ್ತ್ ಸರ್ಟಿಫಿಕೆಟ್ ಇಲ್ಲ ಎಂಬ ಕಾರಣಕ್ಕೆ ಆಕೆಯ ಪಾಲಿಗೆ ಶಾಲಾ ಶಿಕ್ಷಣವೇ ಇಲ್ಲವಾಗಿದೆ.

ಧೂಪಗುರಿ: ಆ ಬಾಲಕಿಯ ತಾಯಿಗೆ ತನ್ನ ಮಗಳ ಹುಟ್ಟಿದ ದಿನ ಮಾತ್ರ ಗೊತ್ತು. ಆಕೆ ಯಾವ ವರ್ಷ ಹುಟ್ಟಿದಳು, ಯಾವ ಇಂಗ್ಲಿಷ್ ದಿನಾಂಕದಂದು ಹುಟ್ಟಿದಳು ಇದ್ಯಾವುದೂ ಆ ತಾಯಿಗೆ ತಿಳಿದಿಲ್ಲ. ತನ್ನ ಮಗಳು ಹುಟ್ಟಿದ್ದು ಆಷಾಡ ಮಾಸದ 2ನೇ ತಾರೀಖು. ಇದಿಷ್ಟೇ ಆ ತಾಯಿಗೆ ಗೊತ್ತಿರುವ ವಿಚಾರ. ಅಕ್ಷರ ಜ್ಞಾನವಿಲ್ಲದ ತಾಯಿಗೆ ತನ್ನ ಮಗಳಿಗೆ ವಿದ್ಯೆ ಕಲಿಸಬೇಕೆಂಬ ಆಸೆ. ಆದರೆ, ಆ ಬಾಲಕಿಗೆ ಬರ್ತ್ ಸರ್ಟಿಫಿಕೆಟ್ ಇಲ್ಲ ಎಂಬ ಕಾರಣಕ್ಕೆ ಆಕೆಯ ಪಾಲಿಗೆ ಶಾಲಾ ಶಿಕ್ಷಣವೇ ಇಲ್ಲವಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿದೆ.
ಬಂಗಾಳದ ಧೂಪಗುರಿಯ ದಾಕ್ಬಂಗಲೆ ಮೊರ್ನಲ್ಲಿ 6 ವರ್ಷದ ರಿಯಾ ಓದುವ ಆಸೆಯಿದ್ದರೂ ಶಾಲೆಗೆ ಹೋಗಲಾಗದೆ ಟೀ ಅಂಗಡಿಯಲ್ಲಿ ಅಮ್ಮನೊಂದಿಗೆ ಕೆಲಸ ಮಾಡಿಕೊಂಡು ಕುಳಿತಿದ್ದಾಳೆ. ಮೂಲೆಯಲ್ಲಿರುವ ಟೀ ಅಂಗಡಿಗೆ ಬರುವ ಅನೇಕರು ಅಲ್ಲಿರುವ ರಿಯಾ ಎಂಬ ಬಾಲಕಿ ಓದುವುದನ್ನು ನೋಡಿ ನೋಟ್ಬುಕ್, ಪೆನ್ಸಿಲ್ ಮತ್ತು ಪುಸ್ತಕಗಳನ್ನು ಖರೀದಿಸಿ ಕೊಡುತ್ತಾರೆ. ಕೆಲವರು ಆಕೆಗೆ ತಾವೇ ಓದಲು ಕಲಿಸುತ್ತಾರೆ.
ಇದನ್ನೂ ಓದಿ: ಶಿಸ್ತು, ಶಿಕ್ಷಣಕ್ಕೆ ಹೆಸರುವಾಸಿಯಾದ ಬಾಗಲಕೋಟೆ ಸರ್ಕಾರಿ ಶಾಲೆ: ನಿಜಕ್ಕೂ ಬಡ ಮಕ್ಕಳಿಗೆ ಇದು ಅಕ್ಷರದಾಸೋಹ
ರಿಯಾಳಿಗೂ ಹುಟ್ಟಿದಾಗ ಜನನ ಪ್ರಮಾಣಪತ್ರ ಮಾಡಿಸಲಾಗಿತ್ತು. ಆದರೆ, ಆಕೆಯ ಅಪ್ಪ ಕುಡಿದು ಬಂದು ಆ ಸರ್ಟಿಫಿಕೆಟ್ ಅನ್ನು ಹರಿದು ಸುಟ್ಟುಹಾಕಿದ್ದ. ಓದಲು, ಬರೆಯಲು ಬಾರದ ರಿಯಾಳ ಅಪ್ಪ-ಅಮ್ಮನಿಗೆ ಆಕೆ ಹುಟ್ಟಿದ್ದು ಯಾವ ಮಾಸದಲ್ಲಿ ಎಂಬುದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅಕ್ಕಪಕ್ಕದ ಮನೆಯ ಮಕ್ಕಳು ಓದುವಾಗ ಅವರೊಡನೆ ಕುಳಿತು ರಿಯಾ ಕೂಡ ಒಂದೆರಡಕ್ಷರ ಕಲಿತಿದ್ದಾಳೆ.
