Video: ಪ್ರಧಾನಿಯಾದ ನಂತರ ರಾಹುಲ್ ಗಾಂಧಿ ಮಾಡುವ ಮೊದಲ ಕೆಲಸವೇನು? ಅವರ ಮಾತಲ್ಲೇ ಕೇಳಿ

What will Rahul Gandhi do if he becomes prime minister here is a video about this

Video: ಪ್ರಧಾನಿಯಾದ ನಂತರ ರಾಹುಲ್ ಗಾಂಧಿ ಮಾಡುವ ಮೊದಲ ಕೆಲಸವೇನು? ಅವರ ಮಾತಲ್ಲೇ ಕೇಳಿ
ತಮಿಳುನಾಡಿನಿಂದ ಬಂದಿದ್ದವರಿಗೆ ರಾಹು್ಲ ಗಾಂಧಿ ತಮ್ಮ ನಿವಾಸದಲ್ಲಿ ದೀಪಾವಳಿ ಔತಣ ನೀಡಿದರು
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 07, 2021 | 9:42 PM

ದೆಹಲಿ: ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಶಾಲೆಯೊಂದರ ಮಕ್ಕಳಿಗಾಗಿ ದೀಪಾವಳಿ ಪ್ರಯುಕ್ತ ಔತಣಕೂಟ ಆಯೋಜಿಸಿದ್ದರು. ತಮಿಳುನಾಡಿನಲ್ಲಿ ಪ್ರಚಾರ ನಡೆಸುವಾಗ ಭೇಟಿ ನೀಡಿದ್ದ ಮುಲಗುಮೂಡು ಗ್ರಾಮದ ಸೇಂಟ್ ಜೋಸೆಫ್ ಪ್ರೌಢಶಾಲೆಗೆ ಮತ್ತೊಮ್ಮೆ ಭೇಟಿ ನೀಡಿ ವಿದ್ಯಾರ್ಥಿಗಳ ಕುಶಲ ವಿಚಾರಿಸಿದ್ದರು. ವಿದ್ಯಾರ್ಥಿಗಳ ಗುಂಪಿನೊಂದಿಗೆ ನಡೆಸಿದ ಸಂವಾದದ ಮಾಹಿತಿಯನ್ನು ಟ್ವೀಟ್ ಮಾಡಿರುವ ರಾಹುಲ್, ‘ಈ ವರ್ಷದ ನನ್ನ ದೀಪಾವಳಿ ವಿಶೇಷವಾಗಿತ್ತು. ಸಾಂಸ್ಕೃತಿಕ ವೈವಿಧ್ಯ ನಮ್ಮ ದೇಶದ ದೊಡ್ಡ ಶಕ್ತಿ ಮತ್ತು ಇದನ್ನು ನಾವು ಸಂರಕ್ಷಿಸಬೇಕು’ ಎಂದು ಹೇಳಿದ್ದಾರೆ.

ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ಒಂದು ನಿಮಿಷದ ವಿಡಿಯೊದಲ್ಲಿ ರಾಹುಲ್ ಗಾಂಧಿ ಅವರನ್ನು ವಿದ್ಯಾರ್ಥಿನಿಯೊಬ್ಬರು ಹೀಗೆ ಪ್ರಶ್ನಿಸಿದರು. ‘ನೀವು ಪ್ರಧಾನಿಯಾದಾಗ ಮಾಡುವ ಮೊದಲ ಆದೇಶ ಏನಾಗಿರುತ್ತೆ?’ ಇದಕ್ಕೆ ಉತ್ತರಿಸಿದ ರಾಹುಲ್, ‘ನಾವು ಮಹಿಳೆಯರಿಗೆ ಮೀಸಲಾತಿ ಕೊಡಬಹುದು’ ಎಂದು ಹೇಳಿದ್ದಾರೆ. ನಿಮ್ಮ ಮಕ್ಕಳಿಗೆ ಏನು ಕಲಿಸುತ್ತೀರಿ ಎಂಬ ಪ್ರಶ್ನೆಗೆ, ‘ವಿನಯ, ವಿನಯದಿಂದ ನಿಮಗೆ ವಿದ್ಯೆ ಒಲಿಯುತ್ತದೆ’ ಎಂದು ರಾಹುಲ್ ಉತ್ತರಿಸಿದ್ದಾರೆ. ತಮ್ಮ ಅಧಿಕೃತ ನಿವಾಸದಲ್ಲಿ ಅತಿಥಿಗಳಿಗೆ ಚೋಲೆ ಬತೂರೆ ಉಣಬಡಿಸಿದರು.

ರೈತರ ಹೋರಾಟಕ್ಕೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬೆಂಬಲಿಸಿದ್ದನ್ನು ಔತಣಕೂಟದಲ್ಲಿ ಪಾಲ್ಗೊಂಡಿದ್ದವರೊಬ್ಬರು ಶ್ಲಾಘಿಸಿದರು. ನೀವು ಜನರೊಂದಿಗೆ ಒಂದಾಗಿ ಬೆರೆಯುವುದನ್ನು ಇದು ತೋರಿಸುತ್ತದೆ ಎಂಬ ಅವರ ಮಾತುಗಳೂ ವಿಡಿಯೊದಲ್ಲಿ ದಾಖಲಾಗಿವೆ. ಚಪ್ಪಾಳೆ ತಟ್ಟುತ್ತಾ, ಹಾಡುತ್ತಿರುವ ಮಕ್ಕಳೊಂದಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವದ್ರಾ ಸಹ ಖುಷಿಯಾಗಿ ಮಾತನಾಡುತ್ತಿರುವುದು ವಿಡಿಯೊದಲ್ಲಿದೆ. ‘ನಿಮಗೆ ದೀಪಾವಳಿಯ ಶುಭಾಶಯಗಳು’ ಎಂದು ಅವರು ಎಲ್ಲರಿಗೂ ಶುಭ ಹಾರೈಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾಗ ರಾಹುಲ್ ಗಾಂಧಿ ದಂಡ ಹೊಡೆದ (ಪುಶ್​ಅಪ್) ಚಿತ್ರಗಳು ವೈರಲ್ ಆಗಿದ್ದವು. ರಾಹುಲ್ ಗಾಂಧಿ ಈ ಕಸರತ್ತು ಮಾಡಿದ್ದ ಸ್ಥಳವೂ ಮುಲಗುಮೂಡು ಸೇಂಟ್ ಜೋಸೆಫ್ ಹೈಯರ್ ಸೆಕಂಡರಿ ಶಾಲೆಯೇ ಆಗಿತ್ತು. ಈಗ ಅದೇ ಶಾಲೆಯ ಮಕ್ಕಳೊಂದಿಗೆ ರಾಹುಲ್ ಗಾಂಧಿ ದೀಪಾವಳಿ ದಿನದ ಊಟ ಮಾಡಿದ್ದಾರೆ.

ಇದನ್ನೂ ಓದಿ: ಸಾಯುವ ಕೆಲವೇ ಗಂಟೆಗಳ ಮೊದಲು ಅಳಬೇಡ ಎಂದಿದ್ದರು ನನ್ನಜ್ಜಿ: ನೆನಪು ಮೆಲುಕು ಹಾಕಿದ ರಾಹುಲ್ ಗಾಂಧಿ

ಇದನ್ನೂ ಓದಿ: ಕೊಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆ; ಪ್ರಿಯ ವಿರಾಟ್, ಈ ಜನರು ದ್ವೇಷದಿಂದ ತುಂಬಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್