West Bengal Assembly Elections 2021: ತೃಣಮೂಲ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿ ಯಶವಂತ ಸಿನ್ಹಾ ನೇಮಕ

|

Updated on: Mar 15, 2021 | 12:43 PM

Yashwant Sinha: ಎರಡು ದಿನಗಳ ಹಿಂದೆಯಷ್ಟೇ ಟಿಎಂಸಿ ಸೇರಿರುವ ಯಶವಂತ ಸಿನ್ಹಾ ಅವರನ್ನು ಟಿಎಂಸಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಾಡಿದ್ದು, ಪಕ್ಷದ ಉಪಾಧ್ಯಕ್ಷರಾಗಿ ನೇಮಕ ಮಾಡಿದೆ.

West Bengal Assembly Elections 2021: ತೃಣಮೂಲ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿ ಯಶವಂತ ಸಿನ್ಹಾ ನೇಮಕ
ಯಶವಂತ ಸಿನ್ಹಾ
Follow us on

ಕೊಲ್ಕತ್ತಾ: ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಅವರನ್ನು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ಸೋಮವಾರ ನೇಮಕ ಮಾಡಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಟಿಎಂಸಿ ಸೇರಿರುವ ಸಿನ್ಹಾ ಅವರನ್ನು ಟಿಎಂಸಿ, ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಾಡಿದೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಯಶವಂತ ಸಿನ್ಹಾ ಕೇಂದ್ರ ಸಚಿವರಾಗಿದ್ದರು. ಬಿಜೆಪಿ ನಾಯಕರಾಗಿದ್ದ ಸಿನ್ಹಾ ಕೆಲಕಾಲ ರಾಜಕೀಯ ಚಟುವಟಿಕೆಗಳಿಂದ ದೂರವುಳಿದು, ಮಾರ್ಚ್ 13 (ಶನಿವಾರ) ಟಿಎಂಸಿ ಸೇರಿದ್ದರು. ಸದ್ಯದ ಪರಿಸ್ಥಿತಿ ನನ್ನನ್ನು ರಾಜಕೀಯದಲ್ಲಿ ಸಕ್ರಿಯವಾಗುವಂತೆ ಮಾಡಿತು ಎಂದು ಟಿಎಂಸಿಗೆ ಸೇರ್ಪಡೆಯಾದಾಗ ಸಿನ್ಹಾ ಹೇಳಿದ್ದಾರೆ.

ಶನಿವಾರ ಟಿಎಂಸಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸಿನ್ಹಾ, ಈ ಬಿಜೆಪಿ ಸರ್ಕಾರ ಚುನಾವಣೆ ಗೆಲ್ಲಲು ಏನು ಬೇಕಾದರೂ ಮಾಡಬಹುದು. ಮಮತಾ ಬ್ಯಾನರ್ಜಿ ಮೇಲೆ ನಡೆದ ಹಲ್ಲೆ ಪ್ರಕರಣ ನಂತರ ಆಕೆಯ ಜತೆ ಕೆಲಸ ಮಾಡಬೇಕು ಎಂದು ನಾನು ನಿರ್ಧರಿಸಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಕಳೆಗುಂದುತ್ತಾ ಇದೆ. ಟಿಎಂಸಿ ಬಹುಮತದಿಂದ ಗೆಲ್ಲಬೇಕಾಗಿದೆ, ಇದು ಈ ಹೊತ್ತಿನ ತುರ್ತು ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರಾಗಿದ್ದರು ಯಶವಂತ ಸಿನ್ಹಾ
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾದಾಗ ಯಶವಂತ ಸಿನ್ಹಾ ಅವರು ಬಿಜೆಪಿಯಿಂದ ದೂರ ಸರಿದಿದ್ದರು. ಮೋದಿ ಸರ್ಕಾರದ ನೀತಿಗಳ ವಿಮರ್ಶಕರಾಗಿದ್ದರು ಸಿನ್ಹಾ. 2018ರಲ್ಲಿ ಬಿಜೆಪಿ ತೊರಿದಿದ್ದ ಸಿನ್ಹಾ ಅವರಿಗೆ ಈಗ 83 ವರ್ಷ ವಯಸ್ಸು. ಯಶವಂತ ಸಿನ್ಹಾ ಅವರ ಪುತ್ರ ಜಯಂತ್ ಸಿನ್ಹಾ 2019 ಲೋಕಸಭೆ ಚುನಾವಣೆವರೆಗೆ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದರು.

ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಲು ಯಶವಂತ ಸಿನ್ಹಾ ಬಯಸಿದ್ದರು. ಈ ಬಗ್ಗೆ ಅರುಣ್ ಜೇಟ್ಲಿ ಅವರು 80ರ ವಯಸ್ಸಿನಲ್ಲಿ ಉದ್ಯೋಗಾಕಾಂಕ್ಷಿ ಎಂದು ಲೇವಡಿ ಮಾಡಿದ್ದರು. ಇದಾದ ನಂತರ ಮೋದಿ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಸಿನ್ಹಾ ಅವರು ಟೀಕೆ ಮಾಡುತ್ತಲೇ ಬಂದಿದ್ದಾರೆ.

ಟಿಎಂಸಿಯಲ್ಲಿ ರಾಜಕೀಯ ಪಯಣ
ಕಳೆದ ವಾರ ಟಿಎಂಸಿಗೆ ಸೇರುವ ಮೂಲಕ ಸಿನ್ಹಾ ಅವರು ತಾನು ಪಕ್ಷ ರಾಜಕೀಯದಿಂದ ದೂರ ಸರಿದಿಲ್ಲ ಎಂದು ತೋರಿಸಿದ್ದಾರೆ. ಬಿಜೆಪಿಯಿಂದ ನಿವೃತ್ತರಾದ ಬಳಿಕ ಸಿನ್ಹಾ ಅವರು ರಾಜಕೀಯದಿಂದಲೇ ದೂರವುಳಿಯುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಟಿಎಂಸಿ ಸೇರುವ ಮೂಲಕ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪರವಾಗಿ ಸಿನ್ಹಾ ಪ್ರಚಾರ ನಡೆಸುತ್ತಿದ್ದಾರೆ.