ಧೂಪಗುರಿಯ ಬಸ್ ಟರ್ಮಿನಸ್ ಬಳಿ ವಾಸವಾಗಿರುವ ಶೋಭಾ ಸುಮಾರು 2 ದಶಕಗಳ ಹಿಂದೆ ಬೀದಿ ಬದಿ ವ್ಯಾಪಾರಿ ದುಲಾಲ್ ದಾಸ್ ಅವರನ್ನು ವಿವಾಹವಾಗಿದ್ದರು. ದುಲಾಲ್ ಮಾದಕ ವ್ಯಸನಿಯಾಗಿದ್ದ. ಮದುವೆಯಾದ ಕೆಲವೇ ವರ್ಷಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಆತ 7 ವರ್ಷಗಳ ಹಿಂದೆ ತೀರಿಕೊಂಡರು. ಪುಟ್ಟ ಹುಡುಗಿ ರಿಯಾಗೆ ಆಗ ಕೇವಲ 6 ತಿಂಗಳಾಗಿತ್ತು. ತಾಯಿ ಮೂವರು ಹೆಣ್ಣು ಮಕ್ಕಳಲ್ಲಿ ಹಿರಿಯವಳನ್ನು ಬಾಲ್ಯದಲ್ಲಿಯೇ ಮದುವೆ ಮಾಡಿಕೊಟ್ಟಳು. 2ನೇ ಮಗಳು ರೀಮಾ ಧೂಪಗುರಿ ಬಿಎಫ್ಪಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ. ಅಕ್ಕ ಶಾಲೆಯಿಂದ ಬರುವವರೆಗೂ ರಿಯಾ ತನ್ನ ತಾಯಿಯೊಂದಿಗೆ ಟೀ ಅಂಗಡಿಯಲ್ಲಿ ಕುಳಿತುಕೊಳ್ಳುತ್ತಾಳೆ.
ಇದನ್ನೂ ಓದಿ: ವಾರಾಣಸಿಯ ಜನನಿಬಿಡ ರಸ್ತೆಯಲ್ಲಿ ವಿದ್ಯುತ್ ತಗುಲಿ ಒದ್ದಾಡುತ್ತಿದ್ದ ಬಾಲಕನ್ನು ರಕ್ಷಿಸಿದ ವೃದ್ಧರು
ಟೀ ಮಾರಿ, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿ ರಿಯಾಳ ತಾಯಿ ಆಕೆಯನ್ನು ಕೂಡ ಶಾಲೆಗೆ ಕಳುಹಿಸಲು ಪ್ರಯತ್ನಿಸಿದರು. ಆದರೆ, ಜನನ ಪ್ರಮಾಣಪತ್ರವಿಲ್ಲದ ಕಾರಣದಿಂದ ಆಕೆಯನ್ನು ಶಾಲೆಯಲ್ಲಿ ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.
ರಿಯಾಳ ಅಕ್ಕನೊಂದಿಗೆ ಆಕೆ ಕೆಲವು ದಿನ ಶಾಲೆಗೆ ಹೋಗಿದ್ದಳು. ಅಲ್ಲಿ ಆಕೆಯನ್ನು ಮೇಷ್ಟ್ರು ತರಗತಿಯಿಂದ ಓಡಿಸಿದ್ದರು. ಈ ಬಗ್ಗೆ ಶಾಲೆಯಲ್ಲಿ ವಿಚಾರಿಸಿದಾಗ ಆ ಶಾಲೆಯ ಕಾರ್ಯದರ್ಶಿ ಮತ್ತು ಹಾಲಿ ಮುಖ್ಯೋಪಾಧ್ಯಾಯರಾದ ಜಯಂತ್ ಮಜುಂದಾರ್, ನಮಗೆ ಈ ವಿಷಯ ತಿಳಿದಿರಲಿಲ್ಲ. ಈಗಲೇ ಗೊತ್ತಾಯಿತು. ಈಗ ಶಾಲೆಯ ಅಡ್ಮಿಷನ್ ಅವಧಿ ಮುಗಿದಿದೆ. ಜನನ ಪ್ರಮಾಣಪತ್ರ ಇಲ್ಲ ಎಂಬ ಕಾರಣಕ್ಕೆ ಶಿಕ್ಷಣವನ್ನು ನಿಲ್ಲಿಸುವಂತಾಗಬಾರದು. ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ಆ ಬಾಲಕಿಯ ಅಡ್ಮಿಷನ್ಗೆ ವ್ಯವಸ್ಥೆ ಮಾಡುತ್ತೇನೆ. ಸದ್ಯಕ್ಕೆ ಆಕೆ ಅಡ್ಮಿಷನ್ ಆಗದಿದ್ದರೂ ಶಾಲೆಗೆ ಬರುವ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ. ಹೀಗಾಗಿ, ರಿಯಾಳ ಓದುವ ಕನಸು ಮತ್ತೆ ಚಿಗುರೊಡೆಯುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