Assembly Elections Date 2021: ತಮಿಳುನಾಡು, ಪ.ಬಂಗಾಳ ಸೇರಿ 5 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ

2021 Assembly Elections Date: ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಮತ ಎಣಿಕೆ ದಿನಾಂಕಗಳು ಪ್ರಕಟವಾಗಿದೆ. ಎಲ್ಲ ರಾಜ್ಯಗಳಲ್ಲಿಯೂ ಮೇ 2 ರಂದು ಮತ ಎಣಿಕೆ ನಡೆಯಲಿದೆ.

Assembly Elections Date 2021: ತಮಿಳುನಾಡು, ಪ.ಬಂಗಾಳ ಸೇರಿ 5 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ
ಸುನಿಲ್ ಅರೋರಾ
Follow us
| Updated By: ganapathi bhat

Updated on:Apr 06, 2022 | 7:41 PM

ದೆಹಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಮತ ಎಣಿಕೆ ದಿನಾಂಕಗಳು ಪ್ರಕಟವಾಗಿದೆ. ಎಲ್ಲ ರಾಜ್ಯಗಳಲ್ಲಿಯೂ ಮೇ 2 ರಂದು ಮತ ಎಣಿಕೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಹಾಗೂ ಏಪ್ರಿಲ್ 29ರಂದು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆಯು ಮೇ 2ರಂದು ನಡೆಯಲಿದೆ. ಕೇರಳದಲ್ಲಿ ಏಪ್ರಿಲ್ 6ರಂದು ಚುನಾವಣೆ ಮತ್ತು ಮೇ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಏಪ್ರಿಲ್ 6ರಂದು ಚುನಾವಣೆ ಮತ್ತು ಮೇ 2ರಂದು ಮತ ಎಣಿಕೆ ನಡೆಯಲಿದೆ. ಅಸ್ಸಾಂನಲ್ಲಿ 27 ಮಾರ್ಚ್, ಏಪ್ರಿಲ್ 1 ಮತ್ತು ಏಪ್ರಿಲ್ 6ರಂದು, ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ. 

ಅಸ್ಸಾಂನಲ್ಲಿ ಒಟ್ಟು 3 ಹಂತಗಳಲ್ಲಿ ಮತದಾನ ನಡೆಯಲಿದೆ. ಕೇರಳದಲ್ಲಿ 14 ಜಿಲ್ಲೆ, 148 ಕ್ಷೇತ್ರಗಳಲ್ಲಿ ಒಂದೇ ಬಾರಿ ಚುನಾವಣೆ ನಡೆಯಲಿದೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಕೂಡ ಒಂದೇ ಬಾರಿ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಕೇರಳ, ಪುದುಚೇರಿ, ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಚುನಾವಣೆ ವಿವರಗಳನ್ನು ನಾವು ಇವತ್ತು ನೀಡುತ್ತೇವೆ. ಬಿಹಾರದಲ್ಲಿ ಚುನಾವಣೆ ನಡೆಸುವುದು ಚುನಾವಣಾ ಆಯೋಗಕ್ಕೆ ಸವಾಲಾಗಿತ್ತು. ಹೊಸ ಥರ ಪ್ಲಾನ್ ಮಾಡಬೇಕಾಯಿತು. ಅಲ್ಲಿನ ಮತದಾರರು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸಿಯೇ ಮತ ಚಲಾಯಿಸಿದ್ದು ವಿಶೇಷವಾಗಿತ್ತು ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಚುನಾವಣೆ ನಡೆಯಲಿರುವ ಎಲ್ಲ ರಾಜ್ಯಗಳಿಗೆ ಕಳೆದ ಜನವರಿ-ಫೆಬ್ರುವರಿಯಲ್ಲಿಯೇ ಭೇಟಿ ನೀಡಿದ್ದರು. ಅಗತ್ಯ ಸಿದ್ಧತೆ, ಸಮಾಲೋಚನೆಗಳನ್ನು ಆರಂಭಿಸಿದ್ದೇವೆ.ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ನಾವು ಮುಂದುವರಿಯುತ್ತೇವೆ. ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ನ್ಯಾಯಸಮ್ಮತ ಚುನಾವಣೆ ನಡೆಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ರಾಜ್ಯ ಒಟ್ಟು ಹಂತಗಳು ಮತದಾನ ದಿನಾಂಕ ಒಟ್ಟು ಕ್ಷೇತ್ರ
ಪಶ್ಚಿಮ ಬಂಗಾಳ 8 ಮಾರ್ಚ್ 27, ಏಪ್ರಿಲ್ 1, 6, 10, 17, 22, 26, 29 294
ಕೇರಳ 1 ಏಪ್ರಿಲ್ 6 140
ತಮಿಳುನಾಡು 1 ಏಪ್ರಿಲ್ 6 234
ಪುದುಚೇರಿ 1 ಏಪ್ರಿಲ್ 6 30
ಅಸ್ಸಾಂ 3 ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6 126