ಈ ವಯಸ್ಸಿನಲ್ಲಿ ನಾನು ಪಕ್ಷ ರಾಜಕೀಯದಿಂದ ಯಾಕೆ ದೂರ ಸರಿದೆ ಎಂದು ನೀವು ಯೋಚಿಸುತ್ತಿರಬಹುದು. ಈಗ ಯಾಕೆ ನಾನು ಪಕ್ಷಕ್ಷೆ ಸೇರ್ಪಡೆಯಾಗಿ ಸಕ್ರಿಯವಾಗಿರುವುದು? ಎಂಬುದರ ಬಗ್ಗೆಯೂ ನೀವು ಚಿಂತಿಸಿರುತ್ತೀರಿ.ಈ ದೇಶ ಅಸಾಧಾರಣ ಪರಿಸ್ಥಿತಿಯಲ್ಲಿದೆ ಎಂದು ಟಿಎಂಸಿ ಸೇರಿದಾಗ ಯಶವಂತ ಸಿನ್ಹಾ ಹೇಳಿದ್ದರು. ಟಿಎಂಸಿಗೆ ಸೇರುವ ಮುನ್ನ ಸಿನ್ಹಾ ಅವರು 2020 ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸಂಚಲನ ಸೃಷ್ಟಿಸಿದ್ದರು. ಅವರು ಬಹುಮುಖ ವೇದಿಕೆಯೊಂದನ್ನು ರಚಿಸಿ ಬಿಜೆಪಿ-ಜೆಡಿಯು ಪಕ್ಷದ ಎನ್​ಡಿಎ ಮೈತ್ರಿಕೂಟದ ವಿರುದ್ಧ ಚುನಾವಣಾ ಪ್ರಚಾರ ನಡೆಸಿದ್ದರು.

ಟಿಎಂಸಿಗೆ ಮತ್ತಷ್ಟು ಬಲ
ಅನುಭವಿ ರಾಜಕಾರಣಿ ಯಶವಂತ ಸಿನ್ಹಾ ಟಿಎಂಸಿಗೆ ಸೇರಿರುವುದು ಪಕ್ಷಕ್ಕೆ ಮತ್ತಷ್ಟು ಬಲ ನೀಡಲಿದೆ. ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಒಡನಾಡಿ ಬಿಜೆಪಿ ಪಕ್ಷವನ್ನು ಬೆಳೆಸಿದ ಅನುಭವಿಯಾಗಿದ್ದಾರೆ ಸಿನ್ಹಾ. ಇವರಿಗೆ ಬಿಜೆಪಿಯ ಪ್ಲಸ್ ಮತ್ತು ಮೈನಸ್ ಪಾಯಿಂಟ್​ಗಳ ಬಗ್ಗೆ ಗೊತ್ತಿದೆ. ಬಂಗಾಳದ ಚುನಾವಣೆಯಲ್ಲಿ ಬಿಜೆಪಿಯ ಕಾರ್ಯತಂತ್ರ ವಿರುದ್ಧ ಹೋರಾಡಲು ಮಮತಾ ಬ್ಯಾನರ್ಜಿ ಅವರಿಗೆ ಸಿನ್ಹಾ ಅವರ ಮಾರ್ಗದರ್ಶನ ಸಹಾಯವಾಗಲಿದೆ.

ಯಶವಂತ್ ಸಿನ್ಹಾ ಅವರ ಜಯಂತ್ ಸಿನ್ಹಾ ಈಗಲೂ ಬಿಜೆಪಿ ಸದಸ್ಯರು. ಹಜಾರಿಬಾಗ್ ಸಂಸದರಾಗಿದ್ದಾರೆ ಜಯಂತ್ ಸಿನ್ಹಾ. ಯಶವಂತ್ ಸಿನ್ಹಾ ಅವರು ಪಶ್ಚಿಮ ಬಂಗಾಳದ ಹತ್ತಿರದ ರಾಜ್ಯ ಜಾರ್ಖಂಡ್​ನವರು. ಹೀಗಾಗಿ ಬಂಗಾಳದ ಭೌಗೋಳಿಕ ಮತ್ತು ಸಾಮಾಜಿಕ ಪರಿಸ್ಥಿತಿ ಬಗ್ಗೆ ಸಿನ್ಹಾ ಅವರಿಗೆ ಅರಿವಿದೆ. ಇದು ಟಿಎಂಸಿಗೆ ಲಾಭದಾಯಕವಾಗಲಿದೆ.

ಇದನ್ನೂ ಓದಿ:  ಟಿಎಂಸಿ ಸೇರ್ಪಡೆಯಾಗುವಾಗ ದೀದಿ ತ್ಯಾಗದ ಪರಾಕಾಷ್ಠೆ ನೆನಪಿಸಿಕೊಂಡ ಯಶವಂತ ಸಿನ್ಹಾ

ಬಿಜೆಪಿ ಜನರ ಧ್ವನಿ ಹತ್ತಿಕ್ಕುತ್ತಿದೆ; ಟಿಎಂಸಿಗೆ ಸೇರ್ಪಡೆಗೊಂಡ ಬಿಜೆಪಿ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಆರೋಪ

 

Published On - 12:13 pm, Mon, 15 March 21