ಈ ಬಾರಿ ಎಲ್ಲ ರಾಜ್ಯಗಳ ಮತಗಟ್ಟೆಗಳು ನೆಲ ಮಹಡಿಯಲ್ಲಿಯೇ ಇರುತ್ತವೆ. ಎಲ್ಲರೂ ಮತದಾನ ಮಾಡಬೇಕು ಎಂಬುದು ಇದರ ಉದ್ದೇಶ. ಕೊರೊನಾ ಆತಂಕದ ಕಾರಣದಿಂದಾಗಿ ಎಲ್ಲ ರಾಜ್ಯಗಳಲ್ಲಿಯೂ ಒಟ್ಟು ಮತಗಟ್ಟೆಗಳ ಸಂಖ್ಯೆ ಕಡಿಮೆ ಮಾಡಿದ್ದೇವೆ. ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ಲಾನ್ ಮಾಡಿಕೊಂಡಿದ್ದೇವೆ. ಚುನಾವಣಾ ಆಯೋಗದ ಹಲವು ಸೇವೆಗಳನ್ನು ಆನ್​ಲೈನ್​ ಮೂಲಕ ಒದಗಿಸಲಾಗುತ್ತಿದೆ. ಕೋವಿಡ್ ಆತಂಕವಿರುವುದರಿಂದ ಜನರು ಅವುಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಅರೋರಾ ತಿಳಿಸಿದರು.

ಮತದಾನದ ಅವಧಿಯನ್ನು ಒಂದು ತಾಸು ಹೆಚ್ಚಿಸಲಾಗಿದೆ. ಭದ್ರತೆಗೆ ಸ್ಥಳೀಯ ಪೊಲೀಸರೊಂದಿಗೆ ಅಗತ್ಯ ಪ್ರಮಾಣದಲ್ಲಿ CRPF ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಶಾಂತಿಯುತ ಚುನಾವಣೆಗೆ ಆದ್ಯತೆ ನೀಡುತ್ತೇವೆ. ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಸುತ್ತೇವೆ. ವೆಬ್​ಕಾಸ್ಟಿಂಗ್​ ಮಾಡುತ್ತೇವೆ. ನ್ಯಾಯ ಸಮ್ಮತ ಚುನಾವಣೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ರಾಜ್ಯಗಳಿಗೂ ಕೇಂದ್ರೀಯ ವೀಕ್ಷಕರನ್ನು ಕಳಿಸಿಕೊಡುತ್ತೇವೆ ಎಂದು ವಿವರಣೆ ನೀಡಿದರು.

ಚುನಾವಣಾ ಪ್ರಚಾರ ಮೆರವಣಿಗೆಗಳಿಗೆ ಈ ಬಾರಿಯೂ ಅವಕಾಶವಿದೆ. ಆದರೆ ನಿಯಮಗಳನ್ನು ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳು ಅಂತಿಮಗೊಳಿಸುತ್ತಾರೆ. ಬೆಸ್ಟ್ ಆಫ್ ದಿ ಬೆಸ್ಟ್​ ಅಧಿಕಾರಿಗಳನ್ನು ನಾವು ಗುರುತಿಸಿದ್ದೇವೆ. ಅಂಥವರನ್ನೇ ವೀಕ್ಷಕರನ್ನಾಗಿ ಕಳಿಸಿಕೊಡುತ್ತೇವೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಚುನಾವಣೆ ನಡೆಯಲಿರುವ 4 ರಾಜ್ಯಗಳಲ್ಲಿ ಒಟ್ಟು 18.68 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. 2.7 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಒಟ್ಟು 824 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಅಕ್ರಮಗಳ ಬಗ್ಗೆ ಜನರು ನೇರವಾಗಿ 1950 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಕೊಡಬಹುದು. ಎಸ್​ಎಂಎಸ್ ಕೂಡ ಕಳಿಸಬಹುದು. ಈ ದೂರುಗಳನ್ನು ಆಯೋಗ ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದು ಅರೋರಾ ತಿಳಿಸಿದರು.

ಪಂಚರಾಜ್ಯಗಳ ಅಧಿಕಾರವಧಿ ಮುಕ್ತಾಯ ದಿನಾಂಕಗಳು ಅಸ್ಸಾಂ ವಿಧಾನಸಭೆಯ ಅಧಿಕಾರವಧಿ ಮೇ 31ಕ್ಕೆ  ಮುಗಿಯುತ್ತದೆ. ಅಲ್ಲಿನ ಒಟ್ಟು ಸೀಟುಗಳ ಸಂಖ್ಯೆ- 126, ಎಸ್​ಸಿ-8, ಎಸ್​ಟಿ-16 ತಮಿಳುನಾಡಿನಲ್ಲಿ ಅಧಿಕಾರವಧಿ ಮೇ 24ಕ್ಕೆ ಮುಗಿಯುತ್ತದೆ. ಒಟ್ಟು ಸೀಟು-234, ಎಸ್​ಸಿ-44, ಎಸ್​ಟಿ -2, ಪಶ್ಚಿಮ ಬಂಗಾಳದಲ್ಲಿ ಅಧಿಕಾರವಧಿ ಮೇ30ಕ್ಕೆ ಮುಗಿಯುತ್ತದೆ. ಒಟ್ಟು ಸೀಟು- 294, ಎಸ್​ಸಿ-68, ಎಸ್​ಟಿ-16 ಕೇರಳದಲ್ಲಿ ಜೂನ್ 1ಕ್ಕೆ ಅಧಿಕಾರವಧಿ ಮುಗಿಯುತ್ತದೆ. ಒಟ್ಟು ಸೀಟುಗಳು-140, ಎಸ್​ಸಿ 14, ಎಸ್​ಟಿ-2; ಪುದುಚೇರಿ ಒಟ್ಟು ಸೀಟು-30, ಎಸ್​ಸಿ-5, ಎಸ್​ಟಿ-0.

ಪ್ರಚಾರಕ್ಕೆ ಹೊಸ ನಿಯಮಗಳು 1) ಮನೆಮನೆ ಪ್ರಚಾರಕ್ಕೆ ಅಭ್ಯರ್ಥಿ ಸೇರಿ ಕೇವಲ ಐವರು ತೆರಳಬಹುದು. 2) ಬಹಿರಂಗ ಸಭೆಗಳಿಗೆ ಅವಕಾಶವಿದೆ. ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. 3) ಬಹಿರಂಗ ಸಭೆಗಳಿಗೆ ಮೈದಾನಗಳನ್ನು ಮೊದಲೇ ಗುರುತಿಸಿ ಅಧಿಕಾರಿಗಳು ಪ್ರಕಟಿಸುತ್ತಾರೆ.

ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಯಾರಿಗೆ ಹೂವು? ಯಾರಿಗೆ ಮುಳ್ಳು?

West Bengal Election 2021: ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ಐದು ರೂಪಾಯಿ ಊಟ, ‘ಮಾ’ ಯೋಜನೆ ಜಾರಿಗೆ ತಂದ ಮಮತಾ

Published On - 5:36 pm, Fri, 26 February 21